ಸ್ವಾತಂತ್ರ್ಯ ದಿನದಂದು ಮೋದಿಗೆ ಸವಾಲು ಹಾಕಿದ್ದ ಹಳೇ ವಿಡಿಯೋ ವೈರಲ್
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ 75ನೇ ವರ್ಷದ ದಿನಾಚರಣೆಯನ್ನು ಭಾರತೀಯರು ಅಭೂತಪೂರ್ವವಾಗಿ ವಿಜ್ರುಂಭಿಸಿ ಆಚರಿಸಿದ್ದಾರೆ. ಎಲ್ಲಿ ನೋಡಿದರಲ್ಲಿ ದೇಶದ ತ್ರಿವರ್ಣ ಧ್ವಜದ ಭಾವುಟ, ದೇಶ ಭಕ್ತಿ ಘೋಷಣೆ.
ಪ್ರಧಾನಿ ಮೋದಿ ಕರೆ ನೀಡಿದ್ದ ಘರ್ ಘರ್ ತಿರಂಗ ಅಭಿಯಾನ ದೇಶದಲ್ಲಿ ಯಶಸ್ವಿಯಾಗಿದೆ. ಜೊತೆಗೆ, ಸರಕಾರ ಮತ್ತು ಖಾಸಗಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳು ಹುಮ್ಮಸ್ಸಿನಿಂದ ಪಾಲ್ಗೊಂಡಿದ್ದರಿಂದ ರಾಷ್ಟ್ರದೆಲ್ಲಡೆ ಇದು ಯಶಸ್ಸನ್ನು ಕಂಡಿತು.
ಈ ನಡುವೆ, ವರ್ಷಗಳ ಹಿಂದೆ ಕರ್ನಾಟಕದ ಶಾಲೆಯೊಂದರಲ್ಲಿ ಹುಡುಗನೊಬ್ಬನು ಧ್ವಜಾರೋಹಣದ ನಂತರ ಮಾಡಿದ ಭಾಷಣ ಮತ್ತದರಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಸವಾಲು ಹಾಕಿದ್ದು ವೈರಲ್ ಆಗುತ್ತಿದೆ.
ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಈ ಹುಡುಗ ಭಾಷಣ ಮಾಡುತ್ತಿದ್ದು, ದೇಶದಲ್ಲಿನ ಭ್ರಷ್ಟಾಚಾರ, ಸ್ವಾತಂತ್ರ್ಯ ಸಿಗಲು ಮಹನೀಯರ ಕೊಡುಗೆಯ ಬಗ್ಗೆ ಹುಡುಗ ಉಲ್ಲೇಖಿಸಿದ್ದಾನೆ.

ಬ್ರಿಟಿಷರ ಕೆನ್ನೆಗೆ ಬಾರಿಸಿ ಆಜಾದಿಯ ಕಿಚ್ಚನ್ನು ಹೆಚ್ಚಿಸಿದ ಮಂಗಲ್ ಪಾಂಡೆ
ಸ್ವಾತಂತ್ರ್ಯದಿನ ಎನ್ನುವುದು ನಮ್ಮ ಮಹನೀಯರಿಗೆ ಗೌರವ ಸಲ್ಲಿಸುವ ಸುದಿನ, 1857ರಲ್ಲಿ ಕೆಂಪುಕೋಟೆಯಲ್ಲಿ ಬ್ರಿಟಿಷರ ಕೆನ್ನೆಗೆ ಬಾರಿಸಿ ಆಜಾದಿಯ ಕಿಚ್ಚನ್ನು ಹೆಚ್ಚಿಸಿದ ಮಂಗಲ್ ಪಾಂಡೆಯಿಂದ ಹಿಡಿದು, ಕಿತ್ತೂರು ರಾಣಿ ಚೆನ್ನಮ್ಮ, ಬಾಲಗಂಗಾಧರ ತಿಲಕ್, ಮಹಾತ್ಮ ಗಾಂಧೀಜಿ ಮುಂತಾದವರನ್ನು ನಾವು ನೆನಪಿಸಿಕೊಳ್ಳಬೇಕು. ಬ್ರಿಟಿಷರು ಮುನ್ನೂರು ವರ್ಷ ನಮ್ಮ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದರು, ಆದರೆ ಅದ್ಯಾವುದೂ ನಮಗೆ ತಿಳಿಯಲೇ ಇಲ್ಲ ಎಂದು ಹುಡುಗ ತನ್ನ ಭಾಷಣದಲ್ಲಿ ಪ್ರಸ್ತಾವಿಸುತ್ತಾನೆ.

ಸ್ವಾತಂತ್ರ್ಯದ ಹೋರಾಟ ತೀವ್ರಗೊಳ್ಳುತ್ತಾ ಸಾಗಿತು
ದತ್ತು ಮಕ್ಕಳಿಗೆ ಹಕ್ಕಿಲ್ಲ ಎನ್ನುವ ಪದ್ದತಿಯನ್ನು ಬ್ರಿಟಿಷರು ಯಾವಾಗ ಜಾರಿಗೆ ತಂದರೋ, ಅಲ್ಲಿಂದ ಸ್ವಾತಂತ್ರ್ಯದ ಹೋರಾಟ ತೀವ್ರಗೊಳ್ಳುತ್ತಾ ಸಾಗಿತು. ಅಂದಿನಿಂದ ಇಂದಿನವರೆಗೆ ಬಡವರ ಸಮಸ್ಯೆಗಳಿಗೆ ಬೆಲೆಯೇ ಇಲ್ಲ, ಶ್ರೀಮಂತರು ಮತ್ತು ರಾಜಕಾರಣಿಗಳ ಮಾತಿಗೆ ಮಾತ್ರ ಸೊಪ್ಪು ಹಾಕಲಾಗುತ್ತಿದೆ. ಧೂಮಪಾನ, ಮದ್ಯಪಾನವನ್ನು ಇವರು ನಿಷೇಧಗೊಳಿಸುವುದಿಲ್ಲ. ಪಡಿತರ ಬೆಲೆಯಲ್ಲಿ ಸಿಗುವ ಅಕ್ಕಿ ತೀರಾ ಕಳಪೆ ಮಟ್ಟದಲ್ಲಿರುತ್ತದೆ, ಅದರ ಬಗ್ಗೆ ಯಾರೂ ಮಾತನಾಡುವುದಿಲ್ಲ ಎಂದು ಹುಡುಗ ತನ್ನ ಭಾಷಣದಲ್ಲಿ ಹೇಳಿದ್ದಾನೆ.

ಪ್ರಧಾನಿ ಮೋದಿಯವರಿಗೆ ಒಂದು ಸವಾಲನ್ನು ಹಾಕುತ್ತೇನೆ
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರಿಗೆ ಒಂದು ಸವಾಲನ್ನು ಹಾಕುತ್ತೇನೆ, ಮೋದಿಯವರು ತಮ್ಮ ಪ್ರತೀ ಭಾಷಣದಲ್ಲಿ ಅಚ್ಚೇದಿನ್ ಎಂದು ಹೇಳುತ್ತಾರೆ. ಬಡವರ ಸಮಸ್ಯೆಗಳು ಪರಿಹಾರಗೊಳ್ಳಬೇಕಾದರೆ, ಚಿಗುರುಚಿಗುರಿನಲ್ಲಿ ಬೆಳೆದಿರುವ ಭ್ರಷ್ಟಾಚಾರವನ್ನು ನಿರ್ಮೂಲನಗೊಳಿಸಬೇಕು. ಅದಕ್ಕಾಗಿ, ಲಂಚ ತೆಗೆದುಕೊಳ್ಳುವ ಅಧಿಕಾರಿಗಳನ್ನು ಮತ್ತು ರಾಜಕಾರಣಿಗಳನ್ನು ಗಲ್ಲಿಗೇರಿಸಬೇಕು. ಆಗ ನಮ್ಮ ದೇಶದಲ್ಲಿ ಎಲ್ಲವೂ ಸರಿಹೋಗುತ್ತದೆ ಎಂದು ಹುಡುಗ, ಮೋದಿಗೆ ಸವಾಲಿನ ಮೂಲಕ ಮನವಿ ಮಾಡಿದ್ದಾನೆ.

ಮೋದಿಗೆ ಸವಾಲ್: ಹುಡುಗನೊಬ್ಬನ ಹಳೇ ವಿಡಿಯೋ ವೈರಲ್
ನನಗ್ಯಾಕೆ ಬೇಕು ಎನ್ನುವ ಕೆಟ್ಟ ಪದವೇ ನಮ್ಮ ದೇಶದ ಪರಿಸ್ಥಿತಿಗೆ ಕಾರಣ, ರಾಷ್ಟ್ರಕ್ಕೆ ಒಳ್ಲೆಯದಾಗಬೇಕು ಎಂದರೆ ನಾವು ಕೆಟ್ಟವರಾದರೂ ಪರವಾಗಿಲ್ಲ. 135ಕೋಟಿ ಜನಸಂಖ್ಯೆವಿರುವ ನಮ್ಮ ದೇಶ ಪ್ರಪಂಚದ ಅತಿದೊಡ್ಡ ಮಾರುಕಟ್ಟೆ. ಇನ್ನಾದರೂ ನಮ್ಮ ಸರಕಾರ ಎಚ್ಚೆತ್ತುಕೊಂಡು ಮೇಕ್ ಇನ್ ಇಂಡಿಯಾ ಎಂದು ನಮ್ಮ ವಸ್ತುಗಳನ್ನೇ ಬಳಸುವಂತೆ ಯೋಜನೆ ರೂಪಿಸಬೇಕು. ಭಾರತ ದೇಶ ವಿಶ್ವಗುರು ಆಗಲಿ ಎಂದು ಆಶಿಸೋಣ ಎಂದು ಹುಡುಗ ತನ್ನ ಭಾಷಣದ ಮೂಲಕ ಮನವಿ ಮಾಡಿಕೊಂಡಿದ್ದಾನೆ.












Click it and Unblock the Notifications