Get Updates
Get notified of breaking news, exclusive insights, and must-see stories!

ಕಾಂಗ್ರೆಸ್ ನಾಯಕರ ನಿದ್ದೆಗೆಡಿಸುತ್ತಿರುವ ತೃತೀಯ ರಂಗದ ಗುಮ್ಮ!

ಮೈಸೂರು, ಮಾರ್ಚ್ 12: ದೇಶದಲ್ಲಿ ಮೋದಿ ಅಲೆ ತಗ್ಗಿದೆ, ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಸುಲಭವಾಗಿ ಜಯಿಸಬಹುದೆಂಬ ಭ್ರಮೆಯಲ್ಲಿದ್ದ ಕಾಂಗ್ರೆಸ್ ನಾಯಕರನ್ನು ಪಂಚರಾಜ್ಯಗಳ ಫಲಿತಾಂಶ ಬೆಚ್ಚಿ ಬೀಳುವಂತೆ ಮಾಡಿದೆ. ಇದರ ಬೆನ್ನಲ್ಲೇ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಕಾಂಗ್ರೆಸ್ಸೇತರ ತೃತೀಯ ರಂಗ ಸ್ಥಾಪನೆಯ ಕರೆ ನೀಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ದೇಶದಾದ್ಯಂತ ಅಬ್ಬರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಗೆ ಶತಮಾನಗಳ ಇತಿಹಾಸದ ಕಾಂಗ್ರೆಸ್ ಪಕ್ಷ ಧೂಳಿಪಟವಾಗುತ್ತಿದೆ. ಪಂಚ ರಾಜ್ಯಗಳಲ್ಲಿನ ಕಳಪೆ ಸಾಧನೆಗಳನ್ನು ಗಮನಿಸಿದರೆ ಮುಂದಿನ ಲೋಕಸಭಾ ಚುನಾವಣೆಗೂ ಕಾಂಗ್ರೆಸ್ ಸುಧಾರಿಸುವಂತೆ ಕಾಣುತ್ತಿಲ್ಲ. ಒಂದು ವೇಳೆ ಮಮತಾ ಬ್ಯಾನರ್ಜಿ‍ ಅವರ ಕರೆಯಂತೆ ತೃತೀಯ ರಂಗ ಸ್ಥಾಪನೆಯಾದರೆ ಅದರ ನೇರ ಪರಿಣಾಮ ಕಾಂಗ್ರೆಸ್ ಮೇಲಾಗುತ್ತದೆ ಎಂಬುದು ಅಷ್ಟೇ ಸತ್ಯ.

 ಕಾಂಗ್ರೆಸ್ ಹೀನಾಯ ಸ್ಥಿತಿಗೆ ಬಂದಿದ್ದು ಹೇಗೆ?

ಕಾಂಗ್ರೆಸ್ ಹೀನಾಯ ಸ್ಥಿತಿಗೆ ಬಂದಿದ್ದು ಹೇಗೆ?

ರಾಷ್ಟ್ರೀಯ ಪಕ್ಷವೊಂದು ಇಂತಹ ಹೀನಾಯ ಸ್ಥಿತಿಗೆ ತಲುಪುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದಲ್ಲಾದ ಎಲ್ಲ ಬೆಳವಣಿಗಳನ್ನು ಗಮನಿಸಿದರೆ ಹಿರಿಯ ನಾಯಕರಿಗೆ ಮಣೆ ಹಾಕದಿರುವುದು, ಪಕ್ಷದ ಸಂಘಟನೆಯಲ್ಲಿ ನಿರಾಸಕ್ತಿ, ಕಾರ್ಯಕರ್ತರ ಕಡೆಗಣನೆ, ವಂಶಪಾರಂಪರೆಯ ಆರೋಪ, ಅಸಂಬಂದ್ಧ ಹೇಳಿಕೆಗಳು, ಓಲೈಕೆಯ ರಾಜಕಾರಣ ಹೀಗೆ ಹತ್ತಾರು ಕಾರಣಗಳು ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳುವಂತೆ ಮಾಡಿದೆ.

ರಾಹುಲ್ ಗಾಂಧಿ ನಾಯಕತ್ವದಲ್ಲಿ ಚುನಾವಣೆಗೆ ಹೋಗಿ ಸೋಲು ಕಂಡ ಬಳಿಕ ಕಾಂಗ್ರೆಸ್‌ನವರಿಗೆ ಇದ್ದದ್ದು ಒಂದೇ ಒಂದು ಅಸ್ತ್ರ ಪ್ರಿಯಾಂಕಾ ಗಾಂಧಿ. ವರ್ಚಸ್ಸಿನಲ್ಲಿ ಇಂದಿರಾ ಗಾಂಧಿ ಅವರನ್ನೇ ಹೋಲುವ ಪ್ರಿಯಾಂಕ ಗಾಂಧಿ ದಿಕ್ಕೆಟ್ಟ ಕಾಂಗ್ರೆಸ್‌ಗೆ ಐಕಾನ್ ಆಗುತ್ತಾರೆ, ಅವರ ನೇತೃತ್ವದಲ್ಲಿ ಚುನಾವಣೆಗೆ ಹೋದರೆ ಗೆಲುವು ಖಚಿತ ಎಂಬ ಬಲವಾದ ನಂಬಿಕೆ ಕಾಂಗ್ರೆಸ್ ನಾಯಕರಲ್ಲಿತ್ತು. ಆದರೆ ಪ್ರಿಯಾಂಕಾ ಗಾಂಧಿ ಅವರ ತಂತ್ರಗಳು ಪಂಚರಾಜ್ಯ ಚುನಾವಣೆಯಲ್ಲಿ ಅದರಲ್ಲೂ ಉತ್ತರಪ್ರದೇಶದಲ್ಲಿ ನಡೆಯಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅಧಿಕಾರದಲ್ಲಿದ್ದ ಪಂಜಾಬ್‌ನ್ನೇ ಉಳಿಸಿಕೊಳ್ಳಲಾಗಲಿಲ್ಲ.

 ಮಗ್ಗುಲ ಮುಳ್ಳಾದ ಪ್ರಾದೇಶಿಕ ಪಕ್ಷಗಳು

ಮಗ್ಗುಲ ಮುಳ್ಳಾದ ಪ್ರಾದೇಶಿಕ ಪಕ್ಷಗಳು

ಇಷ್ಟಕ್ಕೂ ಕಾಂಗ್ರೆಸ್ ನೆಲಕಚ್ಚಲು ಕಾರಣಗಳನ್ನು ಹುಡುಕುತ್ತಾ ಹೋದರೆ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದದ್ದು, ಅನಗತ್ಯವಾಗಿ ನರೇಂದ್ರ ಮೋದಿಯನ್ನು ಟೀಕಿಸುವುದು, ವಿಎಚ್‍ಪಿ, ಆರ್‌ಎಸ್‌ಎಸ್‍ ಬಗ್ಗೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಾ ಬಂದಿದ್ದು, ಬಿಜೆಪಿಯನ್ನು ಹಳಿಯಬೇಕೆಂಬ ಉದ್ದೇಶದಿಂದ ಚಿಕ್ಕಪುಟ್ಟ ಪಕ್ಷಗಳಿಗೆ ಬೆಂಬಲ ನೀಡಿ ಬೆಳೆಸಿದ್ದು, ತಮಗೆ ಬಹುಮುಖ್ಯ ಓಟ್ ಬ್ಯಾಂಕ್ ಆಗಿದ್ದ ಸಮುದಾಯಗಳನ್ನು ಕಡೆಗಣಿಸಿದ್ದು, ಅದಕ್ಕಿಂತ ಮುಖ್ಯವಾಗಿ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು ತಮ್ಮೊಂದಿಗೆ ಇರುತ್ತದೆ ಎಂಬ ಭ್ರಮೆಯಲ್ಲಿರುವುದು ಉಳಿದದ್ದು ಮೇಲ್ನೋಟಕ್ಕೆ ಕಾಣಿಸುತ್ತದೆ.

ಹಾಗೆ ನೋಡಿದರೆ ಇವತ್ತು ಪ್ರವರ್ಧಮಾನಕ್ಕೆ ಬರುತ್ತಿರುವ ಕೆಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನ ಮತದಾರರನ್ನು ಸೆಳೆದುಕೊಂಡು ಬೆಳೆಯುತ್ತಿವೆ. ಬಹಳಷ್ಟು ವರ್ಷಗಳ ಕಾಲ ಕಾಂಗ್ರೆಸ್ ಅನ್ನು ನಂಬಿದ್ದ ಕೆಲವು ಸಮುದಾಯಗಳು ಕಾಂಗ್ರೆಸ್‌ನಿಂದ ತಮಗೇನು ಪ್ರಯೋಜನವಾಗುತ್ತಿಲ್ಲ ಎಂಬುದು ಗೊತ್ತಾಗುತ್ತಿದ್ದಂತೆಯೇ ಹೊರ ಬಂದು ಹೊಸ ಪಕ್ಷಗಳನ್ನು ಕಟ್ಟಿದರೆ, ಇನ್ನು ಕೆಲವು ನಾಯಕರು ಹೊಸದಾಗಿ ಪಕ್ಷ ಕಟ್ಟಿ ಕಾಂಗ್ರೆಸ್ ಬತ್ತಳಿಕೆಯಲ್ಲಿದ್ದ ಮತದಾರರನ್ನು ಸೆಳೆದು ಬೆಳೆಯುತ್ತಿದ್ದಾರೆ. ಕಾಂಗ್ರೆಸ್ ಇಂತಹ ಪಕ್ಷಗಳಿಂದ ತಮಗೇನು ಆಗಲ್ಲ ಎಂದು ನಂಬಿತ್ತಲ್ಲದೆ, ಇಂತಹ ಪ್ರಾದೇಶಿಕ ಪಕ್ಷಗಳಿಗೆ ಬೆಂಬಲ ನೀಡಿ ಬೆಳೆಸಿದರೆ ಬಿಜೆಪಿಯನ್ನು ಕಟ್ಟಿ ಹಾಕಬಹುದೆಂಬ ಉದ್ದೇಶ ಹೊಂದಿತ್ತು. ಆದರೆ ಅದು ಈಗ ಕಾಂಗ್ರೆಸ್‌ಗೆ ಮುಳುವಾಗುತ್ತಿದೆ.

 ಕಾರ್ಯರೂಪಕ್ಕೆ ಬಾರದ ಮಹಾಘಟಬಂಧನ್

ಕಾರ್ಯರೂಪಕ್ಕೆ ಬಾರದ ಮಹಾಘಟಬಂಧನ್

2018ರಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆದು ಅತಂತ್ರ ಸ್ಥಿತಿ ನಿರ್ಮಾಣವಾದಾಗ ಕಾಂಗ್ರೆಸ್ ನೇರವಾಗಿ ಜೆಡಿಎಸ್ ಬಳಿಗೆ ತೆರಳಿತ್ತು. ಜೆಡಿಎಸ್‌ಗೆ ಬೆಂಬಲ ನೀಡಿ ಮುಖ್ಯಮಂತ್ರಿ ಸ್ಥಾನವನ್ನು ನೀಡಿದರೂ ಪರವಾಗಿಲ್ಲ. ಬಿಜೆಪಿ ಅಧಿಕಾರಕ್ಕೆ ಬರದಂತೆ ನೋಡಿಕೊಳ್ಳಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್‌ನ ಮಹದಾಸೆಯಾಗಿತ್ತು. ಜತೆಗೆ ಕರ್ನಾಟಕದ ನೆಲದಿಂದಲೇ ಮಹಾಘಟಾಬಂಧನ್‌ಗೂ ಚಾಲನೆ ನೀಡಿತ್ತು. ಅವತ್ತಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ಮಹಾಘಟಬಂಧನ್‌ಗೆ ವೇದಿಕೆಯಾಗಿ ರೂಪುಗೊಂಡಿತ್ತು. ಕಾಂಗ್ರೆಸ್ ಸೇರಿದಂತೆ ಇತರೆ ಪ್ರಾದೇಶಿಕ ಪಕ್ಷಗಳ ನಾಯಕರು ವೇದಿಕೆಯಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಬಿಜೆಪಿಗೆ ಸವಾಲು ಒಡ್ಡಿದ್ದರು. ಆದರೆ ಲೋಕಸಭಾ ಚುನಾವಣೆ ವೇಳೆಗೆ ಮಹಾಘಟಬಂಧನ್ ತೆರೆಮರೆಗೆ ಸರಿದು ಹೋಗಿತ್ತು. ಫಲಿತಾಂಶದ ನಂತರ ಕಾಂಗ್ರೆಸ್ ಧೂಳಿಪಟವಾಗಿತ್ತು.

 ಕಾಂಗ್ರೆಸ್‌ಗೆ ಉಳಿಗಾಲ ಎಲ್ಲಿದೆ?

ಕಾಂಗ್ರೆಸ್‌ಗೆ ಉಳಿಗಾಲ ಎಲ್ಲಿದೆ?

ಇದೀಗ ತೃಣಮೂಲ ಕಾಂಗ್ರೆಸ್‌ನ ಮುಖ್ಯಸ್ಥೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ನೀಡಿರುವ ಕರೆ ಕಾಂಗ್ರೆಸ್‌ನ ನಿದ್ದೆಗೆಡಿಸುವಂತೆ ಮಾಡಿದೆ. ದೇಶದಲ್ಲಿ ಕಾಂಗ್ರೆಸ್ಸೇತರ ತೃತೀಯ ರಂಗ ಸ್ಥಾಪನೆಯಾಗಬೇಕೆಂದು ಹೇಳಿಕೆ ನೀಡಿದ್ದು, ಅದು ಕಾರ್ಯರೂಪಕ್ಕೆ ಬಂದರೆ ನೇರ ಪರಿಣಾಮವನ್ನು ಕಾಂಗ್ರೆಸ್ ಎದುರಿಸಬೇಕಾಗುತ್ತದೆ. ಇದುವರೆಗೆ ಕಾಂಗ್ರೆಸ್‌ಗೆ ಆಸರೆಯಾಗಿದ್ದ ಅಲ್ಪಸಂಖ್ಯಾತ ಮತಗಳು ನಿಧಾನವಾಗಿ ಎಸ್‌ಡಿಎಫ್, ಪಿಎಫ್‌ಐ ಕಡೆಗೆ ಹೋಗುತ್ತಿದೆ. ದಲಿತ, ಹಿಂದುಳಿದ ಮತಗಳನ್ನು ಆಯಾಯ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ಸೆಳೆದುಕೊಳ್ಳುತ್ತಿವೆ. ಈ ನಡುವೆ ಮಮತಾ ಬ್ಯಾನರ್ಜಿ ಅವರು ತೃತೀಯ ರಂಗದ ಗುಮ್ಮ ತೋರಿಸುತ್ತಿದ್ದಾರೆ. ಹೀಗಾದರೆ ಕಾಂಗ್ರೆಸ್‌ಗೆ ಉಳಿಗಾಲ ಎಲ್ಲಿದೆ?

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+