ಹಿಜಾಬ್ ವಿವಾದ: ಆರಂಭದಿಂದ ಕೋರ್ಟ್ವರೆಗೆ, ಇಲ್ಲಿದೆ ಟೈಮ್ಲೈನ್
ಬೆಂಗಳೂರು, ಫೆಬ್ರವರಿ, 09: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದವು ಕರ್ನಾಟಕದ ಹೆಚ್ಚಿನ ಕಾಲೇಜುಗಳಿಗೆ ವ್ಯಾಪಿಸಿದೆ. 2021ರ ಡಿಸೆಂಬರ್ನಲ್ಲಿ ಈ ಗದ್ದಲವನ್ನು ಆರಂಭ ಮಾಡಿದ ಉಡುಪಿ ಮಹಿಳಾ ಪಿಯು ಕಾಲೇಜಿನ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿ ಹೈಕೋರ್ಟ್ನಲ್ಲಿದೆ. ಈ ವಿಚಾರದಲ್ಲಿ ರಾಜಕೀಯ ಕೇಂದ್ರ ಸ್ಥಾನ ಪಡೆದುಕೊಂಡಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡುವೆ ಕೋಮು ವಿಭಜನೆಯಾಗುವ ಸ್ಥಿತಿ ಉಂಟಾಗಿದೆ.
ಹಿಜಾಬ್ ಧರಿಸಿದ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೊಂದೆಡೆ ಕೆಲವು ವಿದ್ಯಾರ್ಥಿಗಳು ನೀಲಿ ಶಾಲನ್ನು ಧರಿಸಿದ್ದಾರೆ. ಇವೆಲ್ಲದರ ನಡುವೆ ಸರ್ಕಾರ ಸಮವಸ್ತ್ರ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಹಿಜಾಬ್ ವಿವಾದವು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಇನ್ನೊಂದೆಡೆ ಶಾಂತಿಯನ್ನು ಕಾಪಾಡಬೇಕಾದ ಸಂಸದರು, ಶಾಸಕರುಗಳೇ "ತಾಲಿಬಾನೀಕರಣ" ಮತ್ತು "ಪಾಕಿಸ್ತಾನಕ್ಕೆ ಹೋಗಿ" ಎಂಬ ಹೇಳಿಕೆಗಳನ್ನು ನೀಡುತ್ತಿದ್ದು, ಇದು ರಾಜ್ಯದಲ್ಲಿ ಈ ವಿವಾದವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನೊಂದೆಡೆ ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಮುಖಂಡರು ಮುಸ್ಲಿಂ ವಿದ್ಯಾರ್ಥಿಗಳ ಬೆಂಬಲಕ್ಕೆ ಬಂದಿದ್ದಾರೆ.
ಶಿಕ್ಷಣದ ಮೂಲಭೂತ ಹಕ್ಕನ್ನು ಉಲ್ಲಂಘಿಸದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಇನ್ನೊಂದೆಡೆ ಎಡ ಸಂಘಟನೆಗಳು ವಿದ್ಯಾರ್ಥಿಗಳ ನಡುವೆ ಕೋಮು ದ್ವೇಷ ಹುಟ್ಟಿಸಿ ನಿಮ್ಮ ರಾಜಕೀಯ ಮಾಡಬೇಡಿ. ವಿದ್ಯಾರ್ಥಿಗಳು ನಿಜವಾದ ಸಮಸ್ಯೆಗಳ ಬಗ್ಗೆ ಗಮನಹರಿಸಿ ಎಂದು ಹೇಳುತ್ತಿದ್ದಾರೆ. ಹಾಗಾದರೆ ಈ ವಿವಾದ ಆರಂಭ ಆಗಿದ್ದು ಹೇಗೆ?, ಒಟ್ಟು ವಿವಾದ ಹೇಗಿದೆ ಎಂದು ತಿಳಿಯೋಣ, ಇಲ್ಲಿದೆ ಟೈಮ್ಲೈನ್ ಮುಂದೆ ಓದಿ..

ಹಿಜಾಬ್ ವಿವಾದ ಟೈಮ್ಲೈನ್ ಓದಿ...
ಡಿಸೆಂಬರ್ 2021: ಹಿಜಾಬ್ ವಿರುದ್ಧ ಕೇಸರಿ ಶಾಲುಗಳನ್ನು ಧರಿಸಿ ಬರುವ ವಿವಾದವೂ ಹೊಸದಲ್ಲ. ಆದರೆ ಇತ್ತೀಚೆಗೆ ಅದು ಕೋಮು ಬಣ್ಣವನ್ನು ಪಡೆದುಕೊಂಡಿದೆ. ಡಿಸೆಂಬರ್ 2021 ರಲ್ಲಿ ಈ ಕೋಮು ಅಲೆಯು ಪ್ರಾರಂಭವಾಯಿತು. ಉಡುಪಿ ಮಹಿಳಾ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳು ವಾರಗಟ್ಟಲೆ ಪ್ರತಿಭಟನೆ ನಡೆಸುವ ಮೂಲಕ ಈ ವಿವಾದ ಆರಂಭವಾಯಿತು. ಕಾಲೇಜಿನಲ್ಲಿ ಈ ಹಿಂದೆ ಎಲ್ಲಾ ಮುಸ್ಲಿಂ ವಿದ್ಯಾರ್ಥಿಗಳು ಕಾಲೇಜು ಆಗಮಿಸಿದ ಬಳಿಕ ಹಿಜಾಬ್ ತೆಗೆದು ಸಮವಸ್ತ್ರದಲ್ಲಿ ಇರುತ್ತಿದ್ದರು. ಆದರೆ ಈ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಆಗ್ರಹ ಮಾಡಿದರು. ಜಿಲ್ಲಾಧಿಕಾರಿ, ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ ಬಳಿಕ ಬಾಲಕಿಯರು ಇದೀಗ ಕರ್ನಾಟಕ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
3 ಜನವರಿ: ಚಿಕ್ಕಮಗಳೂರಿನ ಕೊಪ್ಪದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮವಸ್ತ್ರ ಮತ್ತು ಡ್ರೆಸ್ ಕೋಡ್ ಎಂಬುವುದು ಇದೆ. ಇಲ್ಲಿ ಹಿಂದೂ ವಿದ್ಯಾರ್ಥಿಗಳು ಸೋಮವಾರ ಕೇಸರಿ ಶಾಲು ಧರಿಸಿ ಧರಣಿ ಸತ್ಯಾಗ್ರಹ ನಡೆಸಿದರು. ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾಶ ನೀಡಿದರೆ ನಮಗೆ ಕೇಸರಿ ಶಾಲು ಧರಿಸಲು ಅವಕಾಶ ನೀಡಬೇಕು ಎಂದು ಆಗ್ರಹ ಮಾಡಿದರು.
6 ಜನವರಿ: ಮಂಗಳೂರಿನ ಪೊಂಪೈ ಕಾಲೇಜಿನಲ್ಲಿ ಇದೇ ರೀತಿ ನಡೆದಿದೆ. ಆ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಎಂದು ಹೇಳಿದರು.
31 ಜನವರಿ: ಉಡುಪಿ ಮಹಿಳಾ ಪಿಯು ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅವಕಾಶ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿದರು. ಈ ನಡುವೆ ಕರ್ನಾಟಕ ಸರ್ಕಾರವು ಎಲ್ಲಾ ಸರ್ಕಾರಿ ಕಾಲೇಜುಗಳು ಮತ್ತು ಶಾಲೆಗಳಿಗೆ ಸರ್ಕಾರಿ ಸಮಿತಿಯು ಡ್ರೆಸ್ ಕೋಡ್ ಕುರಿತು ಶಿಫಾರಸು ಮಾಡುವವರೆಗೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಳಿಕೊಂಡಿದೆ.

2 ಫೆಬ್ರವರಿ: ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳಿಗೆ ಕುಂದಾಪುರ ಸರ್ಕಾರಿ ಪಿಯು ಕಾಲೇಜಿನಲ್ಲಿ ಗೇಟಿನ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗಿಲ್ಲ. ತರಗತಿಗಳಿಗೆ ಹಾಜರಾಗಲು ಅವಕಾಶ ನೀಡುವಂತೆ ವಿದ್ಯಾರ್ಥಿನಿಯರು ಪ್ರಾಂಶುಪಾಲರಿಗೆ ಮನವಿ ಮಾಡುತ್ತಿರುವ ವಿಡಿಯೋ ವೈರಲ್ ಆಯಿತು. ಅದೇ ದಿನ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಸರ್.ಎಂ.ವಿಶ್ವೇಶ್ವರಯ್ಯ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇಂತಹದ್ದೇ ಘಟನೆ ನಡೆದಿದೆ.
3 ಫೆಬ್ರವರಿ: ಪ್ರತಿಭಟನೆಯು ಕುಂದಾಪುರದ ಮತ್ತೊಂದು ಕಾಲೇಜಿಗೆ ವ್ಯಾಪಿಸಿತು. ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶಕ್ಕೆ ಅವಕಾಶ ನೀಡದಂತೆ ಕಾಲೇಜು ಆಡಳಿತ ಮಂಡಳಿಯು ಹೇಳಿತು. ಬೈಂದೂರು ಸರಕಾರಿ ಪಿಯು ಕಾಲೇಜಿನಲ್ಲಿ ಹಿಂದುತ್ವವಾದಿ ಸಂಘಟನೆಗಳ ಬೆಂಬಲಿತ 300ಕ್ಕೂ ಹೆಚ್ಚು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಬೆಳಗಾವಿಯ ಸರ್ಕಾರಿ ಪಿಯು ಕಾಲೇಜಿನಲ್ಲೂ ಪ್ರತಿಭಟನೆಗಳು ನಡೆದವು.
4 ಫೆಬ್ರವರಿ: ಹಿಜಾಬ್ ವಿವಾವದ ಬಗ್ಗೆ ಹಲವಾರು ನಾಯಕರುಗಳು ಪ್ರತಿಕ್ರಿಯೆ ನೀಡಿದರು. ಇದು ಬಿಜೆಪಿಯ ಕುತಂತ್ರ ಎಂದು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಹೇಳಿದರು. ಇದೇ ಸಂದರ್ಭದಲ್ಲಿ ಕುಂದಾಪುರದಲ್ಲಿ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಶ್ರೀ ರಾಮ್ ಎಂದು ಘೋಷಣೆ ಕೂಗಿದ್ದಾರೆ. ಬೆಳಗಾವಿಯ ರಾಮದುರ್ಗ ಕಾಲೇಜಿನಲ್ಲೂ ಕೇಸರಿ ಶಾಲು ಕಂಡು ಬಂದಿತ್ತು. ಕರ್ನಾಟಕದ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿಯೂ ಸಮವಸ್ತ್ರ ಸಂಹಿತೆಯನ್ನೇ ಪಾಲಿಸಬೇಕು. ಹಿಜಾಬ್ ಅಥವಾ ಕೇಸರಿ ಶಾಲು ಧರಿಸಿ ಶಾಲಾ- ಕಾಲೇಜುಗಳಿಗೆ ಬರಲು ಯಾರಿಗೂ ಅವಕಾಶ ನೀಡುವುದಿಲ್ಲ. ಈ ಕುರಿತು ಕರ್ನಾಟಕ ಶಿಕ್ಷಣ ಕಾಯ್ದೆಯ ಅನ್ವಯ ಸುತ್ತೋಲೆ ಪ್ರಕಟಿಸಿದ್ದೇವೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟಪಡಿಸಿದರು.
5 ಫೆಬ್ರವರಿ: ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ನ ಕೈವಾಡ ಇದೆ ಎಂದು ಬಿಜೆಪಿ ಪಕ್ಷ ಆರೋಪ ಮಾಡಿದೆ. ಕುಂದಾಪುರ ಕಾಲೇಜಿನಲ್ಲಿ ಹಿಂದೂ ವಿದ್ಯಾರ್ಥಿನಿಯರು ಕೇಸರಿ ಶಾಲು ಧರಿಸಿ ಮೆರವಣಿಗೆ ನಡೆಸಿದರು. ರಾಷ್ಟ್ರಮಟ್ಟದಲ್ಲಿ ಈ ವಿಚಾರ ಚರ್ಚೆಗೆ ಗ್ರಾಸವಾಯಿತು. ಹಾಸನ, ಚಿಕ್ಕಮಗಳೂರಿನಲ್ಲೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಆಗಮಿಸಿದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಕರ್ನಾಟಕದಲ್ಲಿ ಬೇಟಿ ಬಚಾವೋ ಬೇಟಿ ಪಡಾವೋ ಬದಲಿಗೆ ಬೇಟಿ ಹಠಾವೋ ನಡೆಯುತ್ತಿದೆ ಎಂದು ಟೀಕೆ ಮಾಡಿದರು. ಕರ್ನಾಟಕದ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿ ಕರ್ನಾಟಕ ರಾಜ್ಯ ಸರ್ಕಾರ ಆದೇಶ ನೀಡಿತು. ಹಲವಾರು ಕಡೆಗಳಲ್ಲಿ ಪ್ರತಿಭಟನೆ ನಡೆಯಿತು. ಸಮವಸ್ತ್ರ ನಿಯಮಕ್ಕೆ ವಿದ್ಯಾರ್ಥಿನಿಯರು ಸಹಿ ಹಾಕಿದ ದಾಖಲೆಯೂ ಬಹಿರಂಗವಾಯಿತು.
6 ಫೆಬ್ರವರಿ: ಹಿಜಾಬ್ ವಿರುದ್ಧ ರಾಜಕೀಯ ಮಾತನಾಡುವವರನ್ನು ಪಾಕಿಸ್ತಾನಕ್ಕೆ ಕಳುಹಿಸಿ ಎಂಬ ಎಂ. ಪಿ. ರೇಣುಕಾಚಾರ್ಯ ಹೇಳಿಕೆ ಭಾರೀ ವಿವಾದಕ್ಕೆ ಎಡೆಮಾಡಿಕೊಟ್ಟಿತು. ಫೆಬ್ರವರಿ 8ರಂದು ಹೈಕೋರ್ಟ್ನಲ್ಲಿ ದಾಖಲೆ ಪ್ರಸ್ತುತ ಪಡಿಸಲು ನಾವು ಸಿದ್ಧವಾಗಿದ್ದೇವೆ ಎಂದು ಶಾಸಕ ರಘಪತಿ ಭಟ್ ಹೇಳಿದರು.
7 ಫೆಬ್ರವರಿ: ಸರ್ಕಾರದ ಆದೇಶ ಹೊರತಾಗಿಯೂ ಹಿಜಾಬ್- ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿದ್ದಾರೆ. ವಿಜಯಪುರದ ಇಂಡಿಯಲ್ಲಿ ವಿದ್ಯಾರ್ಥಿಗಳು ಹಿಜಾಬ್- ಕೇಸರಿ ಶಾಲು ಧರಿಸಿ ಆಗಮಿಸಿದ್ದಾರೆ. ಈ ನಡುವೆ ಕುಂದಾಪುರದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರಿಗೆ ಕ್ಯಾಂಪಸ್ಗೆ ಅನುಮತಿ ನೀಡಲಾಗಿದ್ದು, ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಇನ್ನು ಚಿಕ್ಕಮಗಳೂರಿನಲ್ಲಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ನೀಲಿ ಶಾಲು ಧರಿಸಿ ಬಂದಿದ್ದು, ಜೈ ಭೀಮ್ ಘೋಷಣೆ ಕೂಗಿದ್ದಾರೆ. ಇನ್ನೊಂದೆಡೆ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗಿದ್ದಾರೆ. ದಾವಣಗೆರೆಯಲ್ಲಿ ಹಿಜಾಬ್ ಪರವಾಗಿ ಹಾಗೂ ವಿರೋಧವಾಗಿ ಪ್ರತಿಭಟನೆ ನಡೆದಿದೆ. ಹಾವೇರಿಯಲ್ಲಿ ಎಸ್ಎಫ್ಐ ಸಂಘಟನೆಯ ವಿದ್ಯಾರ್ಥಿಗಳು ಹಿಂದೂ ಮುಸ್ಲಿಂ ಒಂದೇ ಎನ್ನುವ ಘೋಷಣೆಯನ್ನು ಕೂಗಿ ಭಾರತದ ಬಾವುಟವನ್ನು ಪ್ರದರ್ಶಿಸಿದ್ದಾರೆ.
8 ಫೆಬ್ರವರಿ: ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಂತ ಪ್ರತಿಭಟನೆಗಳು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್ ಶಾಂತಿ ಹಾಗೂ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಂತೆ ವಿದ್ಯಾರ್ಥಿ ಸಮುದಾಯ ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದೆ. ನ್ಯಾಯಾಲಯಕ್ಕೆ ಜನರ ವಿವೇಕದ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಹಾಗಾಗಿ ಅವರು ಯಾವುದೇ ರೀತಿಯಲ್ಲೂ ಶಾಂತಿ ಸುವ್ಯವಸ್ಥೆಗೆ ಭಂಗವಾಗದಂತೆ ನಡೆದುಕೊಳ್ಳಲಿದ್ದಾರೆ ಎಂದು ಹೈಕೋರ್ಟ್ ಆದೇಶಿಸಿದೆ. ಮಂಗಳವಾರ ಅರ್ಜಿದಾರರ ವಕೀಲರಿಂದ ಸುಮಾರು 4 ಗಂಟೆ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ ವಿಚಾರಣೆಯನ್ನು ಬುಧವಾರ ಮಧ್ಯಾಹ್ನಕ್ಕೆ ಮುಂದೂಡಿದೆ. ಇನ್ನೊಂದೆಡೆ ಕರ್ನಾಟದಲ್ಲಿ ಹೈಸ್ಕೂಲ್, ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
9 ಫೆಬ್ರವರಿ: ಹಿಜಾಬ್ ವಿವಾದವು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ. ಈ ನಡುವೆ ಶಿವಮೊಗ್ಗದಲ್ಲಿ ಸಚಿವರ ಮಗನೇ ಕೇಸರಿ ಶಾಲನ್ನು ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ್ದು ಎಂದು ಡಿ ಕೆ ಶಿವಕುಮಾರ್ ಆರೋಪ ಮಾಡಿದ್ದಾರೆ. ಇನ್ನು ಮಂಗಳೂರು ವಿಶ್ವವಿದ್ಯಾನಿಲಯ ರಿಜಿಸ್ಟ್ರಾರ್ ಹಾಗೂ ಭಂಡಾಕಾರ್ಸ್ ಕಾಲೇಜಿನ ಪ್ರಾಂಶುಪಾಲರಿಗೆ ಹೈಕೋರ್ಟ್ ನೋಟಿಸ್ ಅನ್ನು ನೀಡಿದೆ. ಬೆಂಗಳೂರಿನ ಶಾಲಾ, ಕಾಲೇಜುಗಳ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ದಾವಣಗೆರೆಯಲ್ಲಿಯೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
10 ಫೆಬ್ರವರಿ: ಹೈಕೋರ್ಟ್ ತ್ರಿಸದಸ್ಯ ಪೀಠ ಹಿಜಾಬ್ ಕೇಸ್ ವಿಚಾರಣೆಯನ್ನು ಮುಂದೂಡಿದೆ. ಫೆ.14ರಂದು ಮುಂದಿನ ವಿಚಾರಣೆ ನಡೆಸಲು ಹೈಕೋರ್ಟ್ ಪೀಠ ಮುಂದಾಗಿದೆ. ಮುಂದಿನ ಆದೇಶದ ತನಕ ಧಾರ್ಮಿಕ ಸಂಕೇತವಾದ ವಸ್ತ್ರ ಧರಿಸಬಾರದು ಎಂದು ಕೋರ್ಟ್ ಹೇಳಿದೆ. ಹಿಜಾಬ್, ಕೇಸರಿ ಶಲ್ಯ ಸೇರಿದಂತೆ ಯಾವುದೇ ಧಾರ್ಮಿಕ ಗುರುತು ಧರಿಸುವಂತಿಲ್ಲ ಎಂದಿದೆ.ಶಾಲೆ, ಕಾಲೇಜುಗಳನ್ನು ಶೀಘ್ರವೇ ಆರಂಭಿಸುವಂತೆ ತ್ರಿಸದಸ್ಯ ಪೀಠ ಮೌಖಿಕವಾಗಿ ಮಧ್ಯಂತರ ತೀರ್ಪು ನೀಡಿದೆ. ಈ ಹಿಜಾಬ್ ವಿವಾದದ ನಡುವೆ ಬಿಜೆಪಿಯು ಸದಾ ಮಹಿಳಾ ಹಕ್ಕುಗಳ ಪರವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಹಿಜಾಬ್ ವಿವಾದದ ಕುರಿತು ಭಾರತದ ಅಧಿಕಾರಿಗಳಿಗೆ ಪಾಕಿಸ್ತಾನ ಸಮನ್ಸ್ ನೀಡಿದೆ. "ಅಲ್ಲಾ-ಹು-ಅಕ್ಬರ್' ಎಂದು ಹಿಂದೂ ಹುಡುಗರ ಎದುರು ಘೋಷಣೆ ಕೂಗಿದ ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ್ದಕ್ಕಾಗಿ ಜಮಿಯತ್ ಉಲಮಾ-ಇ-ಹಿಂದ್ ವಿರುದ್ಧ ಮಂಡ್ಯದ ಹಿಂದೂ ಕಾರ್ಯಕರ್ತರು ದೂರು ದಾಖಲು ಮಾಡಿದ್ದಾರೆ. (ಒನ್ಇಂಡಿಯಾ ಸುದ್ದಿ)












Click it and Unblock the Notifications