ಗುಜರಾತ್ ಚುನಾವಣೆ ಫಲಿತಾಂಶ: ಪಾಠ ಒಂದು, ಎರಡು, ಮೂರು, ನಾಲ್ಕು...
"ಗುಜರಾತ್ ನನ್ನ ತಾಯಿ, ನನ್ನ ಆತ್ಮ. ಗುಜರಾತಿಗರಿಗೆ ಅವಮಾನ ಮಾಡಿದ ಕಾಂಗ್ರೆಸ್ ನವರಿಗೆ ಪಾಠ ಕಲಿಸಿ. ನನ್ನಂಥ ಬಡ ಕುಟುಂಬದ ಹಿನ್ನೆಲೆಯಿರುವ ವ್ಯಕ್ತಿ ಈ ದೇಶದ ಪ್ರಧಾನಿ ಆಗಿರುವುದನ್ನು ಅವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ನನ್ನನ್ನು ಪಕ್ಕಕ್ಕೆ ಸರಿಸಲು ಅವರು ಪಾಕಿಸ್ತಾನದಲ್ಲಿ ಸುಪಾರಿ ಕೊಟ್ಟಿದ್ದಾರೆ"
-ಇವೆಲ್ಲ ಬಿಡಿ ವಾಕ್ಯಗಳು. ಹೀಗೆ ದೊಡ್ಡ ಧ್ವನಿಯಲ್ಲಿ ಸದ್ದು ಮಾಡಿದವರು ಪ್ರಧಾನಿ ನರೇಂದ್ರ ಮೋದಿ. ಗುಜರಾತ್ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ. ಆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಸಾಧನೆಗಳನ್ನಾಗಲಿ, ಕೇಂದ್ರ ಸರಕಾರದ ಯೋಜನೆಗಳನ್ನಾಗಲಿ ಹೆಚ್ಚು ಮುಂದಿಡದೆ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದರು ಮೋದಿ.
ಡಿಸೆಂಬರ್ ಹದಿನೆಂಟರ ಸೋಮವಾರ ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದೆ. ಗೆಲುವಿಗಾಗಿ ಏದುಸಿರು ಬಿಡುತ್ತಿರುವುದು ಅಲ್ಲೆಲ್ಲೋ ದೂರದ ಗುಜರಾತ್ ನಿಂದ ಕರ್ನಾಟಕದವರೆಗೆ ಕೇಳಿಸುತ್ತಿದೆ. ಹಾಗಂತ ಬಿಜೆಪಿಯನ್ನು ಟೀಕಿಸಲೇ ಬೇಕೆಂಬುದು ಉದ್ದೇಶವಲ್ಲ. ಚುನಾವಣೆ ಅಂದರೆ ಬಹುಮತ ಹಾಗೂ ಯಾವ ಪಕ್ಷ ಅಧಿಕಾರ ಹಿಡಿಯಿತು ಎಂಬುದು ಮುಖ್ಯ.

ಹತ್ತು-ಹದಿನೈದು ಹೆಚ್ಚು ಸ್ಥಾನವಷ್ಟೇ ಗಳಿಸುವ ಸಾಧ್ಯತೆ
ಅಲ್ಲಿ ಮತ್ತೆ ಕೂದಲು ಸೀಳುತ್ತಾ ಮತ ಪ್ರಮಾಣ, ಹೋದ ಬಾರಿ ಗಳಿಸಿದ್ದಿಷ್ಟು, ಈ ಸಲ ಹೀಗೆ ಎಂದು ನೂರೆಂಟು ವ್ಯಾಖ್ಯೆ ಮಾಡಬಹುದು. ಅಂತಿಮವಾಗಿ ಅಧಿಕಾರ ಹಿಡಿಯುವುದೇ ಮುಖ್ಯವಾಗುತ್ತದೆ. ಗುಜರಾತ್ ನಲ್ಲಿ ಮಗದೊಮ್ಮೆ ಬಿಜೆಪಿ ಝಂಡಾ ಹಾರಲಿದೆ. ಎಲ್ಲರನ್ನೂ ಒಟ್ಟಾಗಿ ಸೇರಿಸಿಕೊಂಡು, ಜಿಎಸ್ ಟಿ- ಅಪನಗದೀಕರಣ, ಜಿಡಿಪಿ ಮತ್ತೊಂದು ಎಂದು ಕಾಂಗ್ರೆಸ್ ಕತ್ತಿ ಝಳಪಿಸಿದ್ದಕ್ಕೆ ಕಳೆದ ಬಾರಿಗಿಂತ ಹತ್ತು-ಹದಿನೈದು ಹೆಚ್ಚು ಸ್ಥಾನವಷ್ಟೇ ಗಳಿಸುವ ಸಾಧ್ಯತೆ ಇದೆ.

ಮಣಿಶಂಕರ್ ಅಯ್ಯರ್ ರಿಂದ ಆದ ಅನುಕೂಲ
ಮಣಿಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು 'ನೀಚ್ ಆದ್ಮಿ' ಎಂದು ಕರೆಯುವ ಮೂಲಕ ಗುಜರಾತ್ ನ ಜನರ ಅಭಿಮಾನ ಕೆಣಕದೇ ಹೋಗಿದ್ದರೆ ಏನಾಗಿರುತ್ತಿತ್ತು? ಕೇಂದ್ರದ ಮಾಜಿ ಸಚಿವ ಮಣಿಶಂಕರ್ ಅಯ್ಯರ್ ಎಸೆದ ಮಾತಿನ ಕವಣೆ ಕಲ್ಲು ಮತದಾನದ ಮೇಲೆ ಪರಿಣಾಮ ಬೀರಿ, ಬಿಜೆಪಿಗೆ ಒಂದಿಷ್ಟು ಅನುಕೂಲ ಮಾಡಿಕೊಟ್ಟಂತೆ ಕಾಣುತ್ತಿದೆ.

ಸಿಟ್ಟು ತಮಣಿ ಮಾಡುವಲ್ಲಿ ಯಶಸ್ವಿ
ಗುಜರಾತ್ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ ಜಿಎಸ್ ಟಿ ಕೌನ್ಸಿಲ್ ಸಭೆ ನಡೆದಾಗ ಹಲವು ವಸ್ತು ಹಾಗೂ ಸೇವೆಗಳ ಮೇಲೆ ಹಾಕಿದ್ದ ತೆರಿಗೆಯನ್ನು ಇಳಿಸಲಾಯಿತು. ಅದು ವರ್ತಕರ ವಲಯದಲ್ಲಿ ಪರಿಣಾಮ ಬೀರಿದಂತೆ ಕಾಣುತ್ತಿದೆ. ಗುಜರಾತ್ ನಲ್ಲಿ ಬೀರಿದ್ದ ಅಪನಗದೀಕರಣ, ಜಿಎಸ್ ಟಿ ಪ್ರಭಾವ ತಮಣಿ ಮಾಡುವಲ್ಲಿ ಬಿಜೆಪಿ ತಕ್ಕ ಮಟ್ಟಿಗೆ ಯಶಸ್ವಿ ಆದಂತಿದೆ.

ಅಬ್ಬರದ ಪ್ರಚಾರ ಮಾಡದೇ ಹೋಗಿದ್ದರೆ...
ಆಡಳಿತ ವಿರೋಧಿ ಅಲೆ, ಜಿಎಸ್ ಟಿ ಜಾರಿ, ಅಪನಗದೀಕರಣ ಹೀಗೆ ತನಗೆ ವಿರುದ್ಧವಾದ ಅಂಶಗಳಿರುವಂತೆಯೇ ಕೇಂದ್ರದಲ್ಲಿನ ಅಧಿಕಾರ, ಮೋದಿ ಫ್ಯಾಕ್ಟರ್ ಬಿಜೆಪಿಗೆ ಗುಜರಾತ್ ನಲ್ಲಿ ಶಕ್ತಿಯಾಗಿತ್ತು. ಅದನ್ನು ತುಂಬ ದೊಡ್ಡ ಅಬ್ಬರದೊಂದಿಗೆ ಪ್ರದರ್ಶನ ಮಾಡಿದರೂ ಕೇಸರಿ ಪಕ್ಷಕ್ಕೆ ಹೆಚ್ಚಿನ ಲಾಭ ಆದಂತೆ ಕಾಣುತ್ತಿಲ್ಲ. ಒಂದು ವೇಳೆ ಬಿಜೆಪಿ ಸ್ವಲ್ಪ ಮೈ ಮರೆತಿದ್ದರೂ ಮಕಾಡೆ ಮಲಗುತ್ತಿತ್ತೇನೋ ಎಂಬ ಗುಮಾನಿ ಬರುವಂತೆ ಮಾಡುತ್ತಿದೆ ಈ ಫಲಿತಾಂಶ.

ಸ್ಥಳೀಯ ನಾಯಕರ ಕೊರತೆ
ಗುಜರಾತ್ ರಾಜ್ಯ ಮೋದಿ ಅವರ ಹೋಮ್ ಪಿಚ್. ಅಲ್ಲಿನ ರಾಜಕೀಯ ಅಂಗೈ ಗೆರೆಯಷ್ಟೇ ಅವರಿಗೆ ಸುಪರಿಚಿತ. ಪ್ರಧಾನಿ ಆದ ನಂತರ ಎದುರಾದ ಮೊದಲ ಸವಾಲು ಈ ಚುನಾವಣೆ. ಇಂಥ ಸ್ಥಿತಿಯಲ್ಲಿ ಕಂಡುಬಂದಿದ್ದೇನೆಂದರೆ ಈಗಲೂ ಮೋದಿ ಅವರೇ ಅಖಾಡಕ್ಕೆ ಇಳಿಯಬೇಕು. ಮತ ಸೆಳೆಯಲು ರಣತಂತ್ರ ಹೆಣೆಯಬೇಕು. ಸ್ಥಳೀಯವಾಗಿ ಬಿಜೆಪಿಯಲ್ಲಿ ವರ್ಚಸ್ವಿ ನಾಯಕರೇ ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

ಊರಲ್ಲಿನ ಮದುವೆಗೆಲ್ಲ ನಂದೇ ಪೌರೋಹಿತ್ಯ
ಇನ್ನು ಐದು ವರ್ಷ ಬಿಜೆಪಿಗೆ ಗುಜರಾತ್ ರಾಜ್ಯದ ಅಧಿಕಾರ ನಿಕ್ಕಿ ಎಂಬಂತಿದೆ. ಹೇಗೆ ಕಾಂಗ್ರೆಸ್ ನಲ್ಲಿ ಸ್ಥಳೀಯ ನಾಯಕತ್ವ ದುರ್ಬಲವಾಯಿತೋ ಅದೇ ರೀತಿ ಬಿಜೆಪಿಯಲ್ಲೂ ಆಗದಂತೆ ಇರಲು ಇದು ಎಚ್ಚರಿಕೆ ಗಂಟೆಯಾಗಬೇಕು. ಊರಲ್ಲಿನ ಮದುವೆಗೆಲ್ಲ ನಂದೇ ಪೌರೋಹಿತ್ಯ ಎಂದು ಎಲ್ಲ ಚುನಾವಣೆಯಲ್ಲೂ ಪ್ರಧಾನಿ ಮೋದಿಯೇ ಅಖಾಡಕ್ಕೆ ಇಳಿಯುವ ಸ್ಥಿತಿ ಬಂದರೆ ಕಷ್ಟ.












Click it and Unblock the Notifications