ಸರ್ಕಾರ ಕೊಟ್ಟ ಆರ್ಥಿಕ ಪ್ಯಾಕೇಜ್ ನಲ್ಲಿ ಏನಿದೆ, ಏನು ಬೇಕಿತ್ತು?
ಆಳುವ ಸರ್ಕಾರ ಯಾವುದೇ ಇರಲಿ, ಅದಕ್ಕೆ ಈ ದೇಶದ ಎಕನಾಮಿಕ್ಸ್ ಜತೆಗೆ ಸಾಮಾಜಿಕ ಸ್ಥಿತಿಗತಿಯೂ ಗೊತ್ತಾಗಬೇಕು. ಅದರಲ್ಲೂ ಕೊರೊನಾದ ಆತಂಕದಲ್ಲಿ ಇಪ್ಪತ್ತೊಂದು ದಿನ ಲಾಕ್ ಡೌನ್ ಘೋಷಿಸಿರುವಾಗ ಬಡ ಕುಟುಂಬಗಳಿಗೆ ಮತ್ತು ಸಣ್ಣ- ಪುಟ್ಟ ವ್ಯಾಪಾರ, ವ್ಯವಹಾರ ಮಾಡುವವರಿಗೆ ನಿಜವಾದ ಸಮಸ್ಯೆ ಇರುವುದು "ಕೈಯಲ್ಲಿ ಕ್ಯಾಶ್ ಇಲ್ಲ" ಎನ್ನುವುದರಲ್ಲಿ ಅಂತ ಅರ್ಥವಾಗಬೇಕು.
ದೇಶದಾದ್ಯಂತ ವಿಧಿಸಿದ ಈ ಲಾಕ್ ಡೌನ್ ನಿಂದ ದಿನಗೂಲಿ ನೌಕರರು ಮತ್ತು ಅಸಂಘಟಿತ ವಲಯದ ಮಾಲೀಕರು ತಮ್ಮ ಚಟುವಟಿಕೆಗಳ ಮೂಲಕ ಆದಾಯವನ್ನೇ ಕಳೆದುಕೊಂಡಿದ್ದಾರೆ. ಗುರುವಾರದಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 1.70 ಲಕ್ಷ ಕೋಟಿ ರುಪಾಯಿಯ 'ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನಾ' ಪರಿಹಾರ ಪ್ಯಾಕೇಜ್ ಘೋಷಿಸಿದ್ದಾರೆ.
ವಾರಾನುಗಟ್ಟಲೆ ಮನೆಯಲ್ಲಿ ಇದ್ದುಬಿಟ್ಟರೆ ಅದನ್ನು ಆರ್ಥಿಕವಾಗಿ ತಡೆದುಕೊಳ್ಳುವ ಶಕ್ತಿ ಇಲ್ಲದ ಹಾಗೂ ಅದಕ್ಕೆ ಕನಿಷ್ಠ ಸಿದ್ಧತೆಯನ್ನೂ ಮಾಡಿಕೊಳ್ಳದವರು ಕೊರೊನಾ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಈ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಬಗ್ಗೆ ಕೆಲವು ಪ್ರಶ್ನೆ ಮುಂದಿಟ್ಟುಕೊಂಡು ಉತ್ತರಿಸುವ ಪ್ರಯತ್ನವನ್ನು ಮಾಡಲಾಗಿದೆ.
ಕೇಂದ್ರ ಸಚಿವೆ ಘೋಷಿಸಿದ ಪ್ಯಾಕೇಜ್ ನ ಅತಿ ಮುಖ್ಯ ಭಾಗ ಯಾವುದು?
ಸಾರ್ವಜನಿಕ ವಿತರಣೆ ವ್ಯವಸ್ಥೆ (ಪಿಡಿಎಸ್) ಅಡಿಯಲ್ಲಿ ಆಹಾರ ಧಾನ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ವಿತರಿಸಲು ಮುಂದಾಗಿರುವುದು ಮುಖ್ಯ ಕ್ರಮ. ಐದು ಮಂದಿ ಇರುವ ಒಂದು ಬಡ ಕುಟುಂಬಕ್ಕೆ ತಿಂಗಳಿಗೆ 50-55 ಕೇಜಿ ಧಾನ್ಯ ಮತ್ತು 4-5 ಕೇಜಿ ಬೇಳೆಕಾಳು ಬೇಕಾಗುತ್ತದೆ. ಸದ್ಯಕ್ಕೆ ಪಿಡಿಎಸ್ ಮೂಲಕ ವ್ಯಕ್ತಿಗೆ 5 ಕೇಜಿಯಂತೆ, ಒಂದು ಕೇಜಿಗೆ 2 ರುಪಾಯಿಯಂತೆ ವಿತರಿಸಲಾಗುತ್ತಿದೆ. ಇನ್ನು ಗೋಧಿ ಮತ್ತು ಅಕ್ಕಿಯನ್ನು ಕೇಜಿಗೆ 3 ರುಪಾಯಿಯಂತೆ ನೀಡುತ್ತಿದ್ದು, ಐದು ಮಂದಿ ಇರುವ ಕುಟುಂಬಕ್ಕೆ 25 ಕೇಜಿ ದೊರೆಯುತ್ತಿದೆ.
ಈಗ ಹೊಸ ಪ್ಯಾಕೇಜ್ ನಲ್ಲಿ ಒಬ್ಬ ವ್ಯಕ್ತಿಗೆ ಹೆಚ್ಚುವರಿಯಾಗಿ 5 ಕೇಜಿ ಗೋಧಿ ಅಥವಾ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತದೆ. ಈವರೆಗೆ ಎಷ್ಟು ದೊರೆಯುತ್ತಿತ್ತು, ಅದರ ಎರಡು ಪಟ್ಟು ಧಾನ್ಯ ಮುಂದಿನ ಮೂರು ತಿಂಗಳು ಉಚಿತವಾಗಿ ಸಿಗುತ್ತದೆ. ಹಾಗೆ ನೋಡಿದರೆ, ಒಂದು ಕುಟುಂಬದ ವಾಸ್ತವ ಅಗತ್ಯಗಳನ್ನು ಇದು ಪೂರೈಸುತ್ತದೆ. ಭಾರತದ ಮೂರನೇ ಎರಡರಷ್ಟು ಜನಸಂಖ್ಯೆ (ಎಂಬತ್ತು ಕೋಟಿ ಮಂದಿ) ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ಇರುವವರು ಇದರಿಂದ ಅನುಕೂಲ ಪಡೆಯುತ್ತಾರೆ. ಈ ಬಡ ಅಥವಾ ಕೆಳ ಮಧ್ಯಮ ವರ್ಗದವರೇ ಲಾಕ್ ಡೌನ್ ನಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗಿದ್ದಾರೆ.
ಇವರು ಇನ್ನು ಮುಂದೆ ಮಾರ್ಕೆಟ್ ನಿಂದ ಅಕ್ಕಿಯನ್ನೋ ಅಥವಾ ಗೋಧಿಯನ್ನೋ ಖರೀದಿ ಮಾಡುವ ಅಗತ್ಯ ಇಲ್ಲ. ಜತೆಗೆ ಒಂದು ಕುಟುಂಬಕ್ಕೆ ಒಂದು ತಿಂಗಳಿಗೆ ಒಂದು ಕೇಜಿ ಬೇಳೆಕಾಳು ದೊರೆಯುತ್ತದೆ. ಅದು ಕೂಡ ಮುಂದಿನ ಮೂರು ತಿಂಗಳು ಉಚಿತವಾಗಿ ದೊರೆಯಲಿದೆ. ಇದರಿಂದ 20- 25 ಪರ್ಸೆಂಟ್ ಅಗತ್ಯ ಪೂರೈಕೆಯಾಗುತ್ತದೆ.
ಇದರಿಂದ ಎಷ್ಟು ವೆಚ್ಚ ಆಗಬಹುದು? ತಳಮಟ್ಟದಲ್ಲಿ ಇದು ಎಷ್ಟು ಪರಿಣಾಮಕಾರಿ?
ಎಲ್ಲೆಲ್ಲಿ ಸಾರ್ವಜನಿಕ ವಿತರಣೆ ವ್ಯವಸ್ಥೆ ಚೆನ್ನಾಗಿ ಕೆಲಸ ಮಾಡುತ್ತಿದೆಯೋ ಆ ರಾಜ್ಯಗಳಲ್ಲಿ ಇದು ಪರಿಣಾಮಕಾರಿ. ಅದು ಕೇರಳ, ತಮಿಳುನಾಡು, ಛತ್ತೀಸ್ ಗಢ ಮತ್ತು ಒಡಿಶಾದಲ್ಲಿ. ಆದರೆ ಉತ್ತರಪ್ರದೇಶ ಅಥವಾ ಬಿಹಾರದಲ್ಲಿ ಪರಿಣಾಮಕಾರಿಯಾಗಿಲ್ಲ. 2019-20ರ ಲೆಕ್ಕ ಹೇಳಬೇಕು ಅಂದರೆ, ಭಾರತ ಆಹಾರ ನಿಗಮ (ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ- ಎಫ್ ಸಿಐ) ಪ್ರತಿ ಕೇಜಿ ಗೋಧಿಗೆ ರು. 26.80 ಹಾಗೂ ಪ್ರತಿ ಕೇಜಿ ಅಕ್ಕಿಗೆ ರು. 37.48ರಂತೆ ಪಾವತಿಸಿ ಖರೀದಿ ಮಾಡಿ, ವಿತರಿಸಿದೆ. ಸರಾಸರಿ ಆರ್ಥಿಕ ವೆಚ್ಚ ಕೇಜಿಗೆ 30 ರುಪಾಯಿಯಂತೆ ಮಾಡಿ, 80 ಕೋಟಿ ಜನಕ್ಕೆ ತಲಾ 15 ಕೇಜಿ ಉಚಿತ ಧಾನ್ಯ (ಮುಂದಿನ ಮೂರು ತಿಂಗಳು) ಒದಗಿಸಲಾಗುತ್ತದೆ. ಅಂದರೆ ಸರ್ಕಾರಕ್ಕೆ ಹೆಚ್ಚುವರಿಯಾಗಿ 36 ಸಾವಿರ ಕೋಟಿ ರುಪಾಯಿ ಖರ್ಚು ಬರುತ್ತದೆ.
ಅದರಲ್ಲಿ ಉಳಿತಾಯವೂ ಇದೆ. ಆರ್ಥಿಕ ವೆಚ್ಚದಲ್ಲಿ ಈ ಹೆಚ್ಚುವರಿ ಸರಕನ್ನು ಗೋದಾಮಿನಲ್ಲಿ ಸಂಗ್ರಹಿಸುವ ಮತ್ತು ನಿರ್ವಹಿಸುವ ವೆಚ್ಚ ಸೇರಿಲ್ಲ. 'ಒಯ್ಯುವ ವೆಚ್ಚ'ದಲ್ಲಿ ಬಡ್ಡಿ ಮತ್ತು ಸಂಗ್ರಹ ಮಾಡುವ ಶುಲ್ಕ ಸೇರಿರುತ್ತದೆ. 2019-20ರ ಅಂದಾಜು ಹೇಳುವುದಾದರೆ, ಪ್ರತಿ ಕೇಜಿಗೆ ರು. 5.61 ಆಗುತ್ತದೆ. 80 ಕೋಟಿ ಜನಕ್ಕೆ, ತಲಾ 15 ಕೇಜಿಯಂತೆ ವಿತರಿಸುವಾಗ ಎಷ್ಟು ಉಳಿತಾಯ ಆಗುತ್ತದೆ ಗೊತ್ತಾ? 6700 ಕೋಟಿ. ಈ ಮೇಲೆ ಹೇಳಿದಂತೆ ಸರ್ಕಾರಕ್ಕೆ ಆಗಬೇಕಾದ 36 ಸಾವಿರ ಕೋಟಿ ಖರ್ಚಿನಲ್ಲಿ 6,700 ಕೋಟಿ ಉಳಿದರೆ, ವೆಚ್ಚವು 30 ಸಾವಿರ ಕೋಟಿಯೊಳಗೆ ಬರುತ್ತದೆ. ಅದಕ್ಕೆ 3 ಕೇಜಿ ಬೇಳೆಕಾಳುಗಳನ್ನು 20 ಕೋಟಿ ಕುಟುಂಬಗಳಿಗೆ ವಿತರಿಸುವುದನ್ನೂ ಸೇರಿಸಿದರೆ, ಆರ್ಥಿಕ ಮತ್ತು ಒಯ್ಯುವ ವೆಚ್ಚ ಪ್ರತಿ ಕೇಜಿ 60-70 ರುಪಾಯಿ ಆಗುತ್ತದೆ. ಒಟ್ಟಾರೆ ವೆಚ್ಚ 35 ಸಾವಿರ ಕೋಟಿ ದಾಟುವುದಿಲ್ಲ. ಅಂದಹಾಗೆ ಎಫ್ ಸಿಐ, ಎನ್ ಎಸಿಎಂಎಫ್ ಐ ಬಳಿ ಅಗತ್ಯಕ್ಕಿಂತ ಮೂರೂವರೆ ಪಟ್ಟು ಹೆಚ್ಚು ಆಹಾರಧಾನ್ಯ ಇದೆ. ಅದೇ ರೀತಿ ಬೇಳೆ ಕಾಳು ಸಂಗ್ರಹವೂ ಇದೆ.
ಇತರ ಮುಖ್ಯ ಪರಿಹಾರ ಘೋಷಣೆ ಯಾವುದು?
ಎಂಟು ಕೋಟಿ ಬಡ ಕುಟುಂಬಗಳಿಗೆ ಮುಂದಿನ ಮೂರು ತಿಂಗಳ ಕಾಲ ಉಚಿತವಾಗಿ ಎಲ್ ಪಿಜಿ ಸಿಲಿಂಡರ್ ವಿತರಿಸುವುದಾಗಿ ನಿರ್ಮಲಾ ಘೋಷಿಸಿದ್ದಾರೆ. ಸಬ್ಸಿಡಿರಹಿತ ಸಿಲಿಂಡರ್ ಗಳ ಸರಾಸರಿ ವೆಚ್ಚ ತೆಗೆದುಕೊಂಡರೆ, ಒಂದು ಸಿಲಿಂಡರ್ ಗೆ 800 ರುಪಾಯಿ ಆಗುತ್ತದೆ. ಈ ಕುಟುಂಬಗಳಿಗೆ ತಿಂಗಳಿಗೆ ಒಂದರಂತೆ, ಮೂರು ತಿಂಗಳಿಗೆ ಮೂರು ಸಿಲಿಂಡರ್ ಅಂದರೆ, ಆ ವೆಚ್ಚ 19200 ಕೋಟಿ ರುಪಾಯಿ ಆಗುತ್ತದೆ. ಆದರೆ ಇದು ಖಂಡಿತಾ ಭರಿಸಬೇಕಾದ ವೆಚ್ಚ. ಈ ಲಾಕ್ ಡೌನ್ ನಿಂದ ಕಷ್ಟ ಅನುಭವಿಸುವವರಿಗಾಗಿ ಮಾಡಬಹುದಾದ ಕನಿಷ್ಠ ಪ್ರಯತ್ನ ಇದು. ಅವರ ಮನೆಯಲ್ಲಿ ಅಡುಗೆ ಬೇಯಿಸಿಕೊಳ್ಳಲು ಇಷ್ಟು ಸಹ ಮಾಡದಿದ್ದರೆ ಹೇಗೆ?
ಮನರೇಗಾ ಕೂಲಿ 20 ರುಪಾಯಿ ಹೆಚ್ಚಿಸುವುದರಿಂದ ಅನುಕೂಲ ಆಗುತ್ತಾ?
ನಿಜವಾಗಿಯೂ ಇಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ನರೇಗಾ ಕೆಲಸಗಳನ್ನು ಎಲ್ಲಿ ಶುರು ಮಾಡುತ್ತಾರೆ? 13.65 ಕೋಟಿ ಜಾಬ್ ಕಾರ್ಡ್ ವಿತರಿಸಿರುವುದರಲ್ಲಿ 8.22 ಕೋಟಿ ಮಾತ್ರ ಸಕ್ರಿಯವಾಗಿವೆ. ಅವರಿಗೆ ನಿರುದ್ಯೋಗ ಭತ್ಯೆ ನೀಡಬಹುದಿತ್ತು. ಹಣಕಾಸು ಸಚಿವೆ ಅವರು ಹೇಳುವ ಪ್ರಕಾರ, 20 ರುಪಾಯಿ ಕೂಲಿ ಹೆಚ್ಚಿಸಿದರೆ ಒಂದು ಕುಟುಂಬಕ್ಕೆ ಹೆಚ್ಚುವರಿಯಾಗಿ ಎರಡು ಸಾವಿರ ರುಪಾಯಿ ಆದಾಯ ಬರುತ್ತದೆ. ಕಾಗದದ ಮೇಲೆ ಕೇಳುವುದಕ್ಕೆ ಇದು ಚೆನ್ನಾಗಿದೆ. ಅದು ಅವರಿಗೆ ನೂರು ದಿನದ ಕೆಲಸ ಕೊಟ್ಟರೆ ಎರಡು ಸಾವಿರ ರುಪಾಯಿ ಹೆಚ್ಚು ಸಿಗುತ್ತದೆ. ಈ ಜಾಬ್ ಕಾರ್ಡ್ ದಾರರು ಮನೆಯಲ್ಲೇ ಉಳಿದು, ಸಂಪಾದನೆ ಏನು ಮಾಡುವುದಕ್ಕೆ ಸಾಧ್ಯ? ಅದಕ್ಕೆ ಹೇಳಿದ್ದು, ನಿರುದ್ಯೋಗ ಭತ್ಯೆಯನ್ನೇ ನೀಡಬಹುದಿತ್ತು. ಕಾಯ್ದೆ ಅಡಿಯಲ್ಲಿ ಹಣ ಪಾವತಿಸುವ ಜವಾಬ್ದಾರಿ ರಾಜ್ಯ ಸರ್ಕಾರದ್ದೇ. ಬಜೆಟ್ ನಲ್ಲಿ ಅದಕ್ಕೆ ಹಣ ಎತ್ತಿಡುವುದು ಅನುಮಾನ ಇದೆ.
ಪ್ಯಾಕೇಜ್ ನಲ್ಲಿ ನಗದು ವರ್ಗಾವಣೆಯೂ ಇದೆಯಲ್ಲಾ...
ಇದೆ, ಆದರೆ ಅದು ಸಾಕಾಗುವುದಿಲ್ಲ. ಪ್ರಧಾನಮಂತ್ರಿ ಜನ್ ಧನ್ ಯೋಜನೆ ಅಡಿ 20.4 ಕೋಟಿ ಮಹಿಳೆಯರು ಬ್ಯಾಂಕ್ ಖಾತೆ ಹೊಂದಿದ್ದಾರೆ. ಮುಂದಿನ ಮೂರು ತಿಂಗಳು ಅವರ ಖಾತೆಗೆ 500 ರುಪಾಯಿಯಂತೆ ವರ್ಗಾವಣೆ ಮಾಡಲಾಗುತ್ತದೆ. ಕೆಲಸ ಇಲ್ಲದೆ ಮನೆಯಲ್ಲಿ ಇರುವವರ ಪಾಲಿಗೆ ಇದು ಪರಿಹಾರ ಆಗಲು ಸಾಧ್ಯವೇ ಇಲ್ಲ. ಇನ್ನು ರೈತರಿಗೆ ಮೂರು ಕಂತಿನ ಹಣದ ಪೈಕಿ 2000 ರುಪಾಯಿಯನ್ನು ಏಪ್ರಿಲ್ ನಲ್ಲಿ ಕೊಡಬೇಕಿತ್ತು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿಯಿಂದ ಅದನ್ನು ಪಾವತಿಸಲಾಗುತ್ತಿದೆ, ಅಷ್ಟೇ. ಹೆಚ್ಚುವರಿ ಹಣಕಾಸು ನೆರವು ಯಾವುದೂ ಕಾಣಲ್ಲ. ಸದ್ಯಕ್ಕೆ ಬೆಳೆಗೆ ಸೂಕ್ತ ಬೆಲೆ ದೊರೆಯುತ್ತಿಲ್ಲ. ಕೊರೊನಾ ಕಾರಣಕ್ಕೆ ಮಾರುಕಟ್ಟೆಯೇ ಕುಸಿದಿದೆ. ಜತೆಗೆ ಕೂಲಿ ವೆಚ್ಚ ಕೂಡ ಜಾಸ್ತಿ ಆಗಿರುವ ಸಂದರ್ಭದಲ್ಲಿ ಏನೂ ಪ್ರಯೋಜನ ಆಗಲ್ಲ.
ಹಾಗಿದ್ದರೆ ಪ್ಯಾಕೇಜ್ ನಲ್ಲಿ ನಿಜವಾಗಿಯೂ ಕೊಟ್ಟಿದ್ದೇನು?
ಬಡ ಕುಟುಂಬಗಳು ನಿಜವಾಗಿಯೂ ಎದುರಿಸುತ್ತಿರುವುದು ನಗದು ಇಲ್ಲ ಎಂಬ ಸಮಸ್ಯೆ. ದೊಡ್ಡ ಉದ್ಯಮಿ- ವ್ಯಾಪಾರಿಗಳು, ಸಂಬಳ ಪಡೆಯುವ ಮಧ್ಯಮ ವರ್ಗದ ರೀತಿ ಬಡವರಿಗೆ ಯಾವ ಬ್ಯಾಲೆನ್ಸ್ ಶೀಟ್, ತುರ್ತು ನಿಧಿ ಅಥವಾ ಬ್ಯಾಂಕ್ ಬ್ಯಾಲೆನ್ಸ್ ಇರುವುದಿಲ್ಲ. ಪ್ರತಿ ದಿನ ಕೆಲಸಕ್ಕೆ ಹೋಗಕ್ಕೆ ಆಗುತ್ತಿಲ್ಲ ಅಂದರೆ, ದಿನದ ಕನಿಷ್ಠ ಅಗತ್ಯವೂ ಪೂರೈಕೆ ಆಗಲ್ಲ ಮತ್ತು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ ಅಂತಲೇ ಅರ್ಥ. ಉಚಿತ ಧಾನ್ಯಗಳು ನೆರವಾಗಬಹುದು, ಆದರೆ ನಿಜವಾದ ಸಮಸ್ಯೆ ಬಗೆಹರಿಸಲ್ಲ. ಅದು ಕೈಯಲ್ಲಿ ಕಾಸಿಲ್ಲ ಎಂಬ ಸಮಸ್ಯೆ. ಆಹಾರದ ಹೊರತಾಗಿ ಅವರಿಗೆ ಖರೀದಿ ಮಾಡುವುದಕ್ಕೆ ಹಣದ ಅಗತ್ಯ ಇದೆ. ಆ ಪೈಕಿ ಹಲವರಿಗೆ ಕೆಲ ದಿನಗಳ ಹಿಂದಿನವರೆಗೂ ಆ ಹಣ ಇತ್ತು.