ವಿಜಯೇಂದ್ರನ ಪಟ್ಟಾಭಿಷೇಕಕ್ಕೆ ಬಿಎಸ್ವೈ ಸೆಟ್ ಸಿದ್ಧ; ಆರ್. ಅಶೋಕಗೂ ಸಿಎಂ ಹುದ್ದೆ ಕನಸು

"ಮರಾಠ ಅಭಿವೃದ್ಧಿ ಪ್ರಾಧಿಕಾರ ಹಾಗೂ ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರ ಇವೆಲ್ಲ ಸೃಷ್ಟಿ ಮಾಡಿರುವ ಗೊಂದಲಗಳೇ ಹೊರತು ಪರಿಣಾಮ ಏನಾಗಬಹುದು ಎಂದು ಗೊತ್ತಿಲ್ಲದೆ ತೆಗೆದುಕೊಂಡು ತೀರ್ಮಾನ ಅದಲ್ಲ," ಎಂದರು ಆ ವ್ಯಕ್ತಿ.

ನಿತ್ಯವೂ ವಿಧಾನಸೌಧದ ಸುತ್ತಮುತ್ತಲೇ ಕೆಲಸ ಇರುವ ಅವರಿಗೆ ರಾಜಕೀಯ ಸ್ಥಿತ್ಯಂತರವನ್ನು ಗುರುತಿಸುವುದು ಕಷ್ಟವಲ್ಲ. ಅವರ ಜತೆಗೆ ಚರ್ಚೆ ಹಾಗೂ ಈಚೆಗಿನ ಬೆಳವಣಿಗೆಗಳು ಇವೆಲ್ಲ ಗಮನಿಸಿದರೆ ಏನಾಗುತ್ತದೆ ರಾಜ್ಯ ಬಿಜೆಪಿಯಲ್ಲಿ ಎಂಬ ಪ್ರಶ್ನೆ ಮೂಡುತ್ತದೆ. ಆ ಪ್ರಶ್ನೆಗೆ ಉತ್ತರವಾಗಿ ಮುಂದಿನ ಬೆಳವಣಿಗೆಗಳು ಏನು ಎಂದು ತೆರೆದುಕೊಳ್ಳುವ ಬಗ್ಗೆ ಒಂದೊಂದೇ ವಿಚಾರವನ್ನು ತೆರೆದಿಡುವ ಪ್ರಯತ್ನ ಇಲ್ಲಿದೆ.

ಹಾಗೇ ಗಮನಿಸಿ ನೋಡಿ, ಕೊರೊನಾದಿಂದ ಆರ್ಥಿಕತೆಗೆ ಪೆಟ್ಟು ಬಿದ್ದು ಹೈರಾಣಾಗಿರುವ ರಾಜ್ಯ ಸರ್ಕಾರಕ್ಕೆ ಮರಾಠ ಅಭಿವೃದ್ಧಿ ಪ್ರಾಧಿಕಾರ ಎಂಬ ಹೊಸ ಭಾರವನ್ನು ತಡೆಯುವ ತಾಕತ್ತು ಇತ್ತಾ? ಒಂದು ವೇಳೆ ಅದನ್ನು ಘೋಷಣೆ ಮಾಡಿದರೆ ಆ ತಕ್ಷಣವೇ ಇನ್ನೇನು ಧ್ವನಿ ಏಳುತ್ತದೆ ಎಂದು ಗುರುತಿಸಲಾಗದ ಅನನುಭವಿ ರಾಜಕಾರಣಿಯಂತೂ ಯಡಿಯೂರಪ್ಪ ಅವರು ಅಲ್ಲ.

BS Yediyurappa sets ready for coronation of Vijayendra for CM Post; R. Ashok also in the race

ಆ ಕಾರಣದಿಂದಲೇ, ಲಿಂಗಾಯತ ಅಭಿವೃದ್ಧಿ ಪ್ರಾಧಿಕಾರದ ಧ್ವನಿ ಕೇಳಿದರೂ ಅದಕ್ಕೆ ಹೂಂ- ಉಹುಂ ಏನೂ ಹೇಳದೆ ತಮಿಳುನಾಡಿನ ರಾಜಕಾರಣದ ಮಾಸ್ಟರ್ ಪೀಸ್ ಕಾಮರಾಜ ನಾಡಾರ್ ಅವರ ಶೈಲಿಯಲ್ಲಿ "ಪಾರ್ಕಲಾಂ" (ನೋಡೋಣ) ಅಂದು ಸುಮ್ಮನಾಗಿದ್ದಾರೆ ಯಡಿಯೂರಪ್ಪ.

ಯಾವುದೇ ಸಮುದಾಯದ ಅಭಿವೃದ್ಧಿಗಾಗಿ ಪ್ರಾಧಿಕಾರ ಘೋಷಣೆ ಮಾಡುವುದರ ಲೆಕ್ಕಾಚಾರ ಏನು ಅಂತ ಹೇಳುವುದಕ್ಕೆ ರಾಜಕೀಯ ಪಾಂಡಿತ್ಯವೇನೂ ಬೇಕಿಲ್ಲ. ಉಪಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಹೀಗೆ ಮಾಡಿದ್ದಾರೆ ಎಂಬುದು ಮೇಲ್ನೋಟದ ಪಿಕ್ಚರ್. ಆದರೆ ಇದು ಸ್ವಲ್ಪ ಯಾಮಾರಿದರೂ ಬಿಡಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲದ ರಂಕಲಾಗುತ್ತದೆ.

ಇನ್ನು ಸರ್ಕಾರ ಹಾಗೂ ಬಿಜೆಪಿಯೊಳಗಿನ ಅಧಿಕಾರ ಹಸ್ತಾಂತರದ ಮಾತಿಗೆ ಬರುವುದಾದರೆ, ಈಗ ಯಡಿಯೂರಪ್ಪ ಅವರು ಇನ್ನೇನು ಹುದ್ದೆಯಿಂದ ನಿರ್ಗಮಿಸುವುದರಲ್ಲಿ ಇದ್ದಾರೆ. ಕರ್ನಾಟಕ ರಾಜಕೀಯ ಪಡಸಾಲೆಯಲ್ಲಿ ಲಿಂಗಾಯತ- ಒಕ್ಕಲಿಗ ಕಾಂಬಿನೇಷನ್ ಜನಪ್ರಿಯವಾಗಿ ನಡೆಯುತ್ತಿದೆ.

ಯಡಿಯೂರಪ್ಪ ಅವರನ್ನು ಇಳಿಸಿ, ಮತ್ತೊಬ್ಬ ಲಿಂಗಾಯತರನ್ನೇ ಮುಖ್ಯಮಂತ್ರಿ ಮಾಡಿದರೆ ಆಗ ರಾಜ್ಯಾಧ್ಯಕ್ಷ ಸ್ಥಾನ ಅದೇ ಸಮುದಾಯಕ್ಕೆ ಸಿಗಲ್ಲ. ಇನ್ನು ತಮ್ಮ ಮಗ ವಿಜಯೇಂದ್ರನನ್ನು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಗಾದಿ ಮೇಲೆ ಕೂರಿಸಲು ಆಗಲ್ಲ. ಆ ಕಾರಣಕ್ಕೆ ಸದ್ಯಕ್ಕೆ ಒಕ್ಕಲಿಗರೊಬ್ಬರು ಮುಖ್ಯಮಂತ್ರಿ ಆಗಲಿ ಎಂಬ ಪಕ್ಷದೊಳಗಿನ ಧ್ವನಿಗೆ ಯಡಿಯೂರಪ್ಪ ಅವರದೂ ಸಹಮತ ಇದೆ.

ಆದರೆ, ಹೈಕಮಾಂಡ್ ನಿಂದ ಅಶ್ವಥ್ ನಾರಾಯಣ್ ಪ್ರಬಲ ಶಿಫಾರಸು ಅಂತಾದರೆ, ಸ್ವತಃ ಯಡಿಯೂರಪ್ಪ ಅವರಿಗೆ ಆರ್. ಅಶೋಕ ಬಗ್ಗೆ ಒಲವಿದೆ. ಹಾಗೆ ತಮ್ಮ ಮಾತು ಕೇಳುವ ಅಶೋಕ ಮುಖ್ಯಮಂತ್ರಿ ಆದಲ್ಲಿ, ಮಗ ವಿಜಯೇಂದ್ರನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡಿ, ಮುಂದಿನ ಚುನಾವಣೆ ಹೊತ್ತಿಗೆ ಸಿಎಂ ಗಾದಿಗೆ ಹೆಸರು ಕೇಳಿಬರುವಂತೆ ಮಾಡಬೇಕು ಹಾಗೂ ಅಲ್ಲಿ ಕೂರಿಸಬೇಕು ಎಂಬುದು ಅವರ ಕನಸು.

ಈಗಾಗಲೇ ಲಿಂಗಾಯತ ಸಮುದಾಯದಲ್ಲಿ ವಿಜಯೇಂದ್ರ ಅವರಿಗೆ ಯಡಿಯೂರಪ್ಪ ಉತ್ತರಾಧಿಕಾರಿ ಕಾಣಲು ಆರಂಭಿಸಿದ್ದಾರೆ. ಈಗಿನ ಈ ಅಭಿವೃದ್ಧಿ ಪ್ರಾಧಿಕಾರದ ಪ್ರಹಸನವನ್ನು ಮುಂದೆ ಮಾಡಿಕೊಂಡು ತಮ್ಮ ಸ್ಥಾನವನ್ನು ಅವರು ಇನ್ನಷ್ಟು ಭದ್ರ ಮಾಡಿಕೊಳ್ಳಲಿದ್ದಾರೆ ಎಂಬುದು ಕೂಡ ಅಷ್ಟೇ ಸತ್ಯ.

ಈ ಮಧ್ಯೆ ಲಿಂಗಾಯತ- ಒಕ್ಕಲಿಗ ಕಾಂಬಿನೇಷನ್ ಜಗ್ಗಾಟದಲ್ಲಿ ಒಂದು ಅವಕಾಶ ಎಂದು ಸಿಕ್ಕಲ್ಲಿ ತಾವೇಕೆ ಮುಖ್ಯಮಂತ್ರಿ ಆಗಿಬಿಡಬಾರದು ಎಂಬ ಹವಣಿಕೆ ಈಶ್ವರಪ್ಪ ಅವರದು. ಅದಕ್ಕಾಗಿಯೇ ಈಚೆಗೆ ಉಪಚುನಾವಣೆ ಫಲಿತಾಂಶ ಬಂದ ಮೇಲೆ, ಶಿರಾ- ರಾಜರಾಜೇಶ್ವರಿ ನಗರದ ಉಪಚುನಾವಣೆ ಗೆಲುವಿನ ಶ್ರೇಯಸ್ಸು ವಿಜಯೇಂದ್ರ ಒಬ್ಬರಿಗೇ ನೀಡಲು ಸಾಧ್ಯವಿಲ್ಲ ಎಂದು ಅವರು ತುಸು ಖಾರವಾಗಿಯೇ ಹೇಳಿದರು.

ಇನ್ನು ಬಿಜೆಪಿಯೊಳಗೆ ಹಿಂದುತ್ವದ ಫೈರ್ ಬ್ರ್ಯಾಂಡ್ ನಂತೆ ಗುರುತಿಸಿಕೊಳ್ಳಲು ಹವಣಿಸುತ್ತಿರುವವರು ಬಸನಗೌಡ ಪಾಟೀಲ್ ಯತ್ನಾಳ್. ಆದರೆ ಅವರ ಹೇಳಿಕೆಗಳು, ಧೋರಣೆಯಿಂದ ಪಕ್ಷಕ್ಕೆ ಡ್ಯಾಮೇಜ್ ಆಗಬಹುದು ಎಂಬ ಅಳುಕು ಇದ್ದೇ ಇದೆ. ಯಡಿಯೂರಪ್ಪ ಅವರ ವಿಶ್ರಾಂತಿಗಾಗಿ ರಾಜ್ಯಪಾಲರನ್ನಾಗಿ ಮಾಡಿ, ಮಗ ವಿಜಯೇಂದ್ರನನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಿದರೆ ಸಿಎಂ ಅಧಿಕಾರ ನಿರ್ಗಮನವನ್ನು ಬಿಎಸ್ ವೈ ಸಲೀಸಾಗಿ ಮುಗಿಸಿಕೊಡುತ್ತಾರೆ.

ಇಲ್ಲದಿದ್ದಲ್ಲಿ ಬಿಜೆಪಿಗೆ ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳುವ ಪೆಟ್ಟು ನೀಡಿದರೂ ಅಚ್ಚರಿ ಇಲ್ಲ. ಈ ತನಕ ಬಿಜೆಪಿಯೊಳಗೆ ಎರಡು ಬಾರಿ ತಮಗೆ ಬೇಕಾದವರಿಗೆ ಸಿಎಂ ಗಾದಿ ಕೊಡಿಸಲು ಯಡಿಯೂರಪ್ಪ ಯಶಸ್ಸು ಕಂಡಿದ್ದಾರೆ. ಆ ಪರಂಪರೆಯೇ ಮುಂದುವರಿದಲ್ಲಿ ಆರ್. ಅಶೋಕಗೆ ಹುದ್ದೆಯ ಕನಸು ಬೀಳಲು ಆರಂಭಿಸಿರಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+