ಭಯ ಬಿಟ್ಟು ಓದಿ: ಸೋಂಕಿತರ ಮೃತದೇಹಗಳಿಂದ ಹರಡುತ್ತದೆಯೇ ಕೊರೊನಾವೈರಸ್!?
ನವದೆಹಲಿ, ಮೇ 25: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸೋಂಕಿನಿಂದ ಪ್ರಾಣ ಬಿಟ್ಟ ವ್ಯಕ್ತಿಯ ಮೃತದೇಹದಿಂದ ರೋಗಾಣು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಕ್ಕೆ ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಉತ್ತರ ನೀಡಿದ್ದಾರೆ.
ಕೊವಿಡ್-19 ರೋಗದಿಂದ ಸಾವನ್ನಪ್ಪಿದ ವ್ಯಕ್ತಿಯ ಮೂಗು ಮತ್ತು ಬಾಯಿಯಲ್ಲಿ 12 ರಿಂದ 24 ಗಂಟೆಗಳ ನಂತರ ರೋಗಾಣು ಜೀವಂತವಾಗಿ ಇರುವುದಿಲ್ಲ. ಈ ಹಿನ್ನೆಲೆ ಮೃತದೇಹಗಳಿಂದ ನೊವೆಲ್ ಕೊರೊನಾವೈರಸ್ ಸೋಂಕು ಹರಡುವ ಅಪಾಯ ತೀರಾ ಕಡಿಮೆಯಾಗಿದೆ ಎಂದು ಏಮ್ಸ್ ನ ವಿಧಿವಿಜ್ಞಾನ ಪ್ರಯೋಗಾಲಯದ ಮುಖ್ಯಸ್ಥರಾದ ಡಾ. ಸುಧೀರ್ ಗುಪ್ತಾ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಿಂದ ಏಮ್ಸ್ ಔಷಧೀಯ ವಿಧಿವಿಜ್ಞಾನ ಇಲಾಖೆಯು ಪ್ರಾಯೋಗಿಕ ಅಧ್ಯಯನವನ್ನು ನಡೆಸಿದೆ. ಕೊವಿಡ್-19 ಸೋಂಕಿನಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆಯನ್ನು ಪ್ರಾಯೋಗಿಕವಾಗಿ ನಡೆಸಲಾಗಿದೆ.

ಮೃತದೇಹಗಳಿಂದ ಕೊವಿಡ್-19 ಹರಡುವುದಿಲ್ಲ
ಏಮ್ಸ್ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಕೊರೊನಾವೈರಸ್ ಸೋಂಕಿನಿಂದ ಸಾವನ್ನಪ್ಪಿದ 100 ಮೃತದೇಹಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ವ್ಯಕ್ತಿಯು ಮೃತಪಟ್ಟ 12 ರಿಂದ 24 ಗಂಟೆಗಳ ನಂತರ ನಡೆಸಿದ ವೈದ್ಯಕೀಯ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಕಂಡು ಬಂದಿದೆ. ಮೃತದೇಹಗಳಲ್ಲಿ ಕೊವಿಡ್-19 ರೋಗಾಣು 24 ಗಂಟೆಗಳ ನಂತರದಲ್ಲಿ ಜೀವಂತವಾಗಿ ಇರುವುದಿಲ್ಲ. ಹೀಗಾಗಿ 12 ರಿಂದ 24 ಗಂಟೆಗಳ ಬಳಿಕ ಕೊರೊನಾವೈರಸ್ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯ ದೇಹದಿಂದ ರೋಗಾಣು ಹರಡುವ ಅಪಾಯ ಇರುವುದಿಲ್ಲ ಎಂದು ಡಾ. ಸುಧೀರ್ ಗುಪ್ತಾ ಹೇಳಿದ್ದಾರೆ.

ಕೊರೊನಾ ಸುರಕ್ಷತಾ ಕ್ರಮಗಳ ಬಗ್ಗೆ ಎಚ್ಚರಿಕೆ
ಕೊರೊನಾವೈರಸ್ ಸೋಂಕಿನ ಹರಡುವಿಕೆ ಭೀತಿವೊಂದೇ ಕಾರಣವಲ್ಲ. ಸಾಮಾನ್ಯವಾಗಿ ಮೃತದೇಹ ಸೋರಿಕೆ ಆಗದಂತೆ ತಡೆಯುವ ಉದ್ದೇಶದಿಂದ ಮೂಗು ಮತ್ತು ಬಾಯಿ ಮುಚ್ಚಲಾಗುತ್ತದೆ. ಇದರ ಜೊತೆ ಮುನ್ನೆಚ್ಚರಿಕೆ ಕ್ರಮವಾಗಿ ಮೃತದೇಹವನ್ನು ಹಸ್ತಾಂತರಿಸುವ ಅಥವಾ ಮುಟ್ಟುವಾಗಿ ಮಾಸ್ಕ್, ಗ್ಲೌಸ್ ಮತ್ತು ಪಿಪಿಇ ಕಿಟ್ ಅನ್ನು ಧರಿಸುವುದು ಅಗತ್ಯವಾಗಿದೆ ಎಂದು ಡಾ. ಸುಧೀರ್ ಗುಪ್ತಾ ತಿಳಿಸಿದ್ದಾರೆ.

ಪ್ರಯೋಗದ ಹಿಂದೆ ಸಾವಿನ ಘನತೆ ಉಳಿಸುವ ಉದ್ದೇಶ
ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಮೃತದೇಹವನ್ನು ಯಾವುದೇ ಮುಲಾಜಿಲ್ಲದೇ ಅಂತಿಮ ಗೌರವಗಳಿಲ್ಲದೇ ಅಂತ್ಯಕ್ರಿಯೆ ಮಾಡಲಾಗುತ್ತಿತ್ತು. ಈ ಹಿನ್ನೆಲೆ ಸತ್ತವರ ಘನತೆ ಕಾಪಾಡುವ ಹಿತದೃಷ್ಟಿಯಿಂದ ಈ ವೈದ್ಯಕೀಯ ಅಧ್ಯಯನವನ್ನು ನಡೆಸಲಾಗಿದೆ. ಮೃತದೇಹದ ಮೂಳೆಗಳು ಮತ್ತು ಚಿತಾಭಸ್ಮದಿಂದ ಯಾವುದೇ ರೀತಿ ಸೋಂಕು ಹರಡುವ ಅಪಾಯ ಇಲ್ಲವಾದ್ದರಿಂದ ಅವುಗಳನ್ನು ಸಂಗ್ರಹಿಸುವುದು ಸುರಕ್ಷಿತವಾಗಿದೆ ಎಂದು ಡಾ. ಸುಧೀರ್ ಗುಪ್ತಾ ಸ್ಪಷ್ಟಪಡಿಸಿದ್ದಾರೆ.

ಮರಣೋತ್ತರ ಪರೀಕ್ಷೆಗೆ ಐಸಿಎಂಆರ್ ಮಾರ್ಗಸೂಚಿ
ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟ ವ್ಯಕ್ತಿಗಳ ಮರಣೋತ್ತರ ಪರೀಕ್ಷೆ ನಡೆಸುವುದಕ್ಕೆ ಸಂಬಂಧಿಸಿದಂತೆ 2020ರ ಮೇ ತಿಂಗಳಿನಲ್ಲೇ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಮಾರ್ಗಸೂಚಿ ಬಿಡುಗಡೆಗೊಳಿಸಿತ್ತು. ಮರಣೋತ್ತರ ಪರೀಕ್ಷೆ ನಡೆಸುವ ಸಿಬ್ಬಂದಿ ಅತಿಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅತಿಹೆಚ್ಚು ಜಾಗೃತಿ ವಹಿಸಬೇಕು. ಏಕೆಂದರೆ ಮೃತದೇಹದ ಸ್ರವಿಸುವಿಕೆ ಮತ್ತು ಸೋರಿಕೆಯಿಂದ ಸಿಬ್ಬಂದಿಗೆ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ ಎಂದು ಐಸಿಎಂಆರ್ ಮಾರ್ಗಸೂಚಿಯಲ್ಲಿ ಎಚ್ಚರಿಸಿತ್ತು.

ಮರಣೋತ್ತರ ಪರೀಕ್ಷೆ ನಡೆಸುವ ಹಿಂದಿನ ಉದ್ದೇಶವೇನು?
ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟ ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸುವುದರ ಹಿಂದೆ ಬಲವಾದ ಉದ್ದೇಶವಿದೆ. ಮೃತದೇಹವನ್ನು ಸ್ಪರ್ಶಿಸುವ ವೈದ್ಯರು, ಮರಣೋತ್ತರ ಪರೀಕ್ಷೆ ನಡೆಸುವ ಸಿಬ್ಬಂದಿ, ಪೊಲೀಸರು ಮತ್ತು ಮೃತದೇಹದ ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವವರಿಗೆ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸಲು ಶವ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲದೇ, ಮಾರ್ಗಸೂಚಿಗಳಲ್ಲಿ ವಿವರಿಸಿದಂತೆ ಪರಿಣಾಮಕಾರಿ ರೀತಿಯಲ್ಲಿ ಶವಪರೀಕ್ಷೆ ನಡೆಸದಿದ್ದಲ್ಲಿ ಶವಾಗಾರ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಮತ್ತು ವೈದ್ಯರಿಗೆ ಸೋಂಕು ಹರಡುವ ಅಪಾಯವನ್ನು ತಡೆಗಟ್ಟುವ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ.
Recommended Video

ಕೊರೊನಾವೈರಸ್ ಪ್ರಕರಣಗಳ ಮಾಹಿತಿ ಓದಿ
ದೇಶದಲ್ಲಿ ಕೊರೊನಾವೈರಸ್ ಸೋಂಕಿನಿಂದ ಒಂದೇ ದಿನ 3,511 ಮಂದಿ ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 3,07,231ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ1,96,427 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ 3,26,850 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಭಾರತದಲ್ಲಿ ಒಟ್ಟು 2,69,48,874 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಇದುವರೆಗೂ 2,40,54,861 ಸೋಂಕಿತರು ಗುಣಮುಖರಾಗಿದ್ದು, ಇದರ ಹೊರತಾಗಿ 25,86,782 ಕೊರೊನಾವೈರಸ್ ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications