ಹೇಗಿರಲಿದೆ ಪಂಚಲಿಂಗ ದರ್ಶನದ ವಿಧಿ ವಿಧಾನಗಳು...
ಇತರೆ ದಿನಗಳಲ್ಲಿ ಪವಿತ್ರ ಮತ್ತು ಪ್ರವಾಸಿ ತಾಣವಾಗಿ ಗಮನ ಸೆಳೆಯುವ ತಲಕಾಡು ಪಂಚಲಿಂಗ ದರ್ಶನದ ಸಂದರ್ಭ ಭಕ್ತರಿಂದ ತುಂಬಿ ತುಳುಕುತ್ತದೆ. ಅಪರೂಪದ ಈ ಕ್ಷಣದಲ್ಲಿ ಕಾವೇರಿಯಲ್ಲಿ ಸ್ನಾನ ಮಾಡಿ ಈಶ್ವರನ ರೂಪವಾಗಿರುವ ಐದು ಲಿಂಗವನ್ನು ದರ್ಶನ ಮಾಡಿದರೆ ಪಾಪ ಕರ್ಮಗಳು ಕಳೆದು ಇಷ್ಟಾರ್ಥ ನೆರವೇರುತ್ತದೆ ಎಂಬ ನಂಬಿಕೆಯಿದೆ.
ಈ ಬಾರಿ ಡಿ.10ರಿಂದ ಪಂಚಲಿಂಗ ದರ್ಶನ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಡಿ.14ರಿಂದ ಪಂಚಲಿಂಗ ದರ್ಶನ ಮಹೋತ್ಸವ ಇರಲಿದೆ. ಪ್ರತಿ ಸಲ ಪಂಚಲಿಂಗ ದರ್ಶನದ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ತಲಕಾಡಿಗೆ ಬರುತ್ತಿದ್ದರು. ಆದರೆ ಈ ಬಾರಿ ಕೊರೊನಾ ಕಾರಣಕ್ಕೆ ಸೀಮಿತ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇಲ್ಲಿ ಶಿವನ ಐದು ಮುಖಗಳಿಂದ ಪಂಚಶಿವಲಿಂಗಗಳು ಉದ್ಭವವಾಗಿವೆ. ಹೀಗಾಗಿ ತಲಕಾಡು ಕಾಶಿಯಷ್ಟೇ ಪವಿತ್ರಕ್ಷೇತ್ರ ಎಂಬ ನಂಬಿಕೆ ಜನರಲ್ಲಿದೆ. ಇಲ್ಲಿನ ಐದು ಶಿವಲಿಂಗಗಳು ಪುರಾಣ ಪ್ರಸಿದ್ಧ ಐದು ದಿವ್ಯ ದೇಗುಲಗಳಾಗಿದ್ದು, ಪಂಚಲಿಂಗದರ್ಶನ ಮಹೋತ್ಸವದಲ್ಲಿ ಇವುಗಳನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ಮುಂದೆ ಓದಿ...
ತಲಕಾಡು ಪಂಚಲಿಂಗ ದರ್ಶನ; ಸ್ಥಳೀಯರಿಗೆ ಮಾತ್ರ ಅವಕಾಶ ನೀಡುವಂತೆ ಸಲಹೆ
ಶಿವನ ಐದು ಮುಖಗಳ ಶಿವಲಿಂಗಗಳು
ಇಲ್ಲಿ ಶಿವನು ತತ್ಪುರುಷ ಮುಖದಿಂದ ಕಾವೇರಿಯ ಉತ್ತರವಾಹಿನಿಯ ಬಳಿ ಅರ್ಕೇಶ್ವರನಾಗಿಯೂ, ಪೂರ್ವ ವಾಹಿನಿಯ ಬಳಿ ಅಘೋರ ಮುಖದಿಂದ ಪಾತಾಳೇಶ್ವರನಾಗಿಯೂ, ದಕ್ಷಿಣವಾಹಿನಿಯ ಬಳಿ ಸದ್ಯೋಜಾತ ಮುಖದಿಂದ ಮರಳೇಶ್ವರನಾಗಿಯೂ, ಪಶ್ಚಿಮ ವಾಹಿನಿಯ ಬಳಿ ವಾಮದೇವ ಮುಖದಿಂದ ಮಲ್ಲಿಕಾರ್ಜುನೇಶ್ವರನಾಗಿಯೂ ಮತ್ತು ಮಧ್ಯದಲ್ಲಿ ಈಶಾನ್ಯ ಮುಖದಿಂದ ವೈದ್ಯನಾಥೇಶ್ವರನಾಗಿಯೂ ನೆಲೆಸಿದ್ದು, ವೈದ್ಯನಾಥೇಶ್ವರ, ಅರ್ಕನಾಥೇಶ್ವರ, ಪಾತಾಳೇಶ್ವರ, ಮರಳೇಶ್ವರ ಮತ್ತು ಮಲ್ಲಿಕಾರ್ಜುನೇಶ್ವರ, ಉದ್ಭವಲಿಂಗಗಳ ದೇವಾಲಯಗಳೇ ಪಂಚ ಲಿಂಗದರ್ಶನದ ಕೇಂದ್ರ ಬಿಂದುಗಳಾಗಿರುವುದನ್ನು ನಾವು ಕಾಣಬಹುದು.
ಬ್ರಾಹ್ಮಿ ಮುಹೂರ್ತದಲ್ಲಿ ದರ್ಶನ ಶುರು
ಪಂಚಲಿಂಗ ದರ್ಶನವನ್ನು ಹೇಗೆ ಮಾಡಬೇಕು ಎಂಬುದಕ್ಕೂ ಇಲ್ಲಿ ವಿಧಿ ವಿಧಾನಗಳಿವೆ. ಪಂಚಲಿಂಗದರ್ಶನ ದಿನದಂದು ಬ್ರಾಹ್ಮಿ ಮುಹೂರ್ತದಲ್ಲಿ ಭಕ್ತರು ಎದ್ದು ತಲಕಾಡಿನ ಗೋಕರ್ಣ ತೀರ್ಥದಲ್ಲಿ ಸ್ನಾನ ಮಾಡಿ ಅಲ್ಲಿಂದ ಗೋಕರ್ಣೇಶ್ವರನ ದರ್ಶನ ಮಾಡಿ ಭಕ್ತಿಯಿಂದ ನಮಿಸಿ ಬಳಿಕ ಸಮೀಪದಲ್ಲಿರುವ ಚೌಡೇಶ್ವರಿಯ ದರ್ಶನ ಮಾಡುತ್ತಾರೆ. ನಂತರ ವೈದ್ಯೇಶ್ವರನ ಸನ್ನಿಧಿಗೆ ತೆರಳಿ ದರ್ಶನ ಮಾಡಿಕೊಂಡು ಗೋಕರ್ಣೇಶ್ವರ ಮತ್ತು ಚೌಡೇಶ್ವರಿ ದೇವಿಯ ದರ್ಶನ ಮಾಡಿ ದೇವರ ಮುಂದೆ ವರದಿಯನ್ನು ಒಪ್ಪಿಸಬೇಕು. ಬಳಿಕ ಅಕೇಶ್ವರನ ದರ್ಶನಕ್ಕೆ ಅಪ್ಪಣೆ ಪಡೆದುಕೊಳ್ಳಬೇಕು.
ಉತ್ತರ ವಾಹಿನಿಯಲ್ಲಿ ಸ್ನಾನ
ಇದಾದ ಬಳಿಕ ಸಮೀಪದಲ್ಲಿಯೇ ಇರುವ ಕಾವೇರಿ ಉತ್ತರ ವಾಹಿನಿಯಲ್ಲಿ ಸ್ನಾನ ಮಾಡಿ ಕಾವೇರಮ್ಮನನ್ನು ಪ್ರಾರ್ಥಿಸಿ ಅಕೇಶ್ವರನ ದರ್ಶನ ಮಾಡಿ ಪೂಜಿಸಿ ನಂತರ ಮತ್ತೆ ವೈದ್ಯೇಶ್ವರನ ಸನ್ನಿಧಿಗೆ ಬಂದು ಕಾವೇರಿ ಉತ್ತರವಾಹಿನಿಯಲ್ಲಿ ಸ್ನಾನ ಮಾಡಿ ಅರ್ಕೇಶ್ವರನ ದರ್ಶನ ಪಡೆದು ವರದಿ ಒಪ್ಪಿಸಬೇಕು. ಹಾಗೆಯೇ ಮುಂದಿನ ಪಾತಾಳೇಶ್ವರ ದರ್ಶನಕ್ಕಾಗಿ ಅಪ್ಪಣೆಯನ್ನು ಪಡೆದುಕೊಳ್ಳಬೇಕು.
ಮತ್ತೆ ಕಾವೇರಿ ಸರ್ಪವಾಹಿನಿಯಲ್ಲಿ ಸ್ನಾನ ಮಾಡಿ ಕಾವೇರಿಯನ್ನು ಪ್ರಾರ್ಥಿಸಿ ಪಾತಾಳೇಶ್ವರನ ದರ್ಶನ ಮಾಡಿ ಪೂಜಿಸಿ ಮತ್ತೆ ವೈದ್ಯೇಶ್ವರನ ಸನ್ನಿಧಿಗೆ ಬಂದು ವರದಿ ಒಪ್ಪಿಸಿ ಮುಂದಿನ ಮರಳೇಶ್ವರನ ದರ್ಶನಕ್ಕಾಗಿ ಅಪ್ಪಣೆ ಪಡೆಯಬೇಕಾಗುತ್ತದೆ. ಆ ನಂತರ ಕಾವೇರಿ ದಕ್ಷಿಣ ವಾಹಿನಿಯಲ್ಲಿ ಸ್ನಾನ ಮಾಡಿ ಕಾವೇರಿಯನ್ನು ಪ್ರಾರ್ಥಿಸಿ ಮರಳೇಶ್ವರನ ದರ್ಶನ ಮಾಡಿ ವೈದ್ಯೇಶ್ವರನ ಸನ್ನಿಧಿಗೆ ಪೂಜಾ ಕ್ರಮದ ವಿವರ ಒಪ್ಪಿಸಿ ಮುಂದಿನ ಮಲ್ಲಿಕಾರ್ಜುನೇಶ್ವರನ ದರ್ಶನಕ್ಕೆ ಅಪ್ಪಣೆ ಪಡೆಯಬೇಕು.ತಲಕಾಡು ಪಂಚಲಿಂಗ ದರ್ಶನದಲ್ಲಿ ಮುಡುಕುತೊರೆಯ ಮಹತ್ವ
ಮಹಾರಥೋತ್ಸವದ ದರ್ಶನ
ಆ ನಂತರ ತಲಕಾಡಿಗೆ ಮೂರು ಕಿ.ಮೀ. ದೂರದಲ್ಲಿರುವ ಮುಡುಕುತೊರೆಗೆ ತೆರಳಿ ಅಲ್ಲಿರುವ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಕಾವೇರಿಯನ್ನು ಪ್ರಾರ್ಥಿಸಿ ನಂತರ ಸೋಮಗಿರಿ ಪರ್ವತದಲ್ಲಿರುವ ಭ್ರಮರಾಂಬ ಸಹಿತ ಮಲ್ಲಿಕಾರ್ಜುನೇಶ್ವರನ ದರ್ಶನ ಮಾಡಿ ಪೂಜಿಸಿ ಮತ್ತೆ ವೈದ್ಯೇಶ್ವರನ ಸನ್ನಿಧಿಗೆ ತೆರಳಿ ಪೂಜಾ ವರದಿ ಅರ್ಪಿಸಲಾಗುತ್ತದೆ. ಬಳಿಕ ಸುಗಮವಾಗಿ, ಸಾಂಗವಾಗಿ ನೆರವೇರಿಸಿಕೊಟ್ಟಿದಕ್ಕೆ ವೈದ್ಯೇಶ್ವರನನ್ನು ಸ್ತುತಿಸಿ, ಸಮಸ್ತ ಪಾಪ ಪರಿಹಾರಕ್ಕಾಗಿ ಪ್ರಾರ್ಥಿಸಿ ಬಳಿಕ ಚೌಡೇಶ್ವರಿಯ ದರ್ಶನ ಮಾಡಿ ಕೈಲಾದ ದಾನಧರ್ಮ ಮಾಡಬೇಕು.
ಮಾರನೆಯ ದಿನ ಪ್ರಾತಃಕಾಲ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಪಿತೃದೇವತೆಗಳ ಪ್ರೀತ್ಯರ್ಥ ತೀರ್ಥ ಆಮ ಮತ್ತು ಹಿರಣ್ಯ ಶ್ರಾದ್ಧಾದಿಗಳನ್ನು ಮಾಡಿ ಅಂದೇ ನಡೆಯುವ ಮಹಾರಥೋತ್ಸವದ ದರ್ಶನ ಮಾಡಿ ಮನೆಗೆ ಮರಳಿ ಅನ್ನಸಂತರ್ಪಣೆ ಮಾಡಿದರೆ ಅಲ್ಲಿಗೆ ಪಂಚಲಿಂಗ ದರ್ಶನದ ಯಾತ್ರಾ ಕ್ರಮ ಮುಗಿಯುತ್ತದೆ.