ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ರಿಷಬ್ ಶೆಟ್ಟಿ ಏಕೆ ಬರಲಿಲ್ಲ? ಕಾರಣ ಬಹಿರಂಗ
ಕಾಮಿಡಿ ಕಿಲಾಡಿಗಳು ಖ್ಯಾತಿಯ ಹಾಸ್ಯ ನಟ ರಾಕೇಶ್ ಪೂಜಾರಿ ಅವರು ಇತ್ತೀಚೆಗೆ ಹೃದಯಾಘತದಿಂದ ನಿಧನರಾದರು. ಈ ವೇಳೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ವಿರುದ್ಧ ಗಂಭೀರ ಆರೋಪ ಹಾಗೂ ಆಕ್ರೋಶ ವ್ಯಕ್ತವಾಗಿತ್ತು. ರಿಷಬ್ ಅವರ ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ರಾಕೇಶ್ ಅವರ ಅಂತಿಮ ದರ್ಶನಕ್ಕೂ ರಿಷಬ್ ಬರಲಿಲ್ಲ, ರಿಷಬ್ ಅವರು ಹತ್ತಿರದಲ್ಲೇ ಇದ್ದರೂ ರಾಕೇಶ್ ನನ್ನ ನೋಡಲು ಬರಲಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಯಾವ ಕಾರಣಕ್ಕೆ ರಿಷಬ್ ಅವರು ಅಂತಿಮ ದರ್ಶನದಲ್ಲಿ ಪಾಲ್ಗೊಳ್ಳಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ರಾಕೇಶ್ ಪೂಜಾರಿ ಅಂತ್ಯಕ್ರಿಯೆ ಉಡುಪಿ ಜಿಲ್ಲೆಯ ಹುಟ್ಟೂರಿನಲ್ಲೇ ನಡೆಯಿತು. ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಶೂಟಿಂಗ್ ಕೂಡ ಈ ಭಾಗದಲ್ಲೇ ನಡೆಯುತ್ತಿತ್ತು ಎನ್ನಲಾಗಿತ್ತು. ಹಾಗಾಗಿ ರಿಷಬ್ ಅವರು ಹತ್ತಿರದಲ್ಲೇ ಇದ್ದರೂ ತನ್ನ ಸಿನಿಮಾದಲ್ಲಿ ನಟಿಸಿದ್ದ ನಟನ ಅಂತಿಮ ದರ್ಶನಕ್ಕೂ ಬರಲಿಲ್ಲ. ಅವರಿಗೆ ಸಿನಿಮಾನೇ ಹೆಚ್ಚಾಯ್ತಾ? ಎಂದು ಜನ ಪ್ರಶ್ನೆಗಳನ್ನು ಮುಂದಿಟ್ಟಿದ್ದರು.

ಈ ಬಗ್ಗೆ ಮಾತನಾಡಿರುವ ಕಾಮಿಡಿ ಕಿಲಾಡಿಗಳು ನಟ ಸೂರಜ್, ರಾಕೇಶ್ ಪೂಜಾರಿ ಕಲ್ಮಶವೇ ಇಲ್ಲದ ವ್ಯಕ್ತಿ. ಬೇರೆಯವರ ಬಗ್ಗೆ ಮಾತನಾಡುವುದು ಸೇರಿ ಯಾವುದೇ ನೆಗೆಟಿವ್ ಗುಣ ಅವನಲ್ಲಿ ಇರಲಿಲ್ಲ. ಸದಾ ಪಾಸಿಟಿವ್ ಆಗಿ ಇರುತ್ತಿದ್ದ. ರಾಕೇಶ್ ಅಂತಿಮ ದರ್ಶನಕ್ಕೆ ರಿಷಬ್ ಶೆಟ್ಟಿ ಅವರು ಬರಲಿಲ್ಲ ಅನ್ನೋದು ನಿಜ. ಆದರೆ ರಿಷಬ್ ಅವರ ಉದ್ದೇಶ ಏನು ಎಂದು ನಮಗೂ ಗೊತ್ತಿಲ್ಲ ಎಂದಿದ್ದಾರೆ.
ಈಗ ಸಿನಿಮಾ ಶೂಟಿಂಗ್ ಎಂದ ಮೇಲೆ ಅವರಿಗೂ ಜವಾಬ್ದಾರಿ ಇರುತ್ತೆ. ಯಾರೋ ಮುಖ್ಯ ಪಾತ್ರದ ಕಲಾವಿದರನ್ನು ಹೊರಗಿನಿಂದ ಕರೆಸಿರಬಹುದು. ಸಿನಿಮಾದ ಜವಾಬ್ದಾರಿಯಿಂದಲೂ ಈ ರೀತಿ ಆಗಿರಬಹುದು. ಆದರೆ ನಮಗಂತೂ ಬಹಳ ನಂಬಿಕೆ ಇದೆ. ರಿಷಬ್ ಅವರು ಬಂದೇ ಬರ್ತಾರೆ, ಇನ್ನೊಂದು ಎರಡು ಮೂರು ದಿನಗಳಲ್ಲಿ ಖಂಡಿತವಾಗಿಯೂ ಬರ್ತಾರೆ ಎಂದು ಸೂರಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಂದು ವೇಳೆ ಆ ಮೂಮೆಂಟ್ನಲ್ಲಿ ಬೇಡ ಎಂದಿರಬಹುದು. ಮೀಡಿಯಾ ಕೂಡ ಇದ್ದಿದ್ದರಿಂದ ಮೊದಲೇ ಅವರು ಹಳೆಯ ಇಶ್ಯೂಗಳು, ವಿಷಯಗಳಿಂದಲೂ ಅಲ್ಲಿಗೆ ಬರದೇ ಇರಬಹುದು, ರಿಷಬ್ ಅವರು ಬಂದಾಗ ಆ ವಿಷಯಗಳನ್ನೆಲ್ಲ ಮಾಧ್ಯಮದವವ್ರು ಮತ್ತೆ ಚರ್ಚೆ ಮಾಡ್ತಾರೆ ಎಂತಲೂ ಇರಬಹುದು, ಇದರ ಬಗ್ಗೆ ಗೊತ್ತಿಲ್ಲ ಎಂದಿದ್ದಾರೆ.
ರಾಕೇಶ್ ಬಗ್ಗೆ ವದಂತಿ ಹಬ್ಬಿಸಬೇಡಿ
ಕಾಂತಾರ ಶೂಟಿಂಗ್ಗೆ ಕರೆದಾಗಲೇ ರಾಕೇಶ್ ಪೂಜಾರಿಗೆ ಆಕ್ಸಿಡೆಂಟ್ ಆಗಿತ್ತು ಅನ್ನೋದೆಲ್ಲ ಸುಳ್ಳು ಸುದ್ದಿ. ಅಸಲಿಗೆ ಕಾಂತಾರ ಶೂಟಿಂಗ್ ನಡೆಯುತ್ತಿದ್ದಾಗ ಕೆಲ ತಿಂಗಳು ಬ್ರೇಕ್ ಇತ್ತು. ಆಗ ಸ್ಕಿಡ್ ಆಗಿ ಬಿದ್ದಿದ್ದ ಅಷ್ಟೇ. ಒಂದೇ ತಿಂಗಳಲ್ಲಿ ರಿಕವರಿ ಕೂಡ ಆಗಿದ್ದ. ಅದರಲ್ಲಿ ಏನೂ ತೊಂದರೆ ಇರಲಿಲ್ಲ. ಕಾಂತಾರ ಸಿನಿಮಾ ವಿಚಾರವಾಗಿ ಸುಮ್ಮನೆ ಸುಳ್ಳು ಸುದ್ದಿಗಳನ್ನು ಹಬ್ಬಿಸಿದ್ದಾರೆ ಎಂದು ಸೂರಜ್ ಬೇಸರ ವ್ಯಕ್ತಪಡಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಬಾಯಿಗೆ ಬಂದಂತೆ, ಏನೇನೋ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಅದು ಹೇಗೆ ಮಾಡ್ತಾರೋ ನನಗಂತೂ ಗೊತ್ತಿಲ್ಲ. ಅದನ್ನು ನೋಡಿದಾಗ ಜೊತೆಯಲ್ಲೇ ಇದ್ದ ನಮಗೂ ತುಂಬಾ ಬೇಜಾರಾಗುತ್ತೆ. ದಯವಿಟ್ಟು ಯಾರೂ ಹಾಗೆ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ರಾಕೇಶ್ ಪೂಜಾರಿ ಕುಟುಂಬಕ್ಕೆ ಈಗ ನೆರವಿನ ಅಗತ್ಯವಿದೆ. ಕುಟುಂಬಕ್ಕೆ ಆಧಾರಸ್ತಂಭವಾಗಿ ಇದ್ದವನೇ ಅವನು. ನಮ್ಮ ಕೈಲಾದಷ್ಟು ನಾವು ಸಹಾಯಕ್ಕೆ ನಿಲ್ಲುತ್ತೇವೆ. ಆದರೆ ರಾಕಿಯ ಸ್ಥಾನ ತುಂಬಲು ಸಾಧ್ಯವಿಲ್ಲ ಎಂದೂ ಹೇಳಿದ್ದಾರೆ.












Click it and Unblock the Notifications