ರೋಗದ ಭಯ ಬಿಡಿ ಖುಷಿಯಾಗಿರುವುದನ್ನು ಕಲಿಯಿರಿ
ಇವತ್ತಿನ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಂದಲ್ಲ ಒಂದು ರೋಗದ ಭಯದಲ್ಲಿಯೇ ಬದುಕುತ್ತಿದ್ದೇವೆ. ಕೆಲವು ರೋಗಗಳ ಜತೆ ನಾವು ಬದುಕುವುದನ್ನು ಕಲಿಯುವುದು ಅನಿವಾರ್ಯವಾಗಿದೆ. ಹೀಗಾಗಿ ಅದರ ಬಗ್ಗೆ ಚಿಂತೆ ಮಾಡುವುದಕ್ಕಿಂತ ಅದಕ್ಕೆ ವೈದ್ಯರು ಹೇಳಿದ ಚಿಕಿತ್ಸೆ ಪಡೆದುಕೊಂಡು ಖುಷಿ, ಖುಷಿಯಾಗಿ ಬದುಕುವುದನ್ನು ರೂಢಿಸಿಕೊಳ್ಳಬೇಕಾಗಿದೆ. ಇದು ನಾವೆಲ್ಲರೂ ಅರಿತುಕೊಳ್ಳಬೇಕಾಗಿದೆ.
ಇವತ್ತು ನಾವು ಒಂದಷ್ಟು ಮುಂಜಾಗ್ರತೆಯೊಂದಿಗೆ ಮತ್ತು ಧೈರ್ಯವಾಗಿರುವುದನ್ನು ಕಲಿಯಬೇಕು ಅಷ್ಟೇ ಅಲ್ಲದೆ ಮಾನಸಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ನೀಡಬೇಕಾಗಿದೆ. ಇದೀಗ ಬೇಸಿಗೆ ಕಾಲವಾಗಿರುವುದರಿಂದ ಬಿಸಿಲಿಗೆ ಅನಗತ್ಯವಾಗಿ ತಿರುಗಾಡುವುದನ್ನು ಕಡಿಮೆ ಮಾಡಬೇಕು. ಇದರಿಂದ ಬಿಸಿಲಿಗೆ ಉಂಟಾಗುವ ಸಮಸ್ಯೆಯನ್ನು ದೂರ ಮಾಡಲು ಸಾಧ್ಯವಾಗಲಿದೆ. ಇದೆಲ್ಲದರ ನಡುವೆ ಬಿಪಿ, ಶುಗರ್ ಮೊದಲಾದ ಕಾಯಿಲೆಗಳು ಮಾಮೂಲಿಯಾಗಿ ಎಲ್ಲರನ್ನು ಕಾಡುವ ರೋಗಗಳಾಗಿವೆ. ಆದರೆ ಅವುಗಳತ್ತ ನಿರ್ಲಕ್ಷ್ಯ ವಹಿಸದೆ ಬದುಕ ಬೇಕಾಗಿದೆ. ಇನ್ನು ಕೆಲವು ರೋಗಗಳ ಬಗ್ಗೆ ಬೇರೆಯವರಿಗೆ ಹೇಳುವಂತಿಲ್ಲ.

ಒಂದು ವೇಳೆ ಹೇಳಿದರೆ ಅವರು ನಮ್ಮನ್ನು ನೋಡುವ ದೃಷ್ಟಿಯೇ ಬದಲಾಗುತ್ತದೆ. ಹೀಗಾಗಿ ಕೆಲವೊಮ್ಮೆ ದಿಢೀರ್ ಆಗಿ ಎದುರಾಗುವ ಈ ಸನ್ನಿವೇಶಗಳನ್ನು ಎದುರಿಸಲು ಮಾನಸಿಕವಾಗಿ ತಯಾರಾಗಿರಬೇಕು. ರೋಗಕ್ಕೆ ಹೆದರಿ ಅಥವಾ ಯಾರು ಏನು ಹೇಳಿ ಬಿಡುತ್ತಾರೋ ಎಂಬ ಕೀಳರಿಮೆಯಿಂದ ನಾಲ್ಕು ಗೋಡೆಗಳ ನಡುವೆ ಎಲ್ಲರಿಂದ ದೂರವಾಗಿ ಬದುಕುವುದು ಅಷ್ಟು ಸುಲಭವಲ್ಲ. ಕೆಲವೊಮ್ಮೆ ವಿಶ್ರಾಂತಿಗಾಗಿ ಅಂತಹ ಪರಿಸ್ಥಿತಿ ಎದುರಿಸುವ ಸ್ಥಿತಿ ಬಂದರೆ ಮಾನಸಿಕ ಸ್ಥೈರ್ಯ ಬೇಕಾಗುತ್ತದೆ. ಆ ಸಂದರ್ಭದಲ್ಲಿ ನಮ್ಮವರು ಎನ್ನುವರೇ ಹೆದರಿ ದೂರದಲ್ಲಿರುತ್ತಾರೆ.
ಕಾಯಿಲೆ ಮನುಷ್ಯನಿಗೆ ಬಂದೇ ಬರುತ್ತದೆ
ಈ ವೇಳೆ ತಮ್ಮ ರೋಗವನ್ನು ವಾಸಿ ಮಾಡಿಕೊಳ್ಳುವುದಕ್ಕೆ ಮುಖ್ಯವಾಗಿ ಬೇಕಾಗಿರುವುದು ವೈದ್ಯಕೀಯ ಚಿಕಿತ್ಸೆ ಜತೆಗೆ ಮಾನಸಿಕ ಧೈರ್ಯ. ಕೊರೋನಾ ಕಾಲವನ್ನು ಕಳೆದವರಿಗೆ ಅದು ನಮಗೆಲ್ಲರಿಗೂ ಗೊತ್ತಾಗಿದೆ. ಹೀಗಾಗಿ ಅಂತಹ ಪರಿಸ್ಥಿತಿಯನ್ನು ಎದುರಿಸಿದವರು ಈಗ ಕಾಯಿಲೆಯನ್ನು ಎದುರಿಸುವುದು ಕಷ್ಟವಾಗಲಾರದು. ಕಾಯಿಲೆಗಳು ಮನುಷ್ಯನಿಗೆ ಬಂದೇ ಬರುತ್ತದೆ. ಇದು ನಮಗೆಲ್ಲರಿಗೂ ಗೊತ್ತಿರುವ ವಿಷಯವೇ ಆದರೂ ಕಾಯಿಲೆ ಬಂದಾಗ ನಾವೆಲ್ಲರೂ ಹೆದರುತ್ತೇವೆ. ಇಲ್ಲಿ ಮುಖ್ಯವಾಗಿ ತಿಳಿದುಕೊಳ್ಳಬೇಕಾದ ವಿಚಾರವಾಗಿದೆ.

ಕಾಯಿಲೆ ಬಂತೆಂದು ತಲೆಕೆಡಿಸಿಕೊಳ್ಳದೆ ಅದಕ್ಕೆ ಚಿಕಿತ್ಸೆ ಪಡೆಯುತ್ತಾ ಕಾಯಿಲೆಯನ್ನು ಮರೆತು ಖುಷಿಯಾಗಿ ಬದುಕೋದನ್ನು ರೂಢಿಸಿಕೊಳ್ಳಬೇಕು. ಆಗ ಸ್ವಲ್ಪ ಮಟ್ಟಿಗೆ ರೋಗದ ನೋವನ್ನು ಮರೆಯಲು ಸಾಧ್ಯವಿದೆ. ನಮ್ಮಲ್ಲಿ ಹೆಚ್ಚು ಜನ ದೇಹಕ್ಕೆ ಅನಾರೋಗ್ಯ ಬಾಧಿಸಿದರೆ ಮಾನಸಿಕವಾಗಿ ಜರ್ಜರಿತರಾಗಿ ಬಿಡುತ್ತಾರೆ. ಕಾಯಿಲೆಗಳು ವಾಸಿಯಾಗಬೇಕಾದರೆ ಮಾನಸಿಕ ಆರೋಗ್ಯ ಮುಖ್ಯ ಎಂಬುದನ್ನು ಮರೆಯುತ್ತಾರೆ. ಅನಗತ್ಯ ಆಲೋಚನೆ ಮಾಡುತ್ತಾ ಇನ್ನಷ್ಟು ನೋವುಗಳನ್ನು ಮೈಮೇಲೆ ಎಳೆದುಕೊಳ್ಳುತ್ತಾರೆ.
ರೋಗದ ಬಗ್ಗೆ ಯೋಚಿಸುವುದನ್ನು ಬಿಡಿ
ಕಾಯಿಲೆ ಯಾವುದೇ ಇರಲಿ ಅದರ ಬಗ್ಗೆ ಯೋಚಿಸುತ್ತಾ ಕುಳಿತುಕೊಂಡರೆ ಮಾನಸಿಕ ಖಿನ್ನತೆವುಂಟಾಗಿ ನಮ್ಮ ಮೇಲೆ ನಮಗೆ ಜಿಗುಪ್ಸೆ ಬಂದು ಅದರಿಂದ ಅನಾಹುತವೇ ಜಾಸ್ತಿ. ಆದ್ದರಿಂದ ಎಂತಹ ಪರಿಸ್ಥಿತಿಯಲ್ಲೂ ನಮ್ಮಲ್ಲಿ ಖಿನ್ನತೆ ಆವರಿಸಲು ಬಿಡಬಾರದು. ಸದಾ ನಮ್ಮಲ್ಲೊಂದು ಆಹ್ಲಾದಕರ ವಾತಾವರಣವನ್ನು ಸೃಷ್ಟಿ ಮಾಡಿಕೊಳ್ಳಬೇಕು. ಇದು ನಮ್ಮಿಂದ ನಾವೇ ಮಾಡಿಕೊಳ್ಳಬೇಕಾದ ಕ್ರಿಯೆ ಆಗಿರುವುದರಿಂದ ಏನೇ ಆಗಲಿ ನಾನು ಖುಷಿಯಾಗಿಯೇ ಇರುತ್ತೇನೆ ಎಂಬ ಸಂಕಲ್ಪ ಮಾಡಬೇಕು. ನಾನು ಅನುಭವಿಸುತ್ತಿರುವ ಸಮಸ್ಯೆ ನನ್ನದೊಬ್ಬನದಲ್ಲ. ಇದಕ್ಕಿಂತ ದೊಡ್ಡ ಸಮಸ್ಯೆಯನ್ನು ಇನ್ನೆಷ್ಟೋ ಮಂದಿ ಎದುರಿಸುತ್ತಿಲ್ಲವೆ? ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಾ ಸಮಾಧಾನವನ್ನು ನಮಗೆ ನಾವೇ ಮಾಡಿಕೊಂಡರೆ ನಮ್ಮದು ಸಮಸ್ಯೆ ಎನಿಸುವುದೇ ಇಲ್ಲ.
ಇವತ್ತಿನ ಪರಿಸ್ಥಿತಿಯಲ್ಲಿ ಕೆಲವರು ತುತ್ತು ಅನ್ನಕ್ಕೂ ಯೋಚಿಸುವ ಪರಿಸ್ಥಿತಿಯಲ್ಲಿದ್ದರೆ, ಮತ್ತೆ ಕೆಲವರಿಗೆ ಐಷಾರಾಮಿ ಜೀವನವಿದ್ದರೂ ಅದನ್ನು ನೆಮ್ಮದಿಯಾಗಿ ಅನುಭವಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಅವರಲ್ಲಿ ಮಾನಸಿಕ ನೆಮ್ಮದಿಯೇ ಇಲ್ಲದಾಗಿದೆ. ಹೀಗಾಗಿ ಒಂದಷ್ಟು ಸಮಯವನ್ನು ಖುಷಿಯಾಗಿ ಕಳೆಯಲು ಕೂಡ ಸಾಧ್ಯವಾಗುತ್ತಿಲ್ಲ. ರೋಗದ ಭಯದಿಂದಾಗಿ ಇವತ್ತು ನಮ್ಮಲ್ಲಿ, ನಮ್ಮ ಕುಟುಂಬಗಳಲ್ಲಿ ಆಹ್ಲಾದಕರ ವಾತಾವರಣವೇ ನಿರ್ಮಾಣವಾಗುತ್ತಿಲ್ಲ. ನಾವು ಯಾರೊಂದಿಗೂ ಬೆರೆಯುತ್ತಿಲ್ಲ. ಸಂತಸ ದೂರವಾಗಿದೆ. ಸುತ್ತು ಬಳಸಿ ಮತ್ತೆ ರೋಗದ ಬಗ್ಗೆಯೇ ಯೋಚಿಸುವಂತಾಗಿದೆ.
ಸುತ್ತಲೂ ಆಹ್ಲಾದಕರ ವಾತಾವರಣ ನಿರ್ಮಿಸಿಕೊಳ್ಳಿ
ಮೊದಲು ನಾವು ನಮ್ಮ ಸುತ್ತಲೂ ನಾನು, ನನ್ನದು, ಆಸ್ತಿ, ಅಂತಸ್ತು, ಅಧಿಕಾರ ಎಂಬ ಗೋಡೆಗಳನ್ನು ನಿರ್ಮಿಸಿಕೊಂಡು ಎಲ್ಲರೊಂದಿಗೆ ಬೆರೆತು ಬದುಕುವುದನ್ನು ಮರೆತಿದ್ದೆವು. ಆದರೆ ಈಗ ರೋಗದ ಭಯದಿಂದ ಬಂಧಿವಾಗಿರುವ ಕಾಲದಲ್ಲಿ ಸಂಬಂಧದ ಮೌಲ್ಯವೇನು ಎಂಬುದು ಅರಿವಾಗುತ್ತಿದೆ. ನಮ್ಮ ದೇಹಕ್ಕೆ ಆವರಿಸುವ ಕಾಯಿಲೆಗೆ ವೈದ್ಯರು ಚಿಕಿತ್ಸೆ ನೀಡಬಹುದು. ಆದರೆ ಮಾನಸಿಕ ಆರೋಗ್ಯಕ್ಕೆ ಕೆಲವೊಮ್ಮೆ ನಾವೇ ಚಿಕಿತ್ಸೆ ಮಾಡಿಕೊಳ್ಳಬೇಕಾಗುತ್ತದೆ.
ಕೆಟ್ಟ ಆಲೋಚನೆಗಳಿಂದ ದೂರವಾಗ ಬೇಕಾದರೆ ಮೊದಲಿಗೆ ಒಳ್ಳೆಯ ವಿಚಾರಗಳತ್ತ ಮನಸ್ಸನ್ನು ಕೊಂಡೊಯ್ಯಬೇಕು. ಆಧ್ಯಾತ್ಮಿಕ ವಿಚಾರಗಳತ್ತ ಮನಸ್ಸು ಹರಿಸುವುದು, ಓದುವುದು, ಸಂಗೀತ ಕೇಳುವುದು ಹೀಗೆ ತಮಗೆ ಹಿತವೆನಿಸುವುದನ್ನು ಮಾಡುತ್ತಾ ನಮ್ಮ ಸುತ್ತಲೂ ಒಂದು ಆಹ್ಲಾದಕರ ವಾತಾವರಣವನ್ನು ಬೆಳೆಸಿಕೊಳ್ಳಬೇಕು. ಇದು ನಮಗೆ ನಮ್ಮಲ್ಲಿ ಮಾನಸಿಕ ಶಕ್ತಿಯನ್ನು ತುಂಬುವುದರೊಂದಿಗೆ ಎಲ್ಲವನ್ನೂ ಸಂತಸದಿಂದ ಎದುರಿಸುವ ಧೈರ್ಯ ತುಂಬುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications