ಪರಂಗೆ ಸಂಪುಟ ಬಿಸಿ ತುಪ್ಪ, ಸ್ವಲ್ಪ ಆಯ ತಪ್ಪಿದರೂ ಬಿಜೆಪಿಗೆ ಕಪ್!
Recommended Video

ಬೆಂಗಳೂರು, ಜೂನ್ 7: ಎಂ.ಬಿ.ಪಾಟೀಲ್ ಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲ ಎಂಬ ವಿಚಾರ ಕಾಂಗ್ರೆಸ್ ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದೆ. ಹಾಗೆ ನೋಡಿದರೆ ಕೈ ಪಕ್ಷದ ಹಲವು ಮುಖಂಡರಿಗೆ ಈ ಬಾರಿ ಸಚಿವ ಸ್ಥಾನವು ತಪ್ಪಿದ್ದು, ಅಸಮಾಧಾನದ ಹೊಗೆಯಾಡುತ್ತಿದೆ. ಎಂ.ಬಿ.ಪಾಟೀಲ್ ಜತೆಗೆ ಸಮಾಧಾನದ ಮಾತನಾಡಲು ಬೆಂಗಳೂರಿನ ನಿವಾಸಕ್ಕೆ ಬಂದ ನಾಯಕರು ಬಂದ ದಾರಿಗೆ ಸುಂಕವಿಲ್ಲದೆ ವಾಪಸಾಗಿದ್ದಾರೆ.
ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ಹಾಗೂ ಜಮೀರ್ ಅಹ್ಮದ್ ಖಾನ್ ಈ ಮೂವರೂ ಬೆಂಗಳೂರಿನಲ್ಲಿರುವ ಎಂ.ಬಿ.ಪಾಟೀಲರ ನಿವಾಸಕ್ಕೆ ಗುರುವಾರ ಬಂದಿದ್ದಾರೆ. ಈ ವೇಳೆ ಅಲ್ಲಿ ಹಾಜರಿದ್ದ ಪಾಟೀಲರ ಬೆಂಬಲಿಗರು ದಿನೇಶ್ ಗುಂಡೂರಾವ್ ಗೆ ಘೇರಾವ್ ಹಾಕಿದ್ದಾರೆ. ಒಂದು ವೇಳೆ ಪಾಟೀಲರಿಗೆ ಸಚಿವ ಸ್ಥಾನ ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಬೆದರಿಕೆಯೊಡ್ಡಿದ್ದಾರೆ.
ಇನ್ನು ಸಂಪುಟ ವಿಸ್ತರಣೆಯ ನಂತರ ತಲೆದೋರಿರುವ ಬಿಕ್ಕಟ್ಟು ನಿವಾರಣೆಗಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಸಭೆ ನಡೆದಿದ್ದು, ಅದರಲ್ಲಿ ಡಿ.ಕೆ.ಶಿವಕುಮಾರ್, ಆರ್.ವಿ.ದೇಶಪಾಂಡೆ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಮತ್ತಿತರರು ಹಾಜರಿದ್ದು, ಚರ್ಚೆ ನಡೆಸಿದ್ದಾರೆ.

ಅಸಮಾಧಾನ ತಮಣಿ ಮಾಡಲು ಭರವಸೆಯ ಮಂತ್ರ
ಸದ್ಯಕ್ಕೆ ಸಂಪುಟದಲ್ಲಿ ಇನ್ನಷ್ಟು ಸಚಿವರ ಸೇರ್ಪಡೆಗೆ ಅವಕಾಶ ಇರುವುದನ್ನು ಅಸಮಾಧಾನಗೊಂಡಿರುವ ಶಾಸಕರ ಗಮನಕ್ಕೆ ತಂದು, ಬೆಂಕಿಯನ್ನು ತಮಣಿ ಮಾಡುವುದು ಹೇಗೆ ಎಂಬ ಬಗ್ಗೆ ಗಂಭೀರ ಚರ್ಚೆ ನಡೆದಿದೆ. ಇನ್ನು ಪ್ರಾದೇಶಿಕವಾರು ಹಾಗೂ ಜಾತಿವಾರು ತಮಗೆ ಅನ್ಯಾಯವಾಗಿದೆ ಎಂದು ಭಾವಿಸಿದ ಕಾಂಗ್ರೆಸ್ ನ ಹಿರಿಯ ಶಾಸಕರು ಗುಂಪುಗಳಾಗಿ, ಸಭೆ ನಡೆಸುತ್ತಿದ್ದಾರೆ.

ಎಂಟಿಬಿ ವರ್ಸಸ್ ಎಚ್ಚೆಂ ರೇವಣ್ಣ
ಕುರುಬ ಸಮುದಾಯಕ್ಕೆ ಸೇರಿದ ಹಾಗೂ ಸಿದ್ದರಾಮಯ್ಯ ಅವರಿಗೆ ಆಪ್ತರೂ ಆಗಿರುವ ಹೊಸಕೋಟೆ ಶಾಸಕ ಎನ್.ನಾಗರಾಜ್ (ಎಂಟಿಬಿ ನಾಗರಾಜ್) ತಮಗೆ ಸಚಿವ ಸ್ಥಾನ ತಪ್ಪಲು ಪಕ್ಷದೊಳಗಿರುವ ಕೆಲವರು ಮಾಡಿದ ಕುತಂತ್ರವೇ ಕಾರಣ ಎಂದು ಆರೋಪಿಸಿದ್ದು, ಆ ನಂತರ ತಮ್ಮದೇ ಸಮುದಾಯದ ಮತ್ತೊಬ್ಬ ಮುಖಂಡ- ಮಾಜಿ ಸಚಿವ ಎಚ್.ಎಂ.ರೇವಣ್ಣ ವಿರುದ್ಧ ಆರೋಪ ಮಾಡಿದ್ದಾರೆ.

ಕಾಂಗ್ರೆಸ್ ಸರ್ವನಾಶದ ಮಾತನಾಡಿದ ಸುಧಾಕರ್
ಇನ್ನು ಮೈತ್ರಿ ಸರಕಾರದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಚಿಕ್ಕಬಳ್ಳಾಪುರದ ಕಾಂಗ್ರೆಸ್ ಶಾಸಕ ಡಾ.ಸುಧಾಕರ್ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ತಮಗೆ ಸಚಿವ ಸ್ಥಾನ ಕೈ ತಪ್ಪಿರುವುದಕ್ಕೆ ಭಾರೀ ಆಕ್ರೋಶಗೊಂಡಿರುವ ಅವರು, ಒಕ್ಕಲಿಗರನ್ನು ಜೆಡಿಎಸ್ ಗುತ್ತಿಗೆ ಪಡೆದಿದೆಯಾ ಎಂದು ಪ್ರಶ್ನಿಸಿದ್ದಾರೆ. ಇನ್ನೂ ಮುಂದುವರಿದು, ಸಮ್ಮಿಶ್ರ ಸರಕಾರದಲ್ಲಿ ಕಾಂಗ್ರೆಸ್ ಸರ್ವನಾಶವಾಗಿ ಹೋಗುತ್ತದೆ ಎಂದು ಕೂಡ ಭವಿಷ್ಯ ನುಡಿದಿದ್ದಾರೆ.

ಬಿ.ಸಿ.ಪಾಟೀಲ್ ರಿಂದ 'ಕೌರವ' ಅವತಾರ
ಶಾಸಕ ಬಿ.ಸಿ.ಪಾಟೀಲ್ ಕೂಡ ತಮಗೆ ಬಿಜೆಪಿಯಿಂದ ಬಂದಿದ್ದ ಆಫರ್ ಅನ್ನು ಬದಿಗಿಟ್ಟು ಕಾಂಗ್ರೆಸ್ ನಲ್ಲೇ ಉಳಿದುಕೊಂಡಿದ್ದರು. ಅದನ್ನು ತಮ್ಮ ನಿಷ್ಠೆಯೆಂದೂ, ಅದಕ್ಕೆ ಬದಲಿಯಾಗಿ ಪಕ್ಷದೊಳಗೆ ಸ್ಥಾನಮಾನ ಸಿಗುವುದೆಂಬ ನಿರೀಕ್ಷೆಯೂ ಅವರಿಗಿತ್ತು. ಆದರೆ ಬಿ.ಸಿ.ಪಾಟೀಲರ ಲೆಕ್ಕಾಚಾರದಂತೆ ನಡೆದಿಲ್ಲ. ಆ ಕಾರಣಕ್ಕಾಗಿ ಅವರು ಕೂಡ ಬಹಿರಂಗವಾಗಿ ತಮ್ಮ ಅಸಮಾಧಾನ ಹೇಳಿಕೊಂಡಿದ್ದಾರೆ.












Click it and Unblock the Notifications