ಕನ್ನಡ ರಾಜ್ಯೋತ್ಸವ: ನಿತ್ಯವೂ ಮನೆಮನಗಳ ಬೆಳಗುತ್ತಿರಲಿ ಕನ್ನಡದ ದೀಪ
ಸಾಮಾನ್ಯವಾಗಿ ನವೆಂಬರ್ ತಿಂಗಳು ಕನ್ನಡದ ಮಾಸವಾಗಿದ್ದು ಕನ್ನಡಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯುವುದರೊಂದಿಗೆ ಕನ್ನಡದ ಕಂಪು ಎಲ್ಲೆಡೆ ಬೀರುತ್ತಿದೆ.
ಪ್ರತಿ ವರ್ಷವೂ ನವೆಂಬರ್ ತಿಂಗಳ ಮೊದಲ ದಿನ ಅರ್ಥಾತ್ ಕನ್ನಡ ರಾಜ್ಯೋತ್ಸವದ ದಿನ ಕನ್ನಡದ ಬಗೆಗೆ ಹೆಚ್ಚಿನ ಕಾಳಜಿ ತೋರಿಸಲಾಗುತ್ತದೆ. ಕನ್ನಡವನ್ನು ಹಾಡಿ ಹೊಗಳಲಾಗುತ್ತದೆ. ಕನ್ನಡದ ಹೆಸರಿನಲ್ಲಿ ಅದ್ಧೂರಿ ಕಾರ್ಯಕ್ರಮಗಳು ಒಂದು ದಿನದ ಮಟ್ಟಿಗೆ ನಡೆದು ಅದು ಒಂದು ದಿನದ ಕನ್ನಡ ಪ್ರೇಮವಾಗಿ ಮರೆಯಾಗುತ್ತದೆ.
ನ್ಯಾಯಾಂಗದಲ್ಲಿ ಕನ್ನಡ ಇನ್ನೂ ಮರೀಚಿಕೆ: ಹೈಕೋರ್ಟ್ನಲ್ಲಿ ಕಡ್ಡಾಯವಾಗದ ಹೊರತು ಸಾಧ್ಯವಿಲ್ಲ!
ದಿನಕಳೆದಂತೆಲ್ಲ ರಾಜ್ಯೋತ್ಸವದ ಆಚರಣೆಗಳು ಕೂಡ ದಿಕ್ಕು ತಪ್ಪುತ್ತಿರುವಂತೆ ಭಾಸವಾಗುತ್ತಿದೆ. ಕನ್ನಡ ಪ್ರೇಮಗಳು ಕೇವಲ ತೋರಿಕೆಯಾಗುತ್ತಿವೆ. ಇಷ್ಟಕ್ಕೂ ಕನ್ನಡ ಗಟ್ಟಿಯಾಗಿ ಉಳಿದಿರುವುದು ಎಲ್ಲಿ? ಗ್ರಾಮೀಣ ಪ್ರದೇಶದಲ್ಲಿನಾ? ನಗರಗಳಲ್ಲಿನಾ? ನಮ್ಮಲ್ಲಿ, ನಿಮ್ಮಲ್ಲಿ, ಅವರಲ್ಲಿ, ಎಲ್ಲಿ? ಹೀಗೆ ಹತ್ತಾರು ಪ್ರಶ್ನೆಗಳು ಮೂಡುತ್ತವೆಯಾದರೂ ನಿಜವಾಗಿ ನಮ್ಮ ಕನ್ನಡ ಗಟ್ಟಿಯಾಗಿ ಉಳಿದು ಬಂದಿರುವುದು ಗ್ರಾಮೀಣ ಪ್ರದೇಶದಲ್ಲಿ ಮತ್ತು ಪ್ರತಿ ಜನಪದ ಹಾಡುಗಳಲ್ಲಿ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಅಕ್ಷರವೇ ಗೊತ್ತಿಲ್ಲದ ಕಾಲದಲ್ಲಿ ನಮ್ಮ ಜನಪದರು ಕನ್ನಡದ ಕಂಪನ್ನು ಜನಪದ ಹಾಡುಗಳ ಮೂಲಕ, ನಾಟಕಗಳ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡಿ ಬೆಳೆಸಿದ್ದಾರೆ. ಹೀಗಾಗಿ ನಾವು ಕನ್ನಡವನ್ನು ಉಳಿಸುವ ಅಗತ್ಯವಿಲ್ಲ. ಅದು ಎಲ್ಲ ಕಾಲಘಟ್ಟದಲ್ಲಿ ಎಲ್ಲ ಆಕ್ರಮಣಗಳನ್ನು ಎದುರಿಸಿ ಉಳಿದು ಬಂದಿದೆ. ಅದನ್ನು ಬೆಳೆಸುವ, ಹೊರಗಿನಿಂದ ಬಂದವರಿಗೆ ಕನ್ನಡವನ್ನು ಕಲಿಸುವ ಕೆಲಸವಾಗಬೇಕಷ್ಟೆ. ನಮ್ಮ ರಾಜ್ಯ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗೋವಾ ರಾಜ್ಯಗಳೊಂದಿಗೆ ಗಡಿಭಾಗವನ್ನು ಹಂಚಿಕೊಂಡಿದೆ. ಗಡಿಭಾಗದಲ್ಲಿ ಸುತ್ತಲಿನ ರಾಜ್ಯಗಳು ತಮ್ಮ ಭಾಷೆಯ ಪ್ರಭಾವವನ್ನು ಕನ್ನಡದ ಮೇಲೆ ಹೇರುತ್ತಿವೆ. ಗಡಿನಾಡಿನಲ್ಲಿ ಬದುಕುವವರ ಸ್ಥಿತಿ ಬಹಳಷ್ಟು ಕಡೆಗಳಲ್ಲಿ ಗೊಂದಲಮಯವಾಗಿದೆ. ಜತೆ ಜತೆಗೆ ಬಲವಂತವಾಗಿ ಕನ್ನಡದ ಮೇಲೆ ತಮ್ಮ ಪ್ರಭಾವ ಬೀರುವ ಯತ್ನಗಳು ನಡೆಯುತ್ತಿವೆ.
ಮನೆ ಮನೆಯ ಮೇಲೂ ಕನ್ನಡ ಬಾವುಟ, ಎಚ್ಡಿಕೆಯಿಂದ ಧ್ವಜಾರೋಹಣ
ಕನ್ನಡದ ಮೇಲೆ ಕೇರಳದ ಪ್ರಭಾವ
ಹಳೆ ಮೈಸೂರು ಭಾಗದಲ್ಲಿ ಚಾಮರಾಜನಗರ ತಮಿಳುನಾಡು ಮತ್ತು ಕೇರಳ ಹೀಗೆ ಎರಡು ರಾಜ್ಯದೊಂದಿಗೆ, ಮೈಸೂರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿವೆ. ಇಲ್ಲಿ ಒಟ್ಟು ನಾಲ್ಕು ಜಿಲ್ಲೆಗಳು ಕೇರಳದೊಂದಿಗೆ ಗಡಿ ಹಂಚಿಕೊಂಡಿದ್ದು, ಕೇರಳಿಗರರೊಂದಿಗೆ ವ್ಯವಹಾರ ಅಷ್ಟೇ ಅಲ್ಲದೆ ಕೇರಳಿಗರು ಹೆಚ್ಚಿನ ಪ್ರಮಾಣದಲ್ಲಿ ಈ ಜಿಲ್ಲೆಗಳಲ್ಲಿ ನೆಲೆಸಿರುವುದನ್ನು ಕಾಣಬಹುದಾಗಿದೆ.
ಪರಭಾಷಿಗರಿಗೆ ನಮ್ಮ ಭಾಷೆ ಕಲಿಸೋಣ
ಸಾಮಾನ್ಯವಾಗಿ ಗಡಿಭಾಗದಲ್ಲಿ ನೆಲೆಸಿರುವ ಜನ ಎರಡು ಭಾಷೆಗಳನ್ನು ಕಲಿಯುತ್ತಿದ್ದಾರೆ. ಆದರೂ ಗಡಿಭಾಗದಲ್ಲಿ ಕನ್ನಡಕ್ಕಿಂತ ಬೇರೆ ಭಾಷೆ ಇತ್ತೀಚೆಗೆ ಪ್ರಭಾವ ಬೀರುತ್ತಿರುವುದು ಕಂಡು ಬರುತ್ತಿದೆ. ಕನ್ನಡದ ಜತೆಗೆ ಇತರೆ ಭಾಷೆಗಳನ್ನು ಕಲಿತುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ದುರಂತ ಏನೆಂದರೆ ಕರ್ನಾಟಕಕ್ಕೆ ಹೊರ ರಾಜ್ಯಗಳಿಂದ ಬಂದು ಬದುಕು ಕಟ್ಟಿಕೊಂಡಿರುವ ಕೆಲವರು ಇನ್ನು ಕೂಡ ಕನ್ನಡ ಭಾಷೆ ಕಲಿಯುವ ಪ್ರಯತ್ನ ಮಾಡಿಲ್ಲ. ಏಕೆಂದರೆ ನಾವೇ ಅವರ ಭಾಷೆಯನ್ನು ಉತ್ಸಾಹ ತೋರುತ್ತಿದ್ದೇವೆ.
ಮನೆ-ಮನದಲ್ಲಿ ನಿತ್ಯ ಕನ್ನಡದ ದೀಪ ಉರಿಯಬೇಕು
ಕನ್ನಡದ ವಿಚಾರ ಬಂದಾಗಲೆಲ್ಲ ನಮಗೆ ಆಂಗ್ಲ ಭಾಷೆ ಕಡು ವಿರೋಧಿಯಂತೆ ಗೋಚರವಾಗುತ್ತದೆ. ಈ ವೇಳೆ ಆಂಗ್ಲಭಾಷೆ ಪದಗಳ ಮೇಲೆ ಮಸಿ ಬಳಿದು ಆಕ್ರೋಶ ತೀರಿಸಿಕೊಳ್ಳುತ್ತೇವೆ. ಆದರೆ ವಾಸ್ತವವಾಗಿ ನಿತ್ಯದ ವ್ಯವಹಾರಗಳಲ್ಲಿ ಅದರಲ್ಲೂ ಡಿಜಿಟಲ್ ಮಯವಾಗಿರುವ ಈ ಕಾಲದಲ್ಲಿ ಆಂಗ್ಲ ಭಾಷೆಯನ್ನು ಬದಿಗಿಟ್ಟು ವ್ಯವಹಾರ ನಡೆಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಹೀಗಿರುವಾಗ ಕನ್ನಡದ ಉಳಿವಿಗೆ ಬೇಕಾಗಿರುವುದು ಕನ್ನಡದ ಪ್ರೇಮವಷ್ಟೆ. ಅದು ನಮ್ಮ ಹೃದಯಗಳಿಂದ ಬರಬೇಕು. ನಮ್ಮ ಮನೆಗಳಲ್ಲಿ ನಿತ್ಯ ಕನ್ನಡದ ದೀಪ ಉರಿಯಬೇಕು.
ಕನ್ನಡ ನಿತ್ಯ ಕಾಯಕವಾಗಲಿ
ಕನ್ನಡ ಬೆಳೆಯ ಬೇಕಾಗಿರುವುದು ನಮ್ಮಿಂದವಾಗಿರುವುದರಿಂದ ನಾವು ಕನ್ನಡದ ಪ್ರೇಮ ಬೆಳೆಸಿಕೊಳ್ಳಬೇಕು. ನಮ್ಮ ದೇಶ ವಿಭಿನ್ನತೆಯಲ್ಲಿ ಏಕತೆ ಹೊಂದಿರುವ ದೇಶವಾಗಿದೆ. ನಮ್ಮ ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ನೀಡೋಣ ಅದರಾಚೆಗೆ ಬೇರೆಯವರಿಗೂ ಕನ್ನಡ ಕಲಿಸುವ ಕೆಲಸ ಮಾಡಬೇಕಾಗಿದೆ. ಕನ್ನಡದ ಕೆಲಸವನ್ನು ಕೇವಲ ರಾಜ್ಯೋತ್ಸವದ ದಿನ ಮಾಡಿ ಮತ್ತೆ ಮರೆತು ಬಿಡುವ ಬದಲು ನಿತ್ಯದ ಕಾಯಕವನ್ನಾಗಿ ಮಾಡಿಕೊಂಡರೆ ಕನ್ನಡ ಉಳಿದು ಬೆಳೆಯಲು ಸಾಧ್ಯವಾಗುತ್ತದೆ.
ಅವತ್ತಿನಿಂದ ಇವತ್ತಿನ ತನಕ ಕನ್ನಡಕ್ಕಾಗಿ ಹಲವು ರೀತಿಯಲ್ಲಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು ಕೋಟ್ಯಂತರ ಜನರಿದ್ದಾರೆ. ಕೆಲವರ ಕನ್ನಡ ಪ್ರೇಮ ಬೆಳಕಿಗೆ ಬಂದಿರಬಹುದು. ಆದರೆ ತಮ್ಮ ಹೃದಯದಲ್ಲಿ ಕನ್ನಡದ ದೀಪವನ್ನು ಹಚ್ಚಿಟ್ಟು ಆರದಂತೆ ಕಾಪಾಡಿಕೊಂಡು ಬಂದಿರುವ, ಬರುತ್ತಿರುವ ಅದೆಷ್ಟೋ ಜೀವಗಳಿವೆ. ಅವರಿಂದಲೇ ಕನ್ನಡ ಗಟ್ಟಿಯಾಗಿದೆ. ಜಗತ್ತಿನಾದ್ಯಂತ ಕನ್ನಡದ ದೀಪ ಪ್ರಜ್ವಲಿಸುತ್ತಿದೆ ಎಂದರೆ ತಪ್ಪಾಗಲಾರದು. ಎಲ್ಲಾ ಕನ್ನಡದ ಜನರಿಗೆ ರಾಜ್ಯೋತ್ಸವದ ಶುಭಾಶಯಗಳು.