ಡಿಕೆಶಿ ಸಿಡಿ ಖರೀದಿಗೆ ಹೋಗಿ 1 ಕೋಟಿ ಕಳೆದುಕೊಂಡ 'ಸಾಹುಕಾರ್' ಕತೆ
ಬೆಂಗಳೂರು, ಆ. 27: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಸ್ಫೋಟದ ಬೆನ್ನಲ್ಲೇ 'ಇನ್ನೊಂದು ಸಿಡಿ ಖರೀದಿ ' ರೋಚಕ ಕಹಾನಿ ನಡೆದಿದೆ. ಡಿ.ಕೆ. ಶಿವಕುಮಾರ್ ಅವರ ಅಶ್ಲೀಲ ಸಿಡಿ ಇದೆ ಎಂದು ನಂಬಿಸಿದ ಗ್ಯಾಂಗ್ವೊಂದು ರಮೇಶ್ ಜಾರಕಿಹೊಳಿಯಿಂದ ಒಂದು ಕೋಟಿ ರೂಪಾಯಿ ಪಡೆದು ನಾಮ ಹಾಕಿದೆ. ಹೊಸಕೋಟೆ ಸಮೀಪ ಕರೆಸಿಕೊಂಡು ಒಂದು ಕೋಟಿ ಪಡೆದು 'ಸಿಡಿ ಇಲ್ಲೆಲ್ಲೂ ನೋಡಬೇಡಿ ' ಎಂದು ಕಳುಹಿಸಿ ಕೊಟ್ಟಿದೆ. ಮನೆಗೆ ಬಂದು ನೋಡಿದಾಗ "ಸಿಡಿ" ಖಾಲಿಯಿರುವುದು ಗೊತ್ತಾಗಿದೆ. ಡಿಕೆಶಿ ಸಿಡಿ ಖರೀದಿ ಮಾಡೋಕೆ ಹೋಗಿ ಒಂದು ಕೋಟಿ ರೂ. ಕಳೆದುಕೊಂಡಿರುವ ರಮೇಶ್ ಜಾರಕಿಹೊಳಿ ಬೇರೆ ಹೆಸರಿನಲ್ಲಿ ಹೊಸಕೋಟೆಯಲ್ಲಿ ದೂರು ದಾಖಲಿಸಿದ್ದಾರೆ ಎಂಬ ಮಾಹಿತಿ ಉನ್ನತ ಪೊಲೀಸ್ ಮೂಲಗಳಿಂದ "ಒನ್ಇಂಡಿಯಾ ಕನ್ನಡ"ಕ್ಕೆ ತಿಳಿದು ಬಂದಿದೆ. ಅದರ ಅಸಲಿ ಎಕ್ಸ್ ಕ್ಲೂಸೀವ್ ಸ್ಟೋರಿ ಇಲ್ಲಿದೆ.

ಅದು ಸಿಡಿ ಪ್ರಸಂಗ
ಮಾರ್ಚ್ 2. ಅದಾಗಲೇ ಮಾಧ್ಯಮ ರಂಗದಲ್ಲಿ ಪ್ರಭಾವಿ ಸಚಿವರೊಬ್ಬರ ಅಶ್ಲೀಲ ಸಿಡಿ ಸಂಜೆ ಬಿಡುಗಡೆ ಆಗುತ್ತದಂತೆ ಎಂಬ ಪುಕಾರು ಎದ್ದಿತ್ತು. ಸಂಜೆ ವೇಳೆಗೆ ದಿನೇಶ್ ಕಲ್ಲಹಳ್ಳಿ ಎಂಬಾತ ಪೊಲೀಸ್ ಆಯುಕ್ತರಿಗೆ ದೂರು ನೀಡುತ್ತಿದ್ದಂಗೆ ಬೆಳಗಾವಿ ಸಾಹುಕಾರ್ ರಾಸಲೀಲೆ ಹಸಿ ಬಿಸಿ ದೃಶ್ಯಗಳು ಮಾಧ್ಯಮಗಳಲ್ಲಿ ರಾರಾಜಿಸಿತ್ತು. ಮೈಸೂರಿನ ಚಾಮುಂಡಿಗೆ ತೆರಳಿದ ಬೆಳಗಾವಿ ಸಾಹುಕಾರ್ ಆನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆರಂಭದಲ್ಲಿ ಈ ಸಿಡಿ ನನ್ನದಲ್ಲ, ನಕಲಿ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಜಾರಕಿಹೊಳಿ ದೂರು ನೀಡುತ್ತಿದ್ದಂತೆ ಸಿಡಿಯಲ್ಲಿ ಕಾಣಿಸಿಕೊಂಡಿದ್ದ ಸಂತ್ರಸ್ತ ಯುವತಿ ಸೇರಿದಂತೆ ಸಿಡಿ ಸೂತ್ರದಾರರು ಊರು ಖಾಲಿ ಮಾಡಿದ್ದರು.

ಡಿಕೆಶಿ ವಿರುದ್ಧ ತೊಡೆ ತಟ್ಟಿದ್ದ ಸಾಹುಕಾರ್
ಆರಂಭದಲ್ಲಿ ಯುವತಿ ಮೇಲೆ ಸಚಿವರೇ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಬಿಂಬಿತವಾಗಿತ್ತು. ಆನಂತರ ಒಂದೊಂದಾಗಿ ಸತ್ಯಗಳು ಹೊರ ಬರ ತೊಡಗಿದ್ದವು. ಸಿಡಿ ಸ್ಫೋಟ ಬಳಿಕ ಅದರ ಜಾಡು ಹಿಡಿದು ತನಿಖೆಗೆ ಇಳಿದಿದ್ದ ರಮೇಶ್ ಜಾರಕಿಹೊಳಿ ಬ್ರದರ್ಸ್ ಮಹತ್ವದ ಸಾಕ್ಷಿಯೊಂದನ್ನು ಸಮಾಜದ ಮುಂದೆ ಇಟ್ಟಿದ್ದರು. ಸಿಡಿಯಲ್ಲಿ ಕಾಣಿಸಿಕೊಂಡ ಬಗ್ಗೆ ಸಂತ್ರಸ್ತ ಯುವತಿ ಹಾಗೂ ಆಕೆಯ ಸಹೋದರ ನಡೆಸಿದ್ದ ಸಂಭಾಷಣೆಯ ಅಡಿಯೋ ರೆಕಾರ್ಡ್ ಗಳು ಜಾರಕಿಹೊಳಿ ಸಂಗ್ರಹಿಸಿದ್ದರು. ಅದರಲ್ಲಿ ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪವಾಗಿತ್ತು. 'ಅಪ್ಪೀ ಆ ಸಿಡಿಯಲ್ಲಿರೋದು ನಾನಲ್ಲ. ನನ್ನ ತರ ಗ್ರಾಫಿಕ್ಸ್ ಮಾಡಿದ್ದಾರೆ. ಈ ಬಗ್ಗೆ ತಲೆ ಕೆಡಿಸಿಕೋಬೇಡ, ಇದರ ಹಿಂದೆ ಡಿಕೆಶಿ ಸಹೇಬ್ರು ಇದ್ದಾರಾ, ನಾನು ಡಿಕೆಶಿ ಅವರ ಮನೆ ಬಳಿ ಹೋಗಿದ್ದೇನೆ' ಎಂದೆಲ್ಲಾ ಮಾತನಾಡಿದ್ದ ಅಡಿಯೋಗಳು ವೈರಲ್ ಆದವು. ಆ ಬಳಿಕ ರಮೇಶ್ ಜಾರಕಿಹೊಳಿ ಪ್ರಕರಣ ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಸಾಕ್ಷಿ ಆಯಿತು.

ಡಿಕೆಶಿ ವಿರುದ್ಧ ಗಂಡಸಲ್ಲ ಎಂಬ ಪದ ಬಳಿಕೆ
ಸಿಡಿ ಬಿಡುಗಡೆ ಬಳಿಕ ಅಜ್ಞಾತವಾಸಕ್ಕೆ ತೆರಳಿದ್ದ ರಮೇಶ್ ಜಾರಕಿಹೊಳಿ ಸಂತ್ರಸ್ತ ಯುವತಿ ಅಡಿಯೋ ಲೀಕ್ ಬಳಿಕ ನೇರವಾಗಿ ಅಖಾಡಕ್ಕೆ ಇಳಿದಿದ್ದರು. ನಾನು ಬಿಜೆಪಿಗೆ ಸೇರಿದ ಕಾರಣಕ್ಕೆ ಈ ಕೃತ್ಯ ಮಾಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಗಂಡಸೇ ಅಲ್ಲ, ನನ್ನ ರಾಜಕೀಯ ಭವಿಷ್ಯ ಮುಗಿಸಲು ಈ ರೀತಿ ಷಡ್ಯಂತ್ರ ಮಾಡಿದ್ದಾರೆ. ಅವರ ಕ್ಷೇತ್ರಕ್ಕೆ ಇಳಿದು ಮುಂದಿನ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇನೆ. ಈಗ ಬಿಡುಗಡೆ ಆಗಿರುವ ಅಡಿಯೋಗಳು ಶಾಂಪಲ್ ಮಾತ್ರ. ನನ್ನ ಜೇಬಲ್ಲಿ ಇನ್ನೂ ಕೆಲವು ಮಹತ್ವದ ಸಾಕ್ಷಿಗಳು ಇವೆ. ಅವನ್ನು ಬಿಡುಗಡೆ ಮಾಡುತ್ತೇನೆ. ಸಮಯ ಬಂದಾಗ ಬಿಡುತ್ತೇನೆ. ಯಾರು ತಪ್ಪು ಮಾಡಿದ್ದಾರೆ ಅನ್ನೋದನ್ನು ಸಾಬೀತು ಮಾಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಸವಾಲು ಹಾಕಿದ್ದರು.
ಜಾರಕಿಹೊಳಿ ಕೆಟ್ಟ ಪದ ಬಳಕೆ ಬಳಿಕ ಕಾಂಗ್ರೆಸ್ ಕಾರ್ಯಕರ್ತರ ಹೋರಾಟ ಜೋರಾಯಿತು. ಇದ್ಯಾವುದಕ್ಕೂ ಪ್ರತ್ಯುತ್ತರ ಕೊಡದೇ "ರಮೇಶ್ ಜಾರಕಿಹೊಳಿ ನನ್ನ ಗೆಳೆಯ' ಉದ್ವೇಗದಲ್ಲಿ ಮಾತನಾಡರಬೇಕು ಎನ್ನುವ ಮೂಲಕ ರಾಜಕೀಯ ತಂತ್ರಗಾರಿಕೆ ತೋರಿದ್ದರು. ಅಲ್ಲಿಯ ವರೆಗೂ ಕಣ್ಮರೆಯಾಗಿದ್ದ ಯುವತಿ ಏಕಾಏಕಿ ಅಖಾಡಕ್ಕೆ ಇಳಿದಳು. ದೂರು ನೀಡಲು ಧೈರ್ಯ ಮಾಡಿದಳು, ಎಸ್ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿ ಜಾರಕಿಹೊಳಿ ವಿರುದ್ಧ ದಾಖಲಾಗಿದ್ದ ಪ್ರಕರಣ ಬಿಗಿಗೊಳ್ಳತೊಡಗಿತು. ಈ ಸಮಯದಲ್ಲಿ ರಮೇಶ್ ಜಾರಕಿಹೊಳಿ ಜೀವನದಲ್ಲಿ ಇನ್ನಂದು "ಸಿಡಿ ಟೋಪಿ" ಕಹಾನಿ ನಡೆದು ಹೋಗಿದೆ.

ಖಾಲಿ ಸಿಡಿಯನ್ನು ಕೋಟಿಗೆ ಖರೀದಿಸಿದ ಸಾಹುಕಾರ್ ?
ಈ ಷಡ್ಯಂತ್ರದ ಹಿಂದೆ ಡಿ.ಕೆ. ಶಿವಕುಮಾರ್ ಇದ್ದಾರೆ ಎಂದು ರಮೇಶ್ ಜಾರಕಿಹೊಳಿ ಸ್ವತಃ ಆರೋಪಿಸಿದ್ದು. ಅಶ್ಲೀಲ ಸಿಡಿ ಪ್ರಕರಣ ಸ್ಫೊಟದಿಂದ ಜರ್ಜರಿತನಾಗಿದ್ದ ರಮೇಶ್ ಜಾರಕಿಹೊಳಿ "ಎದುರಾಳಿಯದ್ದು ಏನಾದರೂ ಸಿಗಬಹುದೇ ಎಂದು ಶೋಧ ಕಾರ್ಯಾಚರಣೆಗೆ ಇಳಿದಿರಬೇಕು! ಗ್ಯಾಂಗ್ ಅನಾಮಿಕ ನಂಬರ್ನಿಂದ ರಮೇಶ್ ಜಾರಕಿಹೊಳಿಯನ್ನು ಸಂಪರ್ಕಿಸಿದೆ. ನಮ್ಮ ಬಳಿ ಡಿ.ಕೆ. ಶಿವಕುಮಾರ್ ಏಕಾಂತದಲ್ಲಿರುವ ಅಶ್ಲೀಲ ಸಿಡಿಯಿದೆ. ಒಂದು ಕೋಟಿ ಕೊಟ್ಟರೆ ನೀಡುವುದಾಗಿ ಮಾತುಕತೆ ನಡೆಸಿದ್ದಾರೆ. ಸಿಡಿ ಯಾರು ಮಾಡಿದ್ದಾರೆ. ಯಾರ ಜತೆ ಇರುವುಂತದ್ದು, ಅಸಲಿಯಾ? ನಕಲಿಯಾ ಎಂಬುದರ ಪೂರ್ವ ಪರವನ್ನೂ ಪರಿಶೀಲಿಸದೇ ಅನಾಮಿಕರು ಕರೆ ಮಾಡಿದ ಜಾಗಕ್ಕೆ ಹೋಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಹಣವನ್ನು ನೀಡಿ ಖುಷಿಯಿಂದ ಸಿಡಿಯನ್ನು ಪಡೆದುಕೊಂಡು ಬಂದಿದ್ದಾರೆ. ಅನಾಮಿಕರು ನೀಡಿದ ಸಿಡಿಯನ್ನು ಕಂಪ್ಯೂಟರ್ಗೆ ಹಾಕಿ ನೋಡಿದರೆ ಸಿಡಿ ಖಾಲಿ-ಖಾಲಿ. ಒಂದು ಕೋಟಿ ರೂ. ನೀಡಿ ನಕಲಿ ಸಿಡಿ ಖರೀದಿ ಮಾಡಿದ ಘಟನೆ ಬಗ್ಗೆ ಯಾರಿಗೂ ಗೊತ್ತಾಗದಂತೆ ಬೇರೆಯದ್ದೇ ಕಥೆ ಕಟ್ಟಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ಠಾಣೆಯೊಂದರಲ್ಲಿ ದೂರು ದಾಖಲಿದ್ದಾರಂತೆ. ಡಿಕೆಶಿ ಸಿಡಿ ಖರೀದಿ ವಿಚಾರ ಪ್ರಸ್ತಾಪಿಸದೇ ಒಂದು ಕೋಟಿ ಮೋಸ ಹೋಗಿರುವ ಬಗ್ಗೆ ಆಪ್ತರ ಮೂಲಕ ಜಾರಕಿಹೊಳಿ ಕೇಸು ನೀಡಿದ್ದಾರೆ ಎನ್ನಲಾಗಿದೆ.
Recommended Video

ಪ್ರಕರಣದ ತನಿಖೆ ಏನಾಯಿತು ?
ಇನ್ನು ರಮೇಶ್ ಜಾರಕಿಹೊಳಿ ಒಂದು ಕೋಟಿ ಕಳೆದುಕೊಂಡ ಬಗ್ಗೆ ಆಪ್ತರ ಮೂಲಕ ಕೊಟ್ಟಿರುವ ದೂರನ್ನು ಪೊಲೀಸರು ತನಿಖೆ ನಡೆಸಿದರಾ ? ಹಣ ವಸೂಲಿ ಮಾಡಿದರಾ ? ಆರೋಪಿಗಳು ಯಾರು? ಜಾರಕಿಹೊಳಿ ಪರಿಸ್ಥಿತಿ ನೋಡಿ ರಾಜಕೀಯವಾಗಿಯೇ ಹಾದಿ ತಪ್ಪಿಸಲು ಖೆಡ್ಡ ತೋಡಿ ಮೋಸ ಮಾಡಿದರಾ ? ಗೊತ್ತಿಲ್ಲ. ಅನ್ಯ ಘಟನೆ ಉಲ್ಲೇಖಿಸಿ ವಂಚನೆ ಪ್ರಕರಣದ ತನಿಖೆ ಎಲ್ಲಿಗೆ ಬಂದು ನಿಂತಿದೆ ಎಂಬುದು ಮುಂದಷ್ಟೇ ಗೊತ್ತಾಗಬೇಕಿದೆ. ಈ ಪ್ರಕರಣ ಹೊರಗೆ ಬಾರದಂತೆ ಗೌಪ್ಯವಾಗಿ ನಡೆದ ತನಿಖೆ ಏನಾಯಿತು ಎಂದು ಪೊಲೀಸರೇ ಹೇಳಬೇಕಿದೆ !












Click it and Unblock the Notifications