Get Updates
Get notified of breaking news, exclusive insights, and must-see stories!

'ಕೆಂಪು' ಕೋಟೆಯಲ್ಲಿ ಬಿಜೆಪಿಯ 'ಕೇಸರಿ' ಬಾವುಟ ಹಾರಿದ್ದು ಹೇಗೆ?: ಒಂದೇ ದಶಕದಲ್ಲಿ ಬದಲಾದ ಚಿತ್ರಣ

ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಿಂದ ವಿಧಾನಸಭೆ ಚುನಾವಣೆ ಆರಂಭವಾಗುತ್ತಿದೆ. ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ಇಲ್ಲಿ ಪ್ರಮುಖ ಪ್ರತಿಸ್ಪರ್ಧಿಗಳಾಗಿವೆ. ಈ ಎರಡೂ ಪಕ್ಷಗಳಿಗೆ ಅತ್ಯಂತ ಮಹತ್ವ ಎನಿಸಿರುವುದು ಜಂಗಲ್ ಮಹಲ್ ಪ್ರದೇಶದಲ್ಲಿನ 42 ವಿಧಾನಸಭೆ ಕ್ಷೇತ್ರಗಳು.

294 ಸೀಟುಗಳಿರುವ ಪಶ್ಚಿಮ ಬಂಗಾಳದಲ್ಲಿ ಈ ಎರಡೂ ಪಕ್ಷಗಳ ಯಶಸ್ಸು-ವೈಫಲ್ಯ ಈ ಭಾಗದಲ್ಲಿರುವ ಕುಡುಮಿ ಜನಾಂಗ ಮತ್ತು ಅಪಾರ ಪ್ರಮಾಣದಲ್ಲಿರುವ ಬುಡಕಟ್ಟು ಜನಸಂಖ್ಯೆಯ ಮನಸ್ಸು ಯಾವ ರೀತಿಯಿದೆ ಎಂಬುದನ್ನು ಅವಲಂಬಿಸಿದೆ. ಏಕೆಂದರೆ ಈ ಪ್ರದೇಶ ಸುಮಾರು ಒಂದು ದಶಕದ ಹಿಂದೆ ಎಡಪಂಥೀಯ ವಿಚಾರಧಾರೆಗಳ ಸಂಘಟನೆಗಳ ಭದ್ರ ಕೋಟೆಯಾಗಿತ್ತು.

ಜಾರ್ಖಂಡ್ ಮತ್ತು ಬಿಹಾರಕ್ಕೆ ಹೊಂದಿಕೊಂಡಂತಿರುವ ಬಂಗಾಳದ ನೈಋತ್ಯ ಭಾಗದಲ್ಲಿರುವ ಈ ಪ್ರದೇಶವು ಚಳವಳಿ, ಹೋರಾಟ, ಹಿಂಸೆ, ಉದ್ವಿಗ್ನ ಸ್ಥಿತಿಗಳಿಂದ ತುಂಬಿಕೊಂಡಿತ್ತು. ಇಲ್ಲಿ ಸಿಪಿಎಂ ಪಕ್ಷದ ಪ್ರಾಬಲ್ಯ, ಉಗ್ರ ಸಂಘಟನೆಯ ಹಾವಳಿ ಮತ್ತು 2008-2011ರ ಅವಧಿಯಲ್ಲಿ ಬಲವಂತದ ಭೂ ಸ್ವಾಧೀನದ ವಿರುದ್ಧ ನಡೆದ ಉಗ್ರ ಚಳವಳಿಗಳ ತಾಣವಿದು.

ಆದರೆ ಈ ಒಂದು ದಶಕದಲ್ಲಿ ಈ ಪ್ರದೇಶದ ಚಿತ್ರಣ ಬಹುತೇಕ ಬದಲಾಗಿದೆ. ಮಾವೊವಾದಿಗಳ ಭದ್ರ ಕೋಟೆಯಲ್ಲಿ ಕಾಂಗ್ರೆಸ್‌ ತನ್ನ ಹಸ್ತದ ಗುರುತು ಮೂಡಿಸಿದೆ. ಬಳಿಕ ಟಿಎಂಸಿ ಕೂಡ ತನ್ನ ಬಾವುಟ ನೆಟ್ಟಿದೆ. ಅಷ್ಟೇ ಅಲ್ಲ, ಪಕ್ಕಾ ಎಡಪಂಥೀಯ ನೆಲದಲ್ಲಿ ಅದಕ್ಕೆ ತದ್ವಿರುದ್ಧ ವಿಚಾರಧಾರೆಯ ಬಲಪಂಥೀಯ ಬಿಜೆಪಿ ಕೂಡ ತನ್ನ ಗುರುತುಗಳನ್ನು ಮೂಡಿಸುತ್ತಿದೆ. ಮುಂದೆ ಓದಿ.

ಬಾವುಟ ಹಾರಿಸಿದ ಬಿಜೆಪಿ

ಬಾವುಟ ಹಾರಿಸಿದ ಬಿಜೆಪಿ

ಕಳೆದ ಪಂಚಾಯತ್ ಚುನಾವಣೆ ಇಲ್ಲಿನ ಬದಲಾದ ರಾಜಕೀಯ ಹಾಗೂ ಸಾಮಾಜಿಕ ಸನ್ನಿವೇಶಕ್ಕೆ ಉದಾಹರಣೆ. ಇಲ್ಲಿ ಪ್ರಮುಖ ರಾಜಕೀಯ ಪಕ್ಷಗಳಿಂದ ಕಣಕ್ಕಿಳಿದ ಅಭ್ಯರ್ಥಿಗಳು, ಸ್ವತಂತ್ರರಾಗಿ ಸ್ಪರ್ಧಿಸಿದ್ದ ಬುಡಕಟ್ಟು ಸಮುದಾಯ ಅಭ್ಯರ್ಥಿಗಳ ಎದುರು ಮಣ್ಣುಮುಕ್ಕಿದ್ದರು. ಟಿಎಂಸಿ ಮತ್ತು ಎಡಪಕ್ಷಗಳ ಅಭ್ಯರ್ಥಿಗಳು ನೆಲಕಚ್ಚಿದರು. ಈ ನಡುವೆ ಪುರುಲಿಯಾ ಮತ್ತು ಜಾರ್ಗ್ರಾಮ್ ಜಿಲ್ಲೆಗಳಲ್ಲಿ ಬಿಜೆಪಿ ಮೂರನೇ ಒಂದು ಭಾಗಕ್ಕಿಂತಲೂ ಹೆಚ್ಚಿನ ಗ್ರಾಮ ಪಂಚಾಯತಿಗಳಲ್ಲಿ ತನ್ನ ಕೇಸರಿ ಬಣ್ಣ ಹರವಿತು.

ಟಿಎಂಸಿ ವಿರೋಧಿ ಅಲೆ

ಟಿಎಂಸಿ ವಿರೋಧಿ ಅಲೆ

ಆಡಳಿತಾರೂಢ ಟಿಎಂಸಿ ವಿರುದ್ಧ ಈ ಭಾಗದಲ್ಲಿ ಬುಡಕಟ್ಟು ಸಮುದಾಯಗಳಲ್ಲಿ ಭಾರಿ ಆಕ್ರೋಶವಿದೆ. ಇದನ್ನು ಅರಿತಿದ್ದ ಟಿಎಂಸಿ, 2019ರ ಲೋಕಸಭೆ ಚುನಾವಣೆಯಲ್ಲಿ ಜಂಗಲ್ ಮಹಲ್ ಪ್ರದೇಶದ ಕೇಂದ್ರ ಭಾಗವಾದ ಜಾರ್ಗ್ರಾಮ್ ಕ್ಷೇತ್ರದಿಂದ ಸಂಥಾಲ್ ಬುಡಕಟ್ಟು ಸಮುದಾಯದ ಮಹಿಳೆಯನ್ನು ಕಣಕ್ಕಿಳಿಸಿತ್ತು. ತೀವ್ರ ಪೈಪೋಟಿ ನಿರೀಕ್ಷಿಸಿದ್ದ ಈ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಅಂತರದಿಂದ ಜಯಗಳಿಸಿ ಅಚ್ಚರಿ ಮೂಡಿಸಿತ್ತು.

ಬಿಜೆಪಿಗೆ ವರದಾನವಾದ ಆರೆಸ್ಸೆಸ್ ಕಾರ್ಯ

ಬಿಜೆಪಿಗೆ ವರದಾನವಾದ ಆರೆಸ್ಸೆಸ್ ಕಾರ್ಯ

ಬಂಗಾಳ, ಜಾರ್ಖಂಡ್, ಒಡಿಶಾ ಮತ್ತು ಛತ್ತೀಸಗಡ ರಾಜ್ಯಗಳ ಬುಡಕಟ್ಟು ಪ್ರದೇಶಗಳಲ್ಲಿ ತನ್ನ ಸರಸ್ವತಿ ಶಿಶು ಮಂದಿರ ಶಾಲೆಗಳ ಮೂಲಕ ಆರೆಸ್ಸೆಸ್ ನಡೆಸುತ್ತಿರುವ ಸಕ್ರಿಯ ಚಟುವಟಿಕೆಗಳು ಬಿಜೆಪಿಗೆ ಈ ಪ್ರದೇಶಗಳಲ್ಲಿ ವರದಾನವಾಗಿದೆ. ಜಾರ್ಗ್ರಾಮ್‌ನಲ್ಲಿ ಏಕಾಲ್ ವಿದ್ಯಾಲಯಗಳ ಜಾಲದೊಂದಿಗೆ ವನವಾಸಿ ಕಲ್ಯಾಣ ಕೇಂದ್ರವೂ ಇದೆ.

ಆರೆಸ್ಸೆಸ್ ಇಲ್ಲಿ ಕಡು ಎಡಪಂಥೀಯ ಸಂಘಟನೆಗಳ ವಿರುದ್ಧ ಹೋರಾಟದ ಜತೆಗೆ ಕ್ರೈಸ್ತ ಸಂಸ್ಥೆಗಳು ವ್ಯಾಪಿಸುತ್ತಿರುವುದನ್ನು ವಿರೋಧಿಸುತ್ತಿದೆ. 2018ರಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಇಲ್ಲಿ ಆರೆಸ್ಸೆಸ್ ನಡೆಸುತ್ತಿರುವ 120ಕ್ಕೂ ಅಧಿಕ ಶಿಶು ಮಂದಿರಗಳನ್ನು ಮುಚ್ಚಿದ್ದರೆ, ಅಂತಹ ಸುಮಾರು 350 ಶಾಲೆಗಳನ್ನು ಮುಚ್ಚಲು ಆದೇಶ ನೀಡಿತ್ತು. ಈ ಕ್ರಮ ಈ ಪ್ರದೇಶಗಳಲ್ಲಿ ಬಿಜೆಪಿ ಪರವಾದ ಅನುಭೂತಿ ಮೂಡಲು ನೆರವಾಯಿತು.

ಚುನಾವಣಾ ಚಿತ್ರಣ ಹೇಗಿದೆ?

ಚುನಾವಣಾ ಚಿತ್ರಣ ಹೇಗಿದೆ?

ಪುರುಲಿಯಾ, ಜಾರ್ಗ್ರಾಮ್, ಪಶ್ಚಿಮ ಮೇದಿನಿಪುರ ಮತ್ತು ಬಂಕುರಾ ಜಿಲ್ಲೆಗಳು ಜಂಗಲ್ ಮಹಲ್ ಪ್ರದೇಶದ ವ್ಯಾಪ್ತಿಯಲ್ಲಿವೆ. ಇಲ್ಲಿ ಆರು ಲೋಕಸಭೆ ಕ್ಷೇತ್ರಗಳು ಮತ್ತು 42 ವಿಧಾನಸಭೆ ಸೀಟುಗಳಿವೆ. ಈ ಆರು ಲೋಕಸಭೆ ಸೀಟುಗಳ ಪೈಕಿ ಬಿಜೆಪಿ ಜಾರ್ಗ್ರಾಮ್, ಪುರುಲಿಯಾ, ಮೇದಿನಿಪುರ ಮತ್ತು ಬಂಕುರಾಗಳಲ್ಲಿ ಜಯಭೇರಿ ಬಾರಿಸಿತ್ತು. ಇನ್ನು ಘಾಟಲ್ ಮತ್ತು ಬಿಷ್ಣುಪುರ್ ಪ್ರದೇಶಗಳಲ್ಲಿ ಟಿಎಂಸಿ ಅಭ್ಯರ್ಥಿಗಳು ಗೆದ್ದಿದ್ದರು.

ಎಡಪಕ್ಷಗಳ ಸರ್ಕಾರ ಪತನಗೊಂಡ ಬಳಿಕ ಟಿಎಂಸಿ ತನ್ನ ರಾಜಕೀಯ ಬ್ರ್ಯಾಂಡ್ ಅನ್ನು ಬೆಳೆಸಿತು. ಆದರೆ ಅದರಲ್ಲಿನ ಅಂತಃಕಲಹ, ಬಿಜೆಪಿಗೆ ತನ್ನ ಅಸ್ತಿತ್ವ ಕಂಡುಕೊಳ್ಳಲು ದಾರಿ ಮಾಡಿಕೊಟ್ಟಿತು. 2016ರ ವಿಧಾನಸಭೆ ಚುನಾವಣೆಯಲ್ಲಿ ಟಿಎಂಸಿ ಒಟ್ಟು 211 ಸೀಟುಗಳಲ್ಲಿ ಗೆದ್ದಿದ್ದರೆ, ಬಿಜೆಪಿ ಮೂರು ಕ್ಷೇತ್ರದಲ್ಲಿ ಮಾತ್ರ ಗೆಲುವು ಕಂಡಿತ್ತು. ಕಾಂಗ್ರೆಸ್ ಮತ್ತು ಎಡಪಕ್ಷಗಳು ಕ್ರಮವಾಗಿ 44 ಹಾಗೂ 33 ಸೀಟುಗಳಲ್ಲಿ ಗೆದ್ದಿದ್ದವು.

ಬಿಜೆಪಿ ವಿರುದ್ಧ ಕುಡುಮಿಗಳಿಗೆ ಸಿಟ್ಟು

ಬಿಜೆಪಿ ವಿರುದ್ಧ ಕುಡುಮಿಗಳಿಗೆ ಸಿಟ್ಟು

ಹಾಗೆಂದು ಕುಡುಮಿ ಸಮುದಾಯ ಬಿಜೆಪಿಯ ಪರವಾಗಿದೆ ಎಂದಲ್ಲ. ನೆರೆಯ ಜಾರ್ಖಂಡ್‌ನಲ್ಲಿ ಬಿಜೆಪಿಯ ಪರವಾಗಿ ಈ ಸಮುದಾಯ ನಿಂತಿರಲಿಲ್ಲ. ಅಲ್ಲದೆ, ಬಿಜೆಪಿಯ ಪೌರತ್ವ ತಿದ್ದುಪಡಿ ಕಾಯ್ದೆ ಈ ಸಮುದಾಯವನ್ನು ಸಿಟ್ಟಿಗೇಳಿಸಿದೆ. ಏಕೆಂದರೆ ಇವರು ದಟ್ಟ ಅರಣ್ಯಗಳ ಒಳಗೆ ವಾಸಿಸುವವರು. ಇವರಲ್ಲಿ ಒಬ್ಬರ ಬಳಿಯೂ ತಮ್ಮ ಪರಂಪರೆಗೆ ಪುರಾವೆ ಒದಗಿಸುವ ಯಾವ ದಾಖಲೆಯೂ ಇಲ್ಲ. ಅವರಿಗೆ ಬುಡಕಟ್ಟು ಮಾನ್ಯತೆ ನೀಡಬೇಕೆಂಬ ಬೇಡಿಕೆಯನ್ನು ಕೇಂದ್ರ ತಿರಸ್ಕರಿಸಿತ್ತು.

ಜಂಗಲ್ ಮಹಲ್ ಪ್ರದೇಶದ 42 ಕ್ಷೇತ್ರಗಳಲ್ಲಿನ 30 ಕ್ಷೇತ್ರಗಳಲ್ಲಿಯೇ ಈ ಸಮುದಾಯದ ಜನಸಂಖ್ಯೆ ಸುಮಾರು 30 ಲಕ್ಷದಷ್ಟಿದೆ. ಇವರ ಒಲವು ಈ ಎರಡೂ ಪಕ್ಷಗಳ ಕಡೆಗೆ ಪ್ರಬಲವಾಗಿಲ್ಲ. ಇಲ್ಲಿನ ಸ್ಥಳೀಯ ಮುಖಂಡರ ನಡುವಿನ ಸಂಘರ್ಷವನ್ನು ಸರಿಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ಟಿಎಂಸಿಯ ಭ್ರಷ್ಟಾಚಾರವನ್ನು ಇಲ್ಲಿ ಬಿಜೆಪಿ ತನ್ನ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ.

ಛದ್ರದಾರ್ ಮಹತೋ ಟಿಎಂಸಿ ಸೇರ್ಪಡೆ

ಛದ್ರದಾರ್ ಮಹತೋ ಟಿಎಂಸಿ ಸೇರ್ಪಡೆ

2008-09ರಲ್ಲಿ ಗಮನ ಸೆಳೆದಿದ್ದ ಲಾಲ್‌ಗಡ ಚಳವಳಿಯ ಪ್ರಮುಖ ಸೂತ್ರಧಾರ ಛದ್ರದಾರ್ ಮಹತೋ ಅವರನ್ನು ಮಮತಾ ಬ್ಯಾನರ್ಜಿ ಈಗಾಗಲೇ ತಮ್ಮ ಕಡೆಗೆ ಸೆಳೆದುಕೊಂಡಿದ್ದಾರೆ. ಜತೆಗೆ ಕುಡುಮಿಗಳನ್ನು ಬುಡಕಟ್ಟು ಸಮುದಾಯದ ಪಟ್ಟಿಗೆ ಸೇರಿಸುವಂತೆ ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ನೀಡುವ ಭರವಸೆ ಕೊಟ್ಟಿದ್ದಾರೆ. ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಲ್ಲಿರುವ ಕುಡುಮಿಗಳಿಗೂ ಬಿಹಾರದಲ್ಲಿರುವ 'ಕುರುಮಿ' ಸಮುದಾಯಕ್ಕೂ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆಚರಣೆಗಳಲ್ಲಿ ವ್ಯತ್ಯಾಸವಿದೆ. ಇದರಲ್ಲಿ ಮುಂಡ, ಹೋ, ಖಾರಿಯಾ, ಒರಾವೊನ್, ಸಂಥಾಲ್ ಎಂಬ ಪಂಗಡಗಳಿವೆ.

ಎಸ್‌ಟಿ ಪಟ್ಟಿಯಿಂದ ಹೊರಕ್ಕೆ

ಎಸ್‌ಟಿ ಪಟ್ಟಿಯಿಂದ ಹೊರಕ್ಕೆ

1931ರ ಜನಗಣತಿ ವೇಳೆ ಚೋಟಾನಗರದ ಕುಡುಮಿಗಳನ್ನು ಪುರಾತನ ಬುಡಕಟ್ಟುಗಳ ಪಟ್ಟಿಯಲ್ಲಿ ಸೇರಿಸಲಾಗಿತ್ತು. 1950ರ ಸೆ. 5ರವರೆಗೂ ಅದು ಎಸ್‌ಟಿಯಲ್ಲಿಯೇ ಇತ್ತು. ಆದರೆ ಅದನ್ನು ಎಸ್‌ಟಿ ಪಟ್ಟಿಯಿಂದ ಕಿತ್ತುಹಾಕಿದ್ದಕ್ಕೆ ಕಾರಣ ಇನ್ನೂ ಗೊತ್ತಾಗಿಲ್ಲ. ಅಂದಿನಿಂದಲೂ ಕುಡುಮಿಯನ್ನು ಮರಳಿ ಎಸ್‌ಟಿಗೆ ಸೇರಿಸಬೇಕೆಂಬ ಹೋರಾಟ ನಡೆಯುತ್ತಲೇ ಇದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+