ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ತೆರಳುವುದು ಹೇಗೆ?
ತಿರುವನಂತಪುರಂ, ನವೆಂಬರ್ 15: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯ ನವೆಂಬರ್ 16 ರಿಂದ ಮಂಡಲ ಪೂಜಾ ಮಹೋತ್ಸವದ ನಿಮಿತ್ತ ತೆರೆಯಲ್ಪಡುತ್ತಿದೆ.
ನವೆಂಬರ್ 27 ರವರೆಗೆ ದೇವಾಲಯಕ್ಕೆ ಭೇಟಿ ನೀಡಲು ಭಕ್ತರಿಗೆ ಅವಕಾಶ ನೀಡಲಾಗಿದ್ದು, ಲಕ್ಷಾಂತರ ಭಕ್ತರು ಭಗವಂತ ಅಯ್ಯಪ್ಪನ ದರ್ಶನ ಪಡೆಯಲಿದ್ದಾರೆ.
ಏನಿಲ್ಲವೆಂದರೂ ಶಬರಿಮಲೆಗೆ ಪ್ರತಿವರ್ಷ 40-50 ದಶಲಕ್ಷ ಭಕ್ತರು ಆಗಮಿಸುತ್ತಾರೆ. ಸುಪ್ರೀಂ ಕೋರ್ಟ್ ಮಹಿಳೆಯರಿಗೂ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿರುವುದರಿಂದ ಭಕ್ತರ ಸಂಖ್ಯೆ ಮತ್ತಷ್ಟು ಹೆಚ್ಚು ಸಾಧ್ಯತೆ ಇದೆ.
ಈಗಾಗಲೇ ಈ ವರ್ಷ ಹತ್ತು ಬಾರಿ ದೇವಾಲಯವನ್ನು ಭಕ್ತರಿಗಾಗಿ ತೆರೆಯಲಾಗಿದ್ದು. ನವೆಂಬರ್ 16 ರಿಂದ ಡಿಸೆಂಬರ್ 27 ರವರೆಗೆ ದೇವಾಲಯದ ಬಾಗಿಲು ತೆರೆದಿರಲಿದೆ. ಭಕ್ತರು ಈ ಸಮಯದಲ್ಲಿ ಭೇಟಿ ನೀಡಬಹುದು. ನಂತರ ಮತ್ತೆ ಡಿಸೆಂಬರ್ 30 ಮತ್ತು ಜನವರಿ 15 ರಂದು ಮಕರ ಇಳಕ್ಕು (ಸಂಕ್ರಾಂತಿ) ನಿಮಿತ್ತ ದೇವಾಲಯದ ಬಾಗಿಲು ತೆರೆಯಲಿದೆ.
ಶಬರಿಮಲೆಗೆ ಕರ್ನಾಟಕದಿಂದ ತೆರಳುವ ಭಕ್ತರಿಗಾಗಿ ಕೆಲವು ಅಗತ್ಯ ಮಾಹಿತಿ ಇಲ್ಲಿದೆ.

ವಿಮಾನದಲ್ಲಿ ತೆರಳಬಹುದೇ?
ಶಬರಿಮಲೆಯು ಪಶ್ಚಿಮ ಘಟ್ಟದ ದಟ್ಟ ಕಾಡು ಪ್ರದೇಶದಲ್ಲಿ ಬರುತ್ತದೆ. ಕೊಚ್ಚಿ ಮತ್ತು ತಿರುವನಂತಪುರಂಗಳು ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣಗಳು. ಕೊಚ್ಚಿ ವಿಮಾನ ನಿಲ್ದಾಣದಿಂದ 160 ಕಿ.ಮೀ. ಮತ್ತು ತಿರುವನಂತಪುರಂ ವಿಮಾನ ನಿಲ್ದಾಣದಿಂದ 170 ಕಿ.ಮೀ.ದೂರ ರಸ್ತೆ ಮಾರ್ಗವಾಗಿ ಇಲ್ಲಿಗೆ ಆಗಮಿಸಬೇಕಾಗುತ್ತದೆ.

ರೈಲಿನಲ್ಲಿ ತೆರಳಬಹುದೇ?
ಶಬರಿಮಲೆ ನೇರವಾಗಿ ಸಂಪರ್ಕ ಹೊಂದಿರುವ ಯಾವುದೇ ರೈಲಿನ ವ್ಯವಸ್ಥೆಯಿಲ್ಲ. ಬೆಂಗಳೂರು ಅಥವಾ ಮಂಗಳೂರಿನಿಂದ ತೆರಳುವ ಪ್ರಯಾಣಿಕರಿಗೆ ಹತ್ತಿರದ ರೈಲ್ವೇ ನಿಲ್ದಾಣ ಎಂದರೆ ಕೊಟ್ಟಾಯಂ. ಕೊಟ್ಟಾಯಂನಿಂದ ಶಬರಿಮಲೆಗೆ ಮತ್ತೆ ರಸ್ತೆ ಮಾರ್ಗವಾಗಿ 90 ಕಿ.ಮೀ. ಪ್ರಯಾಣ ಮಾಡಬೇಕಾಗುತ್ತದೆ.

ರಸ್ತೆಮಾರ್ಗವಾಗಿ...
ಶಬರಿಮಲೆಗೆ ರಸ್ತೆ ಮಾರ್ಗವಾಗಿ ಬರುವ ಭಕ್ತಾದಿಗಳೇ ಹೆಚ್ಚು. ಕರ್ನಾಟಕದಿಂದ ತೆರಳುವ ಪ್ರಯಾಣಿಕರು ತ್ರಿಶೂರ್ ಗೆ ತೆರಳಿದರೆ ಅಲ್ಲಿಂದ 210 ಕಿ.ಮೀ. ರಸ್ತೆ ಮಾರ್ಗವಾಗಿ ಚಲಿಸಬೇಕು.

ಪೂಜಾ ವೇಳೆ
ಬೆಳಿಗ್ಗೆ 3:30 ರಿಂದ ಬೆಳಿಗ್ಗೆ 7:00 ಮತ್ತು ಬೆಳಿಗ್ಗೆ 8:30 ರಿಂದ 11:00 ಗಂಟೆಯವರೆಗೆ ದೇವಾಲಯದ ನೆಯ್ಯಾಭಿಶೇಗಂ(ತುಪ್ಪದ ಅಭಿಷೇಕ) ನ ಸಮಯ. ದೇವಾಲಯವನ್ನು ಸಮಾನ್ಯವಾಗಿ ಬೆಳಿಗ್ಗೆ 3 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ತೆರೆಯಲಾಗುತ್ತದೆ. ವಿಶೇಷ ಪೂಜೆಯ ಸಮಯದಲ್ಲಿ ಭಕ್ತಾದಿಗಳು ಬೆಳಿಗ್ಗೆ 3 ರಿಂದ 11 ಗಂಟೆಯವರೆಗೆ ದರ್ಶನ ಪಡೆಯಬಹದು.

ದೇವಾಲಯದ ವಿಳಾಸ
ಶಬರಿಮಲೆ ಅಯ್ಯಪ್ಪ ದೇವಾಲಯ
ಪೆರುನಾಡ್ ಗ್ರಾಮ ಪಂಚಾಯತ್
ಪಠಾನ್ಮಿತ್ತ ಜಿಲ್ಲೆ
ಕೇರಳ
ಭಾರತ- 689662











Click it and Unblock the Notifications