ಕನಕಪುರ ಬಂಡೆ ರಾಜಕೀಯ ಆಟಕ್ಕೆ ಬೆಳಗಾವಿ ಸಾಹುಕಾರ ತಬ್ಬಿಬ್ಬು
ಅಶ್ಲೀಲ ಸಿಡಿ ಪ್ರಕರಣದ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದನ್ನು ಮಾಡುತ್ತಿದ್ದ ವೇಳೆ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ ಒಂದು ಸವಾಲನ್ನು ಎಸೆದಿದ್ದರು. "ಅವನನ್ನು ಸೋಲಿಸಲು ನಾನ್ಯಾಕೆ, ಸಾಮಾನ್ಯ ಕಾರ್ಯಕರ್ತನನ್ನು ಕನಕಪುರದಲ್ಲಿ ನಿಲ್ಲಿಸಿ ಸೋಲಿಸುತ್ತೇನೆ"ಎಂದು ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ಗೆ ಸವಾಲು ಹಾಕಿದ್ದರು ಆದರೆ, ಮುಂದೆ ನಡೆದ ಬೆಳವಣಿಗೆಳೆಲ್ಲಾ ರಮೇಶ್ ಜಾರಕಿಹೊಳಿ ರಾಜಕೀಯ ಲೆಕ್ಕಾಚಾರದಂತೆ ನಡೆಯಲಿಲ್ಲ. ಯಾವ ಪಕ್ಷವನ್ನು ಅಧಿಕಾರಕ್ಕೆ ತರಲು ಆಪರೇಶನ್ ಕಮಲಕ್ಕೆ ಮಹೂರ್ತವಿಟ್ಟರೂ, ಬಿಜೆಪಿಯವರೇ ಜಾರಕಿಹೊಳಿ ಬೆನ್ನಿಗೆ ನಿಲ್ಲಲಿಲ್ಲ.
'ಬಂಡೆ'ಯ ಕೆಳಗೆ ಡೈನಮೇಟ್ ಇಡುತ್ತಿರುವವರು ಯಾರು?: ಕುಮಾರಸ್ವಾಮಿ ಟ್ವೀಟ್
ನಮ್ಮವರೇ ನನಗೆ ಹಿಂದಿನಿಂದ ಚೂರಿ ಇರಿದಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಹಲವು ಬಾರಿ ಹೇಳಿದ್ದುಂಟು. ತಮ್ಮದೇ ಸರಕಾರವಿದ್ದರೂ ಸಿಡಿ ಪ್ರಕರಣದಿಂದ ಕ್ಲೀನ್ ಚಿಟ್ ಪಡೆಯಲು ಸಾಧ್ಯವಾಗಲಿಲ್ಲ. ಡಿಕೆಶಿ ಹೊಂದಿದ್ದ ಖಾತೆಯನ್ನೇ ಬೇಕೆಂದು ಹಠ ಹಿಡಿದು ಜಲಸಂಪನ್ಮೂಲ ಖಾತೆಯನ್ನು ಪಡೆದಿದ್ದ ಜಾರಕಿಹೊಳಿಗೆ ಈಗ ಎಷ್ಟೇ ಪ್ರಯತ್ನಿಸಿದರೂ ಗೂಟದ ಕಾರು ಒಲಿಯುತ್ತಿಲ್ಲ.
ಬೆಳಗಾವಿ ರಾಜಕೀಯದಲ್ಲಿ ಸಾಹುಕಾರರಂತಿರುವ ಜಾರಕಿಹೊಳಿ ಕುಟುಂಬ ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿತ್ತು. ಆದರೆ, ತಮ್ಮ ಬದ್ದ ವೈರಿ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಚೆಕ್ ಮೇಟ್ ಮಾಡಲು ಸಾಧ್ಯವಾಗಿರಲಿಲ್ಲ, ಇದಕ್ಕೆ ಕಾರಣ ಡಿ.ಕೆ.ಶಿವಕುಮಾರ್ ಅವರ ಶ್ರೀರಕ್ಷೆ ಹೆಬ್ಬಾಳ್ಕರ್ ಮೇಲೆ ಇದ್ದದ್ದು. ಇದರ ಬೆನ್ನಲ್ಲೇ, ಡಿಕೆಶಿ ಇನ್ನೊಂದು ರಾಜಕೀಯ ದಾಳವನ್ನು ಉರುಳಿಸಿದ್ದಾರೆ.
ನೇರವಾಗಿ ಆಖಾಡಕ್ಕೆ ಇಳಿದಿರುವ ಡಿ.ಕೆ.ಶಿವಕುಮಾರ್
ಬೆಳಗಾವಿ ರಾಜಕೀಯದಲ್ಲಿ ನೇರವಾಗಿ ಆಖಾಡಕ್ಕೆ ಇಳಿದಿರುವ ಡಿ.ಕೆ.ಶಿವಕುಮಾರ್ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಈಗಿಂದಲೇ ಸಜ್ಜಾಗುತ್ತಿದ್ದಾರೆ. ಅದರ ಮೊದಲ ಭಾಗವಾಗಿ, ಬೆಳಗಾವಿಯಲ್ಲಿ ಬಲಿಷ್ಠರಾಗಿರುವ ಬಿಜೆಪಿಯ ನಾಯಕರನ್ನು ಕಾಂಗ್ರೆಸ್ಸಿನತ್ತ ಸೆಳೆಯುವಲ್ಲಿ ಕಾರ್ಯೋನ್ಮುಖರಾಗಿದ್ದಾರೆ. "ನಮ್ಮ ಪಕ್ಷದ ಸಿದ್ದಾಂತವನ್ನು ಒಪ್ಪಿಕೊಂಡು ಬಂದವರಿಗೆ ಕಾಂಗ್ರೆಸ್ ಬಾಗಿಲು ತೆರೆದಿರುತ್ತದೆ. ಬೇರೆ ಬೇರೆ ಪಕ್ಷದ ನಾಯಕರು ಕಾಂಗ್ರೆಸ್ಸಿನತ್ತ ಬರುತ್ತಿರುವುದನ್ನು ಇಲ್ಲ ಎಂದು ನಾನು ಹೇಗೆ ಹೇಳಲಿ"ಎಂದು ಡಿಕೆಶಿ ಹೇಳಿರುವುದು, ಚುನಾವಣೆಯ ವೇಳೆ ಪಕ್ಷಾಂತರದ ಮಹಾಪರ್ವ ಆರಂಭವಾಗಲಿದೆ ಎನ್ನುವುದರ ಮುನ್ಸೂಚನೆಯಂತಿದೆ.
ಪ್ರಭಾವೀ ನಾಯಕ ಅಶೋಕ್ ಪೂಜಾರಿ ಕಾಂಗ್ರೆಸ್ಸಿಗೆ ಸೇರ್ಪಡೆ
ಮಹತ್ವದ ಬೆಳವಣಿಗೆಯೊಂದರಲ್ಲಿ ಜೆಡಿಎಸ್ ನಲ್ಲಿ ಇದ್ದೂ ಇಲ್ಲದಂತಿದ್ದ ಆ ಭಾಗದ ಪ್ರಭಾವೀ ನಾಯಕ ಅಶೋಕ್ ಪೂಜಾರಿ, ಎರಡು ದಿನಗಳ ಹಿಂದೆ ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ರತ್ನಗಂಬಳಿಯ ಸ್ವಾಗತವನ್ನು ನೀಡಿದ್ದಾರೆ. ಲಿಂಗಾಯತ ಸಮುದಾಯದ ಅಶೋಕ್ ಪೂಜಾರಿ ಸೇರ್ಪಡೆಯ ಹಿಂದೆ ಸ್ಪಷ್ಟ ಗೋಕಾಕ್ ರಾಜಕೀಯ ಕಾಣಿಸುತ್ತದೆ.
ನಾವು ಇನ್ಜೊಬ್ಬರನ್ನು ಸೋಲಿಸಲು ಮುಂದಾಗುವುದಿಲ್ಲ, ನಮ್ಮ ಅಭ್ಯರ್ಥಿ ಗೆಲ್ಲಬೇಕು
"ಸತೀಶ್ ಜಾರಕಿಹೊಳಿ ನಿಗದಿ ಮಾಡಿದ ದಿನದಂದು ನಾನು ಮತ್ತು ಸಿದ್ದರಾಮಯ್ಯನವರು ಬರುತ್ತೇವೆ. ಅಶೋಕ್ ಪೂಜಾರಿಯವರು ನಮ್ಮ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ ನಮಗೆ ಇನ್ನಷ್ಟು ಬಲ ಬಂದಿದೆ. ನಾವು ಇನ್ಜೊಬ್ಬರನ್ನು ಸೋಲಿಸಲು ಮುಂದಾಗುವುದಿಲ್ಲ, ನಮ್ಮ ಅಭ್ಯರ್ಥಿ ಗೆಲ್ಲಬೇಕು, ಅದು ನಮ್ಮ ಉದ್ದೇಶ. ಅದಕ್ಕೆ ಬೇಕಾದ ಕಾರ್ಯತಂತ್ರವನ್ನು ಹಣೆಯುತ್ತೇವೆ"ಎಂದು ಮಾರ್ಮಿಕವಾಗಿ ರಮೇಶ್ ಜಾರಕಿಹೊಳಿಗೆ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಅಶೋಕ್ ಪೂಜಾರಿ ಹೇಳಿಕೆ, ರಮೇಶ್ ಜಾರಕಿಹೊಳಿಗೆ ನೇರ ಠಕ್ಕರ್
"ರಾಜಕೀಯ ವಿಚಾರದಲ್ಲಿ ಜಾರಕಿಹೊಳಿ ಕುಟುಂಬದ ವಿರುದ್ಧ ಹೋರಾಟ ಮಾಡಿರುವೆ. ಗೋಕಾಕ್ ವ್ಯವಸ್ಥೆ ಸುಧಾರಿಸಲು ಹೋರಾಟ ಮಾಡಿಕೊಂಡು ಬಂದಿದ್ದೇನೆ. ನಾವೆಲ್ಲರೂ ಒಂದಾಗಿ ಕೆಲಸ ಮಾಡಬೇಕು. ಎಲ್ಲರೂ ಜಾರಕಿಹೊಳಿ ಅವರು ಒಂದೇ ಅಂತಾರೆ. ಅಶೋಕ ಪೂಜಾರಿ ಚುನಾವಣೆ ಸಂದರ್ಭದಲ್ಲಿ ದುಡ್ಡ ತಗೊಂಡು ಸೈಲೆಂಟ್ ಆಗುತ್ತಾರೆ ಎನ್ನುವ ಆಪಾದನೆ ಮಾಡುತ್ತಾರೆ. ಹೀಗೆ ಅಪಪ್ರಚಾರ ಮಾಡುವುದನ್ನು ನಾವು ಮೊದಲು ಬಿಡಬೇಕು. ನಾನು ಮತ್ತು ನನ್ನ ಕುಟುಂಬ ಒಟ್ಟು ಆರು ಬಾರಿ ಸ್ಪರ್ಧೆ ಮಾಡಿ ಸೋತಿದ್ದೇವೆ. ನನ್ನ ತಂದೆ ಎರಡು ಬಾರಿ ಮತ್ತು ನಾನು ನಾಲ್ಕು ಬಾರಿ ಸೋತಿದ್ದೇವೆ. ಗೋಕಾಕ್ ಕ್ಷೇತ್ರ ಕಾಂಗ್ರೆಸ್ ಪಕ್ಷದ ತವರು ಮನೆ"ಎಂದು ಅಶೋಕ್ ಪೂಜಾರಿ ಹೇಳುವ ಮೂಲಕ, ರಮೇಶ್ ಜಾರಕಿಹೊಳಿಗೆ ನೇರವಾಗಿ ಠಕ್ಕರ್ ಕೊಟ್ಟಿದ್ದಾರೆ. ಅಶೋಕ್ ಪೂಜಾರಿ ಮೂಲಕ ಡಿಕೆಶಿ, ಜಾರಕಿಹೊಳಿಗೆ ಖೆಡ್ಡಾ ತೋಡಲು ಮುಂದಾಗಿದ್ದಾರೆ.
Recommended Video