ಈ ಬಾರಿ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡುಗೆ ಭಾರೀ ಮುಖಭಂಗ?
Recommended Video
ಅಮರಾವತಿ, ಫೆಬ್ರವರಿ 18: ಲೋಕಸಭಾ ಚುನಾವಣೆಯ ಹೊತ್ತಿನಲ್ಲಿ ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯಲಿದೆ. ಆದರೆ ಈ ಬಾರಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಪಕ್ಷ ಆಂಧ್ರದಲ್ಲಿ ಭಾರೀ ಮುಖಭಂಗ ಅನುಭವಿಸಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಆಂಧ್ರಪ್ರದೇಶದ ರಾಜಕೀಯದ ಬಗ್ಗೆ ಯೋಚಿಸುವುದಕ್ಕೆ ಹೋದರೆ, ನಾಯ್ಡು ವಿರುದ್ಧ ಆಡಳಿತ ವಿರೋಧಿ ಅಲೆ ಇರುವುದು ಸ್ಪಷ್ಟವಾಗುತ್ತದೆ.
ನಾವೆಲ್ಲ ಒಂದಾಗದಿದ್ದರೆ ಇದೇ ಕೊನೆ ಲೋಕಸಭೆ ಚುನಾವಣೆ: ನಾಯ್ಡು
ಲೋಕಸಭೆ ಮತ್ತು ವಿಧಾನಸಭೆ ಎರಡೂ ಚುನಾವಣೆಗಳೂ ಏಕಕಾಲಕ್ಕೆ ನಡೆಯುವ ಸಾಧ್ಯತೆ ಇದ್ದು, ಈಗಾಗಲೇ ಮಹಾಘಟಬಂಧನವನ್ನು ಕಟ್ಟಲು ಓಡಾಡುತ್ತಿರರುವ ನಾಯ್ಡು, ರಾಜ್ಯ ರಾಜಕಾರಣದತ್ತ ಹೆಚ್ಚು ಗಮನ ನೀಡುತ್ತಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಈ ಸನ್ನಿವೇಶವನ್ನು ವೈಎಸ್ ಆರ್ ಕಾಂಗ್ರೆಸ್ ಮತ್ತು ಟಿಆರ್ ಎಸ್ ಗಳು ಸರಿಯಾಗಿ ಬಳಸಿಕೊಂಡಿದ್ದೇ ಆದಲ್ಲಿ, ಈ ಬಾರಿ ನಾಯ್ಡು ಭಾರೀ ಮುಖಭಂಗ ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಟಿಡಿಪಿಗೆ ಸುಲಭವಿಲ್ಲ ಚುನಾವಣೆ
2014ರಲ್ಲಿ ತೆಲಂಗಾಣ ವಿಭಜನೆಯ ನಂತರ ಮೊದಲ ಬಾರಿಗೆ ನಡೆದ ಆಂಧ್ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ, ಟಿಡಿಪಿ ನಿರೀಕ್ಷೆಯಂತೆಯೇ ಜಯಸಾಧಿಸಿತ್ತು. ತೆಲಂಗಾಣದಲ್ಲಿ ಟಿಆರ್ ಎಸ್ ಗೆ ಹೇಗೆ ಸಮರ್ಥ ಎದುರಾಳಿಗಳಿಲ್ಲವೋ, ಆಂಧ್ರದಲ್ಲಿ ಟಿಡಿಪಿಗೂ ಸಮರ್ಥ ಎದುರಾಳಿಗಳಿರಲಿಲ್ಲ. ಆದರೆ ಈಗ ಸನ್ನಿವೇಶ ಬದಲಾಗಿದೆ ಜಗನ್ ಮೋಹನ್ ರೆಡ್ಡಿ ಅವರ ವೈಎಸ್ ಆರ್ ಕಾಂಗ್ರೆಸ್ ಟಿಡಿಪಿಗೆ ಪ್ರಬಲ ಸ್ಪರ್ಧಿಯಾಗಿ ಪೈಪೋಟಿ ನೀಡಿದರೆ ಅಚ್ಚರಿಯೇನಿಲ್ಲ.
ನಮ್ಮನ್ನು ಕೆಣಕಿದರೆ ಹುಷಾರ್! ಶಾ ಗೆ ನಾಯ್ಡು ವಾರ್ನಿಂಗ್
ಪ್ರತೀಕಾರದ ತವಕದಲ್ಲಿ ಬಿಜೆಪಿ
ಬಿಜೆಪಿಯೂ ಟಿಡಿಪಿ ಮತ್ತು ನಾಯ್ಡು ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ತವಕದಲ್ಲಿದೆ. 2014 ರಲ್ಲಿ ಮೈತ್ರಿ ಮಾಡಿಕೊಂಡು ಇದೀಗ ಅವಕಾಶವಾದಿಯಂತೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿರುವ ನಾಯ್ಡು ಬಗ್ಗೆ ಬಿಜೆಪಿಗೆ ಬೇಸರವಿದೆ. ಎನ್ ಡಿಎ ವಿರುದ್ಧ ಮಹಾಘಟಬಂಧನ ಕಟ್ಟುವಲ್ಲಿ ನಾಯ್ಡು ಮುಂಚೂಣಿಯಲ್ಲಿರುವುದರಿಂದ ಸಹಜವಾಗಿಯೇ ಬಿಜೆಪಿ ನಾಯ್ಡು ವಿರುದ್ಧ ಸೇಡು ತೀರಿಸಿಕೊಳ್ಳುವ ಅವಕಾಶಕ್ಕಾಗಿ ಕಾಯುತ್ತಿದೆ.
ಮೋದಿ ಮೋಹ! ಜಗನ್, ಕೆಸಿಆರ್ ರನ್ನು ತರಾಟೆಗೆ ತೆಗೆದುಕೊಂಡ ನಾಯ್ಡು
TRS, YSRCP, BJP ಮೈತ್ರಿ?
ಆಂಧ್ರ ಪ್ರದೇಶದಲ್ಲಿ ನಾಯ್ಡು ಅವರನ್ನು ಸೋಲಿಸಲೇಬೇಕು ಎಂಬ ಪಣತೊಟ್ಟಿರುವ ತೆಲಂಗಾಣ ರಾಷ್ಟ್ರ ಸಮಿತಿ, ವೈಎಸ್ ಆರ್ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಪರೋಕ್ಷವಾಗಿ ಮೈತ್ರಿ ಮಾಡಿಕೊಳ್ಳಬಹುದು ಎಂಬ ಮಾತು ಕೇಳಿಬರುತ್ತಿದೆ. ಹಾಗಂತ ಸ್ವತಃ ಚಂದ್ರಬಾಬು ನಾಯ್ಡು ಅವರೂ ಆರೋಪಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಟಿಆರ್ ಎಸ್ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಗೆ ಪರೋಕ್ಷ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ. ಆಂಧ್ರದಲ್ಲಿ ನಾಯ್ಡು ಅವರನ್ನು ಅಧಿಕಾರದಿಂದ ಕಿತ್ತೆಸೆಯುವ ಸಲುವಾಗಿ ಜಗನ್ಮೋಹನ್ ರೆಡ್ಡಿ ಟಿಆರ್ ಎಸ್ ಮತ್ತು ಬಿಜೆಪಿಯ ನೆರವು ಬೇಡಿದರೆ ಅಚ್ಚರಿಯಿಲ್ಲ.
ಜಗನ್ ಪರವಿರುವ ಮತದಾರರು
ಹನ್ನೊಂದು ತಿಂಗಳುಗಳ ಕಾಲ ಪಾದಯಾತ್ರೆ ಮಾಡುವ ಮೂಲಕ ಜಗನ್ ರೆಡ್ಡಿ ಜನರ ನಾಡಿಮಿಡಿತ ಅರಿತಿದ್ದಾರೆ. ಅದೂ ಅಲ್ಲದೆ ಟಿಡಿಪಿ ಭದ್ರಕೋಟೆ ಎನ್ನಿಸಿದ್ದ ಗುಂಟೂರು, ಕೃಷ್ಣ, ಗೋದಾವರಿಯ ಪೂರ್ವ ಮತ್ತು ಪಶ್ಚಿಮ ಜಿಲ್ಲೆಗಳಲ್ಲೂ ಜಗನ್ ಪಾದಯಾತ್ರೆ ಮಾಡಿ ಜನಬಲ ಹೊಂದಿದ್ದಾರೆ. ಟಿಡಿಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ದೂರುಗಳೂ ಕೇಳಿಬಂದ ಹಿನ್ನೆಲೆಯಲ್ಲಿ ಜನರಿಗೂ ಬದಲಾವಣೆ ಅಗತ್ಯವಿದೆ ಎನ್ನಿಸಿದರೆ, ಜಗನ್ ಪರಿಹಾರವಾಗಿ ಕಾಣಿಸಬಹುದು!
ನಾಯ್ಡು ವಿರುದ್ಧ ಆಡಳಿತ ವಿರೋಧಿ ಅಲೆ
2014 ರಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು, ಆಂಧ್ರ ಪ್ರದೇಶದಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲ ಎಂದು ಎನ್ ಡಿಎ ಯಿಂದ ಹೊರಬಂದ ನಾಯ್ಡು ಬಗ್ಗೆ ಹಲವರಲ್ಲಿ ಉತ್ತಮ ಭಾವನೆ ಇಲ್ಲ. ಅವಕಾಶವಾದಿ ರಾಜಕಾರಣ ಎಂಬಂತಿರುವ ಈ ನಡೆಗೆ ಸಾಕಷ್ಟು ಟೀಕೆಯೂ ವ್ಯಕ್ತವಾಗಿದೆ. 2014 ರಲ್ಲಿ ಚುನಾವಣೆಗೂ ಮುನ್ನ ರೈತರ ಸಾಲ ಮನ್ನಾ ಮಾಡುವ ಘೋಷಣೆಯನ್ನು ನಾಯ್ಡು ಮಾಡಿದ್ದರು. ಅದರಲ್ಲಿ ಒಟ್ಟು 87,000 ಕೋಟಿ ರೂ. ಸಾಲದಲ್ಲಿ, ಕೇವಲ 15,000 ಕೋಟಿ ರೂ. ನಷ್ಟನ್ನು ಸರ್ಕಾರ ಮನ್ನಾ ಮಾಡಿದ್ದು, ಇನ್ನೆರಡು ತಿಂಗಳುಗಳಲ್ಲಿ 8000 ಕೋಟಿ ರೂ.ನಷ್ಟು ಸಾಲವನ್ನು ಮನ್ನಾ ಮಾಡುವುದಾಗಿ ಹೇಳಿದೆ. ಆದರೆ ತಾನು ಕೊಟ್ಟ ಮಾತನ್ನು ಮಾತ್ರ ಉಳಿಸಿಕೊಂಡಿಲ್ಲ.
ನಿರ್ಣಾಯಕವಾಗಲಿರುವ ಕಾಪು ಮತದಾರರು
2014 ರಲ್ಲಿ ಕಾಪು ಸಮುದಾಯದ ಶೇ.17 ರಷ್ಟು ಮತದಾರರು ಟಿಡಿಪಿ ಪರವಿದ್ದರು. ಅದಕ್ಕೆ ಕಾರಣ ನಟ ಪವನ್ ಕಲ್ಯಾಣ್ ಅವರು ಟಿಡಿಪಿ ಪರವಾಗಿದ್ದಿದ್ದು. ಆದರೆ ಇದೀಗ ಜನ ಸೇನಾ ಪಾರ್ಟಿ ಎಂಬ ಹೆಸರಿನಲ್ಲಿ ಪವನ್ ಕಲ್ಯಾಣ್ ಹೊಸ ಪಕ್ಷ ಕಟ್ಟಿರುವುದರಿಂದ ಟಿಡಿಪಿಗೆ ಅವರು ಬೆಂಬಲ ನೀಡುತ್ತಿಲ್ಲ. ಇದು ಮತ ವಿಭಜಿಸುವಲ್ಲಿ ಮತ್ತು ಟಿಡಿಪಿಗೆ ಭಾರೀ ನಷ್ಟವನ್ನುಂಟು ಮಾಡುವಲ್ಲಿ ಮಹತ್ವದ ಪಾತ್ರ ವಹಿಸಬಹುದು ಎನ್ನಲಾಗುತ್ತಿದೆ. ಅಲ್ಲದೆ, ಈ ಬಾರಿ ತಾವು ಯಾರ ಬೆಂಬಲಕ್ಕೂ ನಿಲ್ಲುವುದಿಲ್ಲ ಎಂದು ಪವನ್ ಕಲ್ಯಾಣ್ ಹೇಳಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಪವನ್ ಕಲ್ಯಾಣ್ ತೆಗೆದುಕೊಳ್ಳುವ ನಿರ್ಧಾರಗಳು ಲೊಕಸಭಾ ಚುನಾವಣೆಯ ಮೇಲಲ್ಲದಿದ್ದರೂ, ವಿಧಾನಸಭಾ ಚುನಾವಣೆಯ ಮೇಲಂತೂ ಭಾರೀ ಪರಿಣಾಮ ಬೀರಲಿದೆ.