ರಾಜ್ಯೋತ್ಸವ ಪ್ರಶಸ್ತಿ; ಡಾ. ಚಿಂದಿ ವಾಸುದೇವಪ್ಪ ಪರಿಚಯ
ಶಿವಮೊಗ್ಗ, ಅಕ್ಟೋಬರ್ 28 : 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತವರು ಕ್ಷೇತ್ರ ಶಿಕಾರಿಪುರದ ಡಾ. ಚಿಂದಿ ವಾಸುದೇವಪ್ಪ ಅವರಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಶಸ್ತಿ ಲಭಿಸಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಸಿ. ಟಿ. ರವಿ. ಬುಧವಾರ 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದರು. ನವೆಂಬರ್ 1ರ ಬದಲಾಗಿ ನವೆಂಬರ್ 7ರಂದು ನಡೆಯುವ ಸರಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಗುತ್ತದೆ.
ಡಾ. ಚಿಂದಿ ವಾಸುದೇವಪ್ಪ ಶಿರಾರಿಪುರದ ಈಸೂರು ಗ್ರಾಮದವರು. ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಮೊದಲ ಕುಲಪತಿಯಾಗಿ ವಾಸುದೇವಪ್ಪ ಅವರು ಕಾರ್ಯ ನಿರ್ವಹಣೆ ಮಾಡಿದ್ದಾರೆ. ಮೂರು ವರ್ಷಗಳ ಕಾಲ ಅವರು ಕುಪಪತಿಯಾಗಿದ್ದರು.

ಡಾ. ಚಿಂದಿ ವಾಸುದೇವಪ್ಪ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಆಗಿದ್ದರು. ಮೀನು ವಿಜ್ಞಾನ ವಿಭಾಗದ ತಜ್ಞರಾಗಿರುವ ಅವರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ವಿಚಾರ ಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
ಯಡಿಯೂರಪ್ಪ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಂತೆ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯವನ್ನು ಅಸ್ತಿತ್ವಕ್ಕೆ ತಂದರು.
ಆಗ ಡಾ. ಚಿಂದಿ ವಾಸುದೇವಪ್ಪ ಅವರನ್ನು ಮೊದಲ ಕುಲಪತಿಯಾಗಿ ನೇಮಕ ಮಾಡಲಾಗಿತ್ತು. ಪ್ರಸ್ತುತ ಡಾ. ಚಿಂದಿ ವಾಸುದೇವಪ್ಪ ಅವರು ಹರ್ಯಾಣದಲ್ಲಿರುವ ಎನ್ಐಎಫ್ಟಿಇಎಂನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ.












Click it and Unblock the Notifications