ಪುನೀತ್ಗೆ ಕರ್ನಾಟಕ ರತ್ನ ಪ್ರಶಸ್ತಿ; ಇದುವರೆಗೂ ಪ್ರಶಸ್ತಿ ಪಡೆದ ಸಾಧಕರು
ಬೆಂಗಳೂರು, ನವೆಂಬರ್ 16; ಕನ್ನಡ ನಟ, ಅಭಿಮಾನಿಗಳ ಪಾಲಿನ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ಗೆ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವುದಾಗಿ ಕರ್ನಾಟಕ ಸರ್ಕಾರ ಘೋಷಣೆ ಮಾಡಿದೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಂಗಳವಾರ ದಿ. ಪುನೀತ್ ರಾಜ್ಕುಮಾರ್ ಸ್ಮರಣಾರ್ಥ 'ಪುನೀತ ನಮನ' ಕಾರ್ಯಕ್ರಮ ಆಯೋಜನೆ ಮಾಡಿತ್ತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.
ಪುನೀತ್ ವಿಧಿವಶ; ರಾಜ್ಯೋತ್ಸವ ಪ್ರಶಸ್ತಿ ನೀಡಲು ತಾಂತ್ರಿಕ ತೊಡಕು
ಸಮಾರಂಭದಲ್ಲಿ ಮಾತನಾಡಿದ ಬಸವರಾಜ ಬೊಮ್ಮಾಯಿ, "ಪುನೀತ್ ನಮ್ಮೆಲ್ಲರಿಗೂ ಆತ್ಮೀಯ. ಅವನನ್ನು ನಾನು ಬಾಲ್ಯದಿಂದ ಬಲ್ಲೆ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಬಾಲಕ ಪುನೀತ್. ಅಷ್ಟು ಸಣ್ಣ ವಯಸ್ಸಿನಲ್ಲಿ ಹಾಗೆ ನಟಿಸೋದು ಸುಲಭವಲ್ಲ" ಎಂದು ಬಣ್ಣಿಸಿದರು.
ಚಿತ್ರದುರ್ಗದ ಮುರುಘಾಮಠದಿಂದ ನಟ ಪುನೀತ್ ರಾಜಕುಮಾರ್ ರಿಗೆ ಬಸವಶ್ರೀ ಪ್ರಶಸ್ತಿ
ಪುನೀತ್ ರಾಜ್ಕುಮಾರ್ಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ಪ್ರಶಸ್ತಿ ನೀಡುವುದಾಗಿ ಅವರು ಘೋಷಣೆ ಮಾಡಿದರು. ಕರ್ನಾಟಕ ಸರ್ಕಾರ ಇದೇ ಮೊದಲ ಬಾರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುತ್ತಿದೆ.
ಶಿವಮೊಗ್ಗದಲ್ಲಿ ಪುನೀತ್ ರಾಜಕುಮಾರ್ ಮುದ್ದಾಡಿದ್ದ ಆನೆಗೆ ಪುನೀತ್ ಹೆಸರು ನಾಮಕರಣ
ರಾಷ್ಟ್ರ ಮಟ್ಟದಲ್ಲಿ ಭಾರತ ರತ್ನ ಪರಮೋಚ್ಚ ಗೌರವವಾಗಿದೆ. ಹಾಗೆಯೇ ರಾಜ್ಯಮಟ್ಟದಲ್ಲಿ 'ಕರ್ನಾಟಕ ರತ್ನ' ಅತ್ಯುನ್ನತ ಗೌರವವಾಗಿದೆ. ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ ಗಣ್ಯರಿಗೆ ಈ ಪ್ರಶಸ್ತಿಯನ್ನು ಕರ್ನಾಟಕ ಸರ್ಕಾರ ನೀಡುತ್ತದೆ.
1992ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸ್ಥಾಪನೆ ಮಾಡಲಾಯಿತು. 9 ಸಾಧಕರಿಗೆ ಇದುವರೆಗೂ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. 1992ರಲ್ಲಿ ಡಾ. ರಾಜ್ಕುಮಾರ್ಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿತ್ತು. ಈಗ ಅವರ ಕಿರಿಯ ಪುತ್ರ ಪುನೀತ್ ರಾಜ್ಕುಮಾರ್ಗೆ ಮರಣೋತ್ತರವಾಗಿ ಈ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಘೋಷಣೆ ಮಾಡಲಾಗಿದೆ.
ಪ್ರಶಸ್ತಿ ಕುರಿತು; 'ಕರ್ನಾಟಕ ರತ್ನ' ಕರ್ನಾಟಕ ಸರ್ಕಾರ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದೆ. ಪ್ರಶಸ್ತಿ 50 ಗ್ರಾಂ ತೂಕದ ಚಿನ್ನದ ಪದಕ, ಸನ್ಮಾನ ಪತ್ರ, ನೆನಪಿನ ಕಾಣಿಕೆ ಮತ್ತು ಶಾಲನ್ನು ಒಳಗೊಂಡಿದೆ. ಆದರೆ ಇದೇ ಮೊದಲ ಬಾರಿ ಮರಣೋತ್ತರವಾಗಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದುವರೆಗೂ ಪ್ರಶಸ್ತಿ ಪಡೆದ ಸಾಧಕರು
* ಕೆ. ವಿ. ಪುಟ್ಟಪ್ಪ (ಕುವೆಂಪು) (1992), ಸಾಹಿತ್ಯ
* ಡಾ. ರಾಜ್ಕುಮಾರ್ (1992), ಚಲನಚಿತ್ರ, ಸಂಗೀತ
* ಎಸ್. ನಿಜಲಿಂಗಪ್ಪ (1999), ರಾಜಕೀಯ
* ಡಾ ಸಿ. ಎನ್. ಆರ್. ರಾವ್ (2000), ವಿಜ್ಞಾನ
* ಡಾ. ದೇವಿ ಪ್ರಸಾದ್ ಶೆಟ್ಟಿ (2001), ವೈದ್ಯಕೀಯ
* ಭೀಮಸೇನ ಜೋಷಿ (2005), ಸಂಗೀತ
* ಡಾ. ಶ್ರೀ ಶಿವಕುಮಾರ ಸ್ವಾಮೀಜಿ (2007), ಸಮಾಜ ಸೇವೆ
* ದೇ. ಜವರೇ ಗೌಡ (2008), ಶಿಕ್ಷಣ ಮತ್ತು ಸಾಹಿತ್ಯ
* ಡಿ. ವಿರೇಂದ್ರ ಹೆಗ್ಗಡೆ (2009), ಸಮಾಜ ಸೇವೆ
ಅಕ್ಟೋಬರ್ 29ರ ಶುಕ್ರವಾರ ನಟ ಪುನೀತ್ರಾಜ್ಕುಮಾರ್ಗೆ ಹೃದಯಾಘಾತವಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದರು. ಭಾನುವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆದಿತ್ತು.
ದಿ. ಪುನೀತ್ ರಾಜ್ಕುಮಾರ್ಗೆ ಮರಣೋತ್ತರವಾಗಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಲಕ್ಷಾಂತರ ಅಭಿಮಾನಿಗಳು ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ರಾಜ್ಯೋತ್ಸವ ಪ್ರಶಸ್ತಿ ನೀಡಲು ತಾಂತ್ರಿಕ ಸಮಸ್ಯೆ ಎದುರಾಗಿತ್ತು. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅಧ್ಯಕ್ಷತೆಯ ಸಮಿತಿ ಶಿಫಾರಸು ಅನ್ವಯ ರಾಜ್ಯೋತ್ಸವ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವಂತಿಲ್ಲ. ಆದ್ದರಿಂದ ರಾಜ್ಯೋತ್ಸವ ಪ್ರಶಸ್ತಿಗೆ ಪುನೀತ್ ರಾಜ್ಕುಮಾರ್ ಆಯ್ಕೆಯಾಗಿರಲಿಲ್ಲ.
ಪದ್ಮಶ್ರೀಗೆ ಶಿಫಾರಸು; 'ಪುನೀತ ನಮನ' ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಮಾತನಾಡಿದ ಅವರು, "ರಾಜ್ಯ ಸರ್ಕಾರ ಪುನೀತ್ ಅವರಿಗೆ ಕರ್ನಾಟಕ ರತ್ನ ನೀಡಲು ತೀರ್ಮಾನ ಮಾಡಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಅವರ ಈ ನಿರ್ಧಾರ ಸ್ವಾಗತಾರ್ಹವಾದುದ್ದು" ಎಂದರು.
"ಅದೇ ರೀತಿ ಪುನೀತ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ಕೊಡಬೇಕು ಎಂದು ಈ ಹಿಂದೆಯೇ ಒತ್ತಾಯ ಮಾಡಿದ್ದೆ. ಈ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಅವರು ಇರುವುದರಿಂದ ಅವರು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಷ್ಟೇ ಅಲ್ಲದೆ, ಪ್ರಶಸ್ತಿ ಕೊಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸುತ್ತೇನೆ" ಎಂದು ಹೇಳಿದರು.