ಯುಎಇಯಲ್ಲಿ ಭಾರತೀಯರ ಪ್ರಾಣ ಉಳಿಸುತ್ತಿರುವ ಎಸ್ಪಿ ಸಿಂಗ್ ಖಾತೆ 93*
ಗಲ್ಲು ಕುಣಿಕೆ ಕುತ್ತಿಗೆ ಸುತ್ತ ಬಿದ್ದು, ಇನ್ನೇನು ಅವರ ಬದುಕು ಅಷ್ಟೇ ಅಂದುಕೊಳ್ಳುವಷ್ಟರಲ್ಲಿ ಹದಿನಾಲ್ಕು ಪಂಜಾಬಿಗಳು ಹಾಗೂ ಬಿಹಾರ ಮೂಲದ ವ್ಯಕ್ತಿಯೊಬ್ಬರನ್ನು ಗಲ್ಲು ಶಿಕ್ಷೆಯಿಂದ ಬಚಾವು ಮಾಡಲಾಗಿದೆ. ಅಕ್ರಮ ಮಾರಾಟ ಹಾಗೂ ಕೊಲೆ ಪ್ರಕರಣಗಳಲ್ಲಿ ಇವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ದುಬೈ ಮೂಲಕ ಹೋಟೆಲ್ ಉದ್ಯಮಿ ಹಾಗೂ ಸಮಾಜ ಸೇವಕರೊಬ್ಬರು ಆ ಶಿಕ್ಷೆಯಿಂದ ಇವರೆಲ್ಲರನ್ನೂ ತಪ್ಪಿಸಿದ್ದಾರೆ. ಈ ಪೈಕಿ ಹದಿನಾಲ್ಕು ಮಂದಿ ಮತ್ತೆ ತಮ್ಮ ಕುಟುಂಬದ ಜತೆ ಸೇರಿದ್ದಾರೆ. ಮತ್ತೊಬ್ಬರದು ದಾಖಲಾತಿಗಳ ಸಮಸ್ಯೆ ಇರುವುದರಿಂದ ಅವುಗಳನ್ನು ಸಿದ್ಧಪಡಿಸಿ, ವಾಪಸ್ ಭಾರತಕ್ಕೆ ಕರೆತರಬೇಕಿದೆ. ಅದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ.
ಹದಿನಾಲ್ಕು ಮಂದಿಯನ್ನು ಪಂಜಾಬ್ ನ ಜಲಂಧರ್ ನಲ್ಲಿ ಮಾಧ್ಯಮಗಳ ಮುಂದೆ ಕರೆತಂದರು ದುಬೈ ಮೂಲದ ಎಸ್.ಪಿ.ಸಿಂಗ್ ಒಬೇರಾಯ್. ಪಂಜಾಬಿ ಯುವ ಸಮೂಹ ಯುಎಇಗೆ ಹೋಗಬೇಕೆಂಬ ಆಸೆಯಲ್ಲಿ ಅಕ್ರಮ ಮಾರಾಟದ ಸುಳಿಗೆ ಸಿಲುಕಬಾರದು ಎಂದು ಅವರು ಹೇಳಿದ್ದಾರೆ. ಈ ರೀತಿ ಅಕ್ರಮ ಮಾರಾಟ ಎರಡು ಗುಂಪಿನ ಮಧ್ಯೆ ಹೊಡೆದಾಟಕ್ಕೆ ಕಾರಣವಾಗುತ್ತದೆ ಎಂದಿದ್ದಾರೆ ಸಿಂಗ್.

ಹೊಡೆದಾಟದ ಸಂದರ್ಭದಲ್ಲಿ ಯಾರದಾದರೂ ಪ್ರಾಣ ಹೋದರೆ ಅಲ್ಲಿನ ಕಠಿಣ ಕಾನೂನು ಪ್ರಕಾರ ಗಲ್ಲು ಶಿಕ್ಷೆ ಆಗಬಹುದು. ಏಳು ವರ್ಷದ ಹಿಂದೆ ಉತ್ತರಪ್ರದೇಶ ವ್ಯಕ್ತಿಯೊಬ್ಬನ ಕೊಲೆಗೆ ಸಂಬಂಧಿಸಿದಂತೆ ಪಂಜಾಬ್ ನ ಐವರು ಶಾರ್ಜಾದಲ್ಲಿ ಗಲ್ಲು ಶಿಕ್ಷೆ ಭೀತಿ ಎದುರಿಸುತ್ತಿದ್ದರು. ಮತ್ತೊಂದು ಪ್ರಕರಣದಲ್ಲಿ ಹತ್ತು ಮಂದಿ ಪಂಜಾಬಿಗಳು ಪಾಕಿಸ್ತಾನಿಯೊಬ್ಬನ ಕೊಲೆ ಕೇಸಿನಲ್ಲಿ ಸಿಕ್ಕಿಕೊಂಡಿದ್ದರು ಎಂದರು.
ಮೃತರ ಕುಟುಂಬಗಳನ್ನು ಭೇಟಿ ಮಾಡಿ, ಆ ನಂತರ ಸಂಧಾನ ನಡೆಸಿ, ಅಲ್ಲಿನ ನಿಯಮಗಳ ಅನುಸಾರ ಜಾರಿಯಲ್ಲಿರುವ 'ನೆತ್ತರು ಹಣ' (ಬ್ಲಡ್ ಮನಿ- ಮೃತರ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ನೀಡುವ ಹಣ) ಕೊಡಿಸಲಾಯಿತು. ಸರ್ಬರ್ ದಾ ಭಲಾ ಟ್ರಸ್ಟ್ ಎಂಬುದನ್ನು ಒಬೇರಾಯ್ ಮಾಡಿಕೊಂಡಿದ್ದು, ಅದರ ಮೂಲಕ ಅಷ್ಟು ದೊಡ್ಡ ಮೊತ್ತ ಪಾವತಿಸಿದ್ದಾರೆ.
ಸಂಧಾನಕ್ಕೆ ಯುಎಇ ಕೋರ್ಟ್ ಒಪ್ಪಿಕೊಂಡು, ಆರೋಪಿಗಳನ್ನು ಬಿಡುಗಡೆ ಮಾಡಲು ಒಪ್ಪಿಕೊಂಡಿತು ಎಂದು ಒಬೇರಾಯ್ ಹೇಳಿದ್ದಾರೆ. ಅಂದಹಾಗೆ ಒಬೇರಾಯ್ ಈ ವರೆಗೆ 93 ಭಾರತೀಯರನ್ನು ರಕ್ಷಿಸಿದ್ದಾರೆ. ಆ ಪೈಕಿ ಬಹುತೇಕರು ಪಂಜಾಬಿಗಳು. ಇಪ್ಪತ್ತು ಕೋಟಿವರೆಗೆ 'ನೆತ್ತರು ಹಣ' ಪಾವತಿಸಿದ ಮೇಲೆ ಯುಎಇ ಕೋರ್ಟ್ ನಿಂದ ನೇಣು ಶಿಕ್ಷೆಯಿಂದ ಬಚಾವಾಗಲು ಸಾಧ್ಯವಾಗಿದೆ.
"ಎಷ್ಟೋ ಯುವಕರು ಸಾಲ ಪಡೆದು ಯುಎಇಗೆ ಹೋಗ್ತಾರೆ. ಆದರೆ ಅಲ್ಲಿನ ಸಂಪಾದನೆ ಸಾಲದೆ ತಪ್ಪು ದಾರಿ ಹಿಡೀತಾರೆ. ಹಾಗೆ ಕಾನೂನು ಬಿಟ್ಟು ಹೋಗಬಾರದು. ಕಂಪೆನಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ, ಉದ್ಯೋಗ ವೀಸಾ ಇಲ್ಲದೆ ತೆರಳಬಾರದು" ಎಂದು ಎಸ್.ಪಿ.ಸಿಂಗ್ ಒಬೇರಾಯ್ ಸಲಹೆ ನೀಡುತ್ತಾರೆ.












Click it and Unblock the Notifications