30 ವರ್ಷದಲ್ಲಿ 5 ಸಾವಿರಕ್ಕೂ ಹೆಚ್ಚು ಪೌರೋಹಿತ್ಯ, ಭ್ರಮರಾಂಭ ಗೊತ್ತೆ?
ಮೈಸೂರು, ಮಾರ್ಚ್ 5 : ಪೌರೋಹಿತ್ಯ ಎಂಬ ಪದ ಕೇಳಿದರೆ ಸಾಕು, ನಮ್ಮ ಕಲ್ಪನೆಗೆ ಅಥವಾ ಕಣ್ಣೆದುರಿಗೆ ಬರುವುದು ಪುರುಷರು. ಅವರ ಜೋರು ಕಂಠದ ಧ್ವನಿ, ಸರಾಗವಾಗಿ ಉದ್ಘೋಷವಾಗುವ ಮಂತ್ರಗಳು, ಬಿಳಿಯ ಪಂಚೆ - ಶಲ್ಯ, ಅವರ ಶಿಸ್ತಿನ ಹಾವ - ಭಾವ ನಮ್ಮೆಲ್ಲರನ್ನು ಆಕರ್ಷಿಸುತ್ತದೆ. ಆದರೆ ಇದು ಕೇವಲ ಪುರುಷರಿಗಷ್ಟೇ ಸೀಮಿತವೇ, ಮಹಿಳೆಯರಿಗೆ ಏಕಿಲ್ಲ ಎಂಬ ಪ್ರಶ್ನೆ ಹಲವರಲ್ಲಿ ಮೂಡಿರಲೂಬಹುದು.
ಇದಕ್ಕೆ ಉತ್ತರ ಎಂಬಂತೆ ಮೈಸೂರಿನಲ್ಲಿ ಪೌರೋಹಿತ್ಯ ಮಾಡಿಸುವ ಮಹಿಳೆಯೊಬ್ಬರಿದ್ದಾರೆ. ಅವರ ಬಗ್ಗೆ ಲೇಖನವಿದು. ಸಮಾಜದಲ್ಲಿ ಹೆಣ್ಣಿಗೆ ಪೂಜೆ -ಪುನಸ್ಕಾರವೆಂದರೆ ಅದು ಮನೆಯೊಳಗಿನ ನಾಲ್ಕು ಗೋಡೆಗೆ ಮಾತ್ರವೇ ಸೀಮಿತವಾಗಿತ್ತು. ಆದರೆ ಈ ದಿಟ್ಟ ಮಹಿಳೆ ಆ ಎಲ್ಲೆಯನ್ನು ಮೀರಿ ಬೆಳೆದವರು.
ಮಂಗಳೂರಿನ ಶಿಲ್ಪಾರ ಯಶೋಗಾಥೆ ಮೆಚ್ಚಿದ ಆನಂದ್ ಮಹೀಂದ್ರ
ಆಕೆಯ ಹೆಸರು ಭ್ರಮರಾಂಭ ಮಹೇಶ್ವರಿ. ವಯಸ್ಸು 54. ಆದರೂ 24ರ ಸ್ಫೂರ್ತಿಯ ಚಿಲುಮೆಯಂತಿರುವ ಇವರು ವೇದ - ಶಾಸ್ತ್ರ ಪರಾಂಗತರು. ಹೋಮ - ಹವನ, ಉಪನಯನ, ಗೃಹಪ್ರವೇಶ, ಸತ್ಯನಾರಾಯಣ ಪೂಜೆ, ಸೀಮಂತ, ಅಕ್ಷರಾಭ್ಯಾಸ, ನಾಮಕರಣ... ಅಷ್ಟೇ ಏಕೆ ಅಪರ ಸಂಸ್ಕಾರ ಎಂದು ಕರೆಯುವ ವೈದಿಕವನ್ನೂ ಮಾಡಿಸುತ್ತಾರೆ.
5 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಮಾಡಿಸಿದ ಇವರು, 800ಕ್ಕೂ ಹೆಚ್ಚು ಮಹಿಳೆಯರಿಗೆ ತಮ್ಮ ವಿದ್ಯೆಯನ್ನು ಗುರುವಿನ ಸ್ಥಾನದಲ್ಲಿ ನಿಂತು ಧಾರೆ ಎರೆದಿದ್ದಾರೆ. ಇವರ ಬಗ್ಗೆ ಗೊತ್ತಾದ ಮೇಲೆ ಒನ್ಇಂಡಿಯಾ ಕನ್ನಡದಿಂದ ಸಂದರ್ಶನ ನಡೆಸಲಾಗಿದೆ. ಪ್ರಶ್ನೋತ್ತರಗಳು ಮುಂದಿವೆ.
ಪ್ರಶ್ನೆ: ಪೌರೋಹಿತ್ಯ ಮಾಡಿಸುವ ಮಹಿಳೆಯಾಗಿ ನೀವು ಎದುರಿಸುವ, ಎದಿರಿಸಿದ ಅಡೆ–ತಡೆಗಳೇನು ?
ಭ್ರಮರಾಂಭ: ಅಡೆ- ತಡೆ ಎಲ್ಲ ಕೆಲಸದಲ್ಲಿಯೂ ಇದ್ದದ್ದೇ. ಅದು ನನ್ನ ಈ ವೃತ್ತಿಯಲ್ಲಿ ಹೆಚ್ಚಾಯಿತೇನೋ. ಸುಮಾರು 30 ವರುಷದ ನನ್ನ ವೃತ್ತಿಜೀವನದಲ್ಲಿ ಪ್ರತಿಯೊಬ್ಬರೂ ನನ್ನನ್ನು ಸ್ವೀಕರಿಸಿದ್ದಾರೆ. ಅದಕ್ಕೆ ಕಾರಣ ನನ್ನಲ್ಲಿನ ತಪಸ್ಸಿನ ಶಕ್ತಿ, ಸ್ಫಷ್ಟ ಉಚ್ಛಾರಣೆ, ವಿವರಣೆಯ ಪರಿ. ನನಗಾಗಿದ್ದು ಬಾಲ್ಯ ವಿವಾಹ. ಸಣ್ಣವಳಿಂದಲೇ ಸುಖದ ಸುಪತ್ತಿಗೆಯಲ್ಲಿ ಬೆಳೆದಿದ್ದ ನನಗೆ, ದುಪ್ಪೆಂದು ಕಷ್ಟ ಕಾರ್ಮೋಡದಂತೆ ಬಂತು. ಅಧ್ಯಾತ್ಮದತ್ತ ಮನಸ್ಸು ವಾಲಿತು. ಹಾಗಾಗಿ ನಾನು ಈ ವೇದಗಳನ್ನು ಅಭ್ಯಸಿಸಲು ಶುರು ಮಾಡಿದೆ. ಮನೆಯಲ್ಲಿ ಎಲ್ಲರೂ ಬೈದರು. ನಾನು ವೀರಶೈವಳು. ಲಿಂಗದೀಕ್ಷೆಯ ಸಂಸ್ಕಾರದಲ್ಲಿ ಬೆಳೆದವಳು. ಹಾಗಾಗಿ ಈ ವೇದಾಧ್ಯಯನ ಮಾಡುವಾಗ ಮನೆಯವರೇ ವಿರೋಧಿಸಿದರು. ಆ ನಂತರದ ಬೆಳವಣಿಗೆಯಿಂದಾಗಿ ನನ್ನನ್ನು ಒಪ್ಪಿಕೊಂಡರು.
ಪ್ರಶ್ನೆ: ಹೋಮ, ವೈದಿಕಗಳನ್ನು ಮಾಡುವಾಗ ನಿಮ್ಮ ಅನುಭವ?
ಭ್ರಮರಾಂಭ: ಇದುವರೆಗೂ 5 ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಹೋದಲ್ಲಿ ಹಲವರು ನನ್ನನ್ನು ತೆಗಳಿದ್ದೂ ಉಂಟು. ಸಸ್ವರ ಪಾಠ ಮತ್ತು ವೇದ ಸಂಸ್ಕಾರ ವಿಧಿವಿಧಾನ ಏನಿದೆಯೋ ಅದನ್ನು ಮಾಡಿಕೊಂಡು ಬಂದಿದ್ದೇನೆ. ಮೌಢ್ಯಕ್ಕೆ ನನ್ನ ವಿರೋಧವಿದೆ. ನಾವು ಮಾಡಿದ್ದು ವೈಜ್ಞಾನಿಕವಾಗಿ ತೆಗೆದುಕೊಂಡರೂ ಸರಿ ಎನಿಸಬೇಕು. ಮಂತ್ರಗಳನ್ನು ಹೇಳುವುದರಿಂದ ಮನೋಮಾಲಿನ್ಯ ಮತ್ತು ಹೋಮದಿಂದ ವಾಯುಮಾಲಿನ್ಯ ನಿವಾರಣೆಯಾಗುತ್ತದೆ. ಅದು ಯಾರು ಮಾಡಿಸಿದ್ದಾರೆಂಬುದು ಮುಖ್ಯವಲ್ಲ. ಹೇಗೆ ಮಾಡಿಸಿದ್ದಾರೆಂಬುದು ಮುಖ್ಯವಷ್ಟೇ.
ಪ್ರಶ್ನೆ: ಗಾಯತ್ರಿ ಮಂತ್ರದ ಉಚ್ಚಾರಣೆ, ವೈದಿಕ ಆಚರಣೆಯನ್ನು ಹೆಣ್ಣುಮಕ್ಕಳು ಮಾಡಬಾರದು ಎಂಬ ನಂಬಿಕೆ ಇದೆಯಲ್ಲ?
ಭ್ರಮರಾಂಭ: ನಾನು ಮನುಷ್ಯರ ನಿಯಮದ ವಿರೋಧಿ. ಪುರಾಣಗಳನ್ನು ನಾವೇ ಬರೆದದ್ದು. ವೇದಗಳು ಬೇಕಾದ ಹಾಗೇ ನಾವೇ ತಿರುಚಿಕೊಂಡಂಥದ್ದು. ಹೆಣ್ಣು ಮಾಡಬಾರದು ಎಂದು ದೇವರೆಲ್ಲಾದರೂ ಹೇಳಿದ್ದಾನೆಯೇ? ರಾಮಾಯಣದ ಸೀತೆ ಸಂಧ್ಯಾವಂದನೆ ಮಾಡುತ್ತಿದ್ದಳು. ಗಾರ್ಗೆ, ಮೈತ್ರೇಯರು ಹೋಮ, ಹವನವನ್ನು ನಡೆಸುತ್ತಿದ್ದರು. ಹಾಗೆ ವೇದದಲ್ಲಿ 24 ವಿದ್ಯೆಯ ಹೆಸರು ಬರುತ್ತದೆ. ಅವರೆಲ್ಲರೂ ಯಜ್ಞಗಳನ್ನು ಮಾಡುತ್ತಿದ್ದರಿಂದ ಮೇಲೆ ಅವರು ಅದನ್ನು ಕಲಿತಿರಲೇಬೇಕು. ಕೌಸಲ್ಯಾ, ದ್ರೌಪದಿಯರು ಯಜ್ಞ ಮಾಡುತ್ತಿದ್ದರೂ ಎಂಬುದಾಗಿ ಉಲ್ಲೇಖವಿದೆ. ಹಿಂದೆ ಸ್ತ್ರೀಯರು ಗುರುಕುಲಗಳಿಗೆ ಹೋಗಿ ವೇದಾಧ್ಯಯನ ಮಾಡುತ್ತಿದ್ದರು. ಭಾರತಕ್ಕೆ ಮುಸ್ಲಿಮರ ದಾಳಿಯ ವೇಳೆ ಸಂರಕ್ಷಣೆಗಾಗಿ ಹೆಣ್ಣನ್ನು ಮನೆಯೊಳಗೆ ಬಂದಿ ಆಗಿಸಿದರು.
ಪ್ರಶ್ನೆ: ನಿಮ್ಮ ಈ ಕಾಯಕಕ್ಕೆ ಮನೆಯವರ ಸಹಕಾರ ಹೇಗಿದೆ ?
ಭ್ರಮರಾಂಭ: ನನ್ನ ಪತಿ ಎಂದೆಂದೂ ಬೆಂಬಲವಾಗಿದ್ದಾರೆ. ನನ್ನ ಮಕ್ಕಳು ಸಹ ಈ ಕಾಯಕದ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಯಾರಿಗೂ ನನ್ನ ಕಾರ್ಯದ ಕುರಿತು ವಿರೋಧವಿಲ್ಲ.
ಪ್ರಶ್ನೆ: ಹೆಣ್ಣು 3 ದಿನ ಹೊರಗಾದಾಗ ಯಾವ ಕಾರ್ಯವನ್ನೂ ಮಾಡಬಾರದು ಎಂದು ನಂಬಿಕೆಯಿದೆ. ಅದನು ನೀವು ಉಲ್ಲಂಘಿಸಿದ ಹಾಗಾಗಿಲ್ಲವೇ?
ಭ್ರಮರಾಂಭ: ಯಾವ ದೇವರು ಹಾಗೆ ಹೇಳಿದ್ದಾನೆ? ಯಾವ ಹೆಣ್ಣು ತಾನೇ ಬಯಸಿಯಾಳು? ಆ ಸಂದರ್ಭದಲ್ಲಿ ಆಕೆ ದೇಹದಲ್ಲಾಗುವ ಬದಲಾವಣೆಗೆ ವಿಶ್ರಾಂತಿ ಅಗತ್ಯ. ಅದು ಕೊಳಕಲ್ಲ, ಸಂತಾನದ ಒಂದು ಭಾಗ. ಅದನ್ನು ಯಾವ ಹೆಣ್ಣು ಬಯಸುವುದಿಲ್ಲ. ಬೇಕಾದರೆ ಗಂಡಸರೇ ಅದನ್ನು ಸ್ವೀಕರಿಸಲಿ. ನಮ್ಮ ಅಭ್ಯಂತರವೇನಿಲ್ಲ. ನಾನು ಆ ವೇಳೆಯಲ್ಲಿಯೂ ಅನೇಕ ಮನೆಗಳಿಗೆ ಪೂಜೆಗೆ ತೆರಳಿದ್ದೇನೆ. ನಾನು ಈ ತೆರನಾದ ಮೌಢ್ಯ- ಕಟ್ಟಳೆಗಳ ವಿರೋಧಿ.
ಪ್ರಶ್ನೆ: ಇಷ್ಟೆಲ್ಲಾ ಹೇಳುವ ನೀವು ಹೆಣ್ಣುಮಕ್ಕಳು ಶವ ಸಂಸ್ಕಾರ ಮಾಡುವ ಕುರಿತಾಗಿ ಧ್ವನಿ ಎತ್ತುತ್ತಿಲ್ಲ ಏಕೆ?
ಭ್ರಮರಾಂಭ: ಶವ ಸಂಸ್ಕಾರ ಮಾಡಲು ಖಂಡಿತಾ ಹೆಣ್ಣು ಶಕ್ತಳು. ನಾನು ಎಲ್ಲರಿಗೂ ತಿಳಿಸುವುದೊಂದೇ, ಪುರುಷ ಪ್ರಧಾನ ಸಮಾಜದಲ್ಲಿ ಆಕೆಯನ್ನು ನಾಕಾಬಂಧಿಯಾಗಿಸಿದ್ದಾರೆ. ಅವಳು ಕೂಡ ಮಾಡಬಲ್ಲಳು. ಅವಕಾಶ ಸಿಗಬೇಕಷ್ಟೇ. ನಾನು ಸತ್ತ ಮೇಲೆ, ನನ್ನ ಹೆಣ್ಣು ಮಕ್ಕಳೇ ನನ್ನ ಚಿತೆಗೆ ಬೆಂಕಿ ಇಟ್ಟು ಸಂಸ್ಕಾರ ಮಾಡಿ ಎಂದಿದ್ದೇನೆ. ಈಗಾಗಲೇ ನನ್ನೊಬ್ಬ ಹೆಣ್ಣುಮಗಳಿಂದ ಸಂಸ್ಕಾರ ಕಾರ್ಯವನ್ನು ಮಾಡಿಸಿದ್ದೇನೆ ಕೂಡ.
ಪ್ರಶ್ನೆ: ಹೆಣ್ಣುಮಕ್ಕಳು ಪೌರೋಹಿತ್ಯ ಮಾಡಿಸಬಹುದೆ?
ಭ್ರಮರಾಂಭ: ಖಂಡಿತಾ ಮಾಡಿಸಬಹುದು. ಪುರರ ಹಿತವನ್ನು ಬಯಸುವವರು ಪುರೋಹಿತರು. ನಾವು ಈ ದಾರಿಯಲ್ಲಿ ನಡೆಯಬೇಕಾದರೆ ಶುದ್ಧರಾಗಿ, ಮೈ ತುಂಬಾ ಬಟ್ಟೆಯನ್ನುಟ್ಟು ಸಂಸ್ಕಾರವಂತರು ಆಗಿರುತ್ತೇನೆ. ವೇದ -ಮಂತ್ರಗಳನ್ನು ಘೋಷಿಸುವಾಗ ಮನೆಗೆ ಗುರುವಿನ ಸ್ಥಾನವನ್ನು ಕೊಟ್ಟು ಗೌರವಿಸುವುದುಂಟು. ದಯವಿಟ್ಟು ಹೆಣ್ಣುಮಕ್ಕಳು ಇಂತಹ ಕಾಯಕಕ್ಕೆ ಬರಲಿ. ಹೆಣ್ಣನ್ನು ಪೌರೋಹಿತ್ಯಕ್ಕೆ ಕಳುಹಿಸಿದರೆ ನಮಗೆ ಕೆಲಸ ಇರುವುದಿಲ್ಲ ಎಂಬ ಒಂದೇ ಕಾರಣಕ್ಕೆ ಅವಳನ್ನು ಮನೆಯಲ್ಲಿಟ್ಟಿದ್ದಾರೆ. ಇಂಥ ಮನಸ್ಥಿತಿಯಿಂದ ಹೊರ ಬನ್ನಿ. ಪೌರೋಹಿತ್ಯದಲ್ಲಿನ ಮೌಢ್ಯವನ್ನು ದೂರವಿರಿಸಿ, ಹೆಣ್ಣಾಗಿ ಸಾಧಿಸಿ, ನಮ್ಮಂತಹವರು ಇತರರಿಗೂ ಮಾದರಿಯಾಗೋಣ.