ಭಾರತಕ್ಕೆ ಕಾದಿದೆಯಾ ಆರ್ಥಿಕ ಗಂಡಾಂತರ? ಚೇತರಿಕೆ ಯಾವಾಗ ಸಾಧ್ಯ?
ಕೋವಿಡ್ ಹಾಗು ರಷ್ಯಾ ಯುದ್ಧದ ಪರಿಣಾಮವಾಗಿ ವಿಶ್ವದ ಅನೇಕ ದೇಶಗಳು ಆರ್ಥಿಕವಾಗಿ ಜರ್ಝರಿತವಾಗಿರುವುದು ಸಹಜ. ಭಾರತವೂ ಆರ್ಥಿಕವಾಗಿ ಪ್ರಪಾತಕ್ಕೆ ಕುಸಿತು ಮತ್ತೆ ಮೇಲೇರುತ್ತಿದೆ. ಈ ಮೇಲೇರುವ ಹಾದಿ ಭಾರತಕ್ಕೆ ಈಗ ದುಸ್ತರವಾಗಿ ಕಾಡುತ್ತಿರುವುದು ಕಂಡುಂಬಂದಿದೆ. ಭಾರತಕ್ಕೆ ಸದ್ಯೋಭವಿಷ್ಯದಲ್ಲಿ ಇರುವ ಆರ್ಥಿಕ ಗಂಡಾಂತರಗಳ ಬಗ್ಗೆ ತಜ್ಞರು ಎಚ್ಚರಿಸಿರುವ ಕೆಲ ವರದಿಗಳು ಬಂದಿವೆ.
ಭಾರತದಲ್ಲಿ ಹಣದುಬ್ಬರ ಹೆಚ್ಚುತ್ತಿರುವುದು, ಕರೆಂಟ್ ಅಕೌಂಟ್ ಕೊರತೆ ಹೆಚ್ಚುತ್ತಿರುವುದು, ರೂಪಾಯಿ ಮೌಲ್ಯ ನಶಿಸುತ್ತಿರುವುದು, ಫಾರೆಕ್ಸ್ ಮೀಸಲು ನಿಧಿ ಪ್ರಮಾಣ ಕಡಿಮೆಯಾಗುತ್ತಿರುವುದು ಇವೆಲ್ಲವೂ ಆರ್ಥಿಕ ದುಸ್ಥಿತಿಯ ಸೂಚಕವೆಂದು ಪರಿಗಣಿಸಲಾಗಿದೆ. ಸರಕಾರ ಇನ್ನೂ ಸಮರ್ಪಕವಾದ ಕ್ರಮಗಳನ್ನು ಕೈಗೊಳ್ಳದೇ ಹೋದರೆ ಆರ್ಥಿಕ ಪ್ರಗತಿಯ ದಾರಿ ಹಳಿತಪ್ಪಿ ಎಲ್ಲೋ ಉರುಳಿಬೀಳುವ ಅಪಾಯ ಉಂಟು.
ಶ್ರೀಲಂಕಾ ಯಾವ ಪರಿಸ್ಥಿತಿಯಲ್ಲಿದೆ ಎಂಬುದನ್ನು ನಾವು ನೆರೆ ದೇಶವಾಗಿ ನೋಡಿ ಮತ್ತು ಕೇಳಿಬಲ್ಲೆವು. ನಾವಿನ್ನೂ ಆ ಪರಿಸ್ಥಿತಿಯಿಂದ ದೂರವೇ ಇರಬಹುದು. ಆದರೆ, ಸದ್ಯದ ಆರ್ಥಿಕ ತೊಡಕುಗಳನ್ನು ನಿವಾರಿಸಿಕೊಳ್ಳದೇ ಹೋದರೆ ಲಂಕಾದ ಪರಿಸ್ಥಿತಿ ಭಾರತಕ್ಕೆ ಬಂದರೆ ಅಚ್ಚರಿ ಇಲ್ಲ.
ಶ್ರೀಲಂಕಾದಲ್ಲೂ ಹಲವು ವರ್ಷಗಳ ಹಿಂದೆಯೇ ಆರ್ಥಿಕತೆ ಮುಗ್ಗಟ್ಟು ಸೃಷ್ಟಿಯಾಗಬಹುದು ಎಂದು ತಜ್ಞರು ಎಚ್ಚರಿಸಿದ್ದರು. ಆದರೆ, ಸರಕಾರ ಅದನ್ನು ನಿರ್ಲಕ್ಷಿಸಿ, ಜನಪ್ರಿಯ ಯೋಜನೆಗಳ ಮೂಲಕ ಮತದಾರರನ್ನು ಒಲಿಸಿಕೊಳ್ಳುವತ್ತ ಗಮನ ಕೊಟ್ಟಿತು. ಪರಿಣಾಮವಾಗಿ, ಸರಕಾರ ಈಗ ದೇಶವನ್ನು ಆರ್ಥಿಕ ವಿನಾಶದ ಅಂಚಿಗೆ ನೂಕಿದೆ, ಜೊತೆಗೆ ಜನರ ವಿಶ್ವಾಸವನ್ನೂ ಕಳೆದುಕೊಂಡಿದೆ.

ಭಾರತದ ಆರ್ಥಿಕ ಪರಿಸ್ಥಿತಿ ಹೇಗಿದೆ?
ಭಾರತದ ಆರ್ಥಿಕತೆ ಸದ್ಯ 3 ಟ್ರಿಲಿಯನ್ ಡಾಲರ್ (240 ಲಕ್ಷ ಕೋಟಿ ರೂ) ಆಸುಪಾಸಿನಲ್ಲಿದೆ. ಸರಕಾರದ ಪ್ರಕಾರ ಸದ್ಯದಲ್ಲೇ 5 ಟ್ರಿಲಿಯನ್ ಡಾಲರ್ (400 ಲಕ್ಷ ಕೋಟಿ ರೂ) ಮುಟ್ಟಲಿದೆ. ವಾಣಿಜ್ಯ ಸಚಿವ ಪೀಯುಶ್ ಗೋಯಲ್ ಮೊನ್ನೆ (ಜುಲೈ 25) ನೀಡಿದ ಹೇಳಿಕೆ ಪ್ರಕಾರ ಮುಂದಿನ 30 ವರ್ಷಗಳಲ್ಲಿ, ಅಂದರೆ 2050ರ ಆಸುಪಾಸಿನ ವರ್ಷದಲ್ಲಿ 30 ಟ್ರಿಲಿಯನ್ ಡಾಲರ್ (2400 ಲಕ್ಷ ಕೋಟಿ ರೂ) ಆರ್ಥಿಕತೆಯಾಗಿ ಭಾರತ ಬೆಳೆಯಬಹುದು ಎಂಬ ಅಂದಾಜಿದೆ.
ಜಿಡಿಪಿ ಕನಿಷ್ಠ ಶೇ. 8ರ ದರದಲ್ಲಿ ಬೆಳವಣಿಗೆ ಸಾಧಿಸುತ್ತಾ ಹೋದರೆ ಮೂವತ್ತು ವರ್ಷದಲ್ಲಿ 30 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಬೆಳೆಯುವುದು ಸಹಜ. ಆದರೆ, ಶೇ. 8ರ ದರದಲ್ಲಿ ನಿರಂತರ ಬೆಳವಣಿಗೆ ಸಾಧ್ಯವಾ ಎಂಬುದು ಪ್ರಶ್ನೆ ಮತ್ತು ಸಂದೇಹ.

ಜಿಡಿಪಿ ಈಗ ಎಷ್ಟಿದೆ?
ಕೋವಿಡ್ ಸಂಕಷ್ಟದಿಂದ ಭಾರತ ಬಹಳ ಬೇಗ ಚೇತರಿಕೆ ಕಂಡಿತು. ಅನೇಕ ಅಂತಾರಾಷ್ಟ್ರೀಯ ಹಣಕಾಸು ವಿಶ್ಲೇಷಣಾ ಸಂಸ್ಥೆಗಳು 2022-23ರ ವರ್ಷದಲ್ಲಿ ಶೇ 8ಕ್ಕಿಂತ ಹೆಚ್ಚು ವೇಗದಲ್ಲಿ ಬಾರತದ ಜಿಡಿಪಿ ಬೆಳೆಯಬಹುದು ಎಂದು ಅಂದಾಜು ಮಾಡಿದ್ದವು. ಈಗ ಎಲ್ಲವೂ ತಮ್ಮ ಅಂದಾಜನ್ನು ಕಡಿಮೆ ಮಾಡಿವೆ.
ಹಿಂದಿನ ಅಂದಾಜಿನಲ್ಲಿ ಶೇ. 8.2ರಷ್ಟು ಜಿಡಿಪಿ ಬೆಳವಣಿಗೆ ಆಗಬಹುದು ಎಂದು ಅಂದಾಜಿಸಿದ್ದ ಐಎಎಂಪ್ ಇದೀಗ ಅದನ್ನು ಶೇ. 7.4ಕ್ಕೆ ಇಳಿಸಿದೆ. ಇನ್ನೂ ಆತಂಕದ ಸಂಗತಿ ಎಂದರೆ 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 6.1ರಷ್ಟು ಬೆಳೆಯಬಹುದು ಎಂದೂ ಐಎಂಎಫ್ ಅಂದಾಜು ಮಾಡಿದೆ.
ಭಾರತೀಯ ರಿಸರ್ವ್ ಬ್ಯಾಂಕ್ 2022-23ರ ವರ್ಷಕ್ಕೆ ಮಾಡಿದ ಬೆಳವಣಿಗೆ ದರ ಶೇ. 7.2. ಇದು ಐಎಂಎಫ್ ಪ್ರೆಡಿಕ್ಷನ್ಗಿಂತಲೂ ಕಡಿಮೆಯೇ ಎಂಬುದು ಗಮನಾರ್ಹ.

ಭಾರತಕ್ಕೆ ಡಬಲ್ ಕೊರತೆ ಬಾಧೆ
ಸೊಸೈಟೆ ಜನರೇಲ್ ಎಂಬ ಸಂಸ್ಥೆ ಮೊನ್ನೆ (ಜುಲೈ 25) ಬಿಡುಗಡೆ ಮಾಡಿದ ವರದಿಯೊಂದರ ಪ್ರಕಾರ ಏಷ್ಯಾದ ಉಯನ್ಮುಖ ಆರ್ಥಿಕತೆಗಳ ರೇಸ್ನಲ್ಲಿ ಭಾರತ ಹಿಂದುಳಿಯುತ್ತಿದೆಯಂತೆ.
ಹಣದುಬ್ಬರದ ಒತ್ತಡ, ಹಣಕಾಸು ಇಕ್ಕಟ್ಟಿನ ಸ್ಥಿತಿ, ಅಭಿವೃದ್ಧಿ ಮುಂದಿರುವ ಅಪಾಯಗಳು ಇತ್ಯಾದಿ ಆಧಾರದ ಮೇಲೆ ಈ ವರದಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಭಾರತ, ಚೀನಾ ಸೇರಿದಂತೆ ಕೆಲ ಪ್ರಮುಖ ಏಷ್ಯನ್ ದೇಶಗಳ ಆರ್ಥಿಕತೆಯನ್ನು ಈ ವರದಿಯಲ್ಲಿ ವಿಶ್ಲೇಷಿಸಲಾಗಿದೆ. ಈ ದೇಶಗಳು ಈವರೆಗೆ ತೋರಿರುವ ಫೋರೆಕ್ಸ್ (ವಿದೇಶಿ ವಿನಿಮಯ) ವ್ಯತ್ಯಯಗಳು ಕೂಡ ಈ ವರದಿಯ ಅಂಶಗಳನ್ನು ಪ್ರತಿಫಲಿತಗೊಳಿಸುವ ರೀತಿಯಲ್ಲಿ ಇವೆ
ಭಾರತಕ್ಕೆ ಹೆಚ್ಚಿನ ಹಣದುಬ್ಬರ ಮತ್ತು ಅವಳಿ ಕೊರತೆ (ಕರೆಂಟ್ ಅಕೌಂಟ್ ಕೊರತೆ ಮತ್ತು ವಿತ್ತೀಯ) ಸಮಸ್ಯೆ ಬಾಧಿಸಿದೆ. ಥಾಯ್ಲೆಂಡ್ ಮತ್ತು ಫಿಲಿಪ್ಪೈನ್ಸ್ ದೇಶಗಳಿಗೂ ಇದೇ ಸಮಸ್ಯೆ ಎಂದು ಸೊಸೈಟೆ ಜೆನೆರಲೆ ಅಭಿಪ್ರಾಯಪಟ್ಟಿದೆ.
ಈ ಸಂಸ್ಥೆಯ ಪ್ರಕಾರ, ಇಂಡೋನೇಷ್ಯಾ ಮತ್ತು ಮಲೇಷ್ಯಾ ಉತ್ತಮ ಸ್ಥಿತಿಯಲ್ಲಿದೆ. ನಂತರದ ಸ್ಥಾನದಲ್ಲಿ ಚೀನಾ, ತೈವಾನ್, ವಿಯೆಟ್ನಾಂ ಮತ್ತು ಸಿಂಗಪುರ್ ದೇಶಗಳಿವೆ.

ಫೋರೆಕ್ಸ್ ರಿಸರ್ವ್ ಇಳಿಕೆ
ಭಾರತದ ವಿದೇಶ ವಿನಿಯಮ ಮೀಸಲು ನಿಧಿ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಇಳಿಕೆ ಕಾಣುತ್ತಿದೆ. 2021, ಸೆ. 3ರಂದು 642 ಬಿಲಿಯನ್ ಡಾಲರ್ ಇದ್ದ ಫಾರೆಕ್ಸ್ ರಿಸರ್ವ್ 2022 ಜುಲೈ 8ರಂದು 580 ಬಿಲಿಯನ್ ಡಾಲರ್ಗೆ ಇಳಿದಿದೆ. ಇದು ಜಿಡಿಪಿಯ ಶೇ. 19ರಷ್ಟು ಭಾಗ. ಫಾರೆಕ್ಸ್ ಮೀಸಲು ನಿಧಿಯಲ್ಲಿ ಹೆಚ್ಚು ಹಣ ಇದ್ದಷ್ಟೂ ಆರ್ಥಿಕತೆ ಹೆಚ್ಚು ನಿರಾಳವಾಗಿ ಉಸಿರಾಡಲು ಸಾಧ್ಯ.
ಚಾಲ್ತಿ ಖಾತೆ ಕೊರತೆ (ಕರೆಂಟ್ ಅಕೌಂಟ್ ಡೆಫಿಸಿಟ್) 2022-23ರಲ್ಲಿ ಜಿಡಿಪಿಯ ಶೇ. 3ರಷ್ಟು ಮೀರಬಹುದು ಎಂಬ ಆತಂಕ ಇದೆ. ಇದು ಫಾರೆಕ್ಸ್ ರಿಸರ್ವ್ ಮೊತ್ತಕ್ಕೆ ಸಂಚಕಾರ ತರುವ ನಿರೀಕ್ಷೆ ಇದೆ. ಜೊತೆಗೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಒಳ್ಳೆಯ ಲಕ್ಷಣವಲ್ಲ.
ಚಾಲ್ತಿ ಖಾತೆ ಕೊರತೆ ಮತ್ತು ವಿತ್ತೀಯ ಕೊರತೆಯಿಂದ ಆಗುವ ಅನಾಹುತಗಳಲ್ಲಿ ಗುರುತರ ವ್ಯತ್ಯಾಸಗಳುಂಟು. ಕರೆಂಟ್ ಅಕೌಂಟ್ ಡೆಫಿಸಿಟ್ನಲ್ಲಿ ಜಾಗತಿಕ ಹೂಡಿಕೆದಾರರು ಬಂಡವಾಳ ಹಾಕಿರುತ್ತಾರೆ. ವಿತ್ತೀಯ ಕೊರತೆಯಲ್ಲಿ ಹೆಚ್ಚಾಗಿ ದೇಶೀಯವಾಗಿ ಮಾಡಿದ ಸಾಲವೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಚಾಲ್ತಿ ಖಾತೆ ಕೊರತೆ ಹೆಚ್ಚು ಹಾನಿಕರ ಎಂದು ಪರಿಗಣಿಸಲಾಗುತ್ತದೆ.

ಫಾರೆಕ್ಸ್ ಮೀಸಲು ನಿಧಿ ಯಾಕೆ ಕುಸಿಯುತ್ತಿದೆ?
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದು ಇದಕ್ಕೆ ಕಾರಣ. ರೂಪಾಯಿ ದುರ್ಬಲಗೊಳ್ಳುತ್ತಿರುವುದರಿಂದ ವಿದೇಶೀ ಹೂಡಿಕೆದಾರರನ್ನು ಉಳಿಸಿಕೊಳ್ಳುವುದು ಕಷ್ಟ. ಇವರು ಬಂಡವಾಳ ಹಿಂತೆಗೆದುಕೊಳ್ಳುವುದು ಹೆಚ್ಚುತ್ತಿದೆ. ಈ ಕಾರಣಕ್ಕೆ ಫಾರೆಕ್ಸ್ ರಿಸರ್ವ್ ಕಡಿಮೆ ಅಗುತ್ತದೆ. ಇದನ್ನು ತಡೆಯಲು ಆರ್ಬಿಐ ಕೆಲವಾರು ಕ್ರಮಗಳನ್ನು ಕೈಗೊಂಡಿರುವುದು, ಕೈಗೊಳ್ಳಲು ಮುಂದಾಗಿರುವುದು ಹೌದು. ಆದರೆ, ಅದರ ಪ್ರಯತ್ನ ಎಷ್ಟರಮಟ್ಟಿಗೆ ಫಲ ಕೊಡುತ್ತದೆ ಎಂಬುದು ಹೇಳುವುದು ಕಷ್ಟ.

ನೂರು ಬಿಲಿಯನ್ ಡಾಲರ್ ಇಳಿಕೆ
ಭಾರತಕ್ಕೆ ಈಗ ಹಾವನ್ನೂ ಸಾಯಿಸಲಾಗದು, ಕೋಲನ್ನೂ ಮುರಿಯಲಾಗದು ಎಂಬ ಸ್ಥಿತಿ. ರೂಪಾಯಿ ಮೌಲ್ಯ ಕುಸಿತವನ್ನು ತಡೆಗಟ್ಟಲು ಫಾರೆಕ್ಸ್ ರಿಸರ್ವ್ನಲ್ಲಿನ ಒಂದಷ್ಟು ಮೊತ್ತವನ್ನು ಮಾರಾಟ ಮಾಡುವುದು ಅನಿವಾರ್ಯವಾಗಿದೆ. ಈಗಾಗಲೇ ಆ ಪ್ರಕ್ರಿಯೆ ಆರಂಭವಾಗಿದೆ. ಇನ್ನೈದು ತಿಂಗಳಲ್ಲಿ ಆರ್ಬಿಐ ಫಾರೆಕ್ಸ್ ರಿಸರ್ವ್ನಲ್ಲಿರುವ 100 ಬಿಲಿಯನ್ ಡಾಲರ್ನಷ್ಟು ಹಣವನ್ನು ಮಾಡಬಹುದು.
ಭಾರತದ ಆಮದು ಮತ್ತು ರಫ್ತಿನ ಮಧ್ಯೆ ಅಂತರ ಹೆಚ್ಚುತ್ತಲೆ ಇದೆ. ಜೂನ್ ತಿಂಗಳಲ್ಲಿ ಭಾರತದ ವ್ಯಾಪಾರ ಅಂತರ 26.2 ಬಿಲಿಯನ್ ಡಾಲರ್ ಇತ್ತು. ಇದು ಹಿಂದೆಂದಿಗಿಂತಲೂ ತೀರಾ ಹೆಚ್ಚು. ಇದರಿಂದ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯಬಹುದು. ಕರೆಂಟ್ ಅಕೌಂಟ್ ಅಂತರವೂ ಹೆಚ್ಚಾಗಬಹುದು. ತತ್ಪರಿಣಾಮವಾಗಿ ಫಾರೆಕ್ಸ್ ಮೀಸಲು ನಿಧಿಯೂ ಸಂಕುಚಿಗೊಳ್ಳಬಹುದು.

ಏನು ಕ್ರಮ ಕೈಗೊಳ್ಳಬಹುದು?
ಬಾಹ್ಯ ಸಾಲಕ್ಕಿಂತ ಆಂತರಿಕ ಸಾಲ ಎಷ್ಟೋ ಉತ್ತಮ. ಜಿಡಿಪಿಯ ಶೇ. 60ರಷ್ಟರವರೆಗೆ ಸಾಲ ಇದ್ದರೂ ಅದನ್ನು ಮುಂದಿನ ದಿನಗಳಲ್ಲಿ ನಿಭಾಯಿಸಬಹುದು. ಆದ್ದರಿಂದ ಭಾರತ ಈ ನಿಟ್ಟಿನಲ್ಲಿ ದೇಶೀಯ ಬಂಡವಾಳ ಆಕರ್ಷಿಸಬೇಕು. ಸರ್ವಿಸ್, ಸಂಸ್ಕರಿತ ಆಹಾರ, ಜವಳಿ, ಕರಕುಶಲ ವಸ್ತು ಇತ್ಯಾದಿಯನ್ನು ರಫ್ತು ಮಾಡುವತ್ತ ಗಮನ ಕೊಡಬೇಕು ಆರ್ಥಿಕ ತಜ್ಞ ಆರ್.ಪಿ. ಗುಪ್ತಾ ಸಲಹೆ ನೀಡುತ್ತಾರೆ.
ಎಂಎಸ್ಎಂಇ ಕ್ಷೇತ್ರದಲ್ಲಿ ತುರ್ತಾಗಿ ಸುಧಾರಣೆಗಳಾಗಬೇಕಿದೆ. ಇಲ್ಲಿ ಬಹಳ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಸೃಷ್ಟಿ ಸಾಧ್ಯತೆ ಇದೆ. ಇಂಧನ, ಗೊಬ್ಬರ, ಆಹಾರ, ಔಷಧ, ಎಲೆಕ್ಟ್ರಾನಿಕ್ ಚಿಪ್ ಮತ್ತು ಅಪರೂಪದ ಖನಿಜ ಇವುಗಳಲ್ಲಿ ಭಾರತ ಸ್ವಾವಲಂಬನೆ ಸಾಧಿಸಬೇಕು. ಉಷ್ಣ ಕಲ್ಲಿದ್ದಲು ಆಮದು ನಿಲ್ಲಿಸಿ ದೇಶೀಯವಾಗಿಯೇ ಉತ್ಪಾದನೆ ಮಾಡಬೇಕು. ತೈಲ ಮತ್ತು ಅನಿಲದ ನಿಕ್ಷೇಪಗಳನ್ನು ಪತ್ತೆ ಹಚ್ಚುವ ಕಾರ್ಯ ಚುರುಕುಗೊಳಿಸಬೇಕು. ಚಿನ್ನದ ಆಮದನ್ನು ಸಾಕಷ್ಟು ಕಡಿಮೆ ಮಾಡಬೇಕು ಎಂದು ಆರ್ ಪಿ ಗುಪ್ತಾ ಹೇಳುತ್ತಾರೆ.
ಆರ್ ಪಿ ಗುಪ್ತಾ ಅವರು "ಟರ್ನ್ ಅರೌಂಡ್ ಇಂಡಿಯಾ 2020" ಪುಸ್ತಕದ ಕರ್ತೃವಾಗಿದ್ದು, ತಮ್ಮ ಪುಸ್ತಕದಲ್ಲೂ ಅವರು ಹಲವು ವಿಚಾರಗಳನ್ನು ಪ್ರಸ್ತಾಪಿಸಿ ಸಲಹೆಗಳನ್ನು ನೀಡಿದ್ದಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications