ವಧು ಬದಲು ಗೆಳೆಯನಿಗೆ ಹೂವಿನ ಮಾಲೆ ಹಾಕಿದ ವರ: ಮದುವೆ ಕ್ಯಾನ್ಸಲ್
ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಪ್ರಮುಖ ಘಟ್ಟವಾಗಿದ್ದು, ಮದುವೆಯ ಕ್ಷಣಗಳು ತನ್ನಿಷ್ಟದಂತೆ ಇರಬೇಕು ಎನ್ನುವುದು ಎಲ್ಲರ ಕನಸಾಗಿರುತ್ತದೆ. ಅದರಲ್ಲೂ ವಧುವಿಗೆ ತುಸು ಜಾಸ್ತಿಯೇ ನಿರೀಕ್ಷೆಗಳಿರುತ್ತದೆ. ಮದುವೆ ಎನ್ನುವ ವಿಚಾರ ಕಿವಿಗೆ ಬೀಳುತ್ತಿದ್ದಂತೆ ವರನಿಂದ ಹಿಡಿದು ಮದುವೆ ದಿನದ ವರೆಗೂ ವಧುವಿನ ನಿರೀಕ್ಷೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುತ್ತದೆ. ಈ ಸಂಭ್ರಮದಲ್ಲಿ ಆಕೆಯ ನಿರೀಕ್ಷೆಗೆ ಪೆಟ್ಟು ಬಿದ್ದಾಗ ಅದರಲ್ಲೂ ವರ ವಿಚಾರದಲ್ಲಿ ನೋವಾದಾಗ ವಧು ಆ ಕ್ಷಣದಲ್ಲಿ ತೆಗೆದುಕೊಳ್ಳುವ ನಿರ್ಧಾರ ಬಹಳ ಮುಖ್ಯವಾಗಿರುತ್ತದೆ. ಯಾಕೆಂದರೆ ಆ ನಿರ್ಧಾರದಲ್ಲಿ ಆಕೆಯ ಮುಂದಿನ ಜೀವನ ಇರುತ್ತದೆ.
ಇದೇ ರೀತಿ ಮದುವೆ ಬಗ್ಗೆ ನೂರಾರು ಕನಸು ಹೊತ್ತು ಮಂಟಪಕ್ಕೆ ಬಂದ ವಧು, ವರನ ಅವತಾರವಲ್ಲ..ಅವಾಂತರ ನೋಡಿ ಕೊನೆಗೆ ಮದುವೆಯನ್ನೇ ರದ್ದು ಗೊಳಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು, ಉತ್ತರ ಪ್ರದೇಶದ ಬರೇಲಿಯಲ್ಲಿ ಈ ಘಟನೆ ನಡೆದಿದೆ ಎನ್ನುವ ಮಾಹಿತಿ ಇದೆ. ಅಷ್ಟಕ್ಕೂ ಮದುವೆ ರದ್ದಾಗಿದ್ದೇಕೆ..? ಮದುವೆ ಮನೆಯಲ್ಲಿ ವರ ಮಾಡಿದ ಅವಾಂತರವೇನು..? ಎನ್ನುವ ಕುತೂಹಲಕ್ಕೆ ಉತ್ತರ ಇಲ್ಲಿದೆ.

ಬರೇಲಿಯ ಕುಟುಂಬವೊಂದು ಅದ್ಧೂರಿಯಾಗಿ ಮಗಳ ಮದುವೆ ಮಾಡಲು ಸಜ್ಜಾಗಿತ್ತು. ಅದರಂತೆ ಮದುವೆ ಮನೆ ಶೃಂಗಾರ, ಮೆರವಣಿಗೆ, ಭಾರೀ ಭೋಜನಾ ಎಲ್ಲಾ ಸಿದ್ಧವಾಗಿತ್ತು. ಆದರೆ ವರನ ಅವಾಂತರದಿಂದ ಈ ಮದುವೆಯೇ ರದ್ದಾಗಿದೆ. ಹೌದು ಮದುವೆಗೆ ಸಿದ್ಧನಾಗಿ ಬಂದ ವರ ಮದುವೆ ಮಂಟಪಕ್ಕೆ ಕಂಟಪೂರ್ತಿ ಕುಡಿದೇ ಬಂದಿದ್ದಾನೆ. ಮದ್ಯದ ಅಮಲಿನಲ್ಲಿದ್ದ ವರನಿಗೆ ತಾನೆಲ್ಲಿದ್ದೇನೆ ಎನ್ನುವುದೇ ಮರೆತು ಹೋಗಿರುವಂತೆ ತೂರಾಡುತ್ತಿದ್ದ.
ಕೊನೆಯಲ್ಲಿ ವಧುವಿನ ದಿಬ್ಬಣ ಬಂದಿದ್ದು, ಇಬ್ಬರನ್ನು ಮುಖಾಮುಖಿಯಾಗಿ ನಿಲ್ಲಿಸಿ ಹೂವಿನ ಹಾರ ಅದಲು ಬದಲು ಮಾಡಿಕೊಳ್ಳುವಂತೆ ಪುರೋಹಿತರು ಹೇಳುತ್ತಾರೆ. ಈ ವೇಳೆ ಮದುವೆ ಗಂಡು ತನ್ನ ಎದುರಿಗಿದ್ದ ವಧುವಿಗೆ ಹೂವಿನ ಮಾಲೆ ಹಾಕುವ ಬದಲು ಮದ್ಯದ ಅಮಲಿನಲ್ಲಿ ನಗುತ್ತಾ ತನ್ನ ಸ್ನೇಹಿತನಿಗೆ ಹೂವಿನ ಹಾರ ಹಾಕಿದ್ದಾನೆ. ವರನ ಅವತಾರ ಕಂಡ ವಧು ಕೂಡಲೇ ಈ ಮದುವೆ ನಿಲ್ಲಿಸಿ ಎಂದು ಹೇಳಿದ್ದಾಳೆ.
ಸಕಲ ಸಿದ್ಧತೆಯಾದ ಮೇಲೆ ಮದುವೆ ನಿಲ್ಲಿಸುವುದು ಕಷ್ಟ ಎಂದು ಪೋಷಕರು ಆಕೆಯನ್ನು ಸಮಾಧಾನ ಪಡಿಸಲು ಮುಂದಾದರು. ಆದರೆ ಆಕೆ ತನ್ನ ನಿರ್ಧಾರದ ಮೇಲೆ ಧೃಡವಾಗಿ ನಿಂತು ಇದು ತನ್ನ ಮುಂದಿನ ಜೀವನದ ಪ್ರಶ್ನೆ ಎಂದು ಮದುವೆ ರದ್ದು ಮಾಡಿ ಬಂದಿರುವ ಮೆರವಣಿಗೆಯನ್ನು ವಾಪಾಸ್ ಕಳುಹಿಸಿದ್ದಾಳೆ. ವರನ ಅವಾಂತರ ಕಂಡು ಕೋಪಗೊಂಡ ವಧುವಿನ ಪೋಷಕರು ಎಲ್ಲರ ಎದುರು ಅವಮಾನವಾಗಿದೆ ಎಂದು ವರ ಹಾಗೂ ಆತನ ಪೋಷಕರ ವಿರುದ್ಧ ದೂರು ದಾಖಲಿಸಿದ್ದಾರೆ.












Click it and Unblock the Notifications