ಹಿಂದುತ್ವದ ಪ್ರಯೋಗ ಶಾಲೆ ಕರಾವಳಿಯಲ್ಲಿ 'ಬಿಜೆಪಿ, ಬೆಂಕಿಯಿಂದ ಬಾಣಲಿಗೆ'
ನಮ್ಮ ತ್ರಿವರ್ಣಧ್ವಜದಲ್ಲಿ ಕೇಸರಿಯಿದೆ, ನಮ್ಮ ನಾಡಿನ ಪೀಠಾಧಿಪತಿಗಳು ಧರಿಸುವ ಬಟ್ಟೆಬರೆ ಕೇಸರಿ, ಹನುಮನ ಸಂಕೇತ ಕೇಸರಿ ಎಂದು ಹೇಳುತ್ತಿರುವ ಬಿಜೆಪಿ ನಾಯಕರು, ಈಗ ಕೇಸರಿ ಪಾಳಯದ ಸಂಘಟನೆಗಳಿಂದ ವಿರೋಧ ಎದುರಿಸುತ್ತಿರುವುದು ಯಾಕೆ? ಹಿಂದುತ್ವದ ಪ್ರಯೋಗಶಾಲೆ ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಂಘಟನೆಯ ಪ್ರಮುಖರ ಪ್ರಕಾರ, ಇದು ಬಿಜೆಪಿ ನಾಯಕರ ಸ್ವಯಂಕೃತ ಅಪರಾಧ.
ಕೆಲವು ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ವೈರಲ್ ಆಗಿತ್ತು. ಅದು, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರನ್ನು ವಿಶ್ವಸಂಸ್ಥೆಯ ಅಧ್ಯಕ್ಷರನ್ನಾಗಿಯಾದರೂ ಮಾಡಿ, ಆದರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದಿಂದ ಮಾತ್ರ ಅವರಿಗೆ ಟಿಕೆಟ್ ನೀಡಬೇಡಿ ಎಂದು. ಇದು ಸ್ಥಳೀಯ ಮಟ್ಟದಲ್ಲಿ ಬಿಜೆಪಿ ನಾಯಕರ ಮೇಲೆ, ಸಂಘ ಪರಿವಾರದ ಹುಡುಗರಿಗೆ ಇರುವ ಸಿಟ್ಟಿನ ಒಂದು ಸ್ಯಾಂಪಲ್ ಅಷ್ಟೇ..

ಬಿಜೆಪಿ ನಾಯಕರನ್ನು ಹೆಗಲ ಮೇಲೆ ಹೊತ್ತು ಮೆರವಣಿಗೆ ಮಾಡುತ್ತಿದ್ದ ಸಂಘ ಪರಿವಾರದವರಿಗೆ ತಮ್ಮ ಮಾತೃಪಕ್ಷದ ನಾಯಕರ ಮೇಲಿನ ಸಿಟ್ಟಿಗೆ ಕಾರಣವಾದರೂ ಏನು? ಒಳೊಗೊಳಗೆ ಕುದಿಯುತ್ತಿದ್ದ ಕಡೆಗಣನೆ/ಅವಮಾನದ ಬೆಂಕಿ ಸಿಡಿದಿದ್ದು ಪ್ರವೀಣ್ ನೆಟ್ಟಾರು ಹತ್ಯೆಯ ವೇಳೆ. ಅಂದು ನಳಿನ್ ಕಟೀಲ್ ಅಲ್ಲಿಗೆ ಹೋದಾಗ, ಪೊಲೀಸರು ಸೂಕ್ತ ಸಮಯದಲ್ಲಿ ಮಧ್ಯಪ್ರವೇಶಿಸದೇ ಇದ್ದಿದ್ದರೆ ಬೇರೆ ಏನಾದರೂ ಅನಾಹುತ ಆಗುತ್ತಿತ್ತೇನೋ?
ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಿದ ಕಟೀಲ್
ಕಾರ್ಯಕರ್ತರ ಆಕ್ರೋಶದ ಬಿಸಿ ಎಷ್ಟರ ಮಟ್ಟಿಗೆ ಅಂದು ಬೊಮ್ಮಾಯಿ ಸರ್ಕಾರಕ್ಕೆ ತಟ್ಟಿತ್ತು ಎಂದರೆ, ಅಂದೇ ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸಿದ ಕಟೀಲ್, ಸಿಎಂ ಭೇಟಿ ಮಾಡಿ ಅತ್ಯಂತ ವೇಗದಿಂದ ಸೂಕ್ತ ಕ್ರಮವನ್ನು ಸರ್ಕಾರ ಕಡೆಯಿಂದ ಆದೇಶ ಹೊರಡಿಸುವಲ್ಲಿ ಯಶಸ್ವಿಯಾಗಿದ್ದರು. ಒಂದು ಹಂತಕ್ಕೆ ಸುಮ್ಮನಾಗಿದ್ದ ಸಂಘ ಪರಿವಾರದ ಸದಸ್ಯರು ಮತ್ತೆ ಬಿಜೆಪಿ ವಿರುದ್ದ ತಿರುಗಿ ಬೀಳುವಂತೆ ಮಾಡಿದ್ದು ಪುತ್ತೂರಿನ ಅಸೆಂಬ್ಲಿ ಟಿಕೆಟ್ ವಿಚಾರದಲ್ಲಿ.
ಪುತ್ತೂರಿನ ಶಾಸಕರಾಗಿದ್ದ ಸಂಜೀವ ಮಠಂದೂರು
ಪುತ್ತೂರಿನ ಶಾಸಕರಾಗಿದ್ದ ಸಂಜೀವ ಮಠಂದೂರು ಅವರಿಗೆ ಬಿಜೆಪಿ ಟಿಕೆಟ್ ಸಿಗುವುದಿಲ್ಲ ಎನ್ನುವುದು ಖಾತ್ರಿಯಾದಾಗ, ಕಾರ್ಯಕರ್ತರ ಒಕ್ಕೊರಲಿನ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಆಗಿದ್ದರು. ಆದರೆ, ಅದಕ್ಕೆ ಸೊಪ್ಪು ಕೊಡದ ಬಿಜೆಪಿಯ ರಾಜ್ಯ ನಾಯಕರು ಬೇರೆ ಹೆಸರನ್ನು ಶಿಫಾರಸು ಮಾಡಿದ್ದರು. ಸಾಮಾನ್ಯವಾಗಿ, ರಾಜ್ಯ ನಾಯಕರ ರೆಕಮೆಂಡೇಶನಿಗೆ ಬೆಲೆಕೊಡದ ಅಮಿತ್ ಶಾ ತಮ್ಮದೇ ಆದ ಮೂಲಗಳಿಂದ ವರದಿಯನ್ನು ತರಿಸಿಕೊಳ್ಳುವುದು ಗೊತ್ತಿರುವ ವಿಚಾರ.

ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಿತ್ತು
ಆದರೆ, ಬಿಜೆಪಿ ಹೈಕಮಾಂಡ್ ಈ ವಿಚಾರದಲ್ಲಿ ಎಡವಿ, ಆಶಾ ತಿಮ್ಮಪ್ಪ ಅವರಿಗೆ ಟಿಕೆಟ್ ನೀಡಿತ್ತು. ಇದರಿಂದ ಆಕ್ರೋಶಗೊಂಡ ಹಿಂದೂ ಸಂಘಟನೆಗಳು ತಮ್ಮ ಅಭ್ಯರ್ಥಿಯನ್ನಾಗಿ ಅರುಣ್ ಪುತ್ತಿಲ ಅವರನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್ ಅಭ್ಯರ್ಥಿಗೆ ಸಖತ್ ಫೈಟ್ ಕೊಟ್ಟು ಕಡಿಮೆ ಅಂತರದಿಂದ ಸೋತ ಪುತ್ತಿಲ, ಬಿಜೆಪಿಗೆ ಏನು ಪಾಠ ಕಲಿಸಬೇಕಿತ್ತೋ ಅದನ್ನು ಮಾಡಿದ್ದರು. ಬಿಜೆಪಿ ಅಲ್ಲಿ ಮೂರನೇ ಸ್ಥಾನಕ್ಕೆ ಇಳಿಯಿತು. ಇದು, ಕರಾವಳಿಯ ಹಿಂದೂ ಸಂಘಟನೆಗಳು ಬಿಜೆಪಿಗೆ ಕೊಟ್ಟ ಮತ್ತೊಂದು ಶಾಕ್ ಆಗಿತ್ತು.
ಬಿಜೆಪಿಯನ್ನು ಬೆಂಕಿಯಿಂದ ಬಾಣಲೆಗೆ ಬೀಳುವಂತೆ ಮಾಡಿದೆ
ಇದಾದ ನಂತರ ಮೊನ್ನೆಮೊನ್ನೆ ನಡೆದ ಘಟನೆ, ಬಿಜೆಪಿಯನ್ನು ಬೆಂಕಿಯಿಂದ ಬಾಣಲೆಗೆ ಬೀಳುವಂತೆ ಮಾಡಿದೆ. ಕಟೀಲ್ ಮತ್ತು ಸದಾನಂದ ಗೌಡ್ರ ಬ್ಯಾನರಿಗೆ ಅಗೌರವ ತೋರಿದ ಹಿನ್ನಲೆಯಲ್ಲಿ ಸಂಘ ಪರಿವಾರದ ಸದಸ್ಯರಿಗೆ ಪೊಲೀಸರು ನೀಡಿದ ಟ್ರೀಟ್ಮೆಂಟ್. ಇದು ಅಕ್ಷರಶಃ ಹಿಂದೂ ಸಂಘಟನೆಗಳು ಬಿಜೆಪಿ ವಿರುದ್ದ ಮುಗಿಬೀಳುವಂತೆ ಮಾಡಿತು. ಬಿಜೆಪಿಯ ಫೈರ್ ಬ್ರಾಂಡ್ ಬಸನಗೌಡ ಯತ್ನಾಳ್ ಆಸ್ಪತ್ರೆಗೆ ಕಾರ್ಯಕರ್ತರನ್ನು ನೋಡಲು ಹೋದಾಗ, ಬಿಜೆಪಿಯ ಸ್ಥಳೀಯ ನಾಯಕರನ್ನು ಸಂಘದ ಸದಸ್ಯರು ಒಳಗೆ ಬಿಟ್ಟುಕೊಡಲಿಲ್ಲ.

ಉಡುಪಿ ಕಾರ್ಕಳದಲ್ಲಿನ ವಿದ್ಯಮಾನಗಳು
ಉಡುಪಿ ಕಾರ್ಕಳದಲ್ಲಿನ ವಿದ್ಯಮಾನಗಳು, ದಕ್ಷಿಣ ಕನ್ನಡ ಜಿಲ್ಲೆ ಮಾಣಿಯಲ್ಲಿನ ಬಣ ತಿಕ್ಕಾಟ ಬಿಜೆಪಿಗೆ ಇನ್ನಷ್ಟು ಹಿನ್ನಡೆಯನ್ನು ತಂದೊಡ್ಡಿದೆ. ಇದಲ್ಲದೇ, ಒಂದು ದಿನದ ಹಿಂದೆ ಬೆಳ್ತಂಗಡಿ ಬಿಜೆಪಿ ಶಾಸಕ ಸಂಘ ಪರಿವಾರದ ಮುಖಂಡರ ಬಗ್ಗೆ ಆಡಿದ ಮಾತು ಕೂಡಾ ಗಮನಿಸಬೇಕಾದ ವಿಚಾರ. ಈ ಎಲ್ಲಾ ವಿದ್ಯಮಾನಗಳು ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸುವ ದೃಷ್ಟಿಯಲ್ಲಿ ಕಮಲದ ಪಕ್ಷಕ್ಕೆ ಉತ್ತಮ ಬೆಳವಣಿಗೆಯಲ್ಲ. ಮೇಲ್ನೋಟಕ್ಕೆ ಈ ಭಾಗದ ಕಾರ್ಯಕರ್ತರ ಪ್ರಮುಖ ಟಾರ್ಗೆಟ್ ಅದು ನಳಿನ್ ಕಟೀಲ್. ಓವರ್ ಟು ಅಮಿತ್ ಶಾ..












Click it and Unblock the Notifications