ಅಸ್ಸಾಮ್ನಲ್ಲಿ ಒಬ್ಬ ಹುಡುಗ ಕೊಟ್ಟ ಚೀಟಿ ಅಮಿತಾಭ್ ಬಚ್ಚನ್ ಜೀವನಕ್ಕೆ ಕೊಟ್ಟಿತ್ತು ತಿರುವು
ನವದೆಹಲಿ, ಅ. 11: ಬಾಲಿವುಡ್ನ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ 80ನೇ ಜನ್ಮದಿನ ಇಂದು. ಭಾರತ ಕಂಡ ಅತ್ಯಂತ ಯಶಸ್ವಿ ನಟರಲ್ಲಿ ಮತ್ತು ಅತಿ ಹೆಚ್ಚು ಅಭಿಮಾನಿ ಬಳಗ ಹೊಂದಿರುವ ನಟರಲ್ಲಿ ಅವರು ಒಬ್ಬರು. ಬಿಗ್ ಬಿ ಎಂದೇ ಖ್ಯಾತರಾಗಿರುವ ಬಚ್ಚನ್ ಒಂದು ಕಾಲದಲ್ಲಿ ರಾಜಕೀಯಕ್ಕೆ ಕಾಲಿಟ್ಟು ಬಂದಷ್ಟೇ ವೇಗದಲ್ಲಿ ವಾಪಸ್ಸಾಗಿದ್ದರು.
ಅಮಿತಾಭ್ ಬಚ್ಚನ್ ಜೀವನಕ್ಕೆ ತಿರುವು ಸಿಗಲು ಆ ಒಂದು ಚೀಟಿ ಕಾರಣವಾಗಿತ್ತು. ಅಸ್ಸಾಮ್ನಲ್ಲಿ ಒಬ್ಬ ಹುಡುಗ ಕೊಟ್ಟ ಪತ್ರ ಬಿಗ್ ಬಿ ಪಥವನ್ನು ಬದಲಿಸಿತ್ತು. ಏನದು ಘಟನೆ? ಅದಕ್ಕೆ ಮುನ್ನ ಅಮಿತಾಭ್ ಬಚ್ಚನ್ ರಾಜಕೀಯಕ್ಕೆ ಪ್ರವೇಶ ಮಾಡಿದ ಸಂಗತಿಯನ್ನು ಸ್ಮರಿಸಬಹುದು.
ಮಾಜಿ ಪ್ರಧಾನಿ ಹಾಗು ದಿವಂಗತ ರಾಜೀವ್ ಗಾಂಧಿ ಮತ್ತು ಅಮಿತಾಭ್ ಬಚ್ಚನ್ ಇಬ್ಬರು ಬಹಳ ಕಾಲದಿಂದ ಫ್ಯಾಮಿಲಿ ಫ್ರೆಂಡ್ಸ್ ಆಗಿದ್ದವರು. 1984ರಲ್ಲಿ ಇಂದಿರಾ ಗಾಂಧಿ ಹತ್ಯೆಯಾದ ಬಳಿಕ ರಾಜೀವ್ ಗಾಂಧಿ ದಿಢೀರ್ ಆಗಿ ರಾಜಕೀಯ ಪ್ರವೇಶ ಮಾಡಿದ್ದರು. ಆಗ ರಾಜೀವ್ ಗಾಂಧಿಗೆ ಬೆಂಬಲವಾಗಿ ಅಮಿತಾಭ್ ಬಚ್ಚನ್ ಕೂಡ ರಾಜಕೀಯಕ್ಕೆ ಧುಮುಕಿದ್ದರು.

1984ರ ಲೋಕಸಭಾ ಚುನಾವಣೆಯಲ್ಲಿ ಅಲಹಾಬಾದ್ ಕ್ಷೇತ್ರದಲ್ಲಿ ಸ್ಪರ್ಧಿಸಿ ಶೇ. 68 ಮತಗಳನ್ನು ಪಡೆದು ಅಭೂತಪೂರ್ವ ಎನ್ನುವಂಥ ಗೆಲುವು ಪಡೆದು ಸಂಸತ್ ಪ್ರವೇಶ ಮಾಡಿದ್ದರು. ಆದರೆ, ಕೇವಲ 3 ವರ್ಷ ಮಾತ್ರ ಅವರ ರಾಜಕೀಯ ಜೀವನ ಇದ್ದದ್ದು.
ರಾಜೀವ್ ಗಾಂಧಿ ವಿರುದ್ಧ ಬೋಫೋರ್ಸ್ ಹಗರಣದ ಸದ್ದು ಜೋರಾಗಿತ್ತು. ಈ ಹಗರಣದಲ್ಲಿ ಅಮಿತಾಭ್ ಬಚ್ಚನ್ ಹೆಸರೂ ಕೇಳಿಬಂದಿತ್ತು. ಅದಾದ ಬಳಿಕ 1987ರಲ್ಲಿ ಬಿಗ್ ಬಿ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ಬಣ್ಣದ ಲೋಕಕ್ಕೆ ಮರಳಿದ್ದರು.

ರಾಜಕೀಯ ಬಿಡಲು ಕಾರಣವಾಗಿತ್ತು ಚೀಟಿ
ಅಮಿತಾಭ್ ಬಚ್ಚನ್ ಎಂಪಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಬೋಫೋರ್ಸ್ ಹಗರಣದ ಕಾರಣಕ್ಕೆ ಎಂದು ಆಗ ಬಹುತೇಕ ಮಂದಿ ಭಾವಿಸಿದ್ದರು. ಆದರೆ, ವಾಸ್ತವದಲ್ಲಿ ಕಾರಣ ಅದಾಗಿರಲಿಲ್ಲ. ಅಸ್ಸಾಮ್ನಲ್ಲಿ ನಡೆದ ಒಂದು ಘಟನೆ ಬಚ್ಚನ್ ಜೀವನಕ್ಕೆ ತಿರುವು ಕೊಟ್ಟಿತ್ತು.
ಆ ಘಟನೆ ಬಗ್ಗೆ ಅಮಿತಾಭ್ ಬಚ್ಚನ್ ಒಮ್ಮೆ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದುಂಟು. ಅವರು ಸಂಸದರಾಗಿದ್ದಾಗ ಅಸ್ಸಾಮ್ ರಾಜ್ಯದಲ್ಲಿ ಕಾಂಗ್ರೆಸ್ ಪರ ಒಮ್ಮೆ ಪ್ರಚಾರಕ್ಕೆ ಹೋಗಿದ್ದರು. ನಿಗದಿತ ಸ್ಥಳದ ಬದಲು ವಿಪಕ್ಷದ ಸಭೆ ನಡೆಯುತ್ತಿದ್ದ ಸ್ಥಳದ ಬಳಿ ಹೆಲಿಕಾಪ್ಟರ್ ಇಳಿದಿತ್ತು. ಆಗ ಜನರ ನೂಕುನುಗ್ಗಲು ನಡೆದು ಅಮಿತಾಭ್ ಬಚ್ಚನ್ಗೆ ಅಪಾಯವಾಗುವ ಸಂಭವ ಇತ್ತು. ಪೈಲಟ್ ಬೇಗನೇ ಹೆಲಿಕಾಪ್ಟರ್ ಚಾಲನೆ ಮಾಡಿ ಹೊರಡುವ ತರಾತುರಿಯಲ್ಲಿದ್ದರು.
ಆಗ ಒಬ್ಬ ವಿದ್ಯಾರ್ಥಿ ಹೇಗೋ ನುಸುಳಿಕೊಂಡು ಬಚ್ಚನ್ ಬಳಿ ಬಂದು ಒಂದು ಚೀಟಿಯನ್ನು ಕೊಡುತ್ತಾನೆ. ಆ ಚೀಟಿ ಅಮಿತಾಭ್ ಬಚ್ಚನ್ ಅವರನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುತ್ತದೆ.
"ಬಚ್ಚನ್ಜಿ, ನಾನು ನಿಮ್ಮ ದೊಡ್ಡ ಅಭಿಮಾನಿ. ಆದರೆ ನಾನು ಬೇರೆ ಪಕ್ಷದ ಬೆಂಬಲಿಗನಾಗಿದ್ದೇನೆ. ದಯವಿಟ್ಟು ಈ ರಾಜ್ಯದಿಂದ ಈಗ ಹೋಗಿರಿ. ಎರಡು ಅಭಿಮಾನಗಳ ಮಧ್ಯೆ ಗೊಂದಲಕ್ಕೆ ನನ್ನನ್ನು ಸಿಲುಕಿಸಿ ಕಷ್ಟ ಮಾಡಬೇಡಿ" ಎಂದು ಆ ಹುಡುಗ ನೀಡಿದ ಕಾಗದದ ಗುಂಡಿನಲ್ಲಿ ಬರೆಯಲಾಗಿತ್ತು.
ಈ ಪತ್ರ ಬಿಗ್ ಬಿ ಅಮಿತಾಭ್ ಬಚ್ಚನ್ ಜೀವನಕ್ಕೆ ತಿರುವು ಕೊಟ್ಟಿತ್ತು. "ಆ ಭಾವನಾತ್ಮಕ ಮನವಿ ನನ್ನನ್ನು ಗಾಂಢ ಚಿಂತನೆಗೆ ಹಚ್ಚಿತು" ಎಂದು ಬಚ್ಚನ್ ಹೇಳಿಕೊಂಡಿದ್ದರು.
"25 ವರ್ಷಗಳ ಕಾಲ ಒಬ್ಬ ನಟನಾಗಿ ನಾನು ಪ್ರೇಕ್ಷಕರನ್ನು ಸಂಪಾದಿಸಿದ್ದೆ, ಅವರ ಅಭಿಮಾನ ಸಂಪಾದಿಸಿದೆ. ಒಮ್ಮೆಲೇ ನಾನು ರಾಜಕಾರಣಿಯಾಗಿ ಜನರನ್ನು ಒಪ್ಪಿಸಲು ಹೋಗಿದ್ದು ಸರಿ ಅಲ್ಲ ಅನಿಸಿತು. ನನ್ನ ಅಭಿಮಾನಿಗಳನ್ನು ಗೊಂದಲಕ್ಕೆ ಕೆಡವುತ್ತಿದ್ದೇನೆ ಎನಿಸಿತು" ಎಂದು ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದರು.
ನಂತರದ ಜೀವನ
ರಾಜಕೀಯಕ್ಕೆ ಹೋಗಿ ಬಂದ ಬಳಿಕ ಅಮಿತಾಭ್ ಬಚ್ಚನ್ ಸಿನಿಮಾ ವೃತ್ತಿಜೀವನ ಹಲವು ವರ್ಷಗಳ ಕಾಲ ಏರುಪೇರಿಗೆ ಸಿಕ್ಕಿಹೋಯಿತು. ಅಗ್ನಿಪಥ್ನಂಥ ಕೆಲವೇ ಚಿತ್ರಗಳು ಬಾಕ್ಸಾಫೀಸ್ನಲ್ಲಿ ಗೆಲುವು ಪಡೆದವು. 2000ರ ಇಸವಿಯವರೆಗೂ ಅವರ ಹೆಚ್ಚಿನ ಸಿನಿಮಾಗಳು ಫೇಲ್ ಆದವು. ಬಚ್ಚನ್ ನೇಪಥ್ಯಕ್ಕೆ ಸರಿಯುವುದು ಖಚಿತ ಎಂದು ಭಾವಿಸುವಷ್ಟರಲ್ಲಿ ಬಚ್ಚನ್ ಥರಹೇವಾರಿ ಪಾತ್ರಗಳಲ್ಲಿ ನಟಿಸುತ್ತಾ ನಟನಾಗಿ ಮತ್ತೆ ಕಂಬ್ಯಾಕ್ ಮಾಡಿದರು.
(ಒನ್ಇಂಡಿಯಾ ಸುದ್ದಿ)
-
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Gold Rate Today: ಸತತ ಆರನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ: ಬೆಂಗಳೂರಿನಲ್ಲಿ ಇಂದಿನ ದರಗಳು ಹೀಗಿವೆ












Click it and Unblock the Notifications