Get Updates
Get notified of breaking news, exclusive insights, and must-see stories!

Srinivaspur constituency : ಸ್ವಾಮಿ v/s ರೆಡ್ಡಿ ಪೈಪೋಟಿಯಲ್ಲಿ ಹ್ಯಾಟ್ರಿಕ್ ಹೊಡೆಯುವರೆ ರಮೇಶ್ ಕುಮಾರ್?

1983 ರಿಂದ 2018ರ ವರೆಗೆ ಒಮ್ಮೆ ರಮೇಶ್‌ ಕುಮಾರ್‌, ಮತ್ತೊಮ್ಮೆ ಜೆಡಿಎಸ್‌ನ ವೆಂಕಟಶಿವಾರೆಡ್ಡಿ ಜಯಗಳಿಸುತ್ತಾ ಬಂದಿದ್ದಾರೆ. ಸತತ 9 ಚುನಾವಣೆಗಳಲ್ಲಿ ಇಬ್ಬರು ಮುಖಾಮುಖಿಯಾಗಿದ್ದಾರೆ.

ಕೋಲಾರ, ಫೆಬ್ರವರಿ. 23: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಗಳ ಜಿದ್ದಾಜಿದ್ದಿ ಬದಲು ಇಲ್ಲಿರುವುದು ವ್ಯಕ್ತಿಗಳ ಪೈಪೋಟಿ. ಇಬ್ಬರು ವ್ಯಕ್ತಿಗಳ ಸುಧೀರ್ಘ ಮುಖಾಮುಖಿಗೆ ಈ ಕ್ಷೇತ್ರ ಸಾಕ್ಷಿಯಾಗಿದೆ. ಹೌದು, ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸ್ವಾಮಿ ವರ್ಸಸ್ ರೆಡ್ಡಿ ಪೈಪೋಟಿ ಕಳೆದ ನಲವತ್ತು ವರ್ಷಗಳಿಂದ ನಡೆಯುತ್ತಿದೆ.

ಕಾಂಗ್ರೆಸ್ ನಾಯಕ ಕೆ.ಆರ್. ರಮೇಶ್ ಕುಮಾರ್ ಮತ್ತು ಜಾತ್ಯಾತೀತ ಜನತಾದಳದ ನಾಯಕ ಜಿ.ಕೆ. ವೆಂಕಟಶಿವಾ ರೆಡ್ಡಿ ನಡುವಿನ ಮುಖಾಮುಖಿ 1983ರಿಂದ ಆರಂಭವಾಗಿದೆ. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ 1962ರ ಮೊದಲ ಚುನಾವಣೆಯಿಂದ ಇದುವರೆಗೂ 13 ಚುನಾವಣೆಗಳು ನಡೆದಿವೆ. ಆದರೂ, ಕೇವಲ ಐವರು ಶಾಸಕರನ್ನು ಮಾತ್ರ ಈ ಕ್ಷೇತ್ರ ಕಂಡಿದೆ. ಅದರಲ್ಲಿಯೂ 8 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಹೀಗಾಗಿ ಇದನ್ನು ಕಾಂಗ್ರೆಸ್‌ನ ಭದ್ರಕೋಟೆ ಎನ್ನಬಹುದು.

2 ಬಾರಿ ಗೆದ್ದು ಇತಿಹಾಸ ಸೃಷ್ಟಿಸಿದ ರಮೇಶ್ ಕುಮಾರ್‌!

2 ಬಾರಿ ಗೆದ್ದು ಇತಿಹಾಸ ಸೃಷ್ಟಿಸಿದ ರಮೇಶ್ ಕುಮಾರ್‌!

ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಪಕ್ಷ ಸತತವಾಗಿ ಗೆದ್ದ ಉದಾಹರಣೆ 2018 ರವರೆಗೂ ಇರಲಿಲ್ಲ. 1978 ರಲ್ಲಿ ರಮೇಶ್ ಕುಮಾರ್ (ಸ್ವಾಮಿ) ಮೊದಲ ಬಾರಿಗೆ ಇಂದಿರಾ ಕಾಂಗ್ರೆಸ್ ಪಕ್ಷದಿಂದ ಚುನಾವಣೆ ಎದುರಿಸಿದ ಅವರು ಕಾಂಗ್ರೆಸ್‌ನ ಆರ್.ಜಿ ನಾರಾಯಣರೆಡ್ಡಿಯವರನ್ನು 19,800 ಮತಗಳ ಅಂತರದಿಂದ ಸೋಲಿಸಿದ್ದರು. ಆಗ ಅವರಿಗೆ ಕೇವಲ 29 ವರ್ಷ ವಯಸ್ಸು.

ಆದಾದ ನಂತರ 1983 ರಿಂದ 2018ರ ವರೆಗೆ ಒಮ್ಮೆ ರಮೇಶ್‌ ಕುಮಾರ್‌, ಮತ್ತೊಮ್ಮೆ ಜೆಡಿಎಸ್‌ನ ವೆಂಕಟಶಿವಾರೆಡ್ಡಿ ಜಯಗಳಿಸುತ್ತಾ ಬಂದಿದ್ದಾರೆ. ಸತತ 9 ಚುನಾವಣೆಗಳಲ್ಲಿ ಇಬ್ಬರು ಮುಖಾಮುಖಿಯಾಗಿದ್ದಾರೆ. ಕ್ಷೇತ್ರದಲ್ಲಿ ಈವರೆಗೂ ಒಬ್ಬ ವ್ಯಕ್ತಿ ಎರಡು ಬಾರಿಗೆ ಗೆದ್ದ ಉದಾಹರಣೆಯಿರಲಿಲ್ಲ. ಆದರೆ, 2013 ಮತ್ತು 2018ರಲ್ಲಿಯೂ ಗೆಲ್ಲುವ ಮೂಲಕ ರಮೇಶ್‌ ಕುಮಾರ್‌ ಸತತ 2ನೇ ಬಾರಿ ಗೆದ್ದು ಇತಿಹಾಸ ಸೃಷ್ಟಿಸಿದರು.

ಗುಡಿಸಲು ಮುಕ್ತಕ್ಕಾಗಿ 13 ಸಾವಿರ ಮನೆ ನಿರ್ಮಾಣ ಮಾಡಿಸಿದ್ದ ರಮೇಶ್ ಕುಮಾರ್!

ಗುಡಿಸಲು ಮುಕ್ತಕ್ಕಾಗಿ 13 ಸಾವಿರ ಮನೆ ನಿರ್ಮಾಣ ಮಾಡಿಸಿದ್ದ ರಮೇಶ್ ಕುಮಾರ್!

ಶ್ರೀನಿವಾಸಪುರದಲ್ಲಿ ಆರು ಬಾರಿ ಶಾಸಕರಾಗಿರುವ ಬ್ರಾಹ್ಮಣ ಸಮುದಾಯದ ರಮೇಶ್ ಕುಮಾರ್ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದರು. ಅದರಲ್ಲಿ ಗುಡಿಸಲು ಮುಕ್ತ ಕ್ಷೇತ್ರವಾಗಿಸಲು 13 ಸಾವಿರ ಮನೆ ನಿರ್ಮಾಣ ಹಾಗೂ ಸ್ತ್ರೀಶಕ್ತಿ ಸಂಘಗಳಿಗೆ ನೀಡಿದ್ದ ಸಾಲ ಅವರ ಗೆಲುವಿಗೆ ಕಾರಣವಾಗಿತ್ತು. ಈಗ ಕೆ.ಸಿ ವ್ಯಾಲಿ ನೀರಾವರಿ ಯೋಜನೆ ಜಾರಿಗೊಳಿಸಿ ಜಿಲ್ಲೆಯ ಜನರ ಬೆಂಬಲ ಗಳಿಸಿದ್ದಾರೆ. ಹೀಗಾಗಿಯೇ ಹ್ಯಾಟ್ರಿಕ್ ಗೆಲುವಿನ ತವಕದಲ್ಲಿದ್ದಾರೆ ರಮೇಶ್ ಕುಮಾರ್.

ಕ್ಷೇತ್ರದಲ್ಲಿ ತಮ್ಮ ಸಮುದಾಯದ ಮತಗಳು ಕಡಿಮೆಯಿದ್ದರೂ, ರಮೇಶ್ ಕುಮಾರ್‌ ತಮ್ಮ ಸ್ವಂತ ವರ್ಚಸ್ಸಿನಿಂದ ಆರು ಬಾರಿ ಶಾಸಕರಾಗಿ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಪಕ್ಷ ಅಥವಾ ಜಾತಿ ರಾಜಕೀಯಕ್ಕಿಂತ ವ್ಯಕ್ತಿ ಕೇಂದ್ರಿತ ರಾಜಕೀಯ ಕೆಲಸ ಮಾಡುತ್ತಿದೆ. ಇದಕ್ಕೆ ಸ್ವಾಮಿ ವರ್ಸಸ್ ರೆಡ್ಡಿ ನಡುವಿನ ಜಿದ್ದಾಜಿದ್ದಿಯೇ ಸಾಕ್ಷಿ. ಹಾಗಾಗಿ ರಮೇಶ್ ಕುಮಾರ್ ಹೊರತುಪಡಿಸಿ ಬೇರೆ ಯಾರಿಗೂ ಈ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಸಿಗುವ ಸಾಧ್ಯತೆಯಿಲ್ಲ. ಹೀಗಾಗಿಯೇ ರಮೇಶ್‌ ಕುಮಾರ್‌ 2023ರ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಗೆಲುವು ದಾಖಲಿಸಲು ಹಲವು ರಣತಂತ್ರಗಳನ್ನು ಹೆಣೆದಿದ್ದಾರೆ.

ಸಂಪ್ರದಾಯ ನಂಬಿ ಮೈಮರೆಯುತ್ತಿದ್ದಾರೆಯೇ ವೆಂಕಟಶಿವಾರೆಡ್ಡಿ?

ಸಂಪ್ರದಾಯ ನಂಬಿ ಮೈಮರೆಯುತ್ತಿದ್ದಾರೆಯೇ ವೆಂಕಟಶಿವಾರೆಡ್ಡಿ?

ಕಳೆದ ಚುನಾವಣೆಯಲ್ಲಿ ರಮೇಶ್ ಕುಮಾರ್ ವಿರುದ್ಧ ಸೋತ ಜೆಡಿಎಸ್‌ ಅಭ್ಯರ್ಥಿ 75 ವರ್ಷದ ಜಿ.ಕೆ. ವೆಂಕಟಶಿವಾರೆಡ್ಡಿ ಜೀವಮಾನದ 5ನೇ ಗೆಲುವು ಕಾಣುವ ಹಂಬಲದಲ್ಲಿದ್ದಾರೆ. ಅವರ ಗೆಲುವಿಗಾಗಿ ಪಕ್ಷದ ಕಾರ್ಯಕರ್ತರು ಸಂಘಟನೆಯಲ್ಲಿ ತೊಡಗಿದ್ದಾರೆ. ಆದರೆ, ಅವರು ಮಾತ್ರ ಸಂಪ್ರದಾಯದಂತೆ ಈ ಬಾರಿ ತಾನು ಗೆಲುತ್ತೇನೆ ಎಂಬ ಆತ್ಮವಿಶ್ವಾಸದಲ್ಲಿ ಚುನಾವಣೆ ಬಿಟ್ಟು ಆರಾಮಾಗಿ ಇದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನು ಇದು ತಮ್ಮ ಕೊನೆಯ ಚುನಾವನೆ ಎಂದು ವೆಂಕಟಶಿವಾರೆಡ್ಡಿ ಈಗಾಗಲೇ ಘೋಷಿಸಿದ್ದಾರೆ.

ಇತ್ತ, ಜೆಡಿಎಸ್‌ನ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಜಶೇಖರ್‌ ರೆಡ್ಡಿ ತಂಡ ವೆಂಕಟಶಿವಾರೆಡ್ಡಿ ವಿರುದ್ಧ ತಿರುಗಿಬಿದ್ದು, ಗುಂಜೂರು ಶ್ರೀನಿವಾಸರೆಡ್ಡಿ ಜತೆ ಕೆಲಸ ಮಾಡುತ್ತಿದೆ ಎಂಬ ಮಾತುಗಳು ಕಳಿ ಬಂದಿವೆ. ಆದರೆ, ಜೆಡಿಎಸ್ ಪಕ್ಷದ ಟಿಕೆಟ್ ವೆಂಕಟಶಿವಾರೆಡ್ಡಿ ಅವರಿಗೆ ಪಕ್ಕಾ ಆಗಿದೆ. ಏಕೆಂದರೆ, ಕಳೆದ 45 ವರ್ಷಗಳಲ್ಲಿ ಸ್ವಾಮಿ ಮತ್ತು ರೆಡ್ಡಿ ಬಿಟ್ಟರೆ ಬೇರೆ ಯಾರೂ ಈ ಕ್ಷೇತ್ರದಲ್ಲಿ ಪೈಪೋಟಿ ಕೊಡುವುದಿರಲಿ ಕನಿಷ್ಟ 10 ಸಾವಿರದಷ್ಟು ಮತಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಈ ಬಾರಿ ಕೋಲಾರದ ಅಂಜುಮಾನ್ ಇಸ್ಲಾಮಿಯ ಅಧ್ಯಕ್ಷರಾಗಿದ್ದ ಜಮೀರ್ ಜೆಡಿಎಸ್ ಬೆಂಬಲಿಸುತ್ತಿದ್ದು, ಜಿಲ್ಲೆಯ ಒಂದಷ್ಟು ಮುಸ್ಲಿಮರು ಜೆಡಿಎಸ್ ಪಕ್ಷಕ್ಕೆ ಮತ ಚಲಾಯಿಸುವ ಸಾಧ್ಯತೆಯಿದೆ.

ರಮೇಶ್ ಕುಮಾರ್ ಸೋಲಿಗೆ ಡಾ.ಕೆ ಸುಧಾಕರ್ ಪಣ!

ರಮೇಶ್ ಕುಮಾರ್ ಸೋಲಿಗೆ ಡಾ.ಕೆ ಸುಧಾಕರ್ ಪಣ!

ಕ್ಷೇತ್ರದಲ್ಲಿ ರಮೇಶ್ ಕುಮಾರ್, ವೆಂಕಟಶಿವಾರೆಡ್ಡಿ ಬಿಟ್ಟು ಬೇರೆ ಯಾರು ನಿಂತರೂ ಗೆಲುವು ಸಿಗುವುದಿಲ್ಲ. ನಿಂತರೂ ಠೇವಣಿ ಉಳಿಸಿಕೊಳ್ಳುವುದು ಕಷ್ಟ ಎಂಬುದನ್ನು ಬಿಜೆಪಿ ತಿಳಿದುಕೊಂಡಿದೆ. ಡಾ.ವೇಣುಗೋಪಾಲ್‌ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದರೂ ಪಕ್ಷವನ್ನು ಬಲಪಡಿಸಿಲ್ಲ. ಬಿಜೆಪಿಯಿಂದ ಡಾ.ವೇಣುಗೋಪಾಲ್ ಕೆ.ಎನ್ ಕಣಕ್ಕಿಳಿದರೂ ಪ್ರಯೋಜನವಿಲ್ಲ. ಹೀಗಾಗಿಯೇ ವೆಂಕಟಶಿವಾರೆಡ್ಡಿಯವರನ್ನು ಸೆಳೆಯಲು ಬಿಜೆಪಿ ಹಲವು ತಂತ್ರಗಳನ್ನು ನಡೆಸುತ್ತಿದೆ. ಆದರೆ, ಅದು ನಡೆಯುವ ಹಾಗೆ ಕಾಣಿಸುತ್ತಿಲ್ಲ. ಇದೇ ಕಾರಣಕ್ಕೆ ವೆಂಕಟಶಿವಾರೆಡ್ಡಿ ಅವರನ್ನು ಬೆಂಬಲಿಸಲು ಬಿಜೆಪಿ ಯೋಜನೆ ರೂಪಿಸಿದೆ ಎನ್ನಲಾಗಿದೆ.

2013ರ ಚುನಾವಣೆಯಲ್ಲಿ ಬಿಜೆಪಿಯ ಕೆ.ವೆಂಕಟೇಗೌಡ ಪಡೆದ ಮತಗಳು ಕೇವಲ 2,379. 2019ರ ಚುನಾವಣೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರೂ ಆಗಿರುವ ಡಾ.ವೇಣುಗೋಪಾಲ್ ಕೆ.ಎನ್ ಪಡೆದ ಮತಗಳು 4,208. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಬಿಜೆಪಿಯ ಎಂ ಲಕ್ಷ್ಮಣ್ ಗೌಡ ಪಡೆದಿದ್ದು 3,825 ಮತಗಳು ಮಾತ್ರ. ಆದರೆ, ಸ್ಪೀಕರ್ ಆಗಿದ್ದ ರಮೇಶ್ ಕುಮಾರ್‌ ಪಕ್ಷಾಂತರವಾದವರಿಗೆ ಕೊಟ್ಟ ಏಟನ್ನು ಮರೆಯದ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವ ಮುನಿರತ್ನ ಮತ್ತು ಚಿಕ್ಕಬಳ್ಳಾಪುರದ ಸಚಿವ ಡಾ.ಕೆ ಸುಧಾಕರ್, ರಮೇಶ್ ಕುಮಾರ್ ಸೋಳಿಗಾಗಿ ರಣತಂತ್ರ ಹೂಡುತ್ತಿದ್ದಾರೆ.

*ಮತದಾರರ ವಿವರ*

ಕ್ಷೇತ್ರದಲ್ಲಿ ಪರಿಶಿಷ್ಠ ಜಾತಿ ಮತದಾರರು ಸುಮಾರು 59,523, ಪರಿಶಿಷ್ಠ ಪಂಗಡದ ಮತದಾರರು 19,132 ಮತ್ತು ಮುಸ್ಲಿಂ ಮತದಾರರು ಸುಮಾರು 25,619 ಇದ್ದಾರೆ. ರೆಡ್ಡಿ ಮತ್ತು ಒಕ್ಕಲಿಗರು ಇದ್ದು ತಲಾ 30,000 ಮತಗಳನ್ನು ಹೊಂದಿದ್ದಾರೆ. ಕುರುಬ, ಬಲಿಜ, ತಿಗಳ ಇತ್ಯಾದಿ ಹಿಂದುಳಿದ ವರ್ಗದ 50,000ದಷ್ಟು ಮತಗಳಿವೆ. ಬ್ರಾಹ್ಮಣ, ಶೆಟ್ರು ಸೇರಿದಂತೆ ಇತರರು ಸುಮಾರು 5 ರಿಂದ 10 ಸಾವಿರ ಮತಗಳಿವೆ. ಗ್ರಾಮೀಣ ಮತದಾರರು ಸುಮಾರು 1, 85,368 ಮತ್ತು ನಗರ ಪ್ರದೇಶದ ಮತದಾರರು ಸುಮಾರು 21,281 ಇದ್ದಾರೆ.

ಒಟ್ಟಾರೆ ಕಳೆದ ನಲವತ್ತು ವರ್ಷಗಳಿಂದ ನಡೆಯುತ್ತಿರುವ ಇಬ್ಬರು ವ್ಯಕ್ತಿಗಳ ಕದನಕ್ಕೆ ಶ್ರೀನಿವಾಸಪುರ ಮತ್ತೆ ಸಾಕ್ಷಿಯಾಗುತ್ತಿದೆ. ಕಾಂಗ್ರೆಸ್‌ನ ರಮೇಶ್ ಕುಮಾರ್ ಹ್ಯಾಟ್ರಿಕ್ ಗೆಲುವು ಸಾಧಿಸುತ್ತಾರಾ ಅಥವಾ ಅನುಕಂಪದ ಅಲೆ, ಬಿಜೆಪಿ ಸಹಾಯದಿಂದ ಮತ್ತೆ ಜೆಡಿಎಸ್ ಅಭ್ಯರ್ಥಿ ವೆಂಕಟಾಶಿವರೆಡ್ಡಿ ಶಾಸಕರಾಗಿ ಆಯ್ಕೆಯಾಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+