ಸಂಪುಟ ವಿಸ್ತರಣೆ 'ಕೂಗು ಮಾರಿ', 'ನಾಳೆ ಬಾ' ಬೋರ್ಡ್ ಹಾಕ್ರೀ!
'ನಾಳೆ ಬಾ' ಎಂದು ಮನೆಯ ಬಾಗಿಲಿನ ಮೇಲೆ ಬರೆದಿದ್ದರೆ 'ಕೂಗು ಮಾರಿ' ಅದನ್ನು ಓದಿಕೊಂಡು ಹಾಗೇ ಮುಂದಕ್ಕೆ ಹೋಗಿಬಿಡುತ್ತದೆ. ಆದ್ದರಿಂದ ಮನೆಯ ಮುಂದೆ ಅದನ್ನು ಬರೆದಿರುತ್ತೇವೆ ಅನ್ನೋ ಉತ್ತರ ಈಗಲೂ ಗ್ರಾಮೀಣ ಭಾಗದ ಕೆಲವು ಕಡೆ ಸಿಗುತ್ತದೆ. ಆ ಕೂಗು ಮಾರಿ ಬಾಗಿಲು ತಟ್ಟಿದಾಗ, ಗೊತ್ತಾಗದೆ ತೆರೆದುಬಿಟ್ಟರೆ ಆ ವ್ಯಕ್ತಿಯನ್ನು ಕೊಂದುಬಿಡುತ್ತದೆ ಎಂಬುದು ಭಯಕ್ಕೆ ಕಾರಣ.
ಇದೀಗ ಸಂಪುಟ ವಿಸ್ತರಣೆ ನಂತರ ಭುಗಿಲೆದ್ದಿರುವ ಅಸಮಾಧಾನ ಎಂಬ 'ಕೂಗು ಮಾರಿ'ಗೆ ದೋಸ್ತಿ ಸರಕಾರಗಳು ಕಂಡುಕೊಂಡು ಮಾರ್ಗ ಮಾತ್ರ 'ನಾಳೆ ಬಾ' ಎಂಬ ಬೋರ್ಡ್ ನೇತು ಹಾಕುವ ಪರಿಹಾರ. ಈ ವಿಚಾರದಲ್ಲಿ ಎಪ್ಪತ್ತೆಂಟು ಶಾಸಕರಿರುವ ಕಾಂಗ್ರೆಸ್ ನಲ್ಲಿ ಸಮಸ್ಯೆ ಪ್ರಮಾಣ ಹೆಚ್ಚಿದೆ. ಅದಕ್ಕೆ ಹೋಲಿಸಿದರೆ ಜೆಡಿಎಸ್ ನೊಳಗಿನ ಸವಾಲಿನ ಸೈಜು ಚಿಕ್ಕದು.
ಬಿಜೆಪಿ ಸೇರ್ತಾರಾ ಕಾಂಗ್ರೆಸ್ ಅತೃಪ್ತರು? ಬಿಎಸ್ ವೈ ಎಸೆದ ಹೊಸ ಬಾಂಬ್!
ಕರ್ನಾಟಕದಲ್ಲಿ ಸರಕಾರ ರಚಿಸಿರುವ ಜೆಡಿಎಸ್- ಕಾಂಗ್ರೆಸ್, ಆರಂಭದಲ್ಲಿ ಬಿಜೆಪಿಯನ್ನು ಅಧಿಕಾರ ಕೇಂದ್ರದಿಂದ ದೂರವಿಟ್ಟ ಸಂಭ್ರಮದಲ್ಲೇ ಇದ್ದವು. ಆದರೆ ಸಂಪುಟದಲ್ಲಿ ಯಾರಿಗೆ ಸ್ಥಾನ ಸಿಗಬಹುದು, ಸಿಗುತ್ತದೆ ಎಂಬ ವಿಚಾರ ಚರ್ಚೆಗೆ ಬಂತೋ ಅಲ್ಲಿಗೆ ಅಸಮಾಧಾನ, ಆಕ್ರೋಶ ಎಲ್ಲವೂ ಬಹಿರಂಗವಾಗಿಯೇ ಆರಂಭವಾಯಿತು.
ನಿಗಮ-ಮಂಡಳಿಗಳಿಗೆ ನೇಮಕ ಎಂಬ ಭರವಸೆ
ಈಚೆಗೆ ಶಿರಾ ಶಾಸಕ ಸತ್ಯನಾರಾಯಣ್ ಪತ್ರಿಕಾಗೋಷ್ಠಿಯನ್ನೇ ಮಾಡಿ, ಇನ್ನೊಂದು ತಿಂಗಳಿಗೆ ಜೆಡಿಎಸ್ ನಿಂದ ಸಚಿವರೊಬ್ಬರು ರಾಜೀನಾಮೆ ನೀಡುತ್ತಾರಂತೆ. ಆ ಸ್ಥಾನ ನನಗೆ ಕೊಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಬಗ್ಗೆ ದೇವೇಗೌಡರೂ ಸಹ ಮಾತು ಕೊಟ್ಟಿದ್ದಾರೆ ಎಂದು ಹೇಳಿದರು. ಅಲ್ಲಿಗೆ ಅಸಮಾಧಾನ ಎಂಬ ಕೂಗು ಮಾಡಿ ತಿಂಗಳ ಮಟ್ಟಿಗೆ ಮುಂದಕ್ಕೆ ಹೋಗುವಂತಾಯಿತು. ಇನ್ನು ಜೆಡಿಎಸ್ ನ ಟಿ.ಎ.ಶರವಣ ಅವರಿಗೆ ನಿಗಮ- ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬ ಆಸೆ ಹಾಗೇ ಉಳಿದಿದೆ. ಅಲ್ಲಿಗೆ ನಿಗಮ- ಮಂಡಳಿಗಳಿಗೆ ನೇಮಕ ಮಾಡುವ ಭರವಸೆ ನೀಡಿ, ಇನ್ನು ಮುಂದಿನ ಕಂತು, ಮತ್ತೊಂದು ಸುತ್ತಿನ ಸಂಪುಟ ವಿಸ್ತರಣೆಯಲ್ಲಿ ಅವಕಾಶ ನೀಡುವುದಾಗಿ ಜೆಡಿಎಸ್ ನಿಂದ ಅಸಮಾಧಾನಗೊಂಡವರ ಅಚ್ಛಾ ಅಚ್ಛಾ ಮಾಡುವ ಪ್ರಯತ್ನ ನಡೆದಿದೆ.
ಉಪ ಸಭಾಪತಿ ಮಾಡಿಬಿಡ್ತೀವಿ ಎಂಬ ಬೆದರಿಕೆ
ಕಾಂಗ್ರೆಸ್ ನವರದು ಮತ್ತೊಂದು ಕಥೆ. ಅಲ್ಲಿ ಮ್ಯೂಸಿಕಲ್ ಚೇರ್ ನಡೆಯುತ್ತಿದೆ. ಕಳೆದ ಬಾರಿ ಐದು ವರ್ಷದ ಸರಕಾರದ ಇದ್ದಾಗ ನೀವು ಸಚಿವರಾಗಿರಲಿಲ್ಲವಾ? ಈ ಸಲ ಒಂದೆರಡು ವರ್ಷ ಅವರಾಗಿರಲಿ. ಆ ನಂತರ ನಿಮ್ಮನ್ನೇ ಸಚಿವರನ್ನಾಗಿ ಮಾಡೋದು ಎಂಬ ಭರವಸೆ ನೀಡಲಾಗುತ್ತಿದೆ. ಕೆಲವರನ್ನಂತೂ ಉಪ ಸಭಾಪತಿ ಮಾಡಿಬಿಡ್ತೀವಿ ಎಂದು 'ಬೆದರಿಸ'ಲಾಗುತ್ತಿದೆ. ಕಳೆದ ಬಾರಿ ಆ 'ಸುಖ' ಅನುಭವಿಸಿದ ಕಾಂಗ್ರೆಸ್ ನ ಎನ್.ಎಚ್. ಶಿವಶಂಕರರೆಡ್ಡಿ ಅವರನ್ನೇ ಆ ಬಗ್ಗೆ ಕೇಳಬೇಕು. ಆ ಗಾಬರಿಗೆ ಬಿದ್ದ ಶಾಸಕರು, ನಿಧಾನವಾಗಿಯಾದರೂ ಸಚಿವರನ್ನಾಗಿ ಮಾಡಿ, ಆದರೆ ಯಾವ ಕಾರಣಕ್ಕೂ ಉಪ ಸಭಾಪತಿ ಮಾಡಬೇಡಿ ಎಂದು ಗೋಗರೆಯುತ್ತಿದ್ದಾರೆ. ಇನ್ನೊಂದಿಷ್ಟು ಪ್ರಬಲರಾದವರು, ಭರವಸೆಯನ್ನು ನಂಬ್ತಾರೆ ಅಂತಾದರೆ, ಕೆಪಿಸಿಸಿ ಅಧ್ಯಕ್ಷರಾಗ್ತೀರಾ ಹೇಳಿ, ಹೈ ಕಮಾಂಡ್ ಹತ್ತಿರ ಮಾತನಾಡಿ ನೋಡೋಣ ಎನ್ನಲಾಗುತ್ತಿದೆ. ಅದು ಎಂ.ಬಿ.ಪಾಟೀಲರು ಹಾಗೂ ಅವರ ಮೇಲ್ಪಟ್ಟ ಶ್ರೇಣಿಯ ನಾಯಕರಿಗೆ ಸಿಗುತ್ತಿರುವ ಭರವಸೆ.
ಈಗಿನ ಕಾಂಗ್ರೆಸ್ ಹೈ ಕಮಾಂಡ್ ಅಸಮಾಧಾನಕ್ಕೆ 'ಕಿವಿ' ಆಗುತ್ತದೆ
ಕಾಂಗ್ರೆಸ್ ಹೈ ಕಮಾಂಡ್ ನಲ್ಲಿ ಸದ್ಯದ ಸನ್ನಿವೇಶ 'ಮಾತು' ಕೇಳಿಸಿಕೊಳ್ಳುವಂತಿದೆ. ಆದ್ದರಿಂದಲೇ ಮುಚ್ಚಟೆ ಮಾಡಿ ಅಸಮಾಧಾನ ಆಗಿರುವ ಶಾಸಕರನ್ನು ಸಮಾಧಾನ ಮಾಡಲಾಗುತ್ತಿದೆ. ಇರುವ ಒಂದೆರಡು ಕಡೆಯ ಅಧಿಕಾರದಲ್ಲಾದರೂ ನಿಧಾನವಾಗಿ ಚಿಗಿತುಕೊಳ್ಳುವ ಆಸೆಯಿಂದ ಪ್ರಯತ್ನಿಸುವ ಎಂಬ ಕಾರಣಕ್ಕೆ ಇಂಥ ಅಸಮಾಧಾನಕ್ಕೆ 'ಕಿವಿ'ಯಾಗುತ್ತಿದ್ದಾರೆ. ಆದರೆ ಈಗ ಅತೃಪ್ತಿ ತೋಡಿಕೊಳ್ಳುವವರ ಸ್ಥಿತಿ ಮುಂದೇನಾಗಬಹುದು ಎಂಬ ಆತಂಕವೂ ಇಣುಕುತ್ತಿದೆ. ಇನ್ನೊಂದು ಕಡೆ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದ ಮೇಲೆ ಪಕ್ಷದೊಳಗಿನ ಸ್ಥಿತಿಯೇ ಬದಲಾಗಿದೆ ಎನ್ನುವವರೂ ಇದ್ದಾರೆ.
ಇಪ್ಪತ್ತಕ್ಕೂ ಹೆಚ್ಚು ಶಾಸಕರ ಅಸಮಾಧಾನ
ಸ್ವತಃ ಎಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದಂತೆ ಜೆಡಿಎಸ್ ಗಿಂತ ಕಾಂಗ್ರೆಸ್ ನಲ್ಲಿ ಭಿನ್ನಮತ ಹೆಚ್ಚಿದೆ. ಈಗಿನ ಸಂಪುಟ ವಿಸ್ತರಣೆಯಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್ ಪ್ರಮುಖರ ನಾಯಕರ ಪಟ್ಟಿಯಲ್ಲಿ ಎಂ.ಬಿ.ಪಾಟೀಲ್ ಮುಂಚೂಣಿಯಲ್ಲಿ ಕಾಣುತ್ತಿದ್ದಾರೆ. ಅವರ ಬೆನ್ನಿಗೆ ಶಾಮನೂರು ಶಿವಶಂಕರಪ್ಪ, ಸತೀಶ್ ಜಾರಕಿಹೊಳಿ, ಎಚ್.ಕೆ.ಪಾಟೀಲ್, ಬಿ.ಸಿ.ಪಾಟೀಲ್ ಸೇರಿದಂತೆ ಇಪ್ಪತ್ತರಷ್ಟು ಶಾಸಕರು ಇದ್ದಾರೆ. ಮೊದಲೇ ಅಸಮಾಧಾನಗೊಂಡ ಲಿಂಗಾಯತ ನಾಯಕರು ಬಿಜೆಪಿಗೆ ಜಿಗಿದು ಬಿಡುವ ಸಾಧ್ಯತೆ ಇದೆ. ಆ ಬಗ್ಗೆ ಕೂಡ ಹುಷಾರಿನಲ್ಲಿ ಚಿಂತಿಸುತ್ತಿರುವ ಕಾಂಗ್ರೆಸ್, 'ನಾಳೆ ಬಾ' ಎಂಬ ರಕ್ಷಣಾ ತಂತ್ರ ಅನುಸರಿಸುತ್ತಿದೆ.