ರಾಕೇಶ್ ತಿಕೈಟ್ ಹೋರಾಟದ ಹಾದಿ ಮತ್ತು ಆಸ್ತಿ ವಿವರ
ನವದೆಹಲಿ, ಫೆಬ್ರವರಿ.12: ವಿವಾದಿತ ಮೂರು ಕೃಷಿ ಕಾಯ್ದೆಗಳ ವಿರುದ್ಧ ನವದೆಹಲಿಯ ಮೂರು ಗಡಿಯಲ್ಲಿ ರೈತರ ಹೋರಾಟದ ಕೂಗು ಮುಗಿಲು ಮುಟ್ಟುವಂತಿದೆ. ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಾಯ್ದೆಗಳನ್ನು ರದ್ದುಗೊಳಿಸದ ಹೊರತು ರೈತರ ಪ್ರತಿಭಟನೆ ಕೈಬಿಡುವ ಮಾಡಿಲ್ಲ ಎಂದು ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ಉತ್ತರ ಪ್ರದೇಶ, ಹರಿಯಾಣ, ಪಂಜಾಬ್ ಸೇರಿದಂತೆ ಉತ್ತರ ಭಾರತದ ಬಹುತೇಕ ರಾಜ್ಯಗಳಲ್ಲಿ ರೈತರ ಪರ ಧ್ವನಿ ಎತ್ತುವುದಕ್ಕಾಗಿ "ಕಿಸಾನ್ ಮಹಾಪಂಚಾಯತ್" ಸಭೆಗಳನ್ನು ನಡೆಸಲಾಗುತ್ತಿದೆ. ಕೃಷಿ ಕಾಯ್ದೆಗಳು ರೈತವಿರೋಧಿ ಎಂದ ಒಕ್ಕೊರಲ ಕೂಗು ಈ ಸಭೆಗಳಲ್ಲಿ ಕೇಳಿ ಬರುತ್ತಿದೆ.
ವಿಶೇಷ ಸಂದರ್ಶನ: ಸರ್ಕಾರ ಮತ್ತು ರೈತರ ನಡುವೆ ಮಧ್ಯವರ್ತಿಯಾದರಾ ಸಚಿವರು?
ಉತ್ತರ ಪ್ರದೇಶ-ದೆಹಲಿಗೆ ಹೊಂದಿಕೊಂಡಿರುವ ಘಾಜಿಪುರ್ ಗಡಿಯಲ್ಲಿ ನವೆಂಬರ್.26ರಿಂದಲೂ ಕೃಷಿ ಕಾಯ್ದೆಗಳ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಈ ಎಲ್ಲ ರೈತರ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿರುವ ರೈತ ಮುಖಂಡನೇ ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥ ರಾಕೇಶ್ ತಿಕೈಟ್. ಇದೇ ರಾಕೇಶ್ ತಿಕೈಟ್ ಅವರ ಒಟ್ಟಾರಿ ಆಸ್ತಿಯ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದೆ. ಬಡ ಮತ್ತು ಮಧ್ಯಮ ವರ್ಗದ ರೈತರಿಗಾಗಿ ತಿಂಗಳುಗಟ್ಟಲೆ ಹೋರಾಡುವುಕ್ಕೆ ರಸ್ತೆಗೆ ಇಳಿದಿರುವ ರಾಕೇಶ್ ತಿಕೈಟ್ ಅವರ ವೈಯಕ್ತಿಕ ಬದುಕು, ರಾಜಕೀಯ ಮತ್ತು ಹೋರಾಟದ ಹಾದಿ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ರೈತ ಮುಖಂಡ ರಾಕೇಶ್ ತಿಕೈಟ್ ಬಾಲ್ಯದ ಜೀವನ
ಉತ್ತರ ಪ್ರದೇಶ ಮುಜಾಫರ್ ನಗರ್ ಜಿಲ್ಲೆಯ ಸಿಸೌಲಿ ಗ್ರಾಮದಲ್ಲಿ ಜೂನ್.04ರ 1969ರಂದು ರಾಕೇಶ್ ತಿಕೈಟ್ ಜನಿಸಿದರು. ಇವರ ತಂದೆ ಹೆಸರು ಮಹೇಂದ್ರ ಸಿಂಗ್ ತಿಕೈಟ್. ಎಲ್ಎಲ್ ಬಿ ಪದವಿ ವ್ಯಾಸಂಗ ಮಾಡಿದ ರಾಕೇಶ್ ತಿಕೈಟ್ ಅವರು 1985ರಲ್ಲಿ ಸುನಿತಾ ದೇವಿ ಎಂಬುವವರೊಂದಿಗೆ ವಿವಾಹವಾದರು. ಅದೇ ವರ್ಷ ದೆಹಲಿಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆಗಿ ವೃತ್ತಿ ಆರಂಭಿಸಿದರು. ಇವರಿಗೆ ಚರಣ್ ಸಿಂಗ್, ಸೀಮಾ ತಿಕೈಟ್ ಮತ್ತು ಜ್ಯೋತಿ ತಿಕೈಟ್ ಎಂಬ ಮಕ್ಕಳಿದ್ದಾರೆ.
ಹೋರಾಟದ ಹಾದಿಯಲ್ಲೇ ಬೆಳೆದು ಬಂದ ರಾಕೇಶ್ ತಿಕೈಟ್
ರಾಕೇಶ್ ತಿಕೈಟ್ ಅವರ ತಂದೆ ಮಹೇಂದ್ರ ಸಿಂಗ್ ತಿಕೈಟ್ ಕೂಡ ಭಾರತೀಯ ಕಿಸಾನ್ ಒಕ್ಕೂಟದ ಮಾಜಿ ಅಧ್ಯಕ್ಷರಾಗಿದ್ದು, ರೈತರ ಪರ ಹೋರಾಟ ಮತ್ತು ಚಳವಳಿಗಳಲ್ಲಿ ತೊಡಗಿಸಿಕೊಂಡಿದ್ದರು. ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಫೈರಿಂಗ್ ನಡೆಸಿದ ಘಟನೆ ವಿರುದ್ಧ ಪ್ರತಿಭಟಿಸುವುದಕ್ಕಾಗಿ ಮೊದಲ ಬಾರಿಗೆ 1987ರಂದು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕರ್ಮುಖೇರಿ ಗ್ರಾಮದಲ್ಲಿ ಮಹೇಂದ್ರ ಸಿಂಗ್ ತಿಕೈಟ್ ಅವರ ನೇತೃತ್ವದಲ್ಲಿ ಭಾರತೀಯ ಕಿಸಾನ್ ಒಕ್ಕೂಟವನ್ನು ಸ್ಥಾಪಿಸಲಾಯಿತು. 1990ರ ದಶಕದಲ್ಲಿ ದೆಹಲಿ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗೆ ರಾಜೀನಾಮೆ ನೀಡಿದ ರಾಕೇಶ್ ತಿಕೈಟ್ ಕೂಡಾ ತಂದೆಯಂತೆ ರೈತ ಹೋರಾಟದಲ್ಲಿ ತೊಡಗಿಸಿಕೊಂಡರು.
ಬೆತ್ತ ಅಲ್ಲವೇ ಅಲ್ಲ; ದೆಹಲಿ ಪೊಲೀಸರ ಕೈಗೆ ಕಬ್ಬಿಣದ ಲಾಠಿ!
ರಾಕೇಶ್ ತಿಕೈಟ್ ಕೈ ಹಿಡಿಯಲಿಲ್ಲ ರಾಜಕೀಯ ಭವಿಷ್ಯ
ಸರ್ಕಾರಿ ಹುದ್ದೆಗೆ ರಾಜೀನಾಮೆ ನೀಡಿ ರೈತ ಹೋರಾಟದಲ್ಲಿ ಭಾಗಿಯಾದ ರಾಕೇಶ್ ತಿಕೈಟ್ ಎರಡು ಬಾರಿ ರಾಜಕೀಯದಲ್ಲೂ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರು. 2007ರಲ್ಲಿ ಮೊದಲ ಬಾರಿಗೆ ಮುಜಾಫರ್ ನಗರ್ ಜಿಲ್ಲೆ ಕಥೌಲಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2014ರ ಲೋಕಸಭಾ ಚುನಾವಣೆಗೆ ಅಮ್ರೋಹಾ ಜಿಲ್ಲೆಯಲ್ಲಿ ರಾಷ್ಟ್ರೀಯ ಲೋಕದಳ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ ಈ ಎರಡೂ ಚುನಾವಣೆಗಳಲ್ಲಿ ಮತದಾರರು ರಾಕೇಶ್ ತಿಕೈಟ್ ಅವರ ಕೈ ಹಿಡಿಯಲಿಲ್ಲ. ಎರಡು ಪ್ರಯತ್ನದಲ್ಲೂ ರಾಕೇಶ್ ತಿಕೈಟ್ ಸೋತರು.
ಒಟ್ಟು 44 ಬಾರಿ ಜೈಲು ಸೇರಿದ ರಾಕೇಶ್ ತಿಕೈಟ್
ಭಾರತೀಯ ಕಿಸಾನ್ ಒಕ್ಕೂಟದ ಮುಖ್ಯಸ್ಥರಾಗಿ ಹಲವು ರೈತಪರ ಹೋರಾಟದಲ್ಲಿ ಭಾಗಿಯಾದ ರಾಕೇಶ್ ತಿಕೈಟ್ ಒಟ್ಟು 44 ಬಾರಿ ಜೈಲುಶಿಕ್ಷೆಗೆ ಗುರಿಯಾಗಿದ್ದರು. ಮಧ್ಯಪ್ರದೇಶದಲ್ಲಿ ಭೂಸ್ವಾಧೀನ ಕಾಯ್ದೆ ವಿರುದ್ಧ ಪ್ರತಿಭಟನೆ ವೇಳೆ 39 ದಿನಗಳ ಕಾಲ ಸೆರೆವಾಸ ಅನುಭವಿಸಿದ್ದರು. ಕಬ್ಬಿನ ಬೆಲೆ ಏರಿಕೆಗೆ ಆಗ್ರಹಿಸಿದ ದೆಹಲಿಯ ಸಂಸತ್ ಎದುರು ಪ್ರತಿಭಟನೆ ನಡೆಸಿದ ರಾಕೇಶ್ ತಿಕೈಟ್ ರನ್ನು ತಿಹಾರ್ ಜೈಲಿಗೆ ಹಾಕಲಾಗಿತ್ತು. ರಾಜಸ್ಥಾನದಲ್ಲಿ ನಡೆದ ರೈತಪರ ಹೋರಾಟದಲ್ಲಿ ಭಾಗಿಯಾದ ಅವರನ್ನು ಜೈಪುರ್ ಜೈಲಿಗೆ ಕಳುಹಿಸಲಾಗಿತ್ತು. ಇತ್ತೀಚಿಗೆ ನವದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಕೇಶ್ ತಿಕೈಟ್ ವಿರುದ್ಧ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
2014ರಲ್ಲಿ ಸಲ್ಲಿಸಿದ ಅಫಿಡವಿಟ್ ಪ್ರಕಾರ ಆಸ್ತಿ
ಕಳೆದ 2014ರಲ್ಲಿ ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಲೋಕದಳ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ರಾಕೇಶ್ ತಿಕೈಟ್ ಅಂದು ತಮ್ಮ ಆಸ್ತಿ ಬಗ್ಗೆ ಘೋಷಿಸಿಕೊಂಡಿದ್ದರು. ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಒಟ್ಟು 4,25,18,038 ರೂಪಾಯಿ ಆಸ್ತಿಯನ್ನು ಹೊಂದಿದ್ದಾರೆ. ಈ ಪೈಕಿ ಜಮೀನಿನ ಮೌಲ್ಯವ 3,89 ಕೋಟಿ ರೂಪಾಯಿ ಆಗಿದೆ. ಚರಾಸ್ತಿ ಮೌಲ್ಯ 34,47,260 ರೂಪಾಯಿ ಆಗಿದೆ.
ನವದೆಹಲಿಯ ಮೂರು ಕಡೆಗಳಲ್ಲಿ ರೈತರ ಪ್ರತಿಭಟನೆ
ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಾದಿತ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ (ಸಬಲೀಕರಣ ಮತ್ತು ಸಂರಕ್ಷಣೆ) ಒಪ್ಪಂದ ಹಾಗೂ ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆಗಳ ವಿರುದ್ಧ ನವಂಬರ್.26 ರಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ನವದೆಹಲಿಯ ಸಿಂಘು ಗಡಿ, ಟಿಕ್ರಿ ಗಡಿ ಮತ್ತು ಘಾಜಿಪುರ್ ಗಡಿಯಲ್ಲಿ ಸಾವಿರಾರು ರೈತರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. 33 ರೈತ ಸಂಘಟನೆಗಳು ಈ ಹೋರಾಟಕ್ಕೆ ಕೈ ಜೋಡಿಸಿದ್ದು, ಇದೇ ರಾಕೇಶ್ ತಿಕೈಟ್ ಹೋರಾಟದ ನಾಯಕತ್ವ ಭಾರತೀಯ ಕಿಸಾನ್ ಒಕ್ಕೂಟ ಪ್ರಮುಖ ಪಾತ್ರ ವಹಿಸಿದೆ.