Karnataka Assembly Election 2023: ಉಡುಪಿ ಜಿಲ್ಲೆಯಲ್ಲಿನ ಟಿಕೆಟ್ ಆಕಾಂಕ್ಷಿಗಳು
ಕರ್ನಾಟಕದಲ್ಲಿ ಮೂರೂ ಪ್ರಮುಖ ಪಕ್ಷಗಳು ಚುನಾವಣಾ ಆಖಾಡಕ್ಕೆ ಇಳಿದಿವೆ. ನಿಗದಿತ ಸಮಯದಲ್ಲಿ ಚುನಾವಣೆ ನಡೆದರೆ, ಈ ಮೇ ತಿಂಗಳೊಳಗೆ ವಿಧಾನಸಭಾ ಚುನಾವಣೆಯ ಪ್ರಕ್ರಿಯೆ ಮುಕ್ತಾಯಗೊಳ್ಳಬೇಕಾಗಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜಂಟಿಯಾಗಿ ಪ್ರಚಾರ ನಡೆಸಲಿದ್ದಾರೆ. ಇನ್ನು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆಗೆ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿರುವುದು ಗೊತ್ತಿರುವ ವಿಚಾರ.
ಟಿಕೆಟ್ ಆಕಾಂಕ್ಷಿಗಳು ಎರಡು ಲಕ್ಷ ರೂಪಾಯಿ ಜೊತೆಗೆ, ಅರ್ಜಿಯನ್ನು ಹಾಕಬೇಕು ಎನ್ನುವ ಹೊಸ ನಿಯಮವನ್ನು ಕೆಪಿಸಿಸಿ ಅಧ್ಯಕ್ಷರು ಜಾರಿಗೆ ತಂದ ನಂತರ, ಪ್ರತೀ ಅಸೆಂಬ್ಲಿ ಕ್ಷೇತ್ರದಲ್ಲೂ ಅಭ್ಯರ್ಥಿಗಳ ಸಂಖ್ಯೆ ಕನಿಷ್ಠ ಎರಡರ ಮೇಲಿದೆ.
ಹಿಂದುತ್ವದ ಪ್ರಯೋಗ ಶಾಲೆಯೆಂದೇ ಕರೆಯಲ್ಪಡುವ ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟಿಗಿಂತ ಬಿಜೆಪಿ ಟಿಕೆಟ್ ಬಯಸುವವರು ಜಾಸ್ತಿ. ಕಳೆದ ಚುನಾವಣೆಯಲ್ಲಿ ಬಿಜೆಪಿ ಬಹುತೇಕ ಕ್ಲೀನ್ ಸ್ವೀಪ್ ಮಾಡಿದೆ ಎಂದೇ ಹೇಳಬಹುದಾಗಿದೆ. ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳಿವೆ. ಪ್ರಸಕ್ತ ಉಡುಪಿ ಜಿಲ್ಲೆಯ ಚಿತ್ರಣ ಯಾವರೀತಿ ಎನ್ನುವುದರ ಬಗ್ಗೆ ಒಂದು ಸಣ್ಣ ಝಲಕ್ ಅನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:
ಉಡುಪಿ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್
ಶೈಕ್ಷಣಿಕ, ಧಾರ್ಮಿಕ ಕೇಂದ್ರವಾಗಿರುವ ಉಡುಪಿ ನಗರ ಅಸೆಂಬ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಪ್ರಭಾವೀ ಮುಖಂಡರಾಗಿದ್ದ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಗೊಂಡ ನಂತರ, ಕಾಂಗ್ರೆಸ್ಸಿನಲ್ಲಿ ಟಿಕೆಟ್ ಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಇನ್ನು, ಬಿಜೆಪಿಯಲ್ಲಿ ಹಾಲೀ ಶಾಸಕ ಎಂ.ರಘುಪತಿ ಭಟ್ ಅವರೇ ಮುಂದಿನ ಬಿಜೆಪಿ ಅಭ್ಯರ್ಥಿ ಎಂದು ಬಿಂಬಿತವಾಗಿದೆ. ಕಳೆದ ಅಂದರೆ 2018ರ ಚುನಾವಣೆಯಲ್ಲಿ ರಘುಪತಿ ಭಟ್ ಅವರು ಮಧ್ವರಾಜ್ ಅವರನ್ನು ಸುಮಾರು ಹನ್ನೆರಡು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದರು. ಈ ಬಾರಿ ಕಾಂಗ್ರೆಸ್ಸಿನಿಂದ ಹಾಲಿ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಸೇರಿದಂತೆ ಪ್ರಸಾದರಾಜ್ ಕಾಂಚನ್, ಕೃಷ್ಣಮೂರ್ತಿ ಆಚಾರ್ಯ, ಅಮೃತ್ ಶೆಣೈ, ಶಂಕರ್ ಕುಂದರ್ ಕೋಟ, ಪ್ರಖ್ಯಾತ್ ಶೆಟ್ಟಿ ಟಿಕೆಟಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಇವರ ಪೈಕಿ ಯಾರಿಗೆ ಖಚಿತವಾಗಿ ಟಿಕೆಟ್ ಸಿಗಬಹುದು ಎನ್ನುವ ವಿಚಾರದಲ್ಲಿ ಸ್ಪಷ್ಟತೆಯಿಲ್ಲ.
ಕಾಪು ಅಸೆಂಬ್ಲಿ ಕ್ಷೇತ್ರದಲ್ಲಿ ಇಬ್ಬರಿಂದ ಟಿಕೆಟಿಗೆ ಪೈಪೋಟಿ
ಇನ್ನು ಪಕ್ಕದ ಕಾಪು ಅಸೆಂಬ್ಲಿ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದು ಕಾಂಗ್ರೆಸ್ ವಿರುದ್ದ ಸೇಡು ತೀರಿಸಿಕೊಂಡಿತ್ತು. ಕಳೆದ ಚುನಾವಣೆಯಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್ ಅವರು ಕಾಂಗ್ರೆಸ್ಸಿನ ವಿನಯ್ ಕುಮಾರ್ ಸೊರಕೆ ವಿರುದ್ದ ಸುಮಾರು ಹನ್ನೆರಡು ಸಾವಿರ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು. ಇಲ್ಲಿ ಮತ್ತೆ ಸೊರಕೆ ಅವರು ಕಾಂಗ್ರೆಸ್ಸಿನಿಂದ ಟಿಕೆಟ್ ಬಯಸಿದ್ದಾರೆ. ಇನ್ನು ಬಿಜೆಪಿಯಲ್ಲಿ ಲಾಲಾಜಿ ಮೆಂಡನ್ ಜೊತೆ ಯಶಪಾಲ್ ಸುವರ್ಣ ಕೂಡಾ ಬಿಜೆಪಿ ಟಿಕೆಟ್ ಬಯಸಿದ್ದಾರೆ. ಈ ಕ್ಷೇತ್ರದಿಂದ ಟಿಕೆಟ್ ಬಯಸಿ ಕಾಂಗ್ರೆಸ್ಸಿನಿಂದ ರಾಜಶೇಖರ ಕೊಟ್ಯಾನ್ ಕೂಡಾ ಟಿಕೆಟ್ ಬಯಸಿದ್ದಾರೆ.
ಕಾರ್ಕಳದಲ್ಲಿ ಕಾಂಗ್ರೆಸ್ ಟಿಕೆಟಿಗೆ ಭಾರೀ ಡಿಮಾಂಡ್
ಕಳೆದ ಚುನಾವಣೆಯಲ್ಲಿ ಜಿಲ್ಲೆಯ ಕಾರ್ಕಳ ಅಸೆಂಬ್ಲಿ ಕ್ಷೇತ್ರದಲ್ಲಿ ಹಾಲೀ ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಭಾರೀ ಅಂತರದ ಗೆಲುವನ್ನು ಸಾಧಿಸಿದ್ದರು. ಈ ಬಾರಿಯೂ ಸುನೀಲ್ ಅಲ್ಲಿಂದ ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸುವ ಸಾಧ್ಯತೆ ಹೆಚ್ಚು. ಅಲ್ಲಿಂದ, ಪಕ್ಷೇತರರಾಗಿ ಹಿಂದೂ ಸಂಘಟನೆಯ ಮುಖಂಡ ಪ್ರಮೋದ್ ಮುತಾಲಿಕ್ ನಿಲ್ಲುವ ಸಾಧ್ಯತೆಯಿದೆ. ಇನ್ನು ಕಾಂಗ್ರೆಸ್ಸಿನಿಂದ ಮಾಜಿ ಸಿಎಂ ವೀರಪ್ಪ ಮೊಯ್ಲಿಯವರ ಪುತ್ರ ಹರ್ಷ ಮೊಯ್ಲಿ, ಜೊತೆಗೆ, ಮಂಜುನಾಥ ಪೂಜಾರಿ, ನೀರೆ ಕೃಷ್ಣ ಶೆಟ್ಟಿ, ವಾಣಿಜ್ಯೋದ್ಯಮಿ ಸುರೇಂದ್ರ ಶೆಟ್ಟಿ ಮತ್ತು ಡಿ.ಆರ್.ರಾಜು ಅರ್ಜಿಯನ್ನು ಸಲ್ಲಿಸಿದ್ದಾರೆ.
ಹಾಲಾಡಿಯವರು ಸ್ಪರ್ಧಿಸುವುದು ಬಹುತೇಕ ಪಕ್ಕಾ
ಇನ್ನು ಕುಂದಾಪುರದಲ್ಲಿ ಕರಾವಳಿಯ ವಾಜಪೇಯಿ ಎಂದೇ ಕರೆಯಲ್ಪಡುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಳೆದ ಚುನಾವಣೆಯಲ್ಲಿ ಸುಮಾರು 56ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಕಾಂಗ್ರೆಸ್ಸಿನ ರಾಕೇಶ್ ಮಲ್ಲಿಯವರನ್ನು ಸೋಲಿಸಿದ್ದರು. ಈ ಬಾರಿ, ಹಾಲಾಡಿಯವರು ಸ್ಪರ್ಧಿಸುವುದು ಬಹುತೇಕ ಪಕ್ಕಾ. ಇನ್ನು ಕಾಂಗ್ರೆಸ್ಸಿನಿಂದ, ಅಶೋಕ್ ಪೂಜಾರಿ ಬೀಜಾಡಿ, ದಿನೇಶ್ ಹೆಗಡೆ ಮೊಲಹಳ್ಳಿ, ಕಿಷನ್ ಹೆಗಡೆ ಕೊಲ್ಕೆಬೈಲು, ಶ್ಯಾಮಲಾ ಸುಂದರ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿ ಗೆದ್ದಿತ್ತು
ಇನ್ನು ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಬಾರಿ ಬಿಜೆಪಿಯ ಸುಕುಮಾರ್ ಶೆಟ್ಟಿ 24ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಸಾಧಿಸಿದ್ದರು. ಆ ಮೂಲಕ, ಜಿಲ್ಲೆಯ ಎಲ್ಲಾ ಐದು ಕ್ಷೇತ್ರಗಳನ್ನು ಬಿಜೆಪಿ ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ ಈ ಬಾರಿ ಸುಕುಮಾರ್ ಶೆಟ್ಟಿಯವರ ಬದಲು ಹೊಸ ಮುಖದ ಹುಡುಕಾಟದಲ್ಲಿ ಬಿಜೆಪಿಯಿದೆ ಎಂದು ಹೇಳಲಾಗುತ್ತಿದೆ. ಗೋವಿಂದಬಾಬು ಪೂಜಾರಿ, ಬಾಬು ಹೆಗ್ಡೆ, ದೀಪಕ್ ಕುಮಾರ್ ಶೆಟ್ಟಿ, ಶರತ್ ಶೆಟ್ಟಿ ಉಪ್ಪುಂದ ಹೆಸರುಗಳು ಬಿಜೆಪಿಯಿಂದ ಕೇಳಿ ಬರುತ್ತಿದೆ. ಇನ್ನು ಕಾಂಗ್ರೆಸ್ಸಿನಿಂದ ಗೋಪಾಲ್ ಪೂಜಾರಿಯೊಬ್ಬರೇ ಅರ್ಜಿಯನ್ನು ಸಲ್ಲಿಸಿದ್ದು ಎನ್ನುವುದು ಗಮನಿಸಬೇಕಾದ ವಿಚಾರ.