Get Updates
Get notified of breaking news, exclusive insights, and must-see stories!

ಕರ್ನಾಟಕದ ಮೊದಲ ಹಿಜಾಬ್‌ ಪ್ರಕರಣ: 2009ರ ಘಟನೆಯ ವಿವರ

ಮಂಗಳೂರು, ಫೆಬ್ರವರಿ 08: ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ಹಿಜಾಬ್‌ ವಿವಾದವು ಕೋರ್ಟ್ ಮೆಟ್ಟಿಲು ಏರಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಎರಡು ಧರ್ಮದ ವಿದ್ಯಾರ್ಥಿಗಳು ಪರಸ್ಪರ ಕೆಕ್ಕರಿಸಿ ನೋಡುವ ಸ್ಥಿತಿ ನಿರ್ಮಾಣವಾಗಿದೆ. ಅಷ್ಟಕ್ಕೂ ಇದು ಕರ್ನಾಟಕದಲ್ಲಿ ನಡೆದ ಮೊದಲ ಹಿಜಾಬ್‌ ವಿವಾದವೇನಲ್ಲ. ಇದಕ್ಕೂ ಹಿಂದೆ 2009ರಲ್ಲಿಯೂ ಹಿಜಾಬ್‌ ವಿಚಾರವು ರಾಜ್ಯದಲ್ಲಿ ಮುನ್ನಲೆಗೆ ಬಂದಿತ್ತು. ಕರ್ನಾಟಕದ ಮೊದಲ ಹಿಜಾಬ್‌ ವಿವಾದ ಕೂಡಾ ಆರಂಭವಾಗಿದ್ದು, ಕರಾವಳಿ ಜಿಲ್ಲೆಯಲ್ಲಿಯೇ ಎಂಬುವುದು ಖೇದಕರ ವಿಚಾರ.

ಕರಾವಳಿಯೂ ಕೋಮು ಸಂಘಟನೆಗಳ ಪ್ರಯೋಗ ಶಾಲೆ ಎಂಬುವುದು ನಿರಂತರವಾಗಿ ಪ್ರಗತಿಪರರು ಹೇಳಿಕೊಂಡು ಬರುತ್ತಿರುವ ಮಾತು. ಅದರಂತೆಯೇ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡದಲ್ಲಿ ಕೋಮು ವಿವಾದಗಳು ನಡೆಯುತ್ತಲೇ ಇದೆ. ಪ್ರಸ್ತುತ ಈ ಹಿಜಾಬ್‌ ವಿವಾದವು ಕರ್ನಾಟಕದ ಹಲವಾರು ಕಾಲೇಜುಗಳಿಗೆ ವ್ಯಾಪಿಸಿದೆ. ಹಿಂಸಾಚಾರದ ರೂಪವನ್ನು ಪಡೆದಿದೆ. ಬಾಗಲಕೋಟೆಯಲ್ಲಿ ಪಿಯುಸಿ ಕಾಲೇಜಿನ ಮೇಲೆ ಕಲ್ಲು ತೂರಾಟ ನಡೆದಿದೆ. ಈ ಮಧ್ಯೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ.

ಕರ್ನಾಟಕದಲ್ಲಿ ಈ ಬಾರಿ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿರುವ ಈ ಹಿಜಾಬ್‌ ವಿವಾದವು ಮೊದಲು ಆರು ವಿದ್ಯಾರ್ಥಿಗಳಿಂದ ಆರಂಭವಾಯಿತು. ಉಡುಪಿ ಮಹಿಳಾ ಪಿಯು ಕಾಲೇಜಿನ ಆರು ವಿದ್ಯಾರ್ಥಿಗಳು ವಾರಗಟ್ಟಲೆ ಪ್ರತಿಭಟನೆ ನಡೆಸುವ ಮೂಲಕ ಈ ವಿವಾದ ಆರಂಭವಾಯಿತು. ಈ ಕೋರ್ಟ್‌ನಲ್ಲಿ ಇದೆ. ಹಾಗಾದರೆ ಕರ್ನಾಟಕಲ್ಲಿ ಮೊದಲ ಹಿಜಾಬ್‌ ಪ್ರಕರಣ ಆರಂಭವಾದದು ಹೇಗೆ? ಈ ಪ್ರಕರಣದಲ್ಲಿ ಏನು ನಡೆದಿದೆ? ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ....

 ಮೊದಲ ಹಿಜಾಬ್‌ ವಿವಾದ ಯಾವುದು?

ಮೊದಲ ಹಿಜಾಬ್‌ ವಿವಾದ ಯಾವುದು?

ಬಂಟ್ವಾಳದ ವಿದ್ಯಾಗಿರಿ ಶ್ರೀ ವೆಂಕಟರಮಣಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುರ್ಕಾ ಧರಿಸಿ ಬಂದ ಕಾರಣಕ್ಕಾಗಿ ಕಾಲೇಜ್ ವಿದ್ಯಾರ್ಥಿನಿಯೊಬ್ಬಳನ್ನು ತರಗತಿಗೆ ಹಾಜರಾಗದಂತೆ ನಿರ್ಬಂಧಿಸಿದ ಘಟನೆ 2009 ರ ಆಗಸ್ಟ್‌ನಲ್ಲಿ ನಡೆದಿದೆ. ಆಯೇಷಾ ಆಸ್ಮಿನ್ ಎಂಬ ಪ್ರಥಮ ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಿಜಾಬ್‌ ಧರಿಸಿ ಬರುವುದನ್ನು ವಿರೋಧ ಮಾಡಿ ಕಾಲೇಜಿನ ಕೆಲ ವಿದ್ಯಾರ್ಥಿಗಳು ದೂರು ನೀಡಿದ ಹಿನ್ನಲೆಯಲ್ಲಿ ಆಡಳಿತ ಮಂಡಳಿ ಆಯೇಷಾಗೆ ಸ್ಕಾರ್ಪ್ ಧರಿಸಿ ಬರಬಾರದು ಎಂದು ಸೂಚನೆ ನೀಡಿತ್ತು. ಇದರಿಂದಾಗಿ ವಿದ್ಯಾರ್ಥಿನಿಗೆ ಪರೀಕ್ಷೆಗೆ ಹಾಜರಾಗುವುದು ಕೂಡಾ ಸಾಧ್ಯವಾಗಿರಲಿಲ್ಲ. ಮೊದಲು ಅಂತಿಮ ಬಿಕಾಂನ ಕೆಲವು ವಿದ್ಯಾರ್ಥಿಗಳು ಬುರ್ಕಾ ಹಾಕಬಾರದು ಎಂದು ಹೇಳಿದ್ದು, ಈ ಹಿನ್ನೆಲೆ ಈಗ ಬುರ್ಕಾ ಹಾಕುವುದನ್ನು ನಿಲ್ಲಿಸಿ ಹಿಜಾಬ್‌ ಮಾತ್ರ ಧರಿಸುತ್ತಿದ್ದರು. ಆದರೆ ಅದಕ್ಕೂ ಆಕ್ಷೇಪವನ್ನು ವ್ಯಕ್ತಪಡಿಸಲಾಗಿತ್ತು.

 ಸ್ಕಾರ್ಪ್ ಧರಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದ ವಿದ್ಯಾರ್ಥಿನಿ

ಸ್ಕಾರ್ಪ್ ಧರಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದ ವಿದ್ಯಾರ್ಥಿನಿ

ಆ ಸಂದರ್ಭದಲ್ಲೇ ಮಂಗಳೂರು ಕೋಮುಗಲಭೆಗಳಿಗೆ ಹೆಸರುವಾಸಿಯಾದ ನಗರವಾಗಿತ್ತು. ಈ ನಡುವೆ ಸ್ಕಾರ್ಪ್ ಧರಿಸಿ ಕಾಲೇಜಿಗೆ ಬರಲು ವಿದ್ಯಾರ್ಥಿನಿಗೆ ಅವಕಾಶ ನೀಡದೆ ಇರುವುದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಕರ್ನಾಟಕದಲ್ಲಿ ಮೊದಲ ಹಿಜಾಬ್‌ ವಿವಾದ ಇದಾಗಿದ್ದು, ಪರ ವಿರೋಧ ಚರ್ಚೆಗಳು ನಡೆದಿತ್ತು. ಸ್ತ್ರೀವಾದಿಗಳು ಹಿಜಾ‌ಬ್‌ ಎಂಬ ಧಾರ್ಮಿಕ ವ್ಯವಸ್ಥೆಯನ್ನೇ ವಿರೋಧ ಮಾಡಿದ್ದನ್ನು ಬಲಪಂಥೀಯ ಸಂಘಟನೆಗಳು ಗಟ್ಟಿಯಾಗಿ ಹಿಡಿದುಕೊಂಡು ರಾಜಕೀಯ ಮಾಡಿತು. ಈ ನಡುವೆ ವಿದ್ಯಾರ್ಥಿನಿ ಆಯೇಷಾ ಆಸ್ಮಿನ್ ಮಾತ್ರ ನನಗೆ ಈ ಒಂದು ವರ್ಷ ಅವಕಾಶ ನೀಡಿ ಎಂದು ಬೇಡಿಕೊಂಡಿದರು. ವೆಂಕಟರಮಣಸ್ವಾಮಿ ಕಾಲೇಜಿನ ಬಿಕಾಂ ತರಗತಿಯಲ್ಲಿ ಕೇವಲ ಇಬ್ಬರು ಮಾತ್ರ ಮುಸ್ಲಿಂ ಹೆಣ್ಣುಮಕ್ಕಳಿದ್ದರು. ಆ ಪೈಕಿ ಓರ್ವ ವಿದ್ಯಾರ್ಥಿನಿ ಬುರ್ಕಾ, ಹಿಜಾಬ್‌ ಧರಿಸದೆಯೇ ತರಗತಿಗೆ ಹಾಜರಾಗುತ್ತಿದ್ದಳು.

ಆದರೆ ಆಯೇಷಾ ಮಾತ್ರ ತನಗೆ ಅವಕಾಶ ನೀಡಿ ಎಂದು ಗೊಗರೆಯುತ್ತಿದ್ದಳು. ಆಕೆಗೆ ಕೆಲ ಮುಸ್ಲಿಂ ಸಂಘಟನೆಗಳು ಜೊತೆಯಾದ ಬಳಿಕ ಈ ವಿವಾದ ರಾಜಕೀಯಕ್ಕೆ ಒಂದು ದಾಳವಾಯಿತು. "ಕಾಲೇಜಿನ ಅಡಳಿತ ಮಂಡಳಿ ವಿನಾಕಾರಣ ನಮಗೆ ತೊಂದರೆ ನೀಡುತ್ತಿದೆ. ಬುರ್ಕಾ ಅಥವಾ ಸ್ಕಾರ್ಫ್ ಧರಿಸಿಯೇ ನಾನು ಕಾಲೇಜಿಗೆ ಹೋಗುವೆ. ನನ್ನ ಧರ್ಮದ ಪ್ರಕಾರ ನಾನು ನಡೆದುಕೊಳ್ಳುತ್ತಿರುವೆ. ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ನಂತರ ಕಾಲೇಜಿನಲ್ಲಿ ಚುನಾವಣೆಗಳು ಆರಂಭವಾದವು. ಆ ಬಳಿಕ ಬುರ್ಕಾ, ಸ್ಕಾರ್ಪ್ ಅನ್ನು ನಿಷೇಧ ಮಾಡಲಾಗಿದೆ. ನಾನು ಚಾರ್ಟರ್ಡ್ ಆಕೌಟೆಂಟ್ ಆಗಬೇಕು ಎಂಬ ಕನಸಿದೆ. ಇದೇ ಕಾಲೇಜಿನಲ್ಲಿ ಶಿಕ್ಷಣ ಮುಂದುವರೆಸಬೇಕು ಎಂಬ ಆಸೆ ಇದೆ. ನನಗೆ ಅವಕಾಶ ನೀಡಿ," ಎಂದು ಮನವಿ ಮಾಡಿಕೊಂಡಿದ್ದರು.

 ಜಿಲ್ಲಾಧಿಕಾರಿಯ ಮಧ್ಯಪ್ರವೇಶ ಬಳಿಕ..

ಜಿಲ್ಲಾಧಿಕಾರಿಯ ಮಧ್ಯಪ್ರವೇಶ ಬಳಿಕ..

ಈ ಹಿಜಾಬ್‌ ವಿವಾದ ಹೆಚ್ಚಳವಾಗುತ್ತಿದ್ದಂತೆ ಆಗಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪೊನ್ನುರಾಜ್ ಮಧ್ಯಪ್ರವೇಶ ಮಾಡಿದ್ದರು. ಕಾಲೇಜ್ ಆಡಳಿತ ಮಂಡಳಿ ವಿರುದ್ದ ಆಯೇಷಾ ಹಾಗು ಆಕೆಯ ತಂದೆ ಮೊಹಮ್ಮದ್ ನೀಡಿದ ದೂರನ್ನು ಜಿಲ್ಲಾಧಿಕಾರಿಗಳು ಸ್ವೀಕಾರ ಮಾಡಿದ್ದರು. "ಇದು ಅತ್ಯಂತ ಸೂಕ್ಷ್ಮ ವಿಷಯ. ಇಂತ ನಿರ್ಬಂಧಗಳು ಧರ್ಮಗಳ ನಡುವೆ ವಿಭಜನೆಗೆ ದಾರಿ ಮಾಡಿಕೊಡಲಿದೆ. ಯಾರೂ ತಮ್ಮ ಚಿಂತನೆಗಳನ್ನು ಇನ್ನೊಬ್ಬರ ಮೇಲೆ ಹೇರಲು ಸಾಧ್ಯವಿಲ್ಲ. ದೂರು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಿದ್ದೇವೆ," ಎಂದು ತಿಳಿಸಿದ್ದರು. ಇನ್ನು ಈ ಸಂದರ್ಭದಲ್ಲೇ ಎಸ್ ವಿ ಎಸ್ ಕಾಲೇಜ್ ಅನುದಾನಿತ ಖಾಸಗಿ ಕಾಲೇಜ್ ಆಗಿರುವುದರಿಂದ ನೇರ ಕ್ರಮ ಜಿಲ್ಲಾಡಳಿತಕ್ಕೆ ಸಾಧ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಶಾಲೆಗೆ ನೋಟಿಸು ನೀಡಲಾಗುವುದು ಎಂದು ಕೂಡಾ ತಿಳಿಸಿದ್ದರು.

 ಕೊನೆಯದಾಗಿ ನಡೆದಿದ್ದು ಏನು?

ಕೊನೆಯದಾಗಿ ನಡೆದಿದ್ದು ಏನು?

ವಿದ್ಯಾರ್ಥಿನಿ ತನಗೆ ಸ್ಕಾರ್ಪ್ ಧರಿಸಿ ಬರಲು ಅವಕಾಶ ನೀಡಿ ಎಂದು ಎಷ್ಟೇ ಮನವಿ ಮಾಡಿಕೊಂಡರು, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿದರೂ ಹಿಜಾಬ್‌ ಮೇಲಿನ ನಿರ್ಬಂಧವನ್ನು ಹಿಂಪಡೆಯಲು ವೆಂಕಟರಮಣಸ್ವಾಮಿ ಕಾಲೇಜಿನ ಆಡಳಿತ ಮಂಡಳಿ ಸಮ್ಮತಿಸಿಲ್ಲ. ಕಾಲೇಜಿನಲ್ಲಿ ಬುರ್ಖಾ ಅಥವಾ ಸ್ಕಾರ್ಫ್ ಗೆ ಅವಕಾಶ ಕೊಟ್ಟರೆ ಕೇಸರಿ ಶಾಲು ಹೊದ್ದು ಬರುತ್ತೇವೆ ಎಂದು ವಿದ್ಯಾರ್ಥಿಗಳು ಲಿಖಿತ ಹೇಳಿಕೆ ನೀಡಿರುವುದರಿಂದ ಆಯೇಷಾಗೆ ಸ್ಕಾರ್ಫ್ ಧರಿಸಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ವೆಂಕಟರಮಣಸ್ವಾಮಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಪಿ ಗಣೇಶ್ ಪ್ರಭು ಸ್ಪಷ್ಟಪಡಿಸಿದ್ದರು.

"ಆಯೇಷಾ ಬುರ್ಖಾ ಧರಿಸಿ ಬರಲು ಅನುಮತಿ ನೀಡಿದರೆ ಬೇರೆ ವಿದ್ಯಾರ್ಥಿಗಳು ಅಯ್ಯಪ್ಪಸ್ವಾಮಿ ಮಾಲೆ ಹಾಕಿದ್ದೇವೆ ಎಂದು ಕಪ್ಪುಬಟ್ಟೆ ಹಾಕಿ ಬಂದರೆ ಕಾಲೇಜಿಗೆ ಪ್ರವೇಶ ನೀಡಲು ಸಾಧ್ಯವೇ," ಎಂದು ಕೂಡಾ ಕಾಲೇಜಿನ ಆಡಳಿತ ಪ್ರಶ್ನೆ ಮಾಡಿತು. ವಿದ್ಯಾರ್ಥಿನಿ ಬಳಿಕ ಬೇರೆ ಕಾಲೇಜಿಗೆ ಸೇರ್ಪಡೆ ಆಗಬೇಕಾಯಿತು. ಈ ಸಂದರ್ಭದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಸರ್ಕಾರದ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ನೀಡಿದ ಹೇಳಿಕೆಯೂ ಸುದ್ದಿಯಾಗಿತ್ತು. ರಾಜ್ಯದಲ್ಲಿ ಹಿಜಾಬ್‌ ವಿಚಾರ ಸುದ್ದಿಯಾಗುತ್ತಿರುವಾಗ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಅರವಿಂದ ಲಿಂಬಾವಳಿ ಮಾತ್ರ, "ನನಗೆ ಏನೂ ಗೊತ್ತಿಲ್ಲ. ಪ್ರಕರಣದ ಕುರಿತು ವರದಿ ತರಿಸಿಕೊಂಡು ಬಳಿಕ ಪ್ರತಿಕ್ರಿಯೆ ನೀಡುತ್ತೇನೆ," ಎಂದು ಹೇಳಿದ್ದರು.

 ಹಲವು ಕಾಲೇಜುಗಳಲ್ಲಿ ಹಿಜಾಬ್‌ ವಿವಾದ

ಹಲವು ಕಾಲೇಜುಗಳಲ್ಲಿ ಹಿಜಾಬ್‌ ವಿವಾದ

ಮೊದಲ ಹಿಜಾಬ್‌ ವಿವಾದದ ಬಳಿಕ ಮೂಡಬಿದರೆಯ ಕಾಲೇಜಿನಲ್ಲಿಯೂ ಇಂತಹುದ್ದೇ ಘಟನೆ ನಡೆಯಿತು. ಕಾಲೇಜು ಆಡಳಿತದ ದಿಢೀರ್‌ ಆದೇಶವು ಚರ್ಚೆಗೆ ಗ್ರಾಸವಾಯಿತು. ಮಾಧ್ಯಮಗಳಲ್ಲಿ ವರದಿ ಭಿತ್ತರವಾಯಿತು. ಬಳಿಕ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿಯೂ ಇದೇ ವಿವಾದ ಹುಟ್ಟಿತು. ನಂತರ ಪುತ್ತೂರಿನ ರಾಮಕುಂಜೇಶ್ವರ ಕಾಲೇಜಿನಲ್ಲಿ ಬುರ್ಕಾವನ್ನು ನಿಷೇಧ ಮಾಡಲಾಯಿತು. ಹೀಗೆ ಹಲವಾರು ಕಾಲೇಜುಗಳಲ್ಲಿ ವಸ್ತ್ರ ಸಂಹಿತೆ ಎಂದು ಹೇಳಿ ಬುರ್ಕಾ, ಸ್ಕಾರ್ಪ್ ನಿಷೇಧ ಮಾಡಲಾಗಿದೆ. ಆದರೆ ಪ್ರಸ್ತುತ ರಾಜಕೀಯ ಬಣ್ಣ ಪಡೆದ ಹಿನ್ನೆಲೆ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+