ಕೊರೊನಾ ಪಾಸಿಟಿವ್ ಕೇಸ್ ಕಾಣಿಸಿಕೊಳ್ಳದ ಅದ್ಭುತ ದ್ವೀಪ
ಕಳೆದ ಒಂದು ವರ್ಷದಲ್ಲಿ ಮರೆಯಲಾಗದ ಸಾವು ನೋವು ಅನುಭವ ನೀಡಿರುವ ಮಹಾಮಾರಿ ನೊವೆಲ್ ಕೊರೊನಾವೈರಸ್ ಯಾವ ದೇಶವನ್ನು ಬಿಟ್ಟಿಲ್ಲ. ಎಲ್ಲೋ ಹತ್ತು ಹನ್ನೆರಡು ದೇಶಗಳಲ್ಲಿ ಇನ್ನೂ ಪಾಸಿಟಿವ್ ಕೇಸ್ ಕಾಣಿಸಿಕೊಂಡಿಲ್ಲ. ಈ ಸಾಲಿಗೆ ಈಗ ಭಾರತದ ಲಕ್ಷದೀಪ ಸೇರಿಕೊಂಡಿದೆ.
ದ್ವೀಪಗಳ ಸಮೂಹದ ಭಾರತದ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ ಕೂಡಾ ಕೊರೊನಾ ಸೋಂಕು ವಿಷಯದಲ್ಲಿ ಹಸಿರುವಲಯವಾಗೇ ಇನ್ನೂ(ಡಿ.9ರಂತೆ) ಗುರುತಿಸಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಕಟ್ಟುನಿಟ್ಟಿನ ಮಾರ್ಗಸೂಚಿ ಅನುಸರಿಸಿದ್ದು ಹಾಗೂ ಸರ್ಕಾರದ ನಿಯಮ ಪಾಲನೆ ಮಾಡಿದ ನಾಗರಿಕರು ಎಂದು ದ್ವೀಪಗಳಿಂದ ಆಯ್ಕೆಯಾದ ಸಂಸತ್ ಪ್ರತಿನಿಧಿ ಪಿಪಿ ಮೊಹಮ್ಮದ್ ಫೈಜಲ್ ವಿವರಿಸಿದ್ದಾರೆ.
ವಿಶ್ವ ಭೂಪಟದಲ್ಲಿ ಕೆಲವು ದೇಶಗಳಲ್ಲಿ ಕೊರೊನಾ ಸೋಂಕಿತ ಪ್ರಕರಣ ಸಂಖ್ಯೆ ''ಶೂನ್ಯ'' ಎಂದು ದಾಖಲಾಗಿವೆ. ಈ ಸಾಲಿನಲ್ಲಿ ಲಕ್ಷದೀಪ ಕೂಡಾ ಸೇರಿಕೊಂಡಿದೆ. ಒಂದು ವರ್ಷದಿಂದ ಒಂದೇ ಒಂದು ಕೋವಿಡ್ 19 ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ, ಸೋಂಕಿತರಿಲ್ಲ, ಸ್ಥಳೀಯರಿಗೆ ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಿಲ್ಲ, ಸ್ಯಾನಿಟೈಸರ್ ಬಳಕೆ ಹೇರಿಲ್ಲ, ಯಾವುದೇ ಕಠಿಣ ಮಾರ್ಗಸೂಚಿಗಳಿಲ್ಲದ ಮಾರ್ಗಸೂಚಿ ಅನುಸರಿಸಿ ಸೋಂಕಿನಿಂದ ದೂರ ಉಳಿದಿರುವುದು ಅಚ್ಚರಿಯಾದರೂ ಸತ್ಯ.

ಎಂದಿನಂತೆ ದೈನಂದಿನ ಚಟುವಟಿಕೆ
ಈ ಮೊದಲೇ ಹೇಳಿದಂತೆ ಮಾರ್ಗಸೂಚಿ, ನಿಯಮಾವಳಿಗಳ ನಿರ್ಬಂಧವಿಲ್ಲದ ಕಾರಣ ಇಂದಿಗೂ ಎಂದಿನಂತೆ ದೈನಂದಿನ ಚಟುವಟಿಕೆಗಳು ಸಾಗಿವೆ. ಮದುವೆ, ಶುಭ ಸಮಾರಂಭದಲ್ಲಿ ಹೆಚ್ಚು ಜನ ಸೇರುತ್ತಾರೆ. ಸಾಮೂಹಿಕ ಪ್ರಾರ್ಥನೆ ತಪ್ಪಿಸಿಲ್ಲ, ಮೀನುಗಾರರು ತಮ್ಮ ಚಟುವಟಿಕೆ ನಿಲ್ಲಿಸಿಲ್ಲ. ಇದೆಲ್ಲ ಮುಕ್ತ ವಾತವರಣವಿದ್ದರೂ ಕೊರೊನಾ ಸುಳಿಯದಂತೆ ನೋಡಿಕೊಳ್ಳುವಲ್ಲಿ ಸಂಸದ ಮೊಹಮ್ಮದ್ ಫೈಜಲ್ ಅವರು ಸಫಲರಾಗಿದ್ದಾರೆ.

ಲಕ್ಷದೀಪದಲ್ಲಿ ಯಾವ ರೀತಿ ನಿಯಮ?:
ಲಕ್ಷದೀಪಕ್ಕೆ ಯಾರೇ ಆಗಲಿ ಕಾಲಿರಿಸುವ ಮುನ್ನ ಕ್ವಾರಂಟೇನ್ ಅವಧಿಯಲ್ಲಿರಬೇಕಾಗುತ್ತದೆ. ಕೊವಿಡ್ 19 ನೆಗಟಿವ್ ಪ್ರಮಾಣ ಪತ್ರ ಪರಿಶೀಲಿಸಿದ ನಂತರ ದ್ವೀಪ ಸಮೂಹದಲ್ಲಿ ನೆಲೆಸಬಹುದು. ಈ ನಿಯಮವನ್ನು ಜನ ಸಾಮಾನ್ಯರಿಂದ ಜನಪ್ರತಿನಿಧಿಗಳ ತನಕ ಎಲ್ಲರೂ ಪಾಲಿಸುವಂತೆ ಇಲ್ಲಿನ ಅಧಿಕಾರಿಗಳು ನೋಡಿಕೊಂಡಿದ್ದಾರೆ. ಕೇರಳದ ಕೊಚ್ಚಿಯಿಂದ ಹಡಗು ಅಥವಾ ಹೆಲಿಕಾಪ್ಟರ್ ಮೂಲಕ ಲಕ್ಷದೀಪ ತಲುಪಬಹುದಾಗಿದೆ. ಕೊಚ್ಚಿಯಲ್ಲೇ ಪರೀಕ್ಷೆ, ಕ್ವಾರಂಟೇನ್ ಅವಧಿ ಪೂರ್ಣಗೊಳಿಸಬೇಕಾಗುತ್ತದೆ. ಹೊರಗಿನಿಂದ ದ್ವೀಪಕ್ಕೆ ಬರುವವರೆಲ್ಲರೂ ಸೋಂಕು ಮುಕ್ತರಾಗಿದ್ದರೆ ಮಾತ್ರ ಪ್ರವೇಶ ಎಂಬ ನಿಯಮ ಪಾಲಿಸಿದ್ದು ಈಗ ಬೆಲೆ ತಂದು ಕೊಟ್ಟಿದೆ.

ಶಾಲೆಗಳ ಪುನರ್ ಆರಂಭಕ್ಕೆ ಹಸಿರು ನಿಶಾನೆ
ಸೆಪ್ಟೆಂಬರ್ 21ರಂದು ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿನ ಶಾಲೆಗಳ ಪುನರ್ ಆರಂಭಕ್ಕೆ ಹಸಿರು ನಿಶಾನೆ ತೋರಿದರು. ಅಂದಿನಿಂದ ಎಂದಿನಂತೆ ತರಗತಿಗಳನ್ನು ನಡೆಸಲಾಗುತ್ತಿದೆ. ದೇಶದಲ್ಲಿ ಹೆಚ್ಚಿನ ನಿರ್ಬಂಧವಿಲ್ಲದೆ ಮಕ್ಕಳು ಎಂದಿನಂತೆ ಶಾಲೆಗಳಿಗೆ ಬರುತ್ತಿದ್ದಾರೆ. ಪೋಷಕರಿಗೂ ಯಾವುದೇ ಆತಂಕವಿಲ್ಲ ಎಂದು ಫೈಜಲ್ ಹೇಳಿದ್ದಾರೆ. ದೇಶದ ವಿವಿಧೆಡೆ ಇನ್ನೂ ಶಾಲೆ ಆರಂಭದ ಬಗ್ಗೆ ಪರೀಕ್ಷೆ ನಡೆಸುವುದರ ಬಗ್ಗೆ ಹಾಗೂ ಆನ್ ಲೈನ್ ಶಿಕ್ಷಣ ವ್ಯವಸ್ಥೆ ತರುವ ಬಗ್ಗೆ ಚರ್ಚೆ ನಡೆಯುತ್ತಲೇ ಇದೆ.
Recommended Video

ಮಾದರಿ ಕೇಂದ್ರಾಡಳಿತ ಪ್ರದೇಶ ಎನಿಸಿಕೊಂಡ ಲಕ್ಷದೀಪ
ಕೇಂದ್ರಾಡಳಿತ ಪ್ರದೇಶಗಳ ಪೈಕಿ ಪುಟ್ಟ ಆಡಳಿತ ಪ್ರದೇಶವಾಗಿರುವ ಲಕ್ಷದ್ವೀಪದಲ್ಲಿ ಸುಮಾರು 32 ಸಣ್ಣ ಪುಟ್ಟ ದ್ವೀಪಗಳೀವೆ, ಒಟ್ಟು 32 ಚದರ ಕಿಲೋ ಮೀಟರ್ ವಿಸ್ತೀರ್ಣದ ಲಕ್ಷದೀಪದಲ್ಲಿ 2011ರ ಜನಗಣತಿ ಪ್ರಕಾರ 64ಸಾವಿರ ಜನಸಂಖ್ಯೆ ಮಾತ್ರ.
ಕೇರಳದಲ್ಲಿ ಕೊವಿಡ್ 19 ಬಗ್ಗೆ ಆರಂಭದಲ್ಲಿ ತೆಗೆದುಕೊಂಡ ಮುನ್ನಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಇಲ್ಲಿನ ಆಡಳಿತಾಧಿಕಾರಿಗಳು
ಮಾರ್ಚ್ ತಿಂಗಳಿನಿಂದಲೇ ಎಲ್ಲಾ ಬಗೆಯ ಪ್ರವಾಸಿಗರಿಗೆ ನಿರ್ಬಂಧ ಹೇರಿದರು. ದೇಶಿ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರ ಪ್ರವೇಶ ನಿರ್ಬಂಧದ ಜೊತೆಗೆ ಸ್ಥಳೀಯರ ಆರೋಗ್ಯ ಪರೀಕ್ಷೆ ಸತತವಾಗಿ ನಡೆಸಲಾಯಿತು. ಜೊತೆಗೆ ಒಂದು ದ್ವೀಪದಿಂದ ಮತ್ತೊಂದು ದ್ವೀಪಕ್ಕೆ ಹೋಗದಂತೆ ನಿರ್ಬಂಧವಿಧಿಸಿ, ಸೋಂಕು ಹರಡುವಿಕೆ ಕೊಂಡಿಯನ್ನು ಕತ್ತರಿಸಲಾಯಿತು. ಕೊಚ್ಚಿನಿಂದ ಮಾತ್ರ ಲಕ್ಷದೀಪಕ್ಕೆ ಪ್ರವೇಶ ಅವಕಾಶವನ್ನು ನಂತರ ಕಲ್ಪಿಸಿದರೂ ಹೊರಗಿನವರಿಗೆ ಕೊವಿಡ್ 19 ನೆಗಟಿವ್ ಕಡ್ಡಾಯ, ಕಟ್ಟುನಿಟ್ಟಿನ ಕ್ವಾರಂಟೈನ್ ಅವಧಿ ವಿಧಿಸಲಾಯಿತು. ಇದಕ್ಕೆ ಸ್ಥಳೀಯ ನಾಗರಿಕರು ಸೂಕ್ತವಾಗಿ ಸ್ಪಂದಿಸಿದರು ಹೀಗಾಗಿ, ಇಲ್ಲಿ ಕೊರೊನಾ ಸೋಂಕು ಯಾರಿಗೂ ಸೋಕಿಲ್ಲ.











Click it and Unblock the Notifications