6 ಬಾರಿ ಮುಖ್ಯಮಂತ್ರಿ ಆಗಿರುವ ನಿತೀಶ್ ಕುಮಾರ್ ಜೀವನಚರಿತ್ರೆ
ಪಾಟ್ನಾ, ನವೆಂಬರ್.15: ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) ದಿಗ್ವಿಜಯ ಸಾಧಿಸಿದ ಬೆನ್ನಲ್ಲೇ ನಾಲ್ಕನೇ ಅವಧಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಆಯ್ಕೆ ಆಗಿದ್ದಾರೆ. ರಾಜ್ಯದ 37ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನಕ್ಕೆ ಈಗಾಗಲೇ ದಿನಾಂಕವೂ ನಿಗದಿಯಾಗಿದೆ.
ರಾಜ್ಯದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) 125 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಬಿಹಾರದ 37ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ನಿತೀಶ್ ಕುಮಾರ್ ಅಣಿಯಾಗಿದ್ದಾರೆ.
ಬಿಹಾರದಲ್ಲಿ ಸರಳ, ಸಜ್ಜನಿಕೆ ಮತ್ತು ನಿಷ್ಕಳಂಕ ರಾಜಕಾರಣಕ್ಕೆ ಮತ್ತೊಂದು ಹೆಸರು ನಿತೀಶ್ ಕುಮಾರ್. 15 ವರ್ಷಗಳ ರಾಜ್ಯವನ್ನು ಮುಖ್ಯಮಂತ್ರಿ ಆಗಿ ಮುನ್ನಡೆಸಿದ ನಿತೀಶ್ ಕುಮಾರ್ ಅವರ ಬದುಕು ಹೂವಿನ ಹಾಸಿಗೆ ಆಗಿರಲಿಲ್ಲ. ಬಾಲ್ಯದಿಂದ ಹೋರಾಟ ಮನೋಭಾವ ರೂಢಿಸಿಕೊಂಡಿದ್ದ ಅವರ ಬದುಕಿನ ಪರಿಚಯದ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.

ಶಿಕ್ಷಣ ಮತ್ತು ಬಾಲ್ಯದ ಬದುಕು
ಬಿಹಾರದ ಭಕ್ತಿಯಾರ್ ಪುರ್ ನಲ್ಲಿ 1951ರ ಮಾರ್ಚ್ 1ರಂದು ನಿತೀಶ್ ಕುಮಾರ್ ಅವರು ಕವಿರಾಜ್ ರಾಮ ಲಖನ್ ಸಿಂಗ್ ಹಾಗೂ ಪರಮೇಶ್ವರಿ ದೇವಿ ದಂಪತಿಯ ಪುತ್ರನಾಗಿ ಜನಿಸಿದರು. ಇವರ ತಂದೆ ಆಯುರ್ವೇದಿಕ್ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕುರ್ಮಿ ಕೃಷಿ ಜಾತಿಗೆ ಸೇರಿದ ನಿತೀಶ್ ಕುಮಾರ್, ಒಬ್ಬ ಸಹೋದರ ಮತ್ತು ಮೂವರು ಸಹೋದರಿಯರನ್ನು ಹೊಂದಿದ್ದರು. ಉಷಾ ದೇವಿ, ಇಂದು ದೇವಿ, ಪ್ರಭಾ ದೇವಿ ಹಾಗೂ ಸತೀಶ್ ಕುಮಾರ್ ಎಂಬ ಸಹೋದರನನ್ನು ನಿತೀಶ್ ಕುಮಾರ್ ಹೊಂದಿದ್ದಾರೆ.
ಭಕ್ತಿಯಾರ್ ಪುರ್ ಗ್ರಾಮದ ಶ್ರೀ ಗಣೇಶ್ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಪಡೆದರು. 1972ರಲ್ಲಿ ಪಾಟ್ನಾದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ ಇಂಜಿನಿಯರಿಂಗ್ ನಲ್ಲಿ ಬಿಎಸ್ಸಿ ಪದವಿ ಪಡೆದುಕೊಂಡರು. ರಾಜಕೀಯ ಬದುಕು ಆರಂಭಕ್ಕೂ ಮೊದಲು ಬಿಹಾರ ರಾಜ್ಯ ವಿದ್ಯುತ್ ಮಂಡಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಿತೀಶ್ ಕುಮಾರ್, 1955ರ ಫೆಬ್ರುವರಿ 22ರಂದು ಮಂಜು ಕುಮಾರಿ ಸಿಂಗ್ ಅವರನ್ನು ಮದುವೆ ಆಗಿದ್ದರು. 1973ರಲ್ಲಿ ಈ ದಂಪತಿ ಪುತ್ರನಾಗಿ ನಿಶಾಂತ್ ಕುಮಾರ್ ಜನಿಸಿದರು. 2007ರ ಮೇ 14ರಂದು ದೆಹಲಿ ಆಸ್ಪತ್ರೆಯಲ್ಲಿ ನಿಮೋನಿಯಾದಿಂದ ನಿತೀಶ್ ಕುಮಾರ್ ಅವರ ಪತ್ನಿ ಮಂಜು ಕುಮಾರಿ ಸಿಂಗ್ ನಿಧನ ಹೊಂದುತ್ತಾರೆ.

ನಿತೀಶ್ ಕುಮಾರ್ ಹೋರಾಟದ ಹಾದಿ
ಕಾಲೇಜು ದಿನಗಳಿಂದಲೂ ರಾಮ್ ಮನೋಹರ್ ಲೋಹಿಯಾ ಅವರಿಂದ ಪ್ರಭಾವಕ್ಕೆ ಒಳಗಾಗಿದ್ದ ನಿತೀಶ್ ಕುಮಾರ್ 1971ರಲ್ಲಿ ಸಮಾಜವಾದಿ ಯುವಜನ ಸಭಾಗೆ ಸೇರಿಕೊಂಡರು. ಜಯಪ್ರಕಾಶ್ ನಾರಾಯಣ್, ಎಸ್ ಎನ್ ಸಿನ್ಹಾ, ಕರ್ಪುರಿ ಠಾಕೂರ್ ಮತ್ತು ವಿ ಪಿ ಸಿಂಗ್ ಸಿದ್ದಾಂತಗಳಿಂದ ಪ್ರವಾವಿತರಾಗಿದ್ದರು. 1974ರಲ್ಲಿ ಜೆಪಿ ಚಳುವಳಿ ಸಂದರ್ಭದಲ್ಲಿ ಆಂತರಿಕ ಭದ್ರತಾ ಕಾಯ್ದೆ ಅಡಿಯಲ್ಲಿ ನಿತೀಶ್ ಕುಮಾರ್ ಬಂಧಿಸಲ್ಪಟ್ಟಿದ್ದರು. 1975ರ ತುರ್ತು ಪರಿಸ್ಥಿತಿ ಸಂದರ್ಭದಲ್ಲಿಯೂ ನಿತೀಶ್ ಜೈಲಿಗೆ ಹೋಗಿದ್ದರು.

ನಿತೀಶ್ ಕುಮಾರ್ ರಾಜಕಾರಣದ ಆರಂಭ
ಬಿಹಾರದ ಇತಿಹಾಸದಲ್ಲಿ ನಿತೀಶ್ ಕುಮಾರ್ ಹೊಸ ದಾಖಲೆ ಬರೆದಿದ್ದರು. ಮೊದಲ ಬಾರಿಗೆ 1985ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಹೀಗೆ ರಾಜಕೀಯ ಬದುಕು ಆರಂಭಿಸಿದ ನಿತೀಶ್ ಕುಮಾರ್ ಮತ್ತೆ ಹಿಂತಿರುಗಿ ನೋಡಲಿಲ್ಲ. 1987ರಲ್ಲಿ ಲೋಕ ದಳ ರಾಜ್ಯಾಧ್ಯಕ್ಷರಾಗಿ ನೇಮಕಗೊಂಡರು. 1989ರಲ್ಲಿ ಜನತಾ ದಳದ ಮುಖ್ಯಕಾರ್ಯದರ್ಶಿಯಾಗಿ ನಿತೀಶ್ ಕುಮಾರ್ ನೇಮಕಗೊಂಡಿದ್ದಲ್ಲೇ ಸಂಸದರಾಗಿ ಆಯ್ಕೆಯಾದರು.

ಕೇಂದ್ರ ರೈಲ್ವೆ ಸಚಿವರಾಗಿ ನಿತೀಶ್ ಕುಮಾರ್ ಆಯ್ಕೆ
ಕೇಂದ್ರದಲ್ಲಿ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಅಸ್ತಿತ್ವದಲ್ಲಿದ್ದ ಸಂದರ್ಭದಲ್ಲಿ ನಿತೀಶ್ ಕುಮಾರ್ ರನ್ನು ರೈಲ್ವೆ ಸಚಿವರಾಗಿ ನೇಮಕಗೊಳಿಸಲಾಗಿತ್ತು. ಇದಕ್ಕೂ ಮೊದಲು 1990ರಲ್ಲಿ ಮೊದಲ ಬಾರಿಗೆ ಕೃಷಿ ಮತ್ತು ಸಹಕಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಮೊದಲ ಬಾರಿ 2000ರಲ್ಲಿ ಬಿಹಾರ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಬಹುಮತ ಸಾಬೀತುಪಡಿಸುವಲ್ಲಿ ಸೋತರು. ಇದರ ಪರಿಣಾಮ 8 ದಿನಗಳಲ್ಲೇ ಸರ್ಕಾರವು ಪತನಗೊಂಡಿತು. 2001ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ನಿತೀಶ್ ಕುಮಾರ್ ರನ್ನು ಕೇಂದ್ರ ಸಚಿವರಾಗಿ ನೇಮಿಸಿದರು.

ಮೊದಲ ಬಾರಿ 8 ದಿನಕ್ಕೆ ಸರ್ಕಾರವು ಪತನ
ಬಿಹಾರದಲ್ಲಿ ಮೊದಲ ಬಾರಿಗೆ 2000ರಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿ ಆಯ್ಕೆಯಾಗಿದ್ದರು. ಮಾರ್ಚ್.03, 2000ರಲ್ಲಿ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಿತೀಶ್ ಕುಮಾರ್ ಸರ್ಕಾರವು, ಬಹುಮತ ಸಾಬೀತುಪಡಿಸಲು ಆಗದೇ ಅಂದು ಒಂದೇ ವಾರದಲ್ಲಿ ಪತನಗೊಂಡಿತು. ನವೆಂಬರ್.24, 2005ರಲ್ಲಿ ಭಾರತೀಯ ಜನತಾ ಪಕ್ಷದ ಬೆಂಬಲದೊಂದಿಗೆ ಎರಡನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದರು.

ನಿತೀಶ್ ಕುಮಾರ್ ಸರ್ಕಾರದ 3ನೇ ಅವಧಿಯೂ ಅಪೂರ್ಣ
ಬಿಹಾರದಲ್ಲಿ 2010ರ ನವೆಬಂರ್.26ರಂದು ಮೂರನೇ ಬಾರಿಗೆ ನಿತೀಶ್ ಕುಮಾರ್ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ ಮೂರನೇ ಬಾರಿ ಸಿಎಂ ಆದ ಅವರು ಅವಧಿ ಪೂರ್ಣಗೊಳಿಸುವುದಕ್ಕೆ ಸಾಧ್ಯವಾಗಲಿಲ್ಲ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ನಿತೀಶ್ ಅವರ ಜೆಡಿಯು ಪಕ್ಷವು ಸೋಲು ಕಂಡ ಹಿನ್ನೆಲೆ ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅವರ ಬದಲಿಗೆ ಜಿತನ್ ರಾಮ್ ಮಾಂಝಿರನ್ನು ಸಿಎಂ ಸ್ಥಾನಕ್ಕೇರಿಸಲಾಗಿತ್ತು. ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ 9 ತಿಂಗಳಿನಲ್ಲೇ ಮತ್ತೆ ನಿತೀಶ್ ಕುಮಾರ್ ಸಿಎಂ ಕುರ್ಚಿಗೆ ಏರಿದರು. ಫೆಬ್ರವರಿ.22, 2015ರಲ್ಲಿ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ್ದರು.

ಆರ್ ಜೆಡಿ ಮತ್ತು ಜೆಡಿಯು ರಾಜಕೀಯ ಒಪ್ಪಂದ
ಬಿಹಾರ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾ ದಳದ ಜೊತೆಗೆ ಜೆಡಿಯು ಮೈತ್ರಿಕೂಟ ರಚಿಸಿಕೊಂಡು ಹೊಸ ಸರ್ಕಾರವನ್ನು ಅಸ್ತಿತ್ವಕ್ಕೆ ತರಲಾಗಿತ್ತು. 2015ರ ನವೆಂಬರ್.20ರಂದು ಐದನೇ ಬಾರಿಗೆ ಮುಖ್ಯಮಂತ್ರಿ ಆಗಿ ನಿತೀಶ್ ಕುಮಾರ್ ಅಧಿಕಾರಕ್ಕೇರಿದರು. ಅಂದು ಅತ್ಯಂತ ಯುವ ಉಪಮುಖ್ಯಮಂತ್ರಿಯಾಗಿ ತೇಜಸ್ವಿ ಯಾದವ್ ಪ್ರಮಾಣವಚನ ಸ್ವೀಕರಿಸಿದ್ದರು. 2017ರಲ್ಲಿ ರಾಷ್ಟ್ರೀಯ ಜನತಾದಳದ ಜೊತೆಗಿನ ಮೈತ್ರಿ ಕಡಿದುಕೊಂಡ ನಿತೀಶ್ ಕುಮಾರ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.

ರಾಜೀನಾಮೆ ನೀಡಿದ 24 ಗಂಟೆಗಳಲ್ಲೇ ಪ್ರಮಾಣವಚನ
ರಾಷ್ಟ್ರೀಯ ಜನತಾ ದಳದ ಜೊತೆಗೆ ವೈಮನಸ್ಸಿನಿಂದ ಜೆಡಿಯು ಮೈತ್ರಿ ಕಡಿದುಕೊಂಡು 2017ರಲ್ಲಿ ಸರ್ಕಾರ ಪತನಗೊಂಡಿತು. ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿದರು. ಅದಾಗಿ ಮರುದಿನವೇ ಮತ್ತೊಮ್ಮೆ ಬಿಜೆಪಿ ಬೆಂಬಲದೊಂದಿಗೆ ಆರನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಇದೀಗ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಜೊತೆಗೆ 2020ರಲ್ಲಿ ಚುನಾವಣೆ ಎದುರಿಸಿದ ನಿತೀಶ್ ಕುಮಾರ್, ಮತದಾರರ ಬೆಂಬಲ ಗಳಿಸಿಕೊಂಡಿದ್ದು ಏಳನೇ ಬಾರಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರಲು ಅಣಿಯಾಗಿದ್ದಾರೆ.

2020ರಲ್ಲಿ ಬಿಹಾರ ಮತದಾರರ ತೀರ್ಪು ಹೇಗಿದೆ?
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಪೈಕಿ ಸ್ಪಷ್ಟ ಬಹುಮತಕ್ಕೆ 122 ಸ್ಥಾನಗಳ ಅಗತ್ಯವಿದ್ದು, ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ(ಎನ್ ಡಿಎ) 125 ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಬಿಜೆಪಿ 74, ಜೆಡಿಯು 43, ವಿಐಪಿ 4 ಹಾಗೂ ಹಿಂದೂಸ್ಥಾನ್ ಅವಂ ಮೋರ್ಚಾ ಪಕ್ಷವು 4 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಮಹಾಘಟಬಂಧನ್ ಮೈತ್ರಿಕೂಟವು 110 ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಅದರಲ್ಲಿ ರಾಷ್ಟ್ರೀಯ ಜನತಾ ದಳ 75, ಕಾಂಗ್ರೆಸ್ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಎಐಎಂಐಎಂ 5, ಲೋಕಜನಶಕ್ತಿ ಪಕ್ಷ 1 ಹಾಗೂ ಪಕ್ಷೇತರ ಅಭ್ಯರ್ಥಿಗಳು 2 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.












Click it and Unblock the Notifications