ಅಧಿವೇಶನದಲ್ಲಿ ಡಿಕೆಶಿ ಇಲ್ಲ, ಆದರೆ ಅವರು ನುಡಿದಿದ್ದ ಯಾವ ಭವಿಷ್ಯವೂ ಸುಳ್ಳಾಗಿಲ್ಲ!
Recommended Video
ಇಂದಿನಿಂದ ಮೂರು ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದು, ಈ ಬಾರಿ ಶಾಸಕ ಡಿಕೆ ಶಿವಕುಮಾರ್ ಅವರ ಗೈರು ಹಾಜರಿ ಎದ್ದುಕಾಣಿಸುವುದು ಖಂಡಿತ.
ಯಾವುದೇ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಿಪಕ್ಷದಲ್ಲಿದ್ದಾಗ ಆಡಳಿತ ಪಕ್ಷಕ್ಕೆ, ಆಡಳಿತ ಪಕ್ಷದಲ್ಲಿದ್ದಾಗ ವಿಪಕ್ಷಕ್ಕೆ ದುಃಸ್ವಪ್ನ ಎನ್ನಿಸಿದ್ದ ಡಿಕೆ ಶಿವಕುಮಾರ್, ಇದೀಗ ಅಕ್ರಮ ಹಣ ವರ್ಗಾವಣೆ ಆರೋಪದಡಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ.
ಸಾತನೂರು ಟು ಮುಂಬೈ: ಡಿಕೆಶಿ ರಾಜಕಾರಣ & 'ಆನೆ ನಡಿಗೆ'
ಡಿಕೆಶಿ ಅವರ ಗೈರು ಹಾಜರಿ ಆಡಳಿತ ಪಕ್ಷಕ್ಕೆ ಕೊಂಚ ರಿಲೀಫ್ ಅನ್ನಿಸಿದ್ದಂತೂ ಸತ್ಯ. ಶಾಸಕ ಆನಂದ್ ಸಿಂಗ್ ಜೇಬಿಗೆ ವ್ಹಿಪ್ ಪತ್ರ ತುರುಕಿದ, ಮುಂಬೈಯಲ್ಲಿ ಅತೃಪ್ತರು ತಂಗಿದ್ದ ಹೊಟೇಲ್ ಮುಂದೆ ತೆರಳಿ ಪೊಲಿಸರಿಗೇ ಸೆಡ್ಡು ಹೊಡೆದಿದ್ದ ಬಂಡೆ ಡಿಕೆ ಶಿವಕುಮಾರ್ ಈಗ ಅಧಿವೇಶನದಲ್ಲಿಲ್ಲ. ಆದರೆ ಅವರು ಕಾಲಕಾಲಕ್ಕೆ ನುಡಿದ ಭವಿಷ್ಯ ಮಾತ್ರ ಸತ್ಯವಾಗುತ್ತಿದೆ.... ಅದಕ್ಕೆ ಕೆಲವು ಉದಾಹರಣೆಗಳು ಇಲ್ಲಿವೆ.
ಅತೃಪ್ತ ಶಾಸಕರು ಹುರಿದು ಮುಕ್ತಾರೆ!
ಕಾಂಗ್ರೆಸ್ ಮತ್ತು ಕೆಡಿಎಸ್ ನ ಅತೃಪ್ತ ಶಾಸಕರು ಬಿ ಎಸ್ ಯಡಿಯೂರಪ್ಪ ಅವರನ್ನು ಹುರಿದು ಮುಕ್ಕಿಬಿಡ್ತಾರೆ ಎಂದು ಆಗಸ್ಟ್ ನಲ್ಲಿ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಆಗುತ್ತಿರುವುದೂ ಅದೇ. ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಅನರ್ಹರಿಗೆ ಟಿಕೆಟ್ ನೀಡಲು ಬಿ ಎಸ್ ಯಡಿಯೂರಪ್ಪ ಉತ್ಸುಕರಾಗಿದ್ದರೆ ಪಕ್ಷದಲ್ಲೇ ಅದಕ್ಕೆ ಅಸಮಾಧಾನ ವ್ಯಕ್ತವಾಗಿದೆ. ಅಕಸ್ಮಾತ್ ಅವರಿಗೆ ಟಿಕೆಟ್ ನೀಡಿದರೆ ಯಡಿಯೂರಪ್ಪ ಪಕ್ಷದ ಇತರ ಮುಖಂಡರ ಮತ್ತು ಹೈಕಮಾಂಡ್ ನ ವಿರೋಧ ಕಟ್ಟಿಕೊಳ್ಳಬೇಕಾಗಬಹುದು. ಟಿಕೆಟ್ ನೀಡದೆ ಇದ್ದರೆ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಲು ಅವಕಾಶ ಮಾಡಿಕೊಟ್ಟ ಅನರ್ಹರಿಗೆ ಕೊಟ್ಟ ಮಾತು ತಪ್ಪಿದಂತಾಗುತ್ತದೆ. ಆಗ ಅನರ್ಹರೂ ಸುಮ್ಮನುಳಿಯುವುದಿಲ್ಲ. ಮತ್ತೆ ಸರ್ಕಾರಕ್ಕೆ ಸಂಚಕಾರ ತರಲು ಪ್ರಯತ್ನಿಸಬಹುದು. ಈ ವಿಷಯದಲ್ಲಿ ಡಿಕೆಶಿ ಭವಿಷ್ಯ ನಿಜವಾಗುತ್ತಿದೆ!
ತಬ್ಬಲಿಗಳಾಗ್ತಾರೆ ಅನರ್ಹ ಶಾಸಕರು!
"ಕಾಂಗ್ರೆಸ್ ಮತ್ತು ಜೆಡಿಎಸ್ ನ ಅನರ್ಹ ಶಾಸಕರು ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯನ್ನು ನಂಬಿಕೊಂಡು ಹೋಗಿದ್ದಾರೆ. ಆದರೆ ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬಂತಾಗಿ ತ್ರಿಶಂಕು ಸ್ಥಿತಿ ತಲುಪಲಿದ್ದಾರೆ. ದಯವಿಟ್ಟು ನನ್ನ ಸ್ನೇಹಿತರನ್ನು ತಬ್ಬಲಿಗಳನ್ನಾಗಿ ಮಾಡಬೇಡಿ" ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಗಿ ಹೇಳಿದ್ದರು. ಇದೀಗ ಅನರ್ಹರ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ಚುನಾವಣೆಗೆ ಸ್ಪರ್ಧಿಸಲು ಕೋರ್ಟು ಅವಕಾಶ ನೀಡುತ್ತದೋ ಇಲ್ಲವೋ ಗೊತ್ತಿಲ್ಲ. ಅಕಸ್ಮಾತ್ ಕೋರ್ಟಿನಿಂದ ಅವಕಾಶ ಸಿಕ್ಕರೂ ಬಿಜೆಪಿ ಅವರಿಗೆ ಟಿಕೆಟ್ ನೀಡುವುದು ಅನುಮಾನವೇ. ಈ ವಿಚಾರದಲ್ಲೂ ಡಿಕೆಶಿ ಭವಿಷ್ಯ ಸತ್ಯವಾಗಿದೆ!
Live Updates: ಅಧಿವೇಶನ ಆರಂಭ, ಸರ್ಕಾರಕ್ಕೆ ಆತಂಕ, ವಿಪಕ್ಷಕ್ಕೆ ಆಕ್ರೋಶ
ಶ್ರೀರಾಮುಲು ಡಿಸಿಎಂ ಆಗಲ್ಲ ಅಂದಿದ್ರು ಡಿಕೆಶಿ!
ಕಾಂಗ್ರೆಸ್ ಮತ್ತು ಜೆಡಿಎಸ್ ನ ಹಲವು ಶಾಸಕರು, ಕುಮಾರಸ್ವಾಮಿ ನೇತೃತ್ವದ ಸರಕಾರದಿಂದ ಹೊರ ನಡೆದ ನಂತರ, ವಿಶ್ವಾಸಮತದ ಯಾಚನೆಯ ವೇಳೆ, ಒಂಟಿಯಾಗಿ ನಿಂತಿದ್ದ ಶ್ರೀರಾಮುಲು ಅವರಿಗೆ ಡಿಕೆ ಶಿವಕುಮಾರ್ ತಮಾಷೆಯಿಂದ ಬಹಿರಂಗವಾಗಿಯೇ ಆಫರ್ ನೀಡಿದ್ದರು. ನಮ್ಮ ಜೊತೆ ಬನ್ನಿ ಎಂದಿದ್ದರು. ಆ ಸಂದರ್ಭದಲ್ಲಿ "ನಿಮ್ಮನ್ನೇನು ಬಿಜೆಪಿ ಖಂಡಿತ ಡಿಸಿಎಂ ಮಾಡಲ್ಲ. ಅಷ್ಟೆಲ್ಲ ಆಸೆ ಇಟ್ಟುಕೊಳ್ಳಬೇಡಿ" ಎಂದು ಡಿಕೆಶಿ ಹೇಳಿದ್ದರು. ಕೊನೆಗೂ ಆ ಮಾತು ಸತ್ಯವಾಯ್ತು. ಬಿಜೆಪಿ ಲಕ್ಷ್ಮಣ ಸವದಿ ಮತ್ತು ಅಶ್ವತ್ಥನಾರಾಯಣ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಿಸಿತ್ತು.
ಡಿಕೆಶಿ ಗತ್ತಿಲ್ಲದ ಅಧಿವೇಶನ
ಒಂದೊಂದು ಅಧಿವೇಶನದಲ್ಲೂ ಡಿಕೆ ಶಿವಕುಮಾರ್ ಮುಖ್ಯ ವ್ಯಕ್ತಿಯಾಗಿ ಗುರುತಿಸಿಕೊಂಡವರು. ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಂದು, ಯಾವ ಪಕ್ಷವೂ ಬಹುಮತ ಪಡೆಯದೆ ಅತಂತ್ರ ಸ್ಥಿತಿ ತಲೆದೋರಿದ್ದ ಕಾಲ. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ಬಿ ಎಸ್ ಯಡಿಯೂರಪ್ಪ ವಿಶ್ವಾಸ ಮತ ಯಾಚಿಸದೆ ಭಾಷಣ ಮಾಡಿ ಸೋಲುಪ್ಪಿಕೊಂಡಿದ್ದರು. ಆಗಲೂ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು ಡಿಕೆಶಿ. ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ಕೆಲವು ಶಾಸಕರು ಬಂಡಾಯದ ಬಾವುಟ ಬೀಸಿದಾಗ ಎಲ್ಲೆಲ್ಲೋ ಅಡಗಿದ್ದ ಶಾಸಕರನ್ನು ಹುಡುಕಿ ತಂದು ವ್ಹಿಪ್ ಪತ್ರವನ್ನು ಅವರ ಜೇಬಿನಲ್ಲಿ ತುರುಕಿದವರು ಡಿಕೆಶಿ, ಮತ್ತೆ 17 ಶಾಸಕರು ಮುಂಬೈಯ ಹೊಟೇಲ್ ವೊಂದರಲ್ಲಿ ತಂಗಿದ್ದಾಗ ಪೊಲೀಸ್ ಹದ್ದುಬಸ್ತನ್ನೂ ಮೀರಿ ಅವರ ಭೇಟಿಗೆ ತೆರಳಿದ್ದವರು ಡಿಕೆಶಿ. ಯಾರಿಗೂ ಹೆದರದೆ, ಮಾತಿನಲ್ಲೇ ಛಾಟಿ ನೀಡುತ್ತ ಗುರುತಿಸಿಕೊಂಡಿರುವ ಡಿಕೆಶಿ ಇಲ್ಲದ ಈ ಬಾರಿಯ ಅಧಿವೇಶನ ಖಂಡಿತವಾಗಿಯೂ ಭಣ ಭಣವೇ ಸರಿ!