ಮೋದಿ ಅಲ್ಲದಿದ್ದರೆ ಭಾರತದ ಮುಂದಿನ ಪ್ರಧಾನಿ ಯಾರಾಗಬೇಕು?
ನವದೆಹಲಿ, ಜನವರಿ 26 : ಈ ಕ್ಷಣ ಲೋಕಸಭೆ ಚುನಾವಣೆ ನಡೆದರೆ ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಸೀಟು ಗಿಟ್ಟಿಸಲಿವೆ, ಯಾವ ಮೈತ್ರಿಕೂಟಕ್ಕೆ ಸರಕಾರ ರಚಿಸಲು ಅನುಕೂಲವಾಗಲಿದೆ ಎಂಬ, ಇಂಡಿಯಾ ಟುಡೇ-ಕಾರ್ವಿ 'ಮೂಡ್ ಆಫ್ ದಿ ನೇಷನ್' ಸಮೀಕ್ಷೆ ಹಲವಾರು ಸಾಧ್ಯತೆಗಳನ್ನು ಹೊರಹಾಕಿದೆ.
ಕಳೆದ 2014ರ ಚುನಾವಣೆಗೆ ಹೋಲಿಸಿದರೆ ಭಾರತೀಯ ಜನತಾ ಪಕ್ಷದ ನೇತೃತ್ವವಿರುವ ಎನ್ಡಿಎ ಆಘಾತಕಾರಿಯಾಗಿ ಕಡಿಮೆ ಸೀಟುಗಳನ್ನು ಗೆಲ್ಲಲಿದೆ ಎಂದು ಮೂಡ್ ಆಫ್ ದಿ ನೇಷನ್ ಸಮೀಕ್ಷೆ ಹೇಳಿದೆಯಾದರೂ, ಪ್ರಧಾನ ಮಂತ್ರಿ ಆಯ್ಕೆಗೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರಿಗೆ ಪರ್ಯಾಯವಿಲ್ಲ ಎಂಬ ಸಂಗತಿಯೂ ಬಯಲಾಗಿದೆ.
ಇಂಡಿಯಾ ಟುಡೇ ಸಮೀಕ್ಷೆ: ಅತಂತ್ರ ಪರಿಸ್ಥಿತಿ ನಿರ್ಮಾಣ, ಎನ್ಡಿಎಗೆ 99 ಸ್ಥಾನ ಕಮ್ಮಿ
ಅಪನಗದೀಕರಣ, ಸರಕು ಮತ್ತು ಗ್ರಾಹಕ ತೆರಿಗೆ ಹೇರಿಕೆ, ರಫೇಲ್ ಡೀಲ್ ಗೆ ಸಂಬಂಧಿಸಿದಂತೆ ನರೇಂದ್ರ ಮೋದಿಯವರು ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರೂ, ಈಗಲೂ ಅವರೇ ಪ್ರಧಾನಿ ಹುದ್ದೆಗೆ ಪ್ರಥಮ ಆದ್ಯತೆಯಾಗಿದ್ದಾರೆ ಎಂಬುದು ವೇದ್ಯವಾಗಿದೆ. ಈ ಕಾರಣದಿಂದಾಗಿಯೇ ನರೇಂದ್ರ ಮೋದಿ ಅವರಿಗೆ ಪರ್ಯಾಯವಾಗಿ ಯಾವ ನಾಯಕರು ಪ್ರಧಾನಿ ಹುದ್ದೆಯನ್ನು ಅಲಂಕರಿಸಲು ಅರ್ಹತೆ ಅಥವಾ ಸಾಮರ್ಥ್ಯ ಪಡೆದಿದ್ದಾರೆ ಎಂದು ಕೂಡ ಇಂಡಿಯಾ ಟುಡೇ- ಕಾರ್ವಿ ಸಮೀಕ್ಷೆ ನಡೆಸಿದೆ.
ಲೋಕಸಭೆ ಚುನಾವಣೆ ಇನ್ನು ಕೆಲವೇ ತಿಂಗಳು ಇರುವಾಗ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ದೇಶದ ಜನರ ನಾಡಿಮಿಡಿತವನ್ನು ಅರಿಯುವ ಯತ್ನ ಇಂಡಿಯಾ ಟುಡೇ-ಕಾರ್ವಿ ಜಂಟಿ ಸಮೀಕ್ಷೆ ಮಾಡಿದೆ. ಇದರಲ್ಲಿ ದೇಶದಾದ್ಯಂತ 13 ಸಾವಿರ ಜನರು ಭಾಗವಹಿಸಿದ್ದು, ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಇದೇ ಅಭಿಪ್ರಾಯ ಅಂತಿಮ ಅಂತಲೂ ಹೇಳಲು ಸಾಧ್ಯವಿಲ್ಲ.
ಇಂಡಿಯಾ ಟುಡೆ ಸಮೀಕ್ಷೆ: ಲೋಕಸಭೆ ಚುನಾವಣೆ ಯಾವ ಪಕ್ಷಕ್ಕೆ ಗೆಲುವು?
ಒಂದು ವೇಳೆ ವಿರೋಧ ಪಕ್ಷಗಳಿಂದ ಯಾವ ಅಭ್ಯರ್ಥಿಯನ್ನು ಪ್ರಧಾನಿ ಹುದ್ದೆಯಲ್ಲಿ ನೋಡಬಯಸುತ್ತೀರಿ ಎಂದು ಭಾರತೀಯರನ್ನು ಕೇಳಿದಾಗ, ಪ್ರಮುಖವಾಗಿ ತೇಲಿಬಂದ ಹೆಸರು, ಮಾಯಾವತಿಯೂ ಅಲ್ಲ, ಮಮತಾ ಬ್ಯಾನರ್ಜಿಯೂ ಅಲ್ಲ, ಚಂದ್ರಬಾಬು ನಾಯ್ಡುವೂ ಅಲ್ಲ, ಅರವಿಂದ್ ಕೇಜ್ರಿವಾಲರೂ ಅಲ್ಲ, ಅಖಿಲೇಶ್ ಯಾದವ್ ಕೂಡ ಅಲ್ಲ. ಬದಲಿಗೆ, ಕಾಂಗ್ರೆಸ್ ಅಧ್ಯಕ್ಷ, ನರೇಂದ್ರ ಮೋದಿಯವರ ಪ್ರಖರ ಟೀಕಾಕಾರ ರಾಹುಲ್ ಗಾಂಧಿ ಅವರು.
ಬಹುಮತದಾರರ ಆಯ್ಕೆ ರಾಹುಲ್ ಗಾಂಧಿ
ನರೇಂದ್ರ ಮೋದಿಯವರನ್ನು ಬದಲಾಯಿಸುವಂಥ ಸನ್ನಿವೇಶ ಎದುರಾದರೆ ರಾಹುಲ್ ಗಾಂಧಿ ಅವರೇ ಪ್ರಧಾನಿ ಆಗಬೇಕು, ಅವರೇ ಸೂಕ್ತ ವ್ಯಕ್ತಿ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇ.52ರಷ್ಟು ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನರೇಂದ್ರ ಮೋದಿಯವರಿಗೆ ಪರ್ಯಾಯವಾಗಿ ಪ್ರಧಾನಿ ಹುದ್ದೆಗೆ ಯಾರು ಅತ್ಯಂತ ಸೂಕ್ತ ವ್ಯಕ್ತಿ ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು. ಈ ಸಮೀಕ್ಷೆಯಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ನ ನಾಯಕಿ ಮಮತಾ ಬ್ಯಾನರ್ಜಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಕಾಂಗ್ರೆಸ್ ನ ಹಿರಿಯ ಧುರೀಣ ಪಿ. ಚಿದಂಬರಂ ಮುಂತಾದವರ ಹೆಸರನ್ನು ಸೂಚಿಸಲಾಗಿತ್ತು.
ಅಗ್ರಸ್ಥಾನದಲ್ಲಿ ರಾಹುಲ್ ಗಾಂಧಿ
ಪ್ರಧಾನಿ ಹುದ್ದೆಯ ಮೇಲೆ ಹಲವಾರು ನಾಯಕರು ಕಣ್ಣಿಟ್ಟಿದ್ದಾರಾದರೂ, ರಾಹುಲ್ ಗಾಂಧಿ ಅವರ ಹತ್ತಿರ ಕೂಡ ಯಾರೂ ಬಂದಿಲ್ಲ. ರಾಹುಲ್ ಗಾಂಧಿ ಅವರಿಗೆ ಶೇ.52ರಷ್ಟು ಮತಗಳು ಬಿದ್ದಿದ್ದರೆ, ಎರಡನೇ ಸ್ಥಾನದಲ್ಲಿ, ಇತ್ತೀಚೆಗೆ ಕೋಲ್ಕತಾದಲ್ಲಿ ಮಹಾಘಟಬಂಧನದ ಭಾರೀ ಸಮಾವೇಶ ಏರ್ಪಡಿಸಿದ್ದ ಮಮತಾ ಬ್ಯಾನರ್ಜಿ ಅವರಿಗೆ ಶೇ.8ರಷ್ಟು ಮತಗಳು ಬಿದ್ದಿವೆ. ಇದೀಗ ತಾನೆ ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಿರುವ ಪ್ರಿಯಾಂಕಾ ಗಾಂಧಿ ವದ್ರಾ ಮತ್ತು ಅಖಿಲೇಶ್ ಯಾದವ್ ಅವರಿಗೆ ಅವರಿಗೆ ಶೇ.5ರಷ್ಟು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶೇ.4ರಷ್ಟು ಮತಗಳು ಬಂದಿವೆ. ಈ ಪಟ್ಟಿಯಲ್ಲಿ ನಿತಿಶ್ ಕುಮಾರ್, ಸೋನಿಯಾ ಗಾಂಧಿ ಅವರನ್ನು ಕೂಡ ಪರಿಗಣಿಸಲಾಗಿತ್ತು.
ರಾಜಕಾರಣಕ್ಕೆ ಪ್ರಿಯಾಂಕ: ಶಾ, ಮೋದಿಗೆ ರಾಹುಲ್ 'ಸರ್ಜಿಕಲ್ ಸ್ಟ್ರೈಕ್'
ಈಗಲೂ ಮೋದಿಯವರೇ ಜನಪ್ರಿಯ ನಾಯಕ
ಇನ್ನು ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರ ಜನಪ್ರಿಯತೆಯನ್ನು ತುಲನೆ ಮಾಡಿ ನೋಡಿದರೆ, ರಾಹುಲ್ ಗಾಂಧಿ ಅವರು ಇತ್ತೀಚಿನ ವರ್ಷಗಳಲ್ಲಿ ಅವರ ಜನಪ್ರಿಯತೆಯ ಗ್ರಾಫ್ ಸಾಕಷ್ಟು ಏರಿಕೆ ಕಂಡಿದೆಯಾದರೂ, ಅವರು ನರೇಂದ್ರ ಮೋದಿಯವರಿಗೆ ಈಗಲೂ ಸರಿಸಮಾನರಲ್ಲ ಎಂಬ ಅಭಿಪ್ರಾಯವೇ ವ್ಯಕ್ತವಾಗಿದೆ. ಶೇ.46ರಷ್ಟು ಮಂದಿ ನರೇಂದ್ರ ಮೋದಿಯವರೇ ಮತ್ತೆ ಪ್ರಧಾನಿ ಆಗಬೇಕು ಎಂದು ಇಚ್ಛಿಸುತ್ತಿದ್ದರೆ, ಶೇ.34ರಷ್ಟು ಮಾತ್ರ ರಾಹುಲ್ ಗಾಂಧಿ ಪ್ರಧಾನಿ ಆಗಬೇಕು ಎಂಬ ಅಭಿಮತ ವ್ಯಕ್ತಪಡಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ನರೇಂದ್ರ ಮೋದಿ ಮತ್ತು ರಾಹುಲ್ ಗಾಂಧಿ ಅವರ ನಡುವೆಯೇ ನೇರಾನೇರ ಸ್ಪರ್ಧೆ ಇದೆ ಎನ್ನುವುದನ್ನು ಯಾರಿಂದಲೂ ಅಲ್ಲಗಳೆಯಲು ಸಾಧ್ಯವಿಲ್ಲ. ಇಬ್ಬರ ನಡುವಿನ ಜನಪ್ರಿಯತೆ ಅಂತರ ಕೇವಲ ಶೇ.12ರಷ್ಟು ಮಾತ್ರವಿದೆ.
ಜನಪ್ರಿಯತೆಯ ಗ್ರಾಫ್ ನಲ್ಲಿ ರಾಹುಲ್ ಏರಿಕೆ
ಗುಜರಾತ್ ಚುನಾವಣೆಯ ನಂತರ ಜನಪ್ರಿಯತೆಯ ಮಟ್ಟವನ್ನು ರಾಹುಲ್ ಗಾಂಧಿ ಸಾಕಷ್ಟು ಹೆಚ್ಚಿಸಿಕೊಂಡಿದ್ದಾರೆ. ತಮ್ಮ ಸುತ್ತ ಉತ್ತಮ ಯುವ ತಂಡವನ್ನು ಕಟ್ಟಿಕೊಂಡಿದ್ದಾರೆ. ಸರಕಾರದ ವಿಫಲತೆಯನ್ನು ಜನರಿಗೆ ಮನದಟ್ಟು ಮಾಡಿಸುವಲ್ಲಿ ತಕ್ಕಮಟ್ಟಿಗೆ ಯಶಸ್ವಿಯೂ ಆಗುತ್ತಿದ್ದಾರೆ. ಸಾಕಷ್ಟು ಗುಡಿಗಳನ್ನು ಸುತ್ತಿ,ಹೋದ ಜನರ ಮನಗೆಲ್ಲಲು ಯತ್ನಿಸಿದ್ದಾರೆ. ಇದರ ಪರಿಣಾಮವಾಗಿ ಇತ್ತೀಚೆಗೆ ನಡೆದ 5 ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ಸ್ಥಾಪಿಸುವಂತಾಗಿದೆ. ಇಲ್ಲಿ ಯಾವುದೇ ಚುನಾವಣಾಪೂರ್ವ ಮೈತ್ರಿ ಮಾಡಿಕೊಂಡಿಲ್ಲವೆನ್ನುವುದು ಗಮನಿಸಬೇಕಾದ ಸಂಗತಿ.
ಪ್ರಿಯಾಂಕಾ ಎಂಟ್ರಿ ರಾಹುಲ್ ದೌರ್ಬಲ್ಯದ ಸೂಚಕವಾ?
ರಾಹುಲ್ ಜನಪ್ರಿಯತೆ ಇನ್ನಷ್ಟು ಹೆಚ್ಚಿದರೂ ಅಚ್ಚರಿಯಿಲ್ಲ. ದಶಕಗಳ ಹಿಂದೆ ತೆರೆಯ ಮರೆಯಿಂದಲೇ ತಮ್ಮ ರಾಜಕೀಯ ದಾಳಗಳನ್ನು ಉರುಳಿಸುತ್ತಿದ್ದ ಪ್ರಿಯಾಂಕಾ ಗಾಂಧಿ ವದ್ರಾ ಅವರು ಈ ಬಾರಿ ಅಧಿಕೃತವಾಗಿ ರಾಜಕೀಯ ರಂಗಪ್ರವೇಶ ಮಾಡಿದ್ದಲ್ಲದೆ, ಚುನಾವಣೆಗೂ ನಿಲ್ಲುವ ಸೂಚನೆ ನೀಡಿರುವುದರಿಂದ, ಇದು ರಾಹುಲ್ ಗಾಂಧಿ ಅವರಿಗೂ ವರದಾನ ಆಗುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. ಆದರೆ, ರಾಹುಲ್ ಅವರಲ್ಲಿ ಅಷ್ಟೊಂದು ಆತ್ಮವಿಶ್ವಾಸ ಇಲ್ಲದಿದ್ದರಿಂದಲೇ ಸಹೋದರಿ ಅವರ ನೆರವಿಗೆ ಬರಬೇಕಾಯಿತು, ಇದು ರಾಹುಲ್ ಅವರ ಸೋಲು ಎಂದೂ ವ್ಯಾಖ್ಯಾನಿಸಲಾಗುತ್ತಿದೆ. ಜನಮನದಲ್ಲಿ ಏನಿದೆಯೋ ಅದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ನಂತರವಷ್ಟೇ ಗೊತ್ತಾಗಲಿದೆ.
ಅಚ್ಚರಿ ಆಟಗಾರ್ತಿಯಾಗಿ ಕಣಕ್ಕೆ ಇಳಿದಿರುವ ಪ್ರಿಯಾಂಕಾ, ಕಾಂಗ್ರೆಸ್ ನ ಗೆಲ್ಲಿಸಬಹುದೆ?