ಭರವಸೆ ಈಡೇರಿಸಲು ಎಲ್ಲಿಂದ ದುಡ್ಡು ತರುತ್ತವೆ ಜೆಡಿಎಸ್-ಕಾಂಗ್ರೆಸ್?
'ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರಕಾರ ಹೆಚ್ಚು ಕಾಲ ಉಳಿಯಲ್ಲ' ಅನ್ನೋ ಮಾತೇ ಪದೇಪದೇ ಕೇಳಿಬರುತ್ತಿದೆ. ಹೌದಾ, ಏಕೆ ಇಂಥ ಮಾತು ಈಗಲೇ ಕೇಳಿಬರುತ್ತಿದೆ? ಅದಕ್ಕೆ ಕಾರಣ ಏನು ಎಂಬುದರ ವಿಶ್ಲೇಷಣೆ ಇಲ್ಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಜನಾದೇಶ ಇಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಪಕ್ಷ ಸ್ವತಃ ಮುಂದೆ ಬಂದು, ಸರಕಾರ ರಚನೆಗೆ ಜೆಡಿಎಸ್ ಗೆ ಬೆಂಬಲ ಘೋಷಿಸಿದ್ದರ ಹಿಂದೆ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಏಕೈಕ ಲೆಕ್ಕಾಚಾರ ಇತ್ತು.
ಈ ಮೈತ್ರಿ ಹಾಗೂ ಸೂತ್ರದ ಹಿಂದೆ ರಾಷ್ಟ್ರಮಟ್ಟದ ನಾಯಕರ ಮಧ್ಯಸ್ಥಿಕೆ ಇದೆ ಎಂಬುದು ಈಗೇನೂ ರಹಸ್ಯವಾಗಿ ಉಳಿದಿಲ್ಲ. ಆದರೆ ಈ ಹೊಂದಾಣಿಕೆ ಎಷ್ಟು ಕಾಲ ಮುಂದುವರಿಯಲಿದೆ ಎಂಬುದು ಮಾತ್ರ ದೊಡ್ಡ ಪ್ರಶ್ನೆ. ಮುಂದಿನ ವರ್ಷದ ಲೋಕಸಭೆ ಚುನಾವಣೆ ವೇಳೆ ಒಂದು ವೇಳೆ ಮತ್ತೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ...
ಅಥವಾ ಕಾಂಗ್ರೆಸ್ ಗೆ ಅಧಿಕಾರ ಸಿಗುವಂತಾದರೆ.. ಈ ಎರಡು ಸನ್ನಿವೇಶ ಬೇರೆ ರೀತಿಯ ಪರಿಣಾಮಗಳನ್ನು ಬೀರುತ್ತದೆ. ಏಕೆಂದರೆ, ಕಾಂಗ್ರೆಸ್ ಗೆ ಮತ್ತೆ ಜನಾಶೀರ್ವಾದ ಸಿಗುವ ಸೂಚನೆ ಸಿಕ್ಕರೆ ಜೆಡಿಎಸ್ ಜತೆಗೆ ಮೈತ್ರಿ ಕಡಿದುಕೊಂಡು, ಚುನಾವಣೆಗೆ ಹೋಗುವ ಧೈರ್ಯ ಮಾಡಬಹುದು. ಒಂದು ವೇಳೆ ಬಿಜೆಪಿಯೇ ಮತ್ತೆ ಚುಕ್ಕಾಣಿ ಹಿಡಿದರೆ ಜೆಡಿಎಸ್ ಜತೆಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಅನಿವಾರ್ಯ ಆಗುತ್ತದೆ.

ಕಾಂಗ್ರೆಸ್ ಸೋಲುವುದನ್ನು ಆ ಪಕ್ಷದವರೇ ಬಯಸಿದ್ದರು
ಹಾಗೆ ನೋಡಿದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ನ ಇಂದಿನ ಸ್ಥಿತಿ ಏನಿದೆ ಅದನ್ನು ಆ ಪಕ್ಷದ ಹಲವು ನಾಯಕರು ಬಯಸಿದ್ದರು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗುವುದು ಹಲವು ಪ್ರಮುಖ ನಾಯಕರಿಗೆ ಬೇಕಿರಲಿಲ್ಲ. ಇನ್ನು ಜೆಡಿಎಸ್ ಜತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡರೆ ಸಿದ್ದರಾಮಯ್ಯ ಮೂಲೆಗುಂಪಾಗುತ್ತಾರೆ ಹಾಗೂ ತಾವು ಅಧಿಕಾರ ಕೇಂದ್ರದಲ್ಲಿ ಇರಬಹುದು ಎಂಬ ಕಾರಣಕ್ಕೆ ಇಂಥ ಸ್ಥಿತಿ ಏರ್ಪಡಲಿ ಎಂಬುದೇ ಹಲವರ ಅಪೇಕ್ಷೆಯಾಗಿತ್ತು.

ಜೆಡಿಎಸ್ ಗೆ ಪಕ್ಷ ಉಳಿಸಿಕೊಳ್ಳುವುದೇ ಕಷ್ಟ ಆಗ್ತಿತ್ತು
ಈ ಸಲ ಏನಾದರೂ ಜೆಡಿಎಸ್ ಅಧಿಕಾರ ಹಿಡಿಯುವುದು ಸಾಧ್ಯವಿರಲಿಲ್ಲ ಅಂದಿದ್ದರೆ ಆ ಪಕ್ಷ ಮತ್ತೊಂದು ಕಂತಿನಲ್ಲಿ ಚೂರು ಚೂರಾಗುವ ಎಲ್ಲ ಸಾಧ್ಯತೆ ಇತ್ತು. ರಾಷ್ಟ್ರೀಯ ಪಕ್ಷಗಳಿಗೇ ಹತ್ತು ವರ್ಷಗಳ ಕಾಲ ಅಧಿಕಾರದಲ್ಲಿ ಇಲ್ಲದಿರುವ ಸ್ಥಿತಿ ಎದುರಿಸುವುದು ಕಷ್ಟ. ಇನ್ನು ಜೆಡಿಎಸ್ ನಂಥ ಪ್ರಾದೇಶಿಕ ಪಕ್ಷಕ್ಕೆ ಹತ್ತು ವರ್ಷ ಅಧಿಕಾರದಿಂದ ದೂರ ಇರುವುದು ಕಷ್ಟ ಕಷ್ಟ. ಪಕ್ಷವನ್ನು ಉಳಿಸಿಕೊಳ್ಳುವುದು, ಸಂಘಟನೆಗೆ ಸಂಪನ್ಮೂಲ ಕ್ರೋಡೀಕರಿಸುವುದು, ಶಾಸಕರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವುದು ಇವ್ಯಾವುದೂ ಜೆಡಿಎಸ್ ಗೆ ಸುಲಭ ಇರಲಿಲ್ಲ. ಸ್ವತಃ ಕುಮಾರಸ್ವಾಮಿ ಅವರು ಆ ಕಾರಣಕ್ಕೆ, ಈ ಬಾರಿ ಅಧಿಕಾರಕ್ಕೆ ಬರಲಿಲ್ಲ ಅಂದರೆ ಬದುಕುವುದಿಲ್ಲ ಎಂಬ ಮಾತನಾಡುವಂತಾಯಿತು.

ಭರವಸೆ ಈಡೇರಿಸಲು ದುಡ್ಡು ಎಲ್ಲಿಂದ ತರ್ತಾರೆ?
ಇನ್ನು ಈ ಬಾರಿ ಚುನಾವಣೆ ವೇಳೆ ಕುಮಾರಸ್ವಾಮಿ ಅವರು ನೀಡಿದ ಭರವಸೆಗಳು ಜತೆಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಭರವಸೆಗಳು ಎರಡನ್ನೂ ಪೂರೈಸಲು ಹಣವನ್ನು ಎಲ್ಲಿಂದ ತರುತ್ತಾರೆ ಎಂಬುದೇ ಅತಿ ದೊಡ್ಡ ಪ್ರಶ್ನೆ. ಐವತ್ತೊಂದು ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವ ಕುಮಾರಸ್ವಾಮಿ ಭರವಸೆ ಈಡೇರಿಸಬೇಕಿದೆ. ಹಾಗೆ ಮಾಡಿದರೆ ಅದರ ಶ್ರೇಯವನ್ನು ಕಾಂಗ್ರೆಸ್ ಪಕ್ಷದ ಜತೆಗೆ ಜೆಡಿಎಸ್ ಹಂಚಿಕೊಳ್ಳಬೇಕಾಗುತ್ತದೆ. ಇದರ ಜತೆಗೆ ನೀಡಿದ ಹತ್ತಾರು ಭರವಸೆಗಳನ್ನು ಈಡೇರಿಸಲು ಆದಾಯ ಮೂಲ ಯಾವುದು? ರಾಜ್ಯ ಸರಕಾರದ ಮೇಲೆ ಈಗಾಗಲೇ ಅಪಾರ ಪ್ರಮಾಣದ ಸಾಲದ ಹೊರೆ ಇದೆ. ಈಗ ಕೊಟ್ಟ ಮಾತು ಉಳಿಸಿಕೊಳ್ಳದಿದ್ದರೆ ಕಾಂಗ್ರೆಸ್- ಜೆಡಿಎಸ್ ನ ಸರಿಯಾಗಿ ಹಣಿಯುವುದಕ್ಕೆ ಪ್ರಬಲವಾದ ಪ್ರತಿಪಕ್ಷವಾಗಿ ಬಿಜೆಪಿ ಇದೆ. ಇಂಥ ಸನ್ನಿವೇಶದಲ್ಲಿ ಸಚಿವ ಸಂಪುಟ, ನಿಗಮ- ಮಂಡಳಿ ರಚನೆಗಿಂತ ಹೆಚ್ಚಾಗಿ ರಾಜ್ಯ ಸರಕಾರದ ಆದಾಯವನ್ನು ಹೇಗೆ ಹೆಚ್ಚಿಸುತ್ತಾರೆ, ಜತೆಗೆ ನೀಡಿದ ಭರವಸೆಗಳನ್ನು ಪೂರೈಸಲು ಬೇಕಾದ ಲಕ್ಷಾಂತರ ಕೋಟಿ ರುಪಾಯಿ ಎಲ್ಲಿಂದ ತರುತ್ತಾರೆ ಎಂಬ ಪ್ರಶ್ನೆಗಳಿವೆ.

ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ದೋಸ್ತಿ ನಿರ್ಧಾರ
ಕಾಂಗ್ರೆಸ್ ಆಗಲೀ ಬಿಜೆಪಿ ಆಗಲೀ ಜೆಡಿಎಸ್ ಬಲಿಷ್ಠವಾಗುವುದನ್ನೋ ಅಸ್ತಿತ್ವದಲ್ಲಿ ಇರುವುದನ್ನೋ ಬಯಸುವುದಿಲ್ಲ. ಅದರಲ್ಲೂ ಕಾಂಗ್ರೆಸ್ ನ ಮತ ಬುಟ್ಟಿಯಲ್ಲಿ ಕೈ ಹಾಕುವ ಪರ್ಯಾಯ ಪಕ್ಷ ಜೆಡಿಎಸ್ ಗಟ್ಟಿಯಾದಷ್ಟೂ ಹೊಡೆತ ಬೀಳುವುದು ಕಾಂಗ್ರೆಸ್ ಗೇ. ಆದರೆ ಸದ್ಯದ ಸನ್ನಿವೇಶದಲ್ಲಿ ಬಿಜೆಪಿಯ ಸುನಾಮಿಯಿಂದ ತಪ್ಪಿಸಿಕೊಂಡರೆ ಸಾಕು ಎಂಬ ಸ್ಥಿತಿಯಲ್ಲಿ ಕಾಂಗ್ರೆಸ್ ಇರುವುದರಿಂದ ಕರ್ನಾಟಕದಲ್ಲಿ ಹೇಗಾದರೂ ಸರಿ ಅಧಿಕಾರದಲ್ಲಿರಲಿ ಎಂಬ ಕಾರಣಕ್ಕೆ ಮೈತ್ರಿ ನಿರ್ಧಾರಕ್ಕೆ ಬಂದಿದೆ. ಆದರೆ ಒಮ್ಮೆ ತನ್ನ ನೆಲೆ ಗಟ್ಟಿ ಆಗುತ್ತಿದ್ದಂತೆ ಕಾಂಗ್ರೆಸ್ ಮೊದಲಿಗೆ ಕಡಿದು ಹಾಕಲು ನೋಡುವುದು ಜೆಡಿಎಸ್ ಪಕ್ಷವನ್ನೇ. ಆ ಕಾರಣದಿಂದಲೇ ಈ ಮೈತ್ರಿ ಬಹಳ ಕಾಲ ಬಾಳಲ್ಲ ಎಂಬ ಮಾತು ಕೇಳಿಬರುತ್ತಿದೆ. ಆದರೆ ಲೋಕಸಭೆ ಚುನಾವಣೆಯ ಫಲಿತಾಂಶ ಆಧಾರದಲ್ಲೇ ಈ ದೋಸ್ತಿಯ ಭವಿಷ್ಯ ಅಡಗಿರುವುದು ಸತ್ಯ.












Click it and Unblock the Notifications