ಕರ್ನಾಟಕದಲ್ಲಿ ಮುಂದಿನ ಚುನಾವಣೆಯಲ್ಲಿ ಗೆಲ್ಲೋದು ಯಾರು? ಸಮೀಕ್ಷೆಗಳು ಹೇಳೋದೇನು?
ಬೆಂಗಳೂರು, ಸೆ. 20: ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜನರ ಗಮನ ಸೆಳೆಯಲು ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಜೊತೆಗೆ ಆಮ್ ಆದ್ಮಿ ಕೂಡ ಕಾಲು ಕೆದರಿ ನಿಲ್ಲಲು ಅಣಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಂದೆ ಯಾರು ಆಡಳಿತ ನಡೆಸಬಹುದು ಎಂಬ ಕುತೂಹಲ ಮನೆಮಾಡಿದೆ.
ಇತ್ತೀಚೆಗೆ ರಾಜ್ಯದ ಜನರ ನಾಡಿಮಿಡಿತ ಅರಿಯಲು ಕೆಲವಾರು ಸಮೀಕ್ಷೆ ಮತ್ತು ಅಧ್ಯಯನಗಳು ನಡೆದಿವೆ. ಸಮೀಕ್ಷೆಗಳು ನೀಡಿರುವ ಸುಳಿವಿನ ಪ್ರಕಾರ ರಾಜ್ಯದಲ್ಲಿ ಮುಂದಿನ ಚುನಾವಣೆ ಬಳಿಕ ರಾಜಕೀಯ ಸ್ಥಿತಿಗತಿಯಲ್ಲಿ ಹೆಚ್ಚಿನ ವ್ಯತ್ಯಾಸ ಆಗುವುದು ಅನುಮಾನ. ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಬಹುಮತ ಸಿಗುವ ಸಾಧ್ಯತೆ ಕಾಣುತ್ತಿಲ್ಲ.
ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟಿಸುತ್ತಿರುವ ಉದ್ಯೋಗಾಕಾಂಕ್ಷಿಗಳಿಗೆ ಸಿದ್ದು ಬೆಂ'ಬಲ'
ಮೇ ತಿಂಗಳಿಂದ ಜೂನ್ವರೆಗೂ ನಡೆದ ಸಮೀಕ್ಷೆಗಳಲ್ಲಿ ಸಂಗ್ರಹಿಸಲಾದ ಜನಾಭಿಪ್ರಾಯದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಮೇಲುಗೈ ಸಿಗುವಂತೆ ತೋರಿರಲಿಲ್ಲ. ಆಗಸ್ಟ್ ಅಂತ್ಯದಲ್ಲಿ ನಡೆದ ಅಧ್ಯಯನಗಳಲ್ಲೂ ಈ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲದಿರುವುದು ಕಂಡುಬಂದಿದೆ.
ಸಮೀಕ್ಷೆಗಳ ಪ್ರಕಾರ, ಕಾಂಗ್ರೆಸ್ ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬಹುದು. ಆದರೆ, ಬಹುಮತದಿಂದ ದೂರವೇ ಇರುತ್ತದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ಅಷ್ಟೇನೂ ದೊಡ್ಡ ಅಂತರ ಇರುವುದಿಲ್ಲ. ಜೆಡಿಎಸ್ ಯಥಾಪ್ರಕಾರ ಕಿಂಗ್ ಮೇಕರ್ ಸ್ಥಾನದಲ್ಲಿ ಇರಬಹುದು. ಬಿಜೆಪಿ ಅಥವಾ ಕಾಂಗ್ರೆಸ್ ಸರಕಾರ ರಚಿಸಲು ಜೆಡಿಎಸ್ ಬೆಂಬಲ ಅಗತ್ಯಬೀಳಬಹುದು ಎಂಬುದನ್ನು ಸಮೀಕ್ಷೆಗಳು ಸೂಚಿಸುತ್ತಿವೆ.
ಕಾಂಗ್ರೆಸ್ಗೆ 100 ಸ್ಥಾನ?
ರಾಜ್ಯ ವಿಧಾನಸಭೆಯಲ್ಲಿ 224 ಸ್ಥಾನಗಳಿವೆ. ವಿವಿಧ ಅಧ್ಯಯನ ಮತ್ತು ಸಮೀಕ್ಷೆಗಳನ್ನು ಗಣನೆಗೆ ತೆಗೆದುಕೊಂಡು ಸರಾಸರಿ ಲೆಕ್ಕ ಹಾಕಿದರೆ ಕಾಂಗ್ರೆಸ್ 100 ಸ್ಥಾನ ಪಡೆಯಬಹುದು. ಬಿಜೆಪಿಗೆ 95 ಸ್ಥಾನಗಳು ಸಿಗಬಹುದು. ಜೆಡಿಎಸ್ ಪಕ್ಷ 20 ಸ್ಥಾನಗಳಿಗೆ ತೃಪ್ತಿಪಡಬೇಕಾಗಬಹುದು. ಜೆಡಿಎಸ್ ಗೆಲುವು ಕಡಿಮೆಯಾದರೂ ಸರಕಾರ ರಚನೆಗೆ ಅದರ ಪ್ರಾಮುಖ್ಯತೆ ಕಡಿಮೆ ಆಗುವುದಿಲ್ಲ.
ಸಿದ್ದರಾಮಯ್ಯ-ದೇವೇಗೌಡ ಭೇಟಿ: ಅತಂತ್ರ ಫಲಿತಾಂಶದ ಮುನ್ಸೂಚನೆ?
ಮಳೆಗೂ ಜಗ್ಗಿಲ್ಲ ಜನಾಭಿಪ್ರಾಯ
ಅಧ್ಯಯನಗಳ ಪ್ರಕಾರ ಮೂರು ತಿಂಗಳ ಹಿಂದೆ ಇದ್ದ ಜನಾಭಿಪ್ರಾಯದಲ್ಲಿ ಈಗ ಅಂಥ ಏನು ವ್ಯತ್ಯಾಸ ಇಲ್ಲ. ಮೂರೂ ಪಕ್ಷಗಳ ಜನಬೆಂಬಲ ಬಹುತೇಕ ಯಥಾಸ್ಥಿತಿಯಲ್ಲಿದೆ. ಬೆಂಗಳೂರಿನಲ್ಲಿ ಬಿದ್ದ ಮಳೆ ಮತ್ತು ಪ್ರವಾಹ ಪರಿಸ್ಥಿತಿ, ಟ್ರಾಫಿಕ್ ಕಿರಿಕಿರಿಯು ಜನರನ್ನು ಆಕ್ರೋಶಕ್ಕೆ ದೂಡಿದಂತೆ ಕಾಣುತ್ತಿಲ್ಲ. ರೈತರು, ಅಂಗನವಾಡಿ ಕಾರ್ಯಕರ್ತೆಯರು, ಬಿಎಂಟಿಸಿ ನೌಕರರು ಹೀಗೆ ವಿವಿಧ ವರ್ಗಗಳಿಂದ ನಡೆದ ಸಾಲು ಸಾಲು ಪ್ರತಿಭಟನೆಗಳು ಜನರಿಗೆ ಹೆಚ್ಚು ಮುಖ್ಯ ಎನಿಸಿಲ್ಲ.
ಹಿಂದೂ ಮುಸ್ಲಿಂ ಹತ್ಯೆ ಘಟನೆಗಳು, ಹಿಜಾಬ್ ಪ್ರಕರಣ, ಭ್ರಷ್ಟಾಚಾರ ಇತ್ಯಾದಿ ಯಾವ ವಿಚಾರವೂ ಜನಾಭಿಪ್ರಾಯವನ್ನು ರೂಪಿಸಲು ವಿಫಲವಾಗಿವೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮತಗಳು ಬಹುತೇಕ ಹಾಗೇ ಅಂಟಿಕೊಂಡಿವೆ ಎಂಬುದು ಸದ್ಯಕ್ಕೆ ಕಾಣುವ ಟ್ರೆಂಡ್.
ಕಾಂಗ್ರೆಸ್ ಕಾರ್ಯತಂತ್ರ ಕೈಕೊಡುತ್ತಿದೆಯೇ?
ಕಾಂಗ್ರೆಸ್ ಇತ್ತೀಚೆಗೆ ಸಿದ್ದರಾಮೋತ್ಸವ ಮಾಡಿತು. ಅವಕಾಶ ಸಿಕ್ಕಾಗೆಲ್ಲಾ ಸರಕಾರವನ್ನು ಹುರಿದು ಮುಕ್ಕುತ್ತಿದೆ. ವಿಧಾನಸಭೆಯ ಅಧಿವೇಶನವೂ ಒಂದು ರೀತಿಯಲ್ಲಿ ಸಿದ್ದರಾಮೋತ್ಸವದಂತೆ ಆಗಿದೆ. ಆದರೆ, ಸರಕಾರದ ವಿರುದ್ಧ ಜನಾಭಿಪ್ರಾಯ ರೂಪಿಸಲು ಕಾಂಗ್ರೆಸ್ ವಿಫಲವಾಗಿರುವುದು ಮೇಲ್ನೋಟಕ್ಕೆ ತೋರುತ್ತಿದೆ. ಬಿಜೆಪಿಯಿಂದಲೂ ಜನಬೆಂಬಲ ಹೆಚ್ಚಿಸುವ ಪ್ರಯತ್ನ ವಿಫಲವಾದಂತೆ ಕಾಣುತ್ತಿದೆ.
"ಪ್ರಮುಖ ವಿಚಾರಗಳನ್ನು ಇಟ್ಟುಕೊಂಡು ಮೂರು ಪಕ್ಷಗಳು ಪ್ರಚಾರ ಮಾಡುತ್ತಿರುವ ರೀತಿ ಹಳೆಯ ವರಸೆಯಂತೆ ತೋರುತ್ತಿದೆ. ಜನರಿಗೆ ಆಸಕ್ತಿ ಮೂಡುತ್ತಿಲ್ಲ. ಆದರೆ, ಚುನಾವಣೆ ಸಮೀಪಿಸಿದಂತೆ ಅಭ್ಯರ್ಥಿಗಳ ಘೋಷಣೆ ಆದ ಬಳಿಕ ಜನರು ಆಸಕ್ತಿ ತೋರಬಹುದು" ಎಂದು ದಕ್ಷ್ ಸಂಶೋಧನಾ ಸಂಸ್ಥೆಯ ಹರೀಶ್ ನರಸಪ್ಪ ಹೇಳಿದ್ದಾರೆ.
40 ಪರ್ಸೆಂಟ್ ಕಮಿಷನ್ ವಿಚಾರ
ಸದ್ಯ ಸಮೀಕ್ಷೆಗಳು ನೀಡಿರುವ ಸುಳಿವನ್ನು ಅರ್ಥೈಸಿಕೊಳ್ಳುವುದಾದರೆ ಜನರಿಗೆ ಹೆಚ್ಚು ಮುಖ್ಯವೆನಿಸಿರುವುದು ಭ್ರಷ್ಟಾಚಾರ ವಿಚಾರ. ಕಾಂಗ್ರೆಸ್ ಸರಕಾರವನ್ನು ಬಿಜೆಪಿ ಟ್ವೆಂಟಿ ಪರ್ಸೆಂಟ್ ಸರಕಾರ ಎಂದು ಆರೋಪಿಸುತ್ತಿತ್ತು. ಈಗ ಕೆಲ ತಿಂಗಳ ಹಿಂದೆ ಗುತ್ತಿಗೆದಾರರು 40 ಪರ್ಸೆಂಟ್ ಕಮಿಷನ್ ಬಗ್ಗೆ ಮಾತನಾಡಿದ್ದು ದೊಡ್ಡ ಮಟ್ಟದಲ್ಲಿ ಸಂಚಲನ ಮೂಡಿಸಿತ್ತು. 40 ಪರ್ಸೆಂಟ್ ಕಮಿಷನಲ್ ಸರಕಾರ ಎಂದು ಕಾಂಗ್ರೆಸ್ ಆಗಾಗ್ಗೆ ತಿವಿಯುತ್ತಿದೆ. ಇದು ಮುಂದಿನ ದಿನಗಳಲ್ಲಿ ಟ್ರೆಂಡಿಂಗ್ ಆಗಬಹುದು.
ಇದನ್ನು ಅರಿತಂತಿರುವ ಬಿಜೆಪಿ ಸರಕಾರ ಕೂಡ ಹಿಂದಿನ ಕಾಂಗ್ರೆಸ್ ಸರಕಾರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನು ಕೆದಕುವ ನಿರ್ಧಾರಕ್ಕೆ ಬಂದಿದೆ.
ಸಿದ್ದರಾಮಯ್ಯ ತನಗೆ ಇದು ಕೊನೆಯ ಚುನಾವಣೆ ಎಂದು ಹೇಳುತ್ತಿದ್ದಾರೆ. ತಮ್ಮ ಸರಕಾರದ ಅವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಪ್ರಚುರಪಡಿಸುತ್ತಿದ್ದಾರೆ. ಆ ಮೂಲಕ ಜನಮತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇವರ ಈ ಪ್ರಯತ್ನ ಎಷ್ಟರಮಟ್ಟಿಗೆ ಫಲಪ್ರದ ಕೊಡುತ್ತದೆ ಎಂಬುದು ಮುಂದಿನ ದಿನಗಳಲ್ಲಿ ನೋಡಬಹುದು.
(ಒನ್ಇಂಡಿಯಾ ಸುದ್ದಿ)