200 ಅನಾಥ ಶವಗಳಿಗೆ ಮುಕ್ತಿ ಕಾಣಿಸಿದ ಕಾನ್ಸ್ಟೇಬಲ್ ಕೆ.ಅರ್ ನಂದೀಶ್ ಯಾರು?
ಬೆಂಗಳೂರು, ಏ. 03: ಆತ ವೃತ್ತಿಯಲ್ಲಿ ಪೊಲೀಸ್ ಕಾನ್ಸ್ಟೇಬಲ್. ಬರೋಬ್ಬರಿ 200 ಕ್ಕೂ ಹೆಚ್ಚು ಅನಾಥ ಶವಗಳಿಗೆ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಇನ್ನು ಡ್ರಗ್ ಜಾಲದ ಬೇಟೆ ವಿಚಾರಕ್ಕೆ ಬಂದ್ರೆ ಆತನನ್ನು ಸರಿಗಟ್ಟುವರೇ ಇಲ್ಲ. 112 ಕೇಸಿನಲ್ಲಿ 176 ಪೆಡ್ಲರ್ಗಳನ್ನು ಬಂಧಿಸಿ ಬರೋಬ್ಬರಿ 6.73 ಕೋಟಿ ರೂ. ಮೊತ್ತದ ಮಾದಕ ವಸ್ತು ಪತ್ತೆ ಮಾಡಿದ ಹಿರಿಮೆ. ಮಾರ್ನಿಂಗ್ ಗ್ಲೋರಿ ಎಂಬ ಡ್ರಗ್ ಇದೆ ಎಂದು ರಾಜ್ಯದಲ್ಲಿ ಮೊದಲು ಪತ್ತೆ ಮಾಡಿದ್ದು ಈ ಕಾನ್ಸ್ಟೇಬಲ್. ಇನ್ನು ಸೇವೆಗೆ ಬಂದ್ರೆ ಪೊಲೀಸ್ ಇಲಾಖೆಯಿಂದಲೇ 58 ನಗದು ಬಹುಮಾನಗಳು! ಸಾಧನೆಗಳ ಪಟ್ಟಿ ಒಂದೆರಡಲ್ಲ!
ಹೌದು. ಏ. 2 ರಂದು ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಕೋರಮಂಗಲದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪದಕ ಪ್ರಶಸ್ತಿ ಸ್ವೀಕರಿಸಿದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಕೆ.ಆರ್. ನಂದೀಶ್ ಅವರ ಅಸಲಿ ಕಥೆಯಿದು.
ಪೊಲೀಸ್ ಹುದ್ದೆ ಸಿಕ್ಕರೆ ಸಾಮಾನ್ಯವಾಗಿ ದರ್ಪ ತೋರುವರೇ ಜಾಸ್ತಿ. ಆ ಅವಕಾಶ ಬಳಿಸಿಕೊಂಡು ಸಾಧನೆ ಮಾಡಿದವರು ಸಿಗುವುದು ಅಪರೂಪ. ಸಾಧನೆ ಮಾಡಿದರು ಅದನ್ನು ಸಮಾಜಕ್ಕೆ ಎಂದೂ ಅವರು ತೋರಿಸಿಕೊಳ್ಳುವುದಿಲ್ಲ. ಅದೇ ವರ್ಗಕ್ಕೆ ಸೇರಿದ ಹೆಡ್ ಕಾನ್ಸ್ಟೇಬಲ್ ಕೆ. ಅರ್. ನಂದೀಶ್ ಸೇವೆ ಗುರುತಿಸಿ ಈ ಬಾರಿ ಮುಖ್ಯಮಂತ್ರಿ ಪದಕ ನೀಡಿ ಗೌರವಿಸಲಾಗಿದೆ. ಇಲಾಖೆಯ 135 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ಈ ಪದಕ ನೀಡಿ ಗೌರವಿಸಲಾಗಿದೆ. ಎಲ್ಲರೂ ಇದೇ ರೀತಿ ಒಂದಲ್ಲಾ ಒಂದು ರೀತಿ ರಾಜ್ಯಕ್ಕೆ ಅಮೂಲ್ಯ ಸೇವೆ ಸಲ್ಲಿಸಿದವರೇ. ಅದರಲ್ಲಿ ನಂದೀಶ್ ಕೂಡ ಒಬ್ಬರು.

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಕಂಡರಕಸ್ಕೆದ ನಿವಾಸಿ ನಂದೀಶ್. ಪೊಲೀಸ್ ಬುನಾದಿ ತರಬೇತಿಯಲ್ಲಿ ಬೆಸ್ಟ್ ಇಂಡೋರ್, ಬೆಸ್ಟ ಔಟ್ ಡೋರ್, ಬೆಸ್ಟ್ ಆಲ್ ರೌಂಡರ್ ಪ್ರಶಸ್ತಿಗಳನ್ನು ಪಡೆದಿದ್ದರು. ಆ ಬಳಿಕ ಬಣಕಲ್ ಠಾಣೆಯಲ್ಲಿ ಕೆಲಸ ಮಾಡುವಾಗ ನಕ್ಸಲರ ಬಗ್ಗೆ ಮಹತ್ವದ ಮಾಹಿತಿ ಸಂಗ್ರಹಿಸಿ ಇಲಾಖೆಗೆ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದ ನಂದೀಶ್ ಹಲಸೂರು ಗೇಟ್ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿದ್ದರು. ಬೆಂಗಳೂರಿನಲ್ಲಿ ಎಲ್ಲೆಂದರೆ ಅಲ್ಲಿ ಸಾಯುವ ಅನಾಥರಿಗೆ ಅಂತ್ಯ ಸಂಸ್ಕಾರದ ಮುಕ್ತಿ ಸಿಗಲ್ಲ. ನಂದೀಶ್ ಸುಮಾರು 200 ಅನಾಥ ಹೆಣಗಳಿಗೆ ಅಂತ್ಯ ಸಂಸ್ಕಾರ ಮಾಡಿಸುವ ಮೂಲಕ ತನ್ನ ಮಾನವೀಯ ಗುಣದ ಮೂಲಕ ಇಲಾಖೆಯಲ್ಲಿ ಪರಿಚಿತರಾಗಿದ್ದರು.

ಸಿಸಿಬಿ ಮಾದಕ ನಿಯಂತ್ರಣ ದಳದಲ್ಲಿ ಕೆಲಸ ಮಾಡುವ ವೇಳೆ ಸುಮಾರು 112 ಕೇಸಿನಲ್ಲಿ 176 ಆರೋಪಿಗಳನ್ನು ಬಂಧನ ಕಾರ್ಯಚರಣೆ ನಡೆಸಿ 6.73 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮಾರ್ನಿಂಗ್ ಗ್ಲೋರಿ ಎಂಬ ಮಾದಕ ವಸ್ತು ಇದೆ ಎಂಬುದನ್ನು ಪತ್ತೆ ಮಾಡಿ ಇಲಾಖೆಗೆ ತಿಳಿಸಿದ್ದು ಇದೇ ನಂದೀಶ್. ಕಾಡಿನಲ್ಲಿ ಸಹಜವಾಗಿ ಬೆಳೆಯುವ ಮಾರ್ನಿಂಗ್ ಗ್ಲೋರಿ ಗಿಡದ ಬೀಜಗಳಿಂದ ಮಾದಕ ವಸ್ತು ಡ್ರಗ್ ತಯಾರಿಸಿ ಮಾರಾಟ ಮಾಡುತ್ತಿದ್ದ ವಿದೇಶಿ ಪ್ರಜೆಗಳಿಬ್ಬರನ್ನು ನಂದೀಶ್ ಪತ್ತೆ ಮಾಡಿ ಬಂಧನಕ್ಕೆ ಕಾರಣವಾಗಿದ್ದರು. ಅಲ್ಲಿಯವರೆಗೂ ಪೊಲೀಸ್ ಇಲಾಖೆಗೆ ಇಂತದ್ದೊಂದು ಡ್ರಗ್ ಇದೆ ಅಂತ ಗೊತ್ತಿರಲಿಲ್ಲ. ಹೈಡ್ರೋ ಗಾಂಜಾ ಅಕ್ರಮ ಸಾಗಣೆಯ ಜಾಡು ಹಿಡಿದಿದ್ದು ನಂದೀಶ್ ಎಂಬ ಮಾಹಿತಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮುಖ್ಯ ಪೇದೆಯಾಗಿ ಕೆಲಸ ಮಾಡುತ್ತಿರುವ ನಂದೀಶ್ ಕೆ.ಅರ್, ಅರ್ಜುನ್ ಸರ್ಜಾ, ಶೃತಿ ಹರಿಹರನ್ ಮೀಟೂ ಪ್ರಕರಣದ ಜಾರಕಿಹೊಡಿ ಅಶ್ಲೀಲ ಸಿಡಿ ಸ್ಫೋಟ ಪ್ರಕರಣ, ಮಣಿಪಾಲ್ ಸಂಸ್ಥೆ 78 ಕೋಟಿ ವಂಚನೆ ಪ್ರಕರಣ ಸೇರಿದಂತೆ ಪ್ರಮುಖ ಪ್ರಕರಣಗಳಲ್ಲಿ ತನಿಖಾ ಸಹಾಯಕರಾಗಿ ಕಾರ್ಯ ನಿರ್ವಹಿಸಿರುವುದು ಗಮನಾರ್ಹ. ನಂದೀಶ್ ಅವರ ಸೇವೆ ಗುರುತಿಸಿ ಕರ್ನಾಟಕ ಸರ್ಕಾರ ಈ ಬಾರಿ ಸಿಎಂ ಮೆಡಲ್ ಕೊಟ್ಟು ಗೌರವ ನೀಡಿದೆ.












Click it and Unblock the Notifications