ಒಳ ಹೊಡೆತದ ಭಯ: ಬಿಜೆಪಿಗೆ ಯಡಿಯೂರಪ್ಪ - ವಿಜಯೇಂದ್ರನೇ ಆಸರೆ
ಎರಡು ಕ್ಷೇತ್ರಗಳ ಉಪ ಚುನಾವಣೆಯ ಪ್ರಚಾರ ಅಂತಿಮ ಹಂತಕ್ಕೆ ಬಂದು ತಲುಪಿದೆ. ಇನ್ನುಳಿದ ಎರಡು ದಿನಗಳಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮತದಾರರನ್ನು ಓಲೈಸುವ ಕೆಲಸಕ್ಕೆ ಮೂರು ಪಕ್ಷಗಳ ಪ್ರಯತ್ನ ಮುಂದುವರಿದಿದೆ. ಸಿಂಧಗಿಯಲ್ಲಿ ಜೆಡಿಎಸ್ ಹೆಚ್ಚಿನ ಪ್ರಚಾರವನ್ನು ನಡೆಸುತ್ತಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಜಾತೀವಾರು ಸಭೆಗಳನ್ನು ನಡೆಸುತ್ತಿದೆ. ಈ ಸಭೆಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಬಿಜೆಪಿಯ ನಿದ್ದೆಗೆಡಿಸಿದೆ. ಅಭಿವೃದ್ದಿ/ ಬೆಲೆ ಏರಿಕೆ ವಿಚಾರಕ್ಕಿಂತ ಹೆಚ್ಚಾಗಿ ವೈಯಕ್ತಿಕ ಟೀಕೆಗಳೇ ಮೇಲುಗೈ ಸಾಧಿಸುತ್ತಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭರ್ಜರಿ ಪ್ರಚಾರ ನಡೆಸಿ ಹೋದ ನಂತರ, ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಾಗಿರುವುದು ಕಂಡು ಬರುತ್ತಿದೆ. ಇದು ಬಿಜಿಪಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಇಲ್ಲದಿಲ್ಲ.
ಚುನಾವಣೆ ನಡೆಯುತ್ತಿರುವ ಎರಡೂ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯ ಮಹತ್ವದ ಪಾತ್ರ ವಹಿಸುತ್ತಿರುವುದರಿಂದ, ಯಡಿಯೂರಪ್ಪ ಮತ್ತು ಅವರ ಪುತ್ರ/ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಬಿ.ವೈ.ವಿಜಯೇಂದ್ರ ಅವರನ್ನು ಪಕ್ಷ ಹೆಚ್ಚಾಗಿ ಅವಲಂಬಿಸಿದೆ. ಇದಕ್ಕೆ ಬೇರೊಂದು ಕಾರಣವೂ ಇದೆ.

ಹಾನಗಲ್ ನಲ್ಲಿ ಒಳ ಹೊಡೆತದ ಭಯ ಮುಖ್ಯಮಂತ್ರಿ ಬೊಮ್ಮಾಯಿಯವರಿಗೆ
ಪ್ರಮುಖವಾಗಿ, ಹಾನಗಲ್ ನಲ್ಲಿ ಒಳ ಹೊಡೆತದ ಭಯ ಬಿಜೆಪಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಕಾಡುತ್ತಿದೆ. ತವರು ಜಿಲ್ಲೆಯ ವ್ಯಾಪ್ತಿಯಲ್ಲಿ ಈ ಕ್ಷೇತ್ರ ಬರುವುದರಿಂದ, ಈ ಚುನಾವಣೆ ಗೆಲ್ಲುವುದು ಬೊಮ್ಮಾಯಿಯವರಿಗೆ ಮುಖ್ಯವಾಗಿದೆ. ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ಬಯಸಿದ್ದವರಿಗೆ ಬಿಜೆಪಿ ಟಿಕೆಟ್ ನೀಡದೇ ಇರುವುದರಿಂದ, ವಿರೋಧಿ ಬಣದ ಜೊತೆಗೆ ಸ್ಥಳೀಯ ನಾಯಕರು ಒಪ್ಪ ಒಪ್ಪಂದ ಮಾಡಿಕೊಳ್ಳುವ ಭೀತಿ ಬಿಜೆಪಿಗೆ ಕಾಡುತ್ತಿದೆ.

ಸಿ.ಎಂ.ಉದಾಸಿ ಕುಟುಂಬದ ಸದಸ್ಯರಿಗೆ ಟಿಕೆಟ್ ಸಿಗಬಹುದು ಎನ್ನುವ ನಿರೀಕ್ಷೆಯಿತ್ತು
ಸಿ.ಎಂ.ಉದಾಸಿ ಕುಟುಂಬದ ಸದಸ್ಯರಿಗೆ ಟಿಕೆಟ್ ಸಿಗಬಹುದು ಎನ್ನುವುದು ಕಾರ್ಯಕರ್ತರ ಮತ್ತು ಖುದ್ದು ಉದಾಸಿ ಕುಟುಂಬದ ನಿರೀಕ್ಷೆಯಾಗಿತ್ತು. ಆದರೆ, ಬಿಜೆಪಿ ಬೇರೆಯವರಿಗೆ ಟಿಕೆಟ್ ನೀಡಿರುವುದು ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಅಂಶವನ್ನು ಆಂತರಿಕ ಸಮೀಕ್ಷೆಯಲ್ಲೂ ಉಲ್ಲೇಖಿಸಲಾಗಿದೆ. ಜೊತೆಗೆ, ಯಡಿಯೂರಪ್ಪನವರು ಪ್ರಚಾರ ನಡೆಸುವುದು ಅತಿಮುಖ್ಯ ಎಂದೂ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ಇದರಿಂದಾಗಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಉಳಿದಿರುವ ದಿನಗಳಲ್ಲಿ ಅತಿಹೆಚ್ಚು ಬಳಸಿಕೊಳ್ಳುವುದೇ ಬಿಜೆಪಿಗೆ ಬೇರೆ ಮಾರ್ಗ ಇಲ್ಲ ಎಂದು ಹೇಳಲಾಗುತ್ತಿದೆ.

ಬಿಜೆಪಿಯನ್ನು ದಡ ಸೇರಿಸುವ ಸಾಮರ್ಥ್ಯ ಇರುವುದು ಯಡಿಯೂರಪ್ಪನವರಿಗೆ ಮಾತ್ರ
"ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಕಳೆದ ಚುನಾವಣೆಯಲ್ಲಿ 6,500 ಮತಗಳ ಅಂತರದಿಂದ ಸೋತಿದ್ದರು, ಈ ಬಾರಿ ಅದು ಅನುಕಂಪಕ್ಕೆ ತಿರುಗಿ, ಕಾಂಗ್ರೆಸ್ಸಿಗೆ ಅನುಕೂಲವಾಗಬಹುದು. ಈ ಸಂದರ್ಭದಲ್ಲಿ ಬಿಜೆಪಿಯನ್ನು ದಡ ಸೇರಿಸುವ ಸಾಮರ್ಥ್ಯ ಇರುವುದು ಯಡಿಯೂರಪ್ಪನವರಿಗೆ ಮಾತ್ರ. ಶಿವಮೊಗ್ಗ ಜಿಲ್ಲೆಗೆ ಹಾನಗಲ್ ಹೊಂದಿ ಕೊಂಡಿರುವುದರಿಂದ ಇಲ್ಲಿ ಬಿಎಸ್ವೈ ಮತ್ತು ವಿಜಯೇಂದ್ರ ಪ್ರಭಾವ ಹೆಚ್ಚಿದೆ" ಎಂದು ಸ್ಥಳೀಯ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

ವಿಜಯೇಂದ್ರ ಕೂಡಾ ಪ್ರಚಾರ ನಡೆಸುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ
ಈಗಾಗಲೇ ಯಡಿಯೂರಪ್ಪ ಸಾರ್ವಜನಿಕ ಸಭೆ ಮತ್ತು ರೋಡ್ ಶೋ ನಡೆಸಿದ್ದಾರೆ. ಅವರು ಹೋದಲೆಲ್ಲಾ ಜನಪ್ರವಾಹವೇ ಹರಿದು ಬರುತ್ತಿದೆ, ಇದು ಅವರ ಜನಪ್ರಿಯತೆಯನ್ನು ತೋರಿಸುತ್ತಿದೆ. ಹಾಗಾಗಿ, ಬಹಿರಂಗ ಪ್ರಚಾರ ಮುಗಿಯುವ ದಿನ ಬೃಹತ್ ರೋಡ್ ಶೋ ನಡೆಸಲು ಬಿಜೆಪಿ ನಿರ್ಧರಿಸಿದೆ. ಇನ್ನು, ವಿಜಯೇಂದ್ರ ಕೂಡಾ ಪ್ರಚಾರ ನಡೆಸುತ್ತಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ, ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರೇ ಹಾನಗಲ್ ನಲ್ಲಿ ಬಿಜೆಪಿಗೆ ಆಸರೆ ಎನ್ನುವ ಪರಿಸ್ಥಿತಿಯಿದೆ.











Click it and Unblock the Notifications