ಬೆಂಗಳೂರಿಗೆ ಬರ್ಬೇಕು ಅಂತ ನಟ ದರ್ಶನ್ ಹಠ ಹಿಡಿದಿರೋದು ಏಕೆ?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ತೂಗುದೀಪ ಅವರ ಜಾಮೀನು ಅರ್ಜಿ ವಿಚಾರಣೆ ಮುಂದೂಡಲೇ ಇದೆ. ಇದರ ನಡುವೆ ದರ್ಶನ್ ಹೇಗಾದರೂ ಮಾಡಿ ಬೆಂಗಳೂರಿಗೆ ವಾಪಸ್ ಬರಲೇಬೇಕು ಎಂದು ಹಠ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಇತ್ತೀಚೆಗೆ ದರ್ಶನ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದ್ದು, ಇದೇ ಕಾರಣ ಮುಂದಿಟ್ಟುಕೊಂಡು ಬಳ್ಳಾರಿಯಿಂದ ಬೆಂಗಳೂರಿಗೆ ಮತ್ತೆ ಶಿಫ್ಟ್ ಆಗಲು ದರ್ಶನ್ ಮುಂದಾಗಿದ್ದಾರೆ. ಮೊದಲಿಗೆ ಈ ಕೇಸ್ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು.

ಕೆಲವು ತಿಂಗಳು ಕಳೆದ ನಂತರ ದರ್ಶನ್ ಅವರಿಗೆ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದೇ ವೇಳೆ ದರ್ಶನ್ ಅವರು ಜಾಲಿಯಾಗಿ ರೌಡಿಶೀಟರ್ಗಳೊಂದಿಗೆ ಸಿಗರೇಟ್ ಸೇದಿಕೊಂಡು ಕುಳಿತಿದ್ದ ಫೋಟೋವೊಂದು ಎಲ್ಲೆಡೆ ವೈರಲ್ ಆಗಿತ್ತು.
ಈ ಘಟನೆ ಬೆನ್ನಲ್ಲೇ ದರ್ಶನ್ ಅವರನ್ನು ಬೆಂಗಳೂರಿನಿಂದ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ದರ್ಶನ್ಗೆ ರಾಜಾತಿಥ್ಯಕ್ಕೆ ಅವಕಾಶ ನೀಡಿದ್ದಕ್ಕೆ ಹಲವು ಜೈಲಾಧಿಕಾರಿಗಳ ಸಸ್ಪೆಂಡ್ ಕೂಡ ಆಗಿತ್ತು. ಆದರೆ ಬಳ್ಳಾರಿ ಜೈಲು ಸೇರಿದ್ದ ದರ್ಶನ್ಗೆ ಬೆಂಗಳೂರಿನಂತೆ ಎಲ್ಲ ರೀತಿಯಲ್ಲಿ ಅನುಕೂಲಗಳು ಕೂಡಿಬರಲಿಲ್ಲ. ಬದಲಿಗೆ ದರ್ಶನ್ ಅವರ ಮೇಲೆ ಹದ್ದಿನಗಣ್ಣಿಟ್ಟು ಕಾಯುತ್ತಿದ್ದಾರೆ.

ನಟ ದರ್ಶನ್ಗೆ ಪರಪ್ಪನ ಅಗ್ರಹಾರದಲ್ಲಿ ಇತರ ಕೈದಿಗಳೊಂದಿಗೆ ಮಾತನಾಡಿಕೊಂಡಿದ್ದರು. ಆದರೆ, ಬಳ್ಳಾರಿ ಜೈಲಿನಲ್ಲಿ ಮಾತನಾಡಲು ಯಾರೂ ಇಲ್ಲ. ಮತ್ತೊಂದೆಡೆ ದರ್ಶನ್ ಡಿಮ್ಯಾಂಡ್ ಮಾಡುತ್ತಿರುವ ಎಷ್ಟೋ ಸೌಲಭ್ಯಗಳು ಕೂಡ ಸಿಗುತ್ತಿಲ್ಲ. ಇದರಿಂದಾಗಿ ದರ್ಶನ್ ತುಂಬಾ ಸೊರಗಿದ್ದಾರೆ ಎನ್ನಲಾಗಿದೆ. ಬೆಂಗಳೂರಿಗೆ ಹೊಂದಿಕೊಂಡಿರುವ ದರ್ಶನ್ಗೆ ಬಳ್ಳಾರಿ ಜೀವನ ಕಷ್ಟವಾಗುತ್ತಿದೆಯಂತೆ.
ಇತ್ತೀಚೆಗೆ ದರ್ಶನ್ ಅವರಿಗೆ ಅನಾರೋಗ್ಯ ಸಮಸ್ಯೆ ಹೆಚ್ಚಾಗಿದ್ದು, ಅಲ್ಲಿನ ವೈದ್ಯರು ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಆದರೆ, ದರ್ಶನ್ ಅವರು ನಾನು ಬೆಂಗಳೂರಿನಲ್ಲೇ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತೇನೆ. ಇಲ್ಲಿ ಮಾಡಿಸಲ್ಲ ಎಂದು ಹಠ ಹಿಡಿದಿದ್ದಾರಂತೆ.
ಬೆನ್ನು ನೋವಿನಿಂದ ದರ್ಶನ್ ತೀರ ಬಳಲುತ್ತಿದ್ದಾರೆ. ಈ ಕಾರಣವೇ ಈಗ ದರ್ಶನ್ ಅವರಿಗೆ ಬೆಂಗಳೂರಿಗೆ ಶಿಫ್ಟ್ ಆಗಲು ಇರುವ ಏಕೈಕ ದಾರಿ ಎನ್ನಲಾಗಿದೆ. ಹಾಗಾಗಿ ಜಾಮೀನು ಅರ್ಜಿ ವಿಚಾರಣೆ ವೇಳೆ ದರ್ಶನ್ ಅನಾರೋಗ್ಯ ಸಮಸ್ಯೆಯನ್ನು ಪ್ರಸ್ತಾಪಿಸಿ, ಬೆಂಗಳೂರಿಗೆ ಕಳಿಸಿಕೊಡಲು ಮನವಿ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ ದರ್ಶನ್ ಅವರಿಗೆ ಜಾಮೀನು ಸಿಗುವುದು ಬಹುತೇಕ ಖಚಿತ ಎನ್ನುವಂತೆ ಅವರ ಪರ ವಕೀಲರು ವಾದ ಮಂಡನೆಯಲ್ಲಿ ತೊಡಗಿದ್ದಾರೆ. ಒಂದು ವೇಳೆ ದರ್ಶನ್ ಅವರಿಗೆ ಜಾಮೀನು ನಿರಾಕರಣೆಯಾಗಿ, ಮತ್ತೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರೆ, ಅನಾರೋಗ್ಯ ಕಾರಣದಿಂದಾದರೂ ಬೆಂಗಳೂರಿಗೆ ಶಿಫ್ಟ್ ಮಾಡುವಂತೆ ಮನವಿ ಮಾಡಲಿದ್ದಾರಂತೆ.
ನಾಳೆ ದರ್ಶನ್ ಅವರನ್ನು ಭೇಟಿಯಾಗಲು ಅವರ ವಕೀಲರು ಬಳ್ಳಾರಿ ಜೈಲಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದ್ದು, ದರ್ಶನ್ ಅವರಿಗೆ ಮೆಡಿಕಲ್ ಬೆಡ್ ಹಾಗೂ ಇನ್ನಿತರ ಸೌಲಭ್ಯಗಳು ನೀಡುವಂತೆ ಕೋರ್ಟ್ಗೆ ಅರ್ಜಿ ಕೂಡ ಹಾಕಲಿದ್ದಾರಂತೆ. ಇದಕ್ಕೆ ನಿರಾಕರಿಸಿದರೆ, ಅನಾರೋಗ್ಯದ ಕಾರಣ ನೀಡಿ ಬೆಂಗಳೂರಿಗೆ ಕರೆತರಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ ದರ್ಶನ್ ಅವರು ಪವಿತ್ರಾ ಗೌಡ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರೂ ಇದೇ ಕೇಸ್ನಲ್ಲಿ ಜೈಲು ಸೇರಿದ್ದರು. ಮೊದಲಿಗೆ ಇಬ್ಬರೂ ಬೆಂಗಳೂರಿನ ಜೈಲಿನಲ್ಲೇ ಇದ್ದರು. ಬಳ್ಳಾರಿಗೆ ದರ್ಶನ್ ಹೋದ ನಂತರ ಇಬ್ಬರ ನಡುವೆ ಅಂತರ ಕೂಡ ಹೆಚ್ಚಾಗಿದೆ. ಈ ಕಾರಣದಿಂದಲೂ ದರ್ಶನ್ ಕೊರಗಿನಲ್ಲಿದ್ದಾರೆ ಎಂದು ಹೇಳಲಾಗಿದೆ.












Click it and Unblock the Notifications