Yuva Rajkumar: ಡಿವೋರ್ಸ್ ಕೇಸ್ಗೆ ಸಿಗುತ್ತಾ ಟ್ವಿಸ್ಟ್?: ವಿದೇಶದಿಂದ ಬಂದ ಶ್ರೀದೇವಿ ಭೈರಪ್ಪ
ಬೆಂಗಳೂರು, ಜುಲೈ 03: ಇತ್ತೀಚೆಗಷ್ಟೇ ಬಿಡುಗಡೆಯಾದ 'ಯುವ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದೊಡ್ಮನೆ ಕುಡಿ ನಟ ಯುವ ರಾಜಕುಮಾರ್ ದಾಂಪತ್ಯದಲ್ಲಿನ ಬಿರುಕು ಮೂಡಿರುವುದು ಸದ್ಯ ಎಲ್ಲರಿಗೂ ತಿಳಿದಿರುವ ವಿಚಾರ.
ಪ್ರೀತಿಸಿ ಮದುವೆಯಾದ ಯುವ ರಾಜಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಐದು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಮುಂದಾಗಿದ್ದು, ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆಯಾಗಿದೆ. ಆರು ತಿಂಗಳ ಹಿಂದೆ ಶ್ರೀದೇವಿಯಿಂದ ವಿಚ್ಛೇದನಕ್ಕೆ ಕೋರಿ ಯುವ ರಾಜಕುಮಾರ್ ಅವರು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಪ್ರಕ್ರಿಯೆಯಂತೆ ಪತ್ನಿಗೆ ನೋಟಿಸ್ ಜಾರಿಯಾಗಿತ್ತು.

ಈ ಹಿನ್ನೆಲೆಯಲ್ಲಿ ಯುವರಾಜ್ ಕುಮಾರ್ ವಿಚ್ಛೇದನ ಪ್ರಕರಣಕ್ಕೆ ನಾಳೆ ನಿರ್ಣಾಯಕ ದಿನವಾಗಿದೆ. ಈ ಹಿಂದೆ ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಜುಲೈ 4ಕ್ಕೆ ನಿಗದಿ ಮಾಡಿತ್ತು. ಹೀಗಾಗಿ ನಾಳೆ ಈ ಪ್ರಕರಣದ ವಿಚಾರಣೆ ನಡೆಯಲಿದ್ದು, ಯುವ ರಾಜಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಕೋರ್ಟ್ಗೆ ಹಾಜರಾಗುವ ಸಾಧ್ಯತೆಯಿದೆ.
ಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ವಿದೇಶದಲ್ಲಿದ್ದ ಶ್ರೀದೇವಿ ಭೈರಪ್ಪ ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ ಎಂದು ತಿಳಿದು ಬಂದಿದೆ. ಯುವ ರಾಜಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವುದಕ್ಕೂ ಮುಂಚೆಯೇ ಶ್ರೀದೇವಿ ಅವರು ವಿದೇಶ ಪ್ರವಾಸ ಕೈಗೊಂಡಿದ್ದರು. ಯುವ ರಾಜಕುಮಾರ್ ಡಿವೋರ್ಸ್ ಅರ್ಜಿಯ ವಿಚಾರ ತಿಳಿದು ವಿದೇಶದಿಂದಲೇ ಪ್ರತಿಕ್ರಿಯೆ ಕೂಡ ನೀಡಿದ್ದರು. ಡಿವೋರ್ಸ್ ಅರ್ಜಿಯಲ್ಲಿ ಮಾಡಿದ್ದ ಆರೋಪಗಳಿಗೂ ಉತ್ತರಿಸಿದ್ದ ಶ್ರೀದೇವಿ ಅವರು ಯುವ ರಾಜಕುಮಾರ್ ವಿರುದ್ಧವೂ ಗಂಭೀರ ಆರೋಪಗಳನ್ನು ಮಾಡಿದ್ದರು.
ಆದರೆ ಶ್ರೀದೇವಿ ಅವರು ಇನ್ನೂ ಕೋರ್ಟ್ಗೆ ಹಾಜರಾಗಿ ಈ ಬಗ್ಗೆ ಉತ್ತರಿಸಿರಲಿಲ್ಲ. ಹೀಗಾಗಿ ನಾಳೆ ಅಂದರೆ ಜುಲೈ 4ರಂದು ವಿಚಾರಣೆ ನಡೆಯಲಿದ್ದು, ಎರಡೂ ಕಡೆಯ ವಾದಗಳನ್ನು ಆಲಿಸಿದ ಕೋರ್ಟ್ ತನ್ನ ಆದೇಶವನ್ನು ನೀಡಲಿದೆ. ಆದ್ದರಿಂದ ಯುವರಾಜ್ ಕುಮಾರ್ ವಿಚ್ಛೇದನ ಪ್ರಕರಣಕ್ಕೆ ನಾಳೆ ನಿರ್ಣಾಯಕ ದಿನವಾಗಿದೆ. ಜೊತೆಗೆ ಹಲವು ದಿನಗಳಿಂದ ದೂರವಿದ್ದ ಈ ದಂಪತಿ ನಾಳೆ ಕೋರ್ಟ್ನಲ್ಲಿ ಮುಖಾಮುಖಿಯಾಗಲಿದೆ ಎನ್ನಲಾಗಿದೆ.












Click it and Unblock the Notifications