ಸಿದ್ದು ವರ್ಸಸ್ ಎಚ್ ಡಿಕೆ: ಒಂದೇ ಗರಡಿ ಮನೆಯ ಜಗಜಟ್ಟಿಗಳ ಕಾಳಗ

Recommended Video

      ಒಂದೇ ಗರಡಿ ಮನೆಯ ಜಗಜಟ್ಟಿಗಳ ಕಾಳಗ | Oneindia Kannada

      "ನಾನೂ ಅದೇ ಸ್ಕೂಲ್ ನಲ್ಲಿ ಓದಿದ್ದು ಬಾರಪ್ಪಾ" ಅನ್ನೋ ಮಾತನ್ನು ನೀವು ಕೇಳಿದ್ದೀರಿ ಹಾಗೂ ಅದರ ಅರ್ಥ ನಿಮಗೆ ಆಗಿದೆ ಅನ್ನೋದಾದರೆ ಈ ವರದಿಯನ್ನು ದಾಟಿಸುವುದು ಸಲೀಸು. ಏಕೆಂದರೆ ರಾಜ್ಯ ರಾಜಕಾರಣದಲ್ಲಿ ಇದೇ ರೀತಿಯ ಸೇರಿಗೆ ಸವಾಸೇರು ಎಂಬ ಮೇಲಾಟ ನಡೆಯುತ್ತಿದೆ. ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ದೇವೇಗೌಡರು, ಮತ್ತೊಂದು ಕಡೆಗೆ ಸಿದ್ದರಾಮಯ್ಯ ಮತ್ತು ಬಣ.

      ನನ್ನ ಎದೆ ಬಗೆದರೆ ಅದರಲ್ಲಿ ಸಿದ್ದರಾಮಯ್ಯ ಕಾಣ್ತಾರೆ ಅನ್ನೋ ಸಚಿವ ಎಂಟಿಬಿ ನಾಗರಾಜ್ ಅವರಿಗೆ ತಮ್ಮನ್ನು ಆರಿಸಿದ ಮತದಾರರ ನೆನಪಾಗಲ್ಲವಾ ಅಥವಾ ಈಗ ತಾವು ಸಚಿವರಾಗಿರುವುದು ಮೈತ್ರಿ ಸರಕಾರದಲ್ಲಿ ಎಂಬ ಸಂಕೋಚ ಇರುವುದಿಲ್ಲವಾ? ಇನ್ನು ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್, ಈ ಸರಕಾರದಲ್ಲಿ ಬೆಂಗಳೂರು ಅಭಿವೃದ್ಧಿ ಆಗಿಲ್ಲ ಅನ್ನೋವಾಗ, ಇದು ನಮ್ಮದೇ ಸರಕಾರ ಎಂಬ ಪ್ರಜ್ಞೆ ಇರುವುದಿಲ್ಲವಾ?

      ಇವೆಲ್ಲಕ್ಕೂ ಕಲಶ ಇಟ್ಟಂತೆ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್ ಈಗಲೂ ನಮಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಸಾರ್ವಜನಿಕವಾಗಿಯೇ ಹೇಳಿಕೆ ನೀಡುತ್ತಾರೆ. ಈ ಎಲ್ಲ ಸಂದರ್ಭಗಳಲ್ಲೂ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇವರೆಲ್ಲರನ್ನೂ ಸಣ್ಣದಾಗಿಯೂ ತರಾಟೆಗೆ ತೆಗೆದುಕೊಳ್ಳುವುದಿಲ್ಲ.

      ಏಕೆಂದರೆ, ಕುಮಾರಸ್ವಾಮಿ ಅವರ ಪಟ್ಟುಗಳಿಗೆ ಇವೆಲ್ಲವೂ ಎದುರು ಪಟ್ಟುಗಳೇ. ಆದ್ದರಿಂದ ಸಿದ್ದು ತಾವು ಕಲಿತ ಜೆಡಿಎಸ್ ಗರಡಿ ಮನೆಯ ಪಾಠಗಳನ್ನು ಅದರ ವಿರುದ್ಧವೇ ಪ್ರಯೋಗಿಸುತ್ತಿದ್ದಾರೆ.

      ಸಾರ್ವಜನಿಕ ಮುಜುಗರ ಅನುಭವಿಸುತ್ತಿರುವ ಎಚ್ ಡಿಕೆ

      ಸಾರ್ವಜನಿಕ ಮುಜುಗರ ಅನುಭವಿಸುತ್ತಿರುವ ಎಚ್ ಡಿಕೆ

      ಅಸಲಿಗೆ ಇವೆಲ್ಲ ಲೋಕಸಭಾ ಚುನಾವಣೆ ಸೀಟು ಹಂಚಿಕೆ ಮುಂಚೆ ಕುಮಾರಸ್ವಾಮಿ ಅವರನ್ನು ಹತೋಟಿಗೆ ತೆಗೆದುಕೊಳ್ಳುವ ತಂತ್ರ. ಏಕೆಂದರೆ, ಕುಮಾರಸ್ವಾಮಿ ಆಡುವ ಮಾತುಗಳು ಕಾಂಗ್ರೆಸ್ ಗೆ ಎಲ್ಲೆಲ್ಲಿ ಪೆಟ್ಟು ಕೊಟ್ಟರೂ ಸುಮ್ಮನಿರಬೇಕಿದೆ. ಏಕೆಂದರೆ ಹೈ ಕಮಾಂಡ್ ಗೆ ಈ ಸರಕಾರವನ್ನು ಕೆಡವೋದು ಸದ್ಯಕ್ಕಂತೂ ಬೇಕಾಗಿಲ್ಲ. ಹಾಗಂತ ಸುಮ್ಮನಿದ್ದು ಬಿಟ್ಟರೆ, ಹೇಗೆ ಬಿಜೆಪಿ ಜತೆಗೆ ಟ್ವೆಂಟಿ-ಟ್ವೆಂಟಿ ಸರಕಾರ ಮಾಡುವಾಗ ಎಲ್ಲ ಶ್ರೇಯವನ್ನು ತಮ್ಮ ಬಗಲಿಗೆ ಹಾಕಿಕೊಂಡು, ಕುಮಾರಸ್ವಾಮಿ ಮಿಂಚಿದರೋ ಈಗಲೂ ಹಾಗೇ ಮಾಡುತ್ತಾರೆ. ಆ ಕಾರಣದಿಂದಲೇ ಕುರ್ಚಿ ಮೇಲೆ ಸಮಾಧಾನವಾಗಿ ಕೂತು, ಇನ್ನಷ್ಟು ಹಬ್ಬಿ ಬೆಳೆಯಲು ಕುಮಾರಸ್ವಾಮಿ ಅವರಿಗೆ ಬಿಡುತ್ತಿಲ್ಲ. ಒಂದು ಕಡೆ ಆಪರೇಷನ್ ಕಮಲದ ಭೀತಿ, ಮತ್ತೊಂದು ಕಡೆ ಕಾಂಗ್ರೆಸ್ ನ ಸಿದ್ದರಾಮಯ್ಯ ಬಣದಿಂದ ಸಾರ್ವಜನಿಕ ಮುಜುಗರ ಅನುಭವಿಸುತ್ತಾ ಸಂಭಾಳಿಸಿಕೊಂಡು ಹೋಗುವಂತಾಗಿದೆ ಸಿಎಂಗೆ.

      ಜೆಡಿಎಸ್ ಪಾಲಿನ ಬಿಸಿ ತುಪ್ಪ ಸಿದ್ದರಾಮಯ್ಯ

      ಜೆಡಿಎಸ್ ಪಾಲಿನ ಬಿಸಿ ತುಪ್ಪ ಸಿದ್ದರಾಮಯ್ಯ

      ಈ ಹಿಂದೆ ಜೆಡಿಎಸ್ ಜತೆ ಸೇರಿ ಕಾಂಗ್ರೆಸ್ ಸರಕಾರ ಮಾಡಿತ್ತಲ್ಲಾ, ಆಗ ಧರಂ ಸಿಂಗ್ ಮುಖ್ಯಮಂತ್ರಿ ಅದರು. ಆ ಕುರ್ಚಿಯ ಮೇಲೆ ಕೂತಿದ್ದರು ಅನ್ನೋದು ಬಿಟ್ಟರೆ ಅನುಭವಿಸಿದ ಹಿಂಸೆ ಇದೆಯಲ್ಲಾ, ಅದೇ ಈಗ ಜೆಡಿಎಸ್ ಗೆ ಆಗುತ್ತಿದೆ. ಈಗ ಸಿದ್ದರಾಮಯ್ಯ ಅವರೇ ಜೆಡಿಎಸ್ ಪಾಲಿನ ಬಿಸಿ ತುಪ್ಪವಾಗಿದ್ದಾರೆ. ಅವರನ್ನು ಬಿಟ್ಟು ಮುಂದೆ ಹೋಗಲು ಸಾಧ್ಯವಿಲ್ಲ. ಏಕೆಂದರೆ, ಮೈತ್ರಿ ಸರಕಾರದ ಸಮನ್ವಯ ಸಮಿತಿ ಅಧ್ಯಕ್ಷರು. ಇನ್ನು ಸರಕಾರದಿಂದ ಹೊರಗೆ ಬರುತ್ತೀನಿ ಎಂದರೂ ಅದು ಕುಮಾರಸ್ವಾಮಿ ಅಸಹಾಯಕತೆ ಅನ್ನಿಸುತ್ತದೆಯೇ ವಿನಾ ತ್ಯಾಗವಲ್ಲ. ಜತೆಗೆ ಲೋಕಸಭೆ ಚುನಾವಣೆ ಕಣ್ಣೆದುರು ಇಟ್ಟುಕೊಂಡು, ಆಪರೇಷನ್ ಕಮಲ ನಡೆಸಲು ಅವಕಾಶ ಕಾಯುತ್ತಿರುವ ಬಿಜೆಪಿಗೆ ಅವಕಾಶ ಕೊಟ್ಟರೆ ಮೊದಲು ಹೊಡೆತ ಆಗುವುದು ಜೆಡಿಎಸ್ ಗೇ. ಏಕೆಂದರೆ ಪರಿಸ್ಥಿತಿ ಲಾಭ ಪಡೆದು, ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ತಂದು, ಲೋಕಸಭೆ ಚುನಾವಣೆ ಜತೆಗೆ ಕರ್ನಾಟಕ ವಿಧಾನಸಭೆ ಚುನಾವಣೆಯೂ ನಡೆದುಬಿಟ್ಟರೆ ಈಗಿನ ಸ್ಥಿತಿಯಲ್ಲಿ ಕೇಸರಿ ಪಕ್ಷಕ್ಕೆ ಲಾಭವಾಗುವ ಸಾಧ್ಯತೆ ಹೆಚ್ಚು.

      ರಾಹುಲ್ ಗೆ ಗಾಂಧಿಗೆ ನೀಡಿದ ದೂರಿನಿಂದಲೂ ಪ್ರಯೋಜನವಿಲ್ಲ

      ರಾಹುಲ್ ಗೆ ಗಾಂಧಿಗೆ ನೀಡಿದ ದೂರಿನಿಂದಲೂ ಪ್ರಯೋಜನವಿಲ್ಲ

      ಇನ್ನು ಕಾಂಗ್ರೆಸ್ ನಿಂದ ಕಿರುಕುಳ ಆಗುತ್ತಿದೆ ಎಂಬ ಕಾರಣ ನೀಡಿ, ಜೆಡಿಎಸ್ ನೇರವಾಗಿ ಬಿಜೆಪಿ ಜತೆಗೆ ಹೋಗಿ ಸೇರಿಬಿಟ್ಟರೆ ಅದರಿಂದ ರಾಷ್ಟ್ರಮಟ್ಟದಲ್ಲಿ ದೇವೇಗೌಡರ ವರ್ಚಸ್ಸಿಗೆ ಹಾನಿ ಆಗುತ್ತದೆ. ಈ ವಿಚಾರ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ ಆದ್ದರಿಂದಲೇ ಕುಮಾರಸ್ವಾಮಿಗೆ ಎಲ್ಲೆಲ್ಲ ಪರೋಕ್ಷವಾಗಿ ಹಿಂಸೆ ನೀಡಲು ಸಾಧ್ಯವೋ ಅಲ್ಲೆಲ್ಲ ತಿವಿಯುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ರಾಹುಲ್ ಗಾಂಧಿ ಬಳಿಗೆ ಕುಮಾರಸ್ವಾಮಿ ದೂರನ್ನು ಹೇಳಿಕೊಂಡರೂ ದೊಡ್ಡ ಮಟ್ಟದ ಪ್ರಯೋಜನ ಆಗುತ್ತಿಲ್ಲ. ಏಕೆಂದರೆ ಲೋಕಸಭೆ ಚುನಾವಣೆ ಮುಂದೆ ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ನಲ್ಲಿ ಬಲಿಷ್ಠವಾಗಿರುವ ಸಿದ್ದರಾಮಯ್ಯರನ್ನು ಏನೂ ಮಾಡಲು ಸಾಧ್ಯವಿಲ್ಲ. ಇನ್ನು ಅಸಮಾಧಾನ ಜಾಸ್ತಿ ಆಗಿ, ಬೆಂಬಲಿಗರಿಗೆ ಬಿಜೆಪಿ ಸೇರುವಂತೆ ಸಿದ್ದರಾಮಯ್ಯ ಅವರೇ ಇಷಾರೆ ಮಾಡಿ, ನನಗೇನೂ ಗೊತ್ತಿಲ್ಲ- ನಾನೇನೂ ಮಾಡಲಾರೆ ಎಂದು ಅಲಕ್ ನಿರಂಜನ್ ಎಂದು ಕೂತುಬಿಟ್ಟರೆ ಅಲ್ಲಿಗೆ ಕಾಂಗ್ರೆಸ್ ಸ್ಥಿತಿ ದೇವರೇ ಗತಿ. ಇದು ರಾಹುಲ್ ಗೆ ಗೊತ್ತಿದೆ.

      ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯರನ್ನು ಪಕ್ಕಕ್ಕೆ ತಳ್ಳಲಿದೆ ಕಾಂಗ್ರೆಸ್

      ಲೋಕಸಭೆ ಚುನಾವಣೆ ನಂತರ ಸಿದ್ದರಾಮಯ್ಯರನ್ನು ಪಕ್ಕಕ್ಕೆ ತಳ್ಳಲಿದೆ ಕಾಂಗ್ರೆಸ್

      ಇತ್ತ ದೇವೇಗೌಡರು ತಾವು ಎಂಥದ್ದೇ ಪಟ್ಟು ಹಾಕುವುದಾದರೂ ಸದ್ಯದ ಸ್ಥಿತಿಯಲ್ಲಿ ತಾಳ್ಮೆಯೇ ಉತ್ತಮ ಎಂದು ನಿರ್ಧರಿಸಿದಂತಿದೆ. ಇನ್ನು ಲೋಕಸಭೆ ಚುನಾವಣೆ ಆದ ಮೇಲೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷವೇ ಪಕ್ಕಕ್ಕೆ ಸರಿಸುತ್ತದೆ. ಅಲ್ಲಿಯವರೆಗೆ ಈ ಸರಕಾರ ಉಳಿಸಿಕೊಂಡು ಹೋದರೆ ಆ ನಂತರ ಸಿದ್ದರಾಮಯ್ಯರನ್ನು ಮೂಲೆಗುಂಪು ಮಾಡುವುದು. ಉಳಿದ ನಾಯಕರ ಪೈಕಿ ತಮ್ಮ ಕೈನಲ್ಲಿ ಆಡುವ ಗೊಂಬೆಗಳಿಗೆ ಅಧಿಕಾರ ಸಿಗುವಂತೆ ನೋಡಿ, ಪದ್ಮನಾಭನಗರದ ಮನೆಯಿಂದಲೇ ರಿಮೋಟ್ ಕಂಟ್ರೋಲ್ ಸರಕಾರ ನಡೆಸಬಹುದು ಎಂಬುದು ಗೌಡರ ಲೆಕ್ಕಾಚಾರ. ಲೋಕಸಭೆ ಚುನಾವಣೆ ತನಕ ಈ ಮೈತ್ರಿ ಸರಕಾರ ಇದ್ದರೆ ತಾನೇ ಗೌಡರು ಮತ್ತು ಅವರ ಮಕ್ಕಳ ಆಟ. ಅದಕ್ಕೆ ಮುನ್ನವೇ ಈ ಮೈತ್ರಿ ಸರಕಾರ ಕೆಡವಿ, ಮತ್ತೊಂದು ಸಲಕ್ಕೆ ಜೆಡಿಎಸ್ ಗೆ ಯಾವ ಕಾರಣಕ್ಕೂ ಅಧಿಕಾರದ ಹತ್ತಿರ ಬರುವುದಕ್ಕೂ ಅವಕಾಶ ನೀಡಬಾರದು ಎಂಬುದು ಸಿದ್ದರಾಮಯ್ಯ ತಲೆಯೊಳಗೆ ಹರಿದಾಡುತ್ತಿರುವ ಲೆಕ್ಕಾಚಾರ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+