ಕಾಂಗ್ರೆಸ್ ಕೈ ಕೊಡುವ ಅನುಮಾನ; ಪಕ್ಷ ಸಂಘಟನೆಗೆ ಮುಂದಾದ ದೇವೇಗೌಡರು!
Recommended Video
ಕಾಂಗ್ರೆಸ್ ಬೆಂಬಲದಿಂದ ನಡೆಯುತ್ತಿರುವ ಮೈತ್ರಿ ಸರಕಾರ ಅದೆಷ್ಟು ದಿನ ನಡೆಯುತ್ತದೋ ನಡೆಯಲಿ. ಅದರ ಜತೆ ಜತೆಯಲ್ಲೇ ಪಕ್ಷದ ಸಂಘಟನೆ ಮಾಡೋಣ ಎಂಬ ತೀರ್ಮಾನಕ್ಕೆ ದೊಡ್ಡ ಗೌಡರು ಬಂದಂತಿದೆ.
ಕಾಂಗ್ರೆಸ್ ನಾಯಕರು ಯಾವಾಗ ಬೇಕಾದರೂ ಕೈ ಕೊಡಬಹುದು ಅಥವಾ ಕಾಂಗ್ರೆಸ್ ನ ಅತೃಪ್ತ ಶಾಸಕರು ಬಿಜೆಪಿಯತ್ತ ಮುಖ ಮಾಡಿದರೂ ಮಾಡಬಹುದು. ಇಂತಹ ಪರಿಸ್ಥಿಯಲ್ಲಿ ಮಧ್ಯಂತರ ಚುನಾವಣೆ ಬಂದರೆ ಆಗ ಪಕ್ಷ ಸಂಘಟನೆಗೆ ಇಳಿದರೆ ಅದರ ಪರಿಣಾಮ ಶೂನ್ಯವಾಗುತ್ತದೆ. ಆದ್ದರಿಂದ ಈಗಿನಿಂದಲೇ ಪಾದಯಾತ್ರೆ, ಸಭೆಗಳ ಮೂಲಕ ಜನರ ಬಳಿಗೆ ಹೋದರೆ ಒಂದೆಡೆ ಪಕ್ಷದ ಸಂಘಟನೆಯೂ ಆಗುತ್ತದೆ. ಚುನಾವಣೆ ನಡೆದರೆ ಲಾಭವೂ ಸಿಗುತ್ತದೆ ಎಂಬ ಲೆಕ್ಕಾಚಾರಕ್ಕೆ ದೇವೇಗೌಡರು ಬಂದಂತಿದೆ.
ಒಕ್ಕಲಿಗರಿಂದಲೇ ಸೋತಿದ್ದರೆ ಸಂತೋಷ: ಗೌಡ್ರ ಹೇಳಿಕೆಯ ಹಿಂದೆ ಏನಿದು ಗೂಡಾರ್ಥ?
ಹಾಗೆ ನೋಡಿದರೆ ಈ ಬಾರಿಯ ಲೋಕಸಭಾ ಚುನಾವಣೆಯ ಸೋಲಿನಿಂದ ಸ್ವತಃ ದೇವೇಗೌಡರು ಸೇರಿದಂತೆ ಇಡೀ ಕುಟುಂಬ ಶಾಕ್ ನಿಂದ ಹೊರ ಬಂದಿಲ್ಲ. ಸೋಲು ಅವರ ಮೇಲೆ ಭಾರೀ ಪರಿಣಾಮ ಬೀರಿದೆ ಎನ್ನುವುದಂತೂ ನಿಜ. ಹೀಗಾಗಿ ಅವರು ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂಬ ಮಾತನ್ನು ಹೇಳುತ್ತಿದ್ದಾರೆ. ಆದರೆ ರಾಜಕೀಯದಲ್ಲಿ ಸಕ್ರಿಯವಾಗಿದ್ದುಕೊಂಡು ಪಕ್ಷವನ್ನು ಸಂಘಟಿಸುವ ಹುಮ್ಮಸ್ಸು ತೋರುತ್ತಿದ್ದಾರೆ.
ದೇವೇಗೌಡರ ರಾಜಕೀಯ ನಿವೃತ್ತಿ ಜೆಡಿಎಸ್ ಗೆ ಆಪತ್ತು
ಒಂದು ವೇಳೆ ದೇವೇಗೌಡರೇನಾದರೂ ರಾಜಕೀಯ ನಿವೃತ್ತಿ ಪಡೆದುಬಿಟ್ಟರೆ ಜೆಡಿಎಸ್ ಪಕ್ಷದ ಮೇಲೆ ಭಾರೀ ಪರಿಣಾಮವಾಗಲಿದೆ. ಒಂದಷ್ಟು ಮಂದಿ ಪಕ್ಷದಿಂದ ಹೊರ ಬಂದರೂ ಅಚ್ಚರಿ ಪಡಬೇಕಾಗಿಲ್ಲ. ತಾವು ಕಟ್ಟಿ ಬೆಳೆಸಿದ ಪಕ್ಷವನ್ನು ರಾಜ್ಯದಲ್ಲಿ ಉಳಿಸಿಕೊಳ್ಳುವ ಮೂಲಕ ಸಂಘಟನೆ ಮಾಡಿ ಮತ್ತೆ ಎದ್ದು ನಿಲ್ಲಬೇಕೆಂಬ ಹಠ ದೇವೇಗೌಡರಲ್ಲಿದೆ. ತಾನು ಹಿಂದೆ ಸರಿದರೆ ಪಕ್ಷವನ್ನು ಮುನ್ನಡೆಸಿಕೊಂಡು ಹೋಗುವಲ್ಲಿ ಒಂದಷ್ಟು ತೊಂದರೆಯಾಗಬಹುದು ಎಂಬುದು ಅವರಿಗೆ ಗೊತ್ತಿದೆ. ಹೀಗಾಗಿಯೇ ತಾವು ಹಿಂದೆ ನಿಂತು, ಮೊಮ್ಮಕ್ಕಳನ್ನು ಮುಂದೆ ಕಳುಹಿಸುವ ಮೂಲಕ ರಾಜ್ಯದಲ್ಲಿ ಪಾದಯಾತ್ರೆ ಮಾಡಿ, ಪಕ್ಷ ಸಂಘಟನೆ ಮಾಡುವ ಚಿಂತನೆಯಲ್ಲಿದ್ದಾರೆ. ಇದು ಪಕ್ಷಕ್ಕೆ ಯಾವ ರೀತಿಯಲ್ಲಿ ಸಹಾಯವಾಗುತ್ತದೆ ಎಂಬುದನ್ನು ಕಾಲವೇ ಹೇಳಬೇಕಿದೆ. ಆದರೆ ಪ್ರಯತ್ನಗಳನ್ನು ಮಾತ್ರ ಮಾಡಿಯೇ ಮಾಡುತ್ತಾರೆ ಎಂಬುದರಲ್ಲಿ ಎರಡು ಮಾತಿಲ್ಲ.
ಕುಮಾರಸ್ವಾಮಿ ಏನು ಮಾಡಿದರೂ ಎಡವಟ್ಟು
ವಿಧಾನಸಭಾ ಚುನಾವಣೆ ವೇಳೆ ತಾನು ಮುಖ್ಯಮಂತ್ರಿಯಾದರೆ ರೈತರಿಗೆ ಉಪಯೋಗವಾಗುವ ಹತ್ತಾರು ಸೌಲಭ್ಯಗಳನ್ನು ಒದಗಿಸಿಕೊಡುವ ಮತ್ತು ಸಾಲಮನ್ನಾ ಮಾಡುವ ಹಲವು ಯೋಜನೆಗಳ ಬಗ್ಗೆ ಭರವಸೆಗಳನ್ನು ಎಚ್.ಡಿ.ಕುಮಾರಸ್ವಾಮಿ ನೀಡಿದ್ದರು. ಚುನಾವಣಾ ಫಲಿತಾಂಶ ಬಳಿಕ ಬಹುಮತ ಪಡೆದು ಮುಖ್ಯಮಂತ್ರಿ ಆಗದಿದ್ದರೂ ಕಾಂಗ್ರೆಸ್ನ ಬೆಂಬಲದೊಂದಿಗೆ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ ಅವರು ಇದೀಗ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಪರದಾಡುವಂತಾಗಿದೆ. ಇದು ರೈತರೇ ತಿರುಗಿ ಬೀಳುವಂತಾಗಿದೆ. ಕಳೆದೊಂದು ವರ್ಷದ ಅವಧಿಯ ಅವರ ಆಡಳಿತದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರಶಂಸೆ ವ್ಯಕ್ತವಾಗಿಲ್ಲ. ಅವರ ದುರದೃಷ್ಟವೋ ಏನೋ ಏನೇ ಮಾಡಿದರೂ ಎಡವಟ್ಟಾಗುತ್ತಿದೆ. ಅದು ನಕಾರಾತ್ಮಕವಾಗಿ ಜನರ ಮುಂದೆ ಹೋಗುತ್ತಿದೆ.
ಸ್ಪರ್ಧಿಸಿದ್ದು ಆಕಸ್ಮಿಕ, ಇನ್ನು ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ: ದೇವೇಗೌಡ
ಅತೃಪ್ತರು ಒಂದಲ್ಲಾ ಒಂದು ರೀತಿ ತಿವಿಯುತ್ತಿದ್ದಾರೆ
ಸದ್ಯದ ಪರಿಸ್ಥಿತಿಯಲ್ಲಿ ಆಡಳಿತದ ಅವಧಿಯ ಎಣಿಕೆ ಮಾಡುತ್ತಾ ದಿನ ಕಳೆಯುತ್ತಿದ್ದಾರೆಯೇ ವಿನಾ ಬೇರೆ ಏನನ್ನೂ ಮಾಡಲಾರದ ಸ್ಥಿತಿಗೆ ಬಂದು ತಲುಪಿದ್ದಾರೆ. ಕಾಂಗ್ರೆಸ್ ಬೆಂಬಲ ನೀಡಿದ್ದರೂ ಆ ಪಕ್ಷದ ಅತೃಪ್ತರು ಸದಾ ಒಂದಲ್ಲ ಒಂದು ರೀತಿಯಲ್ಲಿ ತಿವಿಯುತ್ತಲೇ ಬರುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ವಿರೋಧ ಪಕ್ಷ ಬಿಜೆಪಿ ಪ್ರಬಲವಾಗಿ ಇರುವುದರಿಂದಾಗಿ ಸಿಎಂ ಕುಮಾರಸ್ವಾಮಿ ಏನೇ ಮಾಡಿದರೂ ಪ್ರಯೋಜನಕ್ಕೆ ಬಂದಂತೆ ಕಾಣುತ್ತಿಲ್ಲ. ಹೀಗಾಗಿ ಏನು ಮಾಡಬೇಕೆಂದು ತೋಚದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಇದ್ದಾರೆ. ಒಂದು ಕಾಲದಲ್ಲಿ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಗಮನ ಸೆಳೆದಿದ್ದ ಸಿಎಂ ಕುಮಾರಸ್ವಾಮಿ ಅವರಿಗೆ ಈ ಬಾರಿಯ ಗ್ರಾಮ ವಾಸ್ತವ್ಯ ಮಗ್ಗುಲ ಮುಳ್ಳಾಗಿ ಚುಚ್ಚಿದೆ. ಪ್ರಶಂಸೆ ವ್ಯಕ್ತವಾಗುವ ಬದಲಾಗಿ ಟೀಕೆಗಳೇ ಹೆಚ್ಚಾಗಿ ಅದು ದುಂದು ವೆಚ್ಚದ, ಡ್ರಾಮ ಎಂಬಂತೆ ಬಿಂಬಿತವಾಗಿದೆ.
ಮೊಮ್ಮಕ್ಕಳನ್ನು ಮುಂದೆ ಬಿಟ್ಟು ಪಕ್ಷ ಸಂಘಟನೆ
ಈಗ ಮುಖ್ಯಮಂತ್ರಿಯಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರು ಮುಂದೆ ನಿಂತು ಪಕ್ಷವನ್ನು ಮುನ್ನಡೆಸುವ ಸ್ಥಿತಿಯಲ್ಲಿ ಇಲ್ಲ. ಇನ್ನು ರಾಜ್ಯಾಧ್ಯಕ್ಷರಾಗಿದ್ದ ಎಚ್.ವಿಶ್ವನಾಥ್ ಅವರು ರಾಜೀನಾಮೆ ಸಲ್ಲಿಸಿ ತೆಪ್ಪಗೆ ಕೂತಿದ್ದಾರೆ. ಹೀಗಾಗಿ ಪಕ್ಷಕ್ಕೆ ಸಾರಥಿ ಇಲ್ಲದಂತಾಗಿದೆ. ಇದೆಲ್ಲವನ್ನೂ ಗಮನಿಸಿದ ದೇವೇಗೌಡರು ತಮ್ಮ ಮೊಮ್ಮಕ್ಕಳನ್ನು ಮುಂದಿಟ್ಟುಕೊಂಡು ಪಕ್ಷದ ಸಂಘಟನೆಗೆ ಇಳಿಯುವ ಚಿಂತನೆ ಮಾಡಿದ್ದಾರೆ. ಅವರಿಗೂ ಮೈತ್ರಿ ಸರಕಾರ ಹೆಚ್ಚು ದಿನ ಉಳಿಯಲ್ಲ ಎಂಬ ಅನುಮಾನ ಬಂದಿದೆ. ಮಧ್ಯಂತರ ಚುನಾವಣೆ ಎದುರಾದರೆ ಪಕ್ಷ ಅನಿವಾರ್ಯವಾಗಿ ಸ್ಪರ್ಧೆ ಮಾಡಲೇ ಬೇಕಾಗುತ್ತದೆ. ಆಗ ಜನರ ಹತ್ತಿರ ಹೋದರೆ ವಿರೋಧ ಎದುರಿಸಬೇಕಾಗುತ್ತದೆ. ಅದರ ಬದಲಿಗೆ ಈಗಿನಿಂದಲೇ ಕಾರ್ಯಪ್ರವೃತ್ತರಾದರೆ ಪಕ್ಷಕ್ಕೆ ಲಾಭವಾಗುತ್ತದೆ ಎಂಬ ಚಿಂತನೆ ದೇವೇಗೌಡರದ್ದಾಗಿದೆ. ರಾಜ್ಯದಲ್ಲಿ ರಾಜಕೀಯವಾಗಿ ಮಾತ್ರವಲ್ಲದೆ, ಎಲ್ಲ ವಿಚಾರದಲ್ಲಿಯೂ ಪರಿಸ್ಥಿತಿ ಹದಗೆಟ್ಟಿದೆ. ಹೀಗಿರುವಾಗ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತನ್ನ ಸಂಪುಟದ ಕೆಲವು ಸಚಿವರೊಂದಿಗೆ ಅಮೆರಿಕಾದಲ್ಲಿದ್ದಾರೆ.
ಮೊಮ್ಮಕ್ಕಳನ್ನು ಹೊಗಳಿದ ದೇವೇಗೌಡ: ಪ್ರಜ್ವಲ್ಗೆ ಕಿವಿಮಾತು
ಬಿಜೆಪಿ ನಾಯಕರಲ್ಲಿ ಹುಮ್ಮಸ್ಸು
ಇತ್ತ ಬಿಜೆಪಿ ನಾಯಕರಲ್ಲಿ ಹುಮ್ಮಸ್ಸು ಕಾಣಿಸುತ್ತಿದೆ. ಶೀಘ್ರವೇ ಸರಕಾರ ಬೀಳುತ್ತದೆ. ರಾಜ್ಯದಲ್ಲಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತದೆ ಎಂಬಂತಹ ಮಾತುಗಳನ್ನು ನಾಯಕರು ತೇಲಿ ಬಿಡುತ್ತಿದ್ದಾರೆ. ಇದರ ಒಳಮರ್ಮಗಳಂತೂ ಅರ್ಥವಾಗುತ್ತಿಲ್ಲ. ಕಳೆದೊಂದು ವರ್ಷದಿಂದ ಮೈತ್ರಿ ಪಕ್ಷಗಳು ಮತ್ತು ವಿರೋಧ ಪಕ್ಷದ ನಾಯಕರ ಹಾವು- ಏಣಿ ಆಟವನ್ನು ನೋಡುತ್ತಾ ಬಂದಿರುವ ಜನ ಇನ್ನೆಷ್ಟು ದಿನ ಇದನ್ನು ಸಹಿಸಿಕೊಳ್ಳಬೇಕೋ ಎಂಬ ಚಿಂತೆಯಲ್ಲಿದ್ದಾರೆ. ಆದರೆ ಎಲ್ಲವನ್ನೂ ಸರಿ ಮಾಡಿಕೊಂಡು, ಮೈತ್ರಿ ಸರಕಾರವನ್ನು ಯಶಸ್ವಿಯಾಗಿ ಮುಂದುವರಿಸಿಕೊಂಡು ಹೋಗುವ ಅವಕಾಶ ಪೂರ್ಣ ಪ್ರಮಾಣದಲ್ಲಿ ಏನೂ ಕೈ ತಪ್ಪಿಲ್ಲ. ಹಾಗೆ ಆಗಬೇಕಿದ್ದಲ್ಲಿ ಕಾಂಗ್ರೆಸ್- ಜೆಡಿಎಸ್ ಎರಡೂ ಪಕ್ಷಗಳಿಂದ ತ್ಯಾಗ ಮಾಡಬೇಕಾಗುತ್ತದೆ. ಆದರೆ ಎಲ್ಲದಕ್ಕೂ ಕಾಲವೇ ಉತ್ತರಿಸಬೇಕಾಗಿದೆ.