ಅಂಬೇಡ್ಕರ್ ಮೊಮ್ಮಗಳು ನಮಗೆ ಕೇಳುತ್ತಿರುವ ಮಾನವೀಯ ಪ್ರಶ್ನೆಗಳು
ದಲಿತ ಸಂಘರ್ಷ ಸಮಿತಿಯ ವತಿಯಿಂದ ಮೊನ್ನೆ ನಡೆದ ಐಕ್ಯತಾ ಸಮಾವೇಶದ ಮರುದಿನ ಅಂದರೆ ನಿನ್ನೆ (ಆಗಸ್ಟ್ 14) ಬಾಬಾ ಸಾಹೇಬರ ಮೊಮ್ಮಗಳಾದ ರಮಾದೇವಿ ತೇಲ್ತುಂಬ್ಡೆ ಅವರನ್ನು ಸತ್ಕರಿಸಲು ನಮ್ಮ ಮನೆಗೆ ಗೌರವದಿಂದ ಆಹ್ವಾನಿಸಲಾಗಿತ್ತು.
ಈ ಸಂದರ್ಭದಲ್ಲಿ ಕರ್ನಾಟಕದ ಎಲ್ಲಾ ದಲಿತ ಸಂಘಟನೆಗಳ ಮುಖಂಡರು ಆಗಮಿಸಿ ಬಹಳಷ್ಟು ಹೊತ್ತಿನ ಕಾಲ ಬಾಬಾ ಸಾಹೇಬರ ಮೊಮ್ಮಗಳ ಜೊತೆ ಚರ್ಚಿಸಿದೆವು. ಬಾಬಾ ಸಾಹೇಬರ ವಿಚಾರಧಾರೆಗಳನ್ನೇ ಬದುಕುತ್ತಿರುವ ರಮಾದೇವಿ ಅವರು ಮತ್ತು ಅವರ ಪತಿಯಾದ ಆನಂದ್ ತೇಲ್ತುಂಬ್ಡೆ ಅವರು ಬಾಬಾ ಸಾಹೇಬರ ವಿಚಾರಧಾರೆಗಳಿಗೆ ವಾಸ್ತವಿಕ ತಿಳುವಳಿಕೆಯ ಸ್ಪರ್ಶ ನೀಡಿದಂತವರು.
ಧ್ವಜಕ್ಕೆ ಅಗೌರವ ತೋರಿಸುವ ಬಿಜೆಪಿಗರದ್ದು ದೇಶದ್ರೋಹ; ಮಹದೇವಪ್ಪ
ಓರ್ವ ಉದ್ಯಮಿಯಾಗಿ ಮತ್ತು ವಿಶ್ವವಿದ್ಯಾಲಯದ ಪ್ರೊಫೆಸರ್ ಆಗಿ ಬಹಳ ಸುಖದ ಜೀವನ ನಡೆಸಬಹುದಾಗಿದ್ದ ಆನಂದ್ ತೇಲ್ತುಂಬ್ಡೆ ಅವರು ತಮ್ಮ ಬದುಕಿನ ಬಹುಮುಖ್ಯ ಸಮಯವನ್ನು ನಾಗರೀಕ ಹಕ್ಕುಗಳ ರಕ್ಷಣೆಗಾಗಿ, ದಲಿತರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ಶ್ರಮಿಸಿದರು.
ಇಂತಹ ಸಮಾಜಪರವಾದ ವ್ಯಕ್ತಿಯನ್ನು ಈಗಿನ ಕೇಂದ್ರ ಸರ್ಕಾರವು ತರ್ಕವಿಲ್ಲದೇ ಅಸಂವಿಧಾನಿಕವಾಗಿ ಬಂಧಿಸಿದ್ದು ಎರಡು ವರ್ಷವಾದರೂ ಕೂಡಾ ಚಾರ್ಜ್ ಶೀಟ್ ಅನ್ನೂ ಸಹ ಹಾಕದೇ ಅವರನ್ನು ವೈಯಕ್ತಿಕವಾಗಿ ಹಿಂಸಿಸುತ್ತಿದ್ದು ನಿಜಕ್ಕೂ ಬಾಬಾ ಸಾಹೇಬರ ಕುಟುಂಬವನ್ನೇ ನೇರವಾಗಿ ಅವಮಾನಿಸುವ ಮತ್ತು ಅವರನ್ನು ಅಗೌರವದಿಂದ ನಡೆಸಿಕೊಳ್ಳುವ ಕೆಲಸವನ್ನು ಮಾಡಿದೆ.
ಸದಾ ಕೆಳ ವರ್ಗಗಳ ಪರವಾಗಿ ಕೆಲಸ ಮಾಡುತ್ತಿದ್ದ ಬಾಬಾ ಸಾಹೇಬರ ಕುಟುಂಬದ ಸದಸ್ಯರನ್ನು ಅತ್ಯಂತ ಅಗೌರವದಿಂದ ಮತ್ತು ಹೀನಾಯವಾಗಿ ನಡೆಸಿಕೊಳ್ಳುವಾಗ ಬಾಬಾ ಸಾಹೇಬರ ಮೊಮ್ಮಗಳಾದ ರಮಾಬಾಯಿ ತೇಲ್ತುಂಬ್ಡೆ ಅವರು ಆಡಿದ ಮಾತು ನಿಜಕ್ಕೂ ನನಗೆ ಬೇಸರ ತರಿಸಿತು.
"ನಾವು ಯಾವುದಕ್ಕಾಗಿ ಹೋರಾಟ ಮಾಡುತ್ತೇವೆಯೋ ಅದೇ ಕಾರಣಕ್ಕಾಗಿ ನಾವು ಈ ದಿನ ಸಂವಿಧಾನದ ಆಶಯದಂತೆ ಬದುಕಲೂ ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ'' ಎಂದು ಹೇಳುವುದಕ್ಕೆ ಬಹಳ ಬೇಸರ ಆಗುತ್ತಿದೆ.
ಆದರೆ ನಾವು ನಮ್ಮ ಸಮುದಾಯಗಳ ಹಕ್ಕುಗಳಿಗಾಗಿ ಹೋರಾಟ ನಡೆಸುವ ಹಾದಿಯಲ್ಲಿ ಇಂತಹ ಅಪಾಯಕಾರಿ ತೊಂದರೆಯನ್ನು ಎದುರಿಸುತ್ತಾ ಮುಂದೆ ಜೀವಂತವಾಗಿ ಇರುತ್ತೇವೋ ಇಲ್ಲವೋ ಎನ್ನುವ ಸ್ಥಿತಿಯನ್ನು ತಲುಪಿದಾಗಲೂ ಕೂಡಾ ನಾವು ಯಾರ ಪರವಾಗಿ ಹೋರಾಟ ನಡೆಸಿದ್ದೇವೆಯೋ ಅವರು ನಮ್ಮ ಪರವಾಗಿ ಒಂದೂ ಮಾತನಾಡದಿರುವುದು ಮತ್ತು ನಮ್ಮನ್ನು ಕನಿಷ್ಠ ಪಕ್ಷ ಕಣ್ಣೆತ್ತಿ ನೋಡದೇ ಇರುವುದು ನನ್ನಲ್ಲಿ ತೀವ್ರವಾದ ದುಃಖವನ್ನು ಉಂಟುಮಾಡಿದೆ".
ನಾವು ಮುಂದೆ ಇರುತ್ತೇವೋ ಇಲ್ಲವೋ ಎಂಬುದರ ಬಗ್ಗೆ ನಮಗೆ ಬೇಸರ ಇಲ್ಲ. ಆದರೆ ನಿಜವಾದ ತೊಂದರೆ ಆದಾಗ ನಮ್ಮ ಪಾಡಿಗೆ ನಾವು ಸುಮ್ಮನೇ ಇರುವ ಈ ಜಡವಾದ ಸ್ಥಿತಿಯು ನನ್ನಲ್ಲಿ ಬಹಳಷ್ಟು ನೋವನ್ನು ಉಂಟುಮಾಡಿದೆ.
ಇದೇ ಮೌನವೇ ಮುಂದೆ ನಮ್ಮ ಸಮುದಾಯಗಳ ಹಕ್ಕುಗಳನ್ನು ನಾಶ ಮಾಡಲು ಹೊರಟಿರುವ ದುಷ್ಟ ಶಕ್ತಿಗಳಿಗೆ ಸುಲಭವಾಗಿ ಸಿಗುವ ಅಸ್ತ್ರವಾಗಿದೆ. ನಾವು ಬದುಕಲು ಸಾಧ್ಯವಾಗಂತಹ ತೊಂದರೆಯಲ್ಲಿದ್ದೇವೆ. ದಯಮಾಡಿ ನೀವೆಲ್ಲರೂ ನಮಗೆ ಸಹಾಯ ಮಾಡಿ" ಎಂದರು.
ಅಭಿವ್ಯಕ್ತಿ ಸ್ವಾತಂತ್ರ್ಯವು ಕೊಲೆಯಾಗಿ ಬಾಬಾ ಸಾಹೇಬರ ಕುಟುಂಬದವರೇ ದುಃಖಿಸುತ್ತಿರುವ ಈ ವೇಳೆ ಬಾಬಾ ಸಾಹೇಬರ ನಿರಂತರವಾದ ಹೋರಾಟದ ಫಲವನ್ನು ಅನುಭವಿಸುತ್ತಿರುವ ನಾವುಗಳು ಕನಿಷ್ಠ ಅವರ ಬೆಂಬಲಕ್ಕೆ ನಿಲ್ಲದೇ ಇದ್ದರೆ ನಾವು ಬದುಕಿದ್ದರೂ ಸತ್ತಂತೆ ಎಂದು ನನಗೆ ತೀವ್ರವಾಗಿ ಅನಿಸುತ್ತಿದೆ.
ಈ ಹಿನ್ನಲೆಯಲ್ಲಿ ನನ್ನನ್ನು ರಾಜಕೀಯವಾಗಿ ರೂಪಿಸಿದ ಎಲ್ಲಾ ದಲಿತ ಸಂಘಟನೆಗಳು ದಯಮಾಡಿ ಒಟ್ಟಾಗಿ ಸಂಘಟಿತರಾಗಿ ಬಾಬಾ ಸಾಹೇಬರ ಕುಟುಂಬದ ಬೆಂಬಲಕ್ಕೆ ನಿಲ್ಲೋಣ ಮತ್ತು ಕೇಂದ್ರ ಸರ್ಕಾರದ ಸ್ವಾತಂತ್ರ್ಯ ವಿರೋಧಿ ನೀತಿಗಳ ವಿರುದ್ಧ ಪ್ರಬಲ ಹೋರಾಟ ನಡೆಸೋಣ ಎಂದು ಮನದುಂಬಿ ವಿನಂತಿಸಿಕೊಳ್ಳುತ್ತೇನೆ.
Recommended Video