ಎಲ್ಲಿ ಹೋದವು ಆ ನಮ್ಮ ಹಳ್ಳಿ ಆಟಗಳು ಆ ಆಟಗಳ ಹಿಂದಿದ್ದ ಉದ್ದೇಶ ಏನು ಗೊತ್ತಾ?
ನಮ್ಮ ಬುದ್ದಿಗೆ ಕಸರತ್ತು ನೀಡುತ್ತಿದ್ದ ಹಳ್ಳಿಗಳ ಆಟಗಳನ್ನು ನಮ್ಮಿಂದ ಸದ್ದಿಲ್ಲದೆ ದೂರವಾಗುತ್ತಿದ್ದು, ಹೆಚ್ಚಿನ ಆಟಗಳನ್ನು ಕ್ರಿಕೆಟ್ ನುಂಗಿ ಹಾಕಿದೆ. ಹೀಗಾಗಿ ಹಳ್ಳಿಯಿಂದ ಪಟ್ಟಣದವರೆಗೆ ಎಲ್ಲಿ ನೋಡಿದರೂ ಬ್ಯಾಟ್ ಹಿಡಿದು ಕ್ರಿಕೆಟ್ ಆಡುವುದರಲ್ಲಿ ತಲ್ಲೀನರಾದವರು ಕಂಡು ಬರುತ್ತಿದ್ದಾರೆ. ಹೀಗಾಗಿ ಹಿಂದೆ ಆಡುತ್ತಿದ್ದ ಗ್ರಾಮೀಣ ಕ್ರೀಡೆಗಳು ನೇಪಥ್ಯಕ್ಕೆ ಸರಿಯುತ್ತಿದ್ದು, ಯುವ ಪೀಳಿಗೆಗೆ ಗ್ರಾಮೀಣ ಕ್ರೀಡೆ ಬಗ್ಗೆ ಗೊತ್ತೇ ಇಲ್ಲದಂತಾಗಿದೆ. ಇದಕ್ಕೆ ಮುಖ್ಯ ಕಾರಣ ಪ್ರೋತ್ಸಾಹದ ಕೊರತೆ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕಾಗಿದೆ.
ಕೆಲವು ದಶಕಗಳ ಹಿಂದೆ ಶಾಲೆಗಳಲ್ಲಿ, ಊರ ಮೈದಾನಗಳಲ್ಲಿ ಹಳ್ಳಿಆಟಗಳನ್ನು ಆಡಿಸಿ ಪ್ರೋತ್ಸಾಹಿಸುವಂತಹ ಗ್ರಾಮೀಣ ಕ್ರೀಡಾಕೂಟಗಳು ನಡೆಯುತ್ತಿದ್ದವು. ಇಲ್ಲಿ ಮಕ್ಕಳು, ಮಹಿಳೆಯರು ವೃದ್ಧರು ಹೀಗೆ ಎಲ್ಲರೂ ಸೇರಿ ಕ್ರೀಡೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಇದರಲ್ಲಿ ಸೋಲು ಗೆಲುವಿನ ಲೆಕ್ಕಾಚಾರಕ್ಕಿಂತ ಹೆಚ್ಚಾಗಿ ಒಟ್ಟಾಗಿ ಕಲೆತು ಆಡುವುದು ಮುಖ್ಯವಾಗಿತ್ತು. ಅವತ್ತಿನ ಕಾಲದಲ್ಲಿ ಆಧುನಿಕ ಕ್ರೀಡೆಗಳು ಹೆಚ್ಚಿನ ಪರಿಣಾಮ ಬೀರಿರಲಿಲ್ಲ. ಹೀಗಾಗಿ ಹಬ್ಬ ಹರಿದಿನಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ನಡೆಸಲಾಗುತ್ತಿದ್ದವು.

ವರ್ಷಗಳು ಕಳೆದಂತೆಲ್ಲ ಕ್ರೀಡಾಕೂಟವೆಂದರೆ ಕ್ರಿಕೆಟ್ ಎಂಬ ಸ್ಥಿತಿಗೆ ಬಂದು ನಿಂತಿತು. ಪ್ರಾಯೋಜಕತ್ವದಲ್ಲಿ ಕ್ರೀಡಾಕೂಟಗಳು ನಡೆಯಲಾರಂಭಿಸಿದವು. ಹೀಗಾಗಿ ಗ್ರಾಮೀಣ ಕ್ರೀಡಾಕೂಟಗಳಿಗಿಂತ ಆಧುನಿಕ ಕ್ರೀಡೆಗಳಿಗೆ ಹೆಚ್ಚಿನ ಆದ್ಯತೆ ಸಿಗಲಾರಂಭಿಸಿತು. ಮಕ್ಕಳು ತಾವು ಆಡುತ್ತಿದ್ದ ಹಳ್ಳಿ ಆಟಗಳಿಂದ ಹೊರ ಬಂದು ಕ್ರಿಕೆಟ್ ಗೆ ಒಲವು ತೋರಲಾರಂಭಿಸಿದರು. ಹೀಗೆ ನಿಧಾನವಾಗಿ ಕ್ರಿಕೆಟ್ ಎಲ್ಲರನ್ನು ತನ್ನತ್ತ ಆಕರ್ಷಿಸಿದ ಪರಿಣಾಮ ಇವತ್ತು ಗ್ರಾಮೀಣ ಆಟಗಳು ಜನಮಾನಸದಿಂದ ಮರೆತೇ ಹೋದಂತಾಗಿದೆ.
ಹಳ್ಳಿ ಆಟ ಪ್ರೋತ್ಸಾಹಿಸುವುದು ಬಹುಮುಖ್ಯ
ಇವತ್ತು ಆಗಸ್ಟ್ 29 ಭಾರತದ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನ. ಈ ದಿನನ್ನು ಭಾರತೀಯರಾದ ನಾವು ರಾಷ್ಟ್ರೀಯ ಕ್ರೀಡಾ ದಿನಾಚರಣೆಯಾಗಿ ಆಚರಿಸುತ್ತಿದ್ದೇವೆ. ಈ ಸಂದರ್ಭ ನಾವೆಲ್ಲರೂ ಆಡುತ್ತಾ ಬೆಳೆದ ಹಳ್ಳಿ ಆಟಗಳು ನೆನಪಿಸಿಕೊಳ್ಳುತ್ತಾ ಆಧುನಿಕ ಆಟಗಳತ್ತ ಮುಖ ಮಾಡುವುದು ಬಹುಮುಖ್ಯವಾಗಿದೆ. ಇವತ್ತು ಬ್ಯಾಟ್ ಬಿಸಾಕಿ ಹಳ್ಳಿ ಆಟಗಳನ್ನು ಆಡಿ ಎಂದರೆ ಅದು ಹಾಸ್ಯಾಸ್ಪದವಾಗುತ್ತದೆ. ಆದ್ದರಿಂದ ಕ್ರಿಕೆಟ್ ನಡುವೆ ಹಳ್ಳಿ ಆಟಗಳನ್ನು ಪ್ರೋತ್ಸಾಹಿಸುವುದು ಬಹುಮುಖ್ಯವಾಗಿದೆ.
ಇಂದು ಹಳ್ಳಿ ಆಟಗಳನ್ನು ನೋಡುತ್ತಾ ಹೋದರೆ ಅವುಗಳೆಲ್ಲವೂ ನಮ್ಮ ಬದುಕಿಗೆ ಪೂರಕವಾಗಿದ್ದವು. ಅವು ಹಣ ತಂದುಕೊಡುವ ಕ್ರೀಡೆಯಾಗಿರಲಿಲ್ಲವಾದರೂ ಬದುಕುವುದನ್ನು ಕಲಿಸುವ ಪಾಠಗಳಾಗಿದ್ದವು. ಹೀಗಾಗಿ ಮಕ್ಕಳು ಆಡುತ್ತಾ ಕಲಿಯುತ್ತಿದ್ದವು. ಜತೆಗೆ ಅವು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಕಾರ ನೀಡುವ ವ್ಯಾಯಾಮಗಳಾಗಿದ್ದವು. ಹೀಗಾಗಿ ಆಟವಾಡುತ್ತಾ ದೈಹಿಕವಾಗಿಯೂ ಮಾನಸಿಕವಾಗಿಯೂ ಖುಷಿ, ಸಂತಸಪಡಲು ಅನುಕೂಲ ಮಾಡಿಕೊಡುವ ಮಾರ್ಗವೂ ಇದಾಗಿತ್ತು.

ಹಳ್ಳಿ ಆಟದ ಹಿಂದಿನ ಉದ್ದೇಶಗಳು ಏನಿದ್ದವು?
ಎಲ್ಲೊ ಒಂದು ಕಡೆ ನಾವು ನಾಗರಿಕತೆಗೆ ಮುಖ ಮಾಡಿ ನಡೆಯುತ್ತಿದ್ದಂತೆಯೇ ನಮಗೆ ಅರಿವಿಲ್ಲದಂತೆ ನಮ್ಮೊಂದಿಗೆ ಅರ್ಥಾತ್ ಪೀಳಿಗೆಯಿಂದ ಪೀಳಿಗೆಗೆ ಬಂದ ಮತ್ತು ನಾವೆಲ್ಲರೂ ಆಡುತ್ತಾ ಖುಷಿಪಟ್ಟಿದ್ದ ಬಹಳಷ್ಟು ಹಳ್ಳಿ ಆಟಗಳು ಸದ್ದಿಲ್ಲದೆ ದೂರ ಸರಿಯುತ್ತಾ ಹೋದವು ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಬಹಳಷ್ಟು ಆಟಗಳ ಹೆಸರೇ ನಮಗೆ ಮರೆತು ಹೋಗಿದೆ. ಅವತ್ತಿನ ಕಾಲಕ್ಕೆ ಮಕ್ಕಳ ಮೈಮನವನ್ನು ಉಲ್ಲಾಸಗೊಳಿಸಿದ್ದ ಆಟಗಳು ಇವತ್ತು ಹೇಳಲು ಹೆಸರೇ ಇಲ್ಲದಂತೆ ಇತಿಹಾಸದ ಗರ್ಭ ಸೇರಿ ಹೋಗಿದೆ.
ಹಳ್ಳಿ ಆಟದ ಹಿಂದಿನ ಉದ್ದೇಶಗಳು ಏನಿದ್ದವು? ಅವುಗಳನ್ನು ಯಾವ ಕಾಲದಲ್ಲಿ ಆಡಬೇಕು ಎಂಬ ಕಟ್ಟಳೆಗಳಿದ್ದವು ಎಂಬುದೆಲ್ಲವನ್ನೂ ನೋಡುತ್ತಾ ಹೋದರೆ ಅಚ್ಚರಿಯಾಗುತ್ತವೆ. ಒಂದೊಂದು ಆಟವೂ ಬದುಕಿನಲ್ಲಿ ಮಹತ್ವವನ್ನು ಪಡೆದಿದ್ದವು. ಉದಾಹರಣೆಗೆ ಹಿಂದಿನ ಕಾಲದಲ್ಲಿ ಬೇಟೆಯಾಡುವುದೇ ಮುಖ್ಯವಾಗಿದ್ದುದರಿಂದ ಗುರಿಯಿಡಲು ಅನುಕೂಲವಾಗಲೆಂದು ಗೋಲಿ, ಚಿಣ್ಣಿದಾಂಡು, ಪಿಕ್ಕಿನಾಟವಾಡಿಸುತ್ತಿದ್ದರು. ಇನ್ನು ಮಕ್ಕಳನ್ನು ಯೋಧರನ್ನಾಗಿಸುವ ಸಲುವಾಗಿ ಅವರಿಗೆ ಕೋಲು ಹಾರಿಸುವ ಆಟ, ದೇಹದ ಜಡತ್ವ ಹೊಡೆದೋಡಿಸಿ ಉತ್ಸಾಹ ತುಂಬಿಸುವ ಮತ್ತು ಬೆನ್ನಟ್ಟಿ ಅಕ್ರಮಣ ಪಟುತ್ವದ ಖೋಖೋ ಆಟ, ವ್ಯೂಹ ರಚನೆಯ ಹುಲಿ ಹಸುವಿನ ಆಟವನ್ನು ಆಡಿಸುತ್ತಿದ್ದರು.
ಕ್ರೀಡೆಗೆ ಆದ್ಯತೆ ನೀಡಿದ್ದ ಗ್ರೀಕರು
ಸಮರ ಸನ್ನದ್ಧತೆಗೆ ರಾಜನೀತಿಗೆ ಅನುಕೂಲವಾಗುವ ಬೇಟೆಯ ಆಟ, ತಂತ್ರವನ್ನು ಕಲಿಸುವ ಚದುರಂಗ ಹೀಗೆ ಸೂಕ್ಷ್ಮವಾಗಿ ಕೆಲವೊಂದು ಆಟಗಳನ್ನು ಗಮನಿಸಿದರೆ ಅವು ನಮ್ಮ ಬದುಕಿನಲ್ಲಿ ಕೇವಲ ಮನರಂಜನೆ ಮಾತ್ರವಲ್ಲದೆ ಬದುಕಿಗೂ ಮಾರ್ಗದರ್ಶಿಯಾಗಿದ್ದವು. ಇದರ ಜತೆಗೆ ಪ್ರಾಚೀನ ಕಾಲದಲ್ಲಿ ಈಜಿಪ್ಟ್, ಚೀನಾ, ಗ್ರೀಸ್, ರೋಮ್, ಆಸ್ಟ್ರೇಲಿಯಾ, ಭಾರತ ಮೊದಲಾದ ದೇಶಗಳಲ್ಲಿ ಬೇಟೆ, ಮಲ್ಲಯುದ್ದ, ಬಿಲ್ಲು ಬಾಣಗಳ ಪ್ರದರ್ಶನ, ಭಾರ ಎತ್ತುವುದು, ಗೋಲಿ, ಚೆಂಡು, ಬುಗುರಿ ಆಟಗಳು ಪ್ರಚಲಿತದಲ್ಲಿದ್ದವು.

ಗ್ರೀಕರು ತಮ್ಮ ಬದುಕಿನಲ್ಲಿ ಹೆಚ್ಚಿನ ಸಮಯವನ್ನು ಕ್ರೀಡೆಗಳಿಗಾಗಿಯೇ ಮೀಸಲಿಟ್ಟಿದ್ದರು. ಅಷ್ಟೇ ಅಲ್ಲದೆ ಅವರು, ಆಟ ಪಾಠಗಳಿಂದಲೇ ತಮ್ಮ ದೈಹಿಕ ಮತ್ತು ಬೌದ್ಧಿಕ ಬಲ ಬೆಳೆಸಿಕೊಂಡಿದ್ದರು. ಅವರ ಸಾಧನೆಯಿಂದಲೇ ಒಲಂಪಿಕ್ಸ್ ಕ್ರೀಡೆಗಳು ರೂಪುಗೊಂಡಿದ್ದು ಸಾಕ್ಷಿಯಾಗಿ ನಮ್ಮ ಮುಂದೆ ನಿಂತಿದೆ. ಇದೆಲ್ಲವನ್ನು ಗಮನಿಸಿದರೆ ಎಲ್ಲೊ ಒಂದು ಕಡೆ ನಾವು ಹಳ್ಳಿ ಆಟಗಳನ್ನು ಮರೆತಿದ್ದರಿಂದಲೇ ದೈಹಿಕ ಮತ್ತು ಮಾನಸಿಕ ಆರೋಗ್ಯ ಕೈ ಕೊಟ್ಟಿದೆ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.
ಗ್ರಾಮೀಣ ಕ್ರೀಡೆಗೆ ಆದ್ಯತೆ ಅಗತ್ಯ
ಮೊದಲೆಲ್ಲ ಹಳ್ಳಿಗಳಲ್ಲಿ ಕ್ರೀಡಾಕೂಟಗಳನ್ನು ಏರ್ಪಡಿಸಲಾಗುತ್ತಿತ್ತು. ಆ ಕ್ರೀಡಾ ಕೂಟಗಳಲ್ಲಿ ಹಳ್ಳಿ ಆಟಗಳಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿತ್ತು. ಆದರೆ ಬದಲಾದ ಕಾಲದಲ್ಲಿ ಹಳ್ಳಿ ಆಟಗಳ ಜಾಗವನ್ನೆಲ್ಲ ಕ್ರಿಕೆಟ್ ಆಕ್ರಮಿಸಿಕೊಂಡಿದೆ. ಹಾಗೆಂದು ಕ್ರಿಕೆಟ್ ಆಡಲೇ ಬಾರದು ಎಂದು ಹೇಳುತ್ತಿಲ್ಲ. ಬದಲಿಗೆ ಇತರೆ ಆಟಗಳನ್ನೂ ಪ್ರೋತ್ಸಾಹಿಸಿ ಅವುಗಳ ಪರಿಚಯ ಮತ್ತು ಮಹತ್ವವನ್ನು ಸಾರುವ ಕೆಲಸ ಮಾಡಬೇಕಷ್ಟೆ. ಅದು ಗ್ರಾಮೀಣ ಭಾಗದಿಂದಲೇ ಆರಂಭವಾಗ ಬೇಕಾಗಿದೆ. ಇದು ಸಾಧ್ಯವಾದರೆ ಅದಕ್ಕಿಂತ ಸಂತಸ ಬೇರೊಂದಿಲ್ಲ.
-
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು












Click it and Unblock the Notifications