ಮೊಬೈಲ್..ಅಗ್ಗದ ಇಂಟರ್ನೆಟ್: ನೈತಿಕತೆ ಮೀರಿದ ಸಂಬಂಧ ನಿಮ್ಮನ್ನು ಸುಖವಾಗಿಡುತ್ತಾ?
ನೈತಿಕತೆ ಮೀರಿದ ಸಂಬಂಧವೇ ಅಲ್ಲದ ಸಂಬಂಧಗಳು ನಮ್ಮನ್ನು ನಿಜವಾಗಿಯೂ ಸುಖವಾಗಿಡುತ್ತಿದೆಯಾ? ಹೀಗೊಂದು ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ. ಅಕ್ರಮ ಸಂಬಂಧಗಳು ಸಂಸಾರದ ಮಾನ ಮರ್ಯಾದೆಯನ್ನು ಬೀದಿಪಾಲು ಮಾಡುತ್ತಿರುವುದಷ್ಟೇ ಅಲ್ಲದೆ, ಕೊಲೆಗಳಲ್ಲಿ ಅಂತ್ಯವಾಗುವ ಮಟ್ಟಕ್ಕೆ ಹೋಗುತ್ತಿವೆ. ಇದೆಲ್ಲವನ್ನು ಗಮನಿಸಿದಾಗ ಇಂತಹದೊಂದು ಸಂಬಂಧ ಬೇಕಾ? ಎಂದೆನಿಸದಿರದು.
ಅಕ್ರಮ ಸಂಬಂಧದ ವಿಚಾರಕ್ಕೆ ಸಂಬಂಧಿಸಿದಂತೆ ಕೊಲೆಗಳಾಗುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ. ಮೊಬೈಲ್ ಫೋನ್ಗಳು ಕೈಗೆ ಬಂದ ಮೇಲೆ ಸಂಪರ್ಕ ಸುಲಭವಾಯಿತು. ಅದರಲ್ಲೂ ಇತ್ತೀಚೆಗೆ ಇಂಟರ್ನೆಟ್ ಅಗ್ಗವಾಗಿ ಸೋಷಿಯಲ್ ಮೀಡಿಯಾಗಳು ಆಕ್ಟೀವ್ ಆದ ನಂತರವಂತೂ ಸಂಬಂಧಗಳು ಕುದುರುವುದು ಬಲು ಸುಲಭವಾಗಿದ್ದು, ಹಲವು ಸಂಸಾರಗಳು ಮುರಿದು ಹೋಗುವ ಮಟ್ಟಕ್ಕೆ ಬಂದು ತಲುಪಿವೆ. ಅಷ್ಟೇ ಅಲ್ಲದೆ ಸಂಬಂಧಗಳು ಕೊಲೆಯಲ್ಲಿ ಅಂತ್ಯವಾಗುತ್ತಿವೆ.

ಸಂಬಂಧಗಳಲ್ಲಿ ಒಳ್ಳೆಯತನವಿದ್ದರೆ ತೊಂದರೆಯಿಲ್ಲ. ಜೊತೆಗೆ ಎಲ್ಲೆ ಮೀರಿ ಹೋದರೆ ತೊಂದರೆಗಳು ಕಟ್ಟಿಟ್ಟ ಬುತ್ತಿ. ಇವತ್ತಿನ ಎಲ್ಲ ಸೌಲಭ್ಯಗಳು ನಮ್ಮ ಅನುಕೂಲಕ್ಕಾಗಿಯೇ ಇವೆ. ಆದರೆ ಯಾವುದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿದೆ. ಈ ವಿಚಾರದಲ್ಲಿ ಸಂಬಂಧಗಳು ಕೂಡ ಅಷ್ಟೇ.. ಅವುಗಳನ್ನು ನೈತಿಕ ನೆಲಗಟ್ಟಿನಲ್ಲಿ ಮುಂದುವರೆಸಿದರೆ ನಾವೆಲ್ಲವೂ ಸುಖವಾಗಿರಲು ಸಾಧ್ಯವಾಗುತ್ತದೆ. ಆದರೆ ಅದು ಅಕ್ರಮದ ಕಡೆಗೆ ತಿರುಗಿದರೆ ಅದರಿಂದ ಯಾರಿಗೂ ನೆಮ್ಮದಿಯಿಲ್ಲ ಎಂಬುದನ್ನು ಮರೆಯಬಾರದು.
ಕೊಲೆಯಲ್ಲಿ ಅಂತ್ಯವಾಗುವ ಸಂಬಂಧ
ಸಂಸಾರದ ನೌಕೆಯಲ್ಲಿ ಸಾಗುವರು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗುವ ಅಪರಿಚಿತರ ಜೊತೆ ಕ್ಲೋಸ್ ಆಗಿ ಮೂವ್ ಆಗಿ ಮನೆ ತನಕ ಕರೆಯಿಸಿಕೊಳ್ಳುವ ಮಟ್ಟಕ್ಕೆ ಹೋಗಿ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ ಬಳಿಕ ನಡತೆಯಲ್ಲಿ ಅನುಮಾನ ಹುಟ್ಟಿ ಮನೆಯಲ್ಲಿ ಸದಾ ಕಿರಿಕಿರಿಗಳಾಗಿ ಕೊನೆಗೆ ಗಂಡನನ್ನೋ, ಹೆಂಡತಿಯನ್ನೋ ಮುಗಿಸಿದರೆ ನೆಮ್ಮದಿಯಾಗಿರಬಹುದೆಂಬ ತೀರ್ಮಾನಕ್ಕೆ ಬಂದು ಕೊಲೆ ಮಾಡಿ ಜೈಲ್ ಸೇರುವ ಪ್ರಕರಣಗಳು ನಡೆಯುತ್ತಿವೆ.

ಪ್ರತಿನಿತ್ಯವೂ ಅನೈತಿಕ ಸಂಬಂಧದ ಹಿನ್ನಲೆಯಲ್ಲಿ ಕೊಲೆಗಳು ನಡೆಯುತ್ತಿದ್ದು, ಎಷ್ಟೇ ಚಾಣಕ್ಷ್ಯತನ ತೋರಿದರೂ ಕೊನೆಗೆ ಪೊಲೀಸರಿಗೆ ಸಿಕ್ಕಿ ಬಿದ್ದು ಜೈಲ್ ಸೇರುವ ಘಟನೆಗಳು ನಡೆಯುತ್ತಲೇ ಇದ್ದು, ಇದೆಲ್ಲವನ್ನು ನೋಡಿದ ಮೇಲೆಯೂ ಒಬ್ಬರನ್ನು ಕೊಲೆ ಮಾಡಿ ನಾವು ಸುಖವಾಗಿರಬಹುದೆಂದು ಬಯಸುವವರ ಭ್ರಮೆ ಮಾತ್ರ ದೂರವಾಗಿಲ್ಲ ಎಂಬುದು ಮನದಟ್ಟಾಗುತ್ತದೆ. ಬಹಳಷ್ಟು ಕೊಲೆಗಳಲ್ಲಿ ಹೆಂಡತಿಯೇ ಹಂತಕಿಯಾಗುವುದು, ಗಂಡನೇ ಹಂತಕನಾಗುವುದು ಮಾತ್ರ ಬೇಸರದ ಸಂಗತಿಯಾಗಿದೆ.
ಮನೆ ತನಕ ಸಂಬಂಧ ಎಳೆದುಕೊಳ್ಳಬೇಡಿ
ಇಲ್ಲಿ ಕೊಲೆ ಮಾಡಿದವರು, ಮಾಡಿಸಿದವರು ಯಾರೂ ಕೂಡ ನೆಮ್ಮದಿಯಾಗಿ ಬಾಳಲು ಸಾಧ್ಯವೇ ಇಲ್ಲ. ಒಬ್ಬರನ್ನು ಸಾಯಿಸಿ ಸುಖವಾಗಿ ಬದುಕುತ್ತೇವೆ ಎನ್ನುವುದು ಭ್ರಮೆಯಷ್ಟೆ. ಈ ಭೂಮಿ ಮೇಲೆ ನಾವು ಮಾಡುವ ಎಲ್ಲ ಕರ್ಮಗಳಿಗೂ ಕಂದಾಯ ಕಟ್ಟಲೇ ಬೇಕಾಗುತ್ತದೆ. ಹೀಗಿರುವಾಗ ಕೊಲೆ ಮಾಡಿ ಬದುಕಲು ಸಾಧ್ಯನಾ? ಇದ್ಯಾವುದನ್ನು ಅರಿತುಕೊಳ್ಳದೆ, ನಮ್ಮ ಸ್ವಚ್ಛಂದದ ಬದುಕಿಗೆ ಅಡ್ಡಿಯಾಗಿದ್ದಾರೆ ಎನ್ನುವ ಕಾರಣಕ್ಕೆ ಕೊಲೆ ಮಾಡಿ ಮುಂದೆ ನಾವು ಯಾವುದೇ ತೊಂದರೆಯಿಲ್ಲದೆ ನಮ್ಮಿಷ್ಟದಂತೆ ಹೇಗೆ ಬೇಕೋ ಹಾಗೆ ಇರಬಹುದೆಂದು ಕೊಳ್ಳುವುದು ಭ್ರಮೆಯಲ್ಲದೆ ಮತ್ತೇನಲ್ಲ.
ವಿವಾಹಿತರ ಅಕ್ರಮ ಸಂಬಂಧದ ಕೊಲೆ ಪ್ರಕರಣಗಳಲ್ಲಿ ಏನೂ ತಪ್ಪು ಮಾಡದ ಮಕ್ಕಳು ತಬ್ಬಲಿಯಾಗುತ್ತಿವೆ. ಕೊಲೆ ಮಾಡಿದ ಬಳಿಕ ಹೆತ್ತವರ ಪೈಕಿ ಒಬ್ಬರು ಸಾವನ್ನಪ್ಪಿರುತ್ತಾರೆ. ಮತ್ತೊಬ್ಬರು ಜೈಲ್ ಸೇರಿರುತ್ತಾರೆ. ಇಂತಹವರಿಗೆ ಹುಟ್ಟಿದ ತಪ್ಪಿಗೆ ಮಕ್ಕಳು ಅನಾಥರಾಗಬೇಕಾಗುತ್ತದೆ. ಸೋಷಿಯಲ್ ಮೀಡಿಯಾಗಳಲ್ಲೋ ಅಥವಾ ಇನ್ನೆಲ್ಲೋ ಆಗುವ ಪರಿಚಯಗಳನ್ನು ಅಲ್ಲಿಯೇ ಬಿಟ್ಟು, ಮನೆಯ ತನಕ ಎಳೆದುಕೊಳ್ಳದೆ ಮುನ್ನಡೆದರೆ ನೆಮ್ಮದಿಯಾಗಿರಲು ಸಾಧ್ಯವಾಗಬಹುದೇನೋ?












Click it and Unblock the Notifications