Vijayalakshmi Darshan: ವಿವಾಹವಾಗುವ ಜೋಡಿಗಳಿಗೆ ಮಾಂಗಲ್ಯ ನೀಡಿ ಹಾರೈಸಿದ ವಿಜಯಲಕ್ಷ್ಮೀ ದರ್ಶನ್
ಮಂಡ್ಯ ಮಾರ್ಚ್ 2: ಮಂಡ್ಯದಲ್ಲಿ ನಡೆದ ಸಾಮೂಹಿಕ ಮದುವೆಯಲ್ಲಿ ನವ ಜೋಡಿಗಳಿಗೆ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅವರ ಪತ್ನಿ ವಿಜಯಲಕ್ಷ್ಮೀ ಮಾಂಗಲ್ಯ ನೀಡಿ ಹಾರೈಸಿದ್ದಾರೆ. ಇಂದು ಪಾಂಡವಪುರದ ಬೇಬಿಬೆಟ್ಟ ಜಾತ್ರಾ ಮುಹೋತ್ಸವದಲ್ಲಿ ನಡೆದ ಸರಳ ಸಾಮೂಹಿಕ ಮದುವೆಯಲ್ಲಿ 24 ಮಂದಿ ನವ ಜೋಡಿಗಳಿಗೆ ವಿಜಯಲಕ್ಷ್ಮಿ ದರ್ಶನ್ ಅವರು ಮಾಂಗಲ್ಯ ನೀಡಿ ಶುಭಕೋರಿದರು.
ನಿರಂತರ ಪ್ರಯತ್ನದ ಬಳಿಕ ಪತಿ ದರ್ಶನ್ ಅವರನ್ನ ಜೈಲಿನಿಂದ ಬಿಡಿಸಿಕೊಂಡು ಬರುವಲ್ಲಿ ಪತ್ನಿ ವಿಜಯಲಕ್ಷ್ಮೀ ಯಶಸ್ವಿಯಾಗಿ ಸಾಕಷ್ಟು ಅಭಿಮಾನಿಗಳ ಮನ ಮುಟ್ಟಿದ್ದಾರೆ. ತಮ್ಮ ಪತಿ ಸಂಕಷ್ಟದಲ್ಲಿ ಇರುವಾಗ ವಿಜಯಲಕ್ಷ್ಮೀ ಹೆಗಲಾಗಿ ನಿಂತುಕೊಂಡಿದ್ದರು. ವಿಜಯಲಕ್ಷ್ಮೀ ಅವರ ಸತತ ಪ್ರಯತ್ನವನ್ನು ನೋಡಿದ ಜನ ದರ್ಶನ್ ಇಂತಹ ಪತ್ನಿಯನ್ನು ಪಡೆಯಲು ಅದೆಷ್ಟು ಪುಣ್ಯ ಮಾಡಿದ್ದರು ಎಂದು ಮಾತನಾಡಿಕೊಂಡಿರುವುದಿದೆ. ಎಷ್ಟೇ ಕಷ್ಟ ಬಂದರೂ ಸಹ ಹಿಂದೆ ಹೆಜ್ಜೆ ಇಡದೇ ಕೊನೆಗೂ ವಿಜಯಲಕ್ಷ್ಮಿ ತಮ್ಮ ಪತಿ ದರ್ಶನ್ ಅವರನ್ನು ಜೈಲಿನಿಂದ ಬಿಡಿಸಿಕೊಂಡು ಬರುವಲ್ಲಿ ಯಶಸ್ವಿಯಾದರು. ಇದೀಗ ಅವರು ದಾಂಪತ್ಯ ಜೀವನಕ್ಕೆ ಕಾಲಿಡುವ ನವ ಜೋಡಿಗಳಿಗೆ ಮಾಂಗಲ್ಯ ನೀಡಿ ಶುಭ ಹಾರೈಸಿದ್ದಾರೆ.

ಹೌದು.... ಮಂಡ್ಯದಲ್ಲಿ ಪ್ರತೀ ವರ್ಷ ಬೇಬಿಬೆಟ್ಟ ಜಾತ್ರಾ ಮುಹೋತ್ಸವ ನಡೆಯುತ್ತದೆ. ಈ ಬಾರಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ನೇತೃತ್ವದಲ್ಲಿ ಸರಳ ಸಾಮೂಹಿಕ ಮದುವೆ ನಡೆಯಿತು. ಈ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ವಿಜಯಲಕ್ಷ್ಮಿ ಅವರು ವಧು ವರರಿಗೆ ಮಾಂಗಲ್ಯ ವಿತರಣೆ ಮಾಡಿದರು.
ಇದೇ ವೇಳೆ ಹಾಸ್ಯನಟ ಚಿಕ್ಕಣ್ಣ ಅವರು ಸೀರೆ, ಪಂಚೆ ಶರ್ಟ್ ವಿತರಣೆ ಮಾಡಿದರೆ, ನಟ ಧನ್ವೀರ್ ಅವರು ವಾಚ್ ವಿತರಣೆ ಮಾಡಿದರು. ಮಾರ್ಚ್ 2 ಭಾನುವಾರ ಬೆಳಗ್ಗೆ 10:10ರ ಶುಭಲಗ್ನದಲ್ಲಿ ಶ್ರೀರಾಮಾಯೋಗೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಶಿವಬಸವಸ್ವಾಮೀಜಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಸಮ್ಮುಖದಲ್ಲಿ 24 ಮಂದಿ ನವ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ಮದುವೆ ಕಾರ್ಯಕ್ರಮದಲ್ಲಿ ನವ ಜೋಡಿಗಳ ಸಂಬಂಧಿಕರು, ಆಪ್ತರು ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿ ಆಶೀರ್ವದಿಸಿದರು.
ಇದೇ ವೇಳೆ ಮಾತನಾಡಿದ ವಿಜಯಲಕ್ಷ್ಮೀ ದರ್ಶನ್ ಅವರು, ರೈತರ ಮಕ್ಕಳಿಗೆ ಒಳ್ಳೆಯದಾಗಲಿ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು ಸುಖ, ನೆಮ್ಮದಿಯ ಜೀವನ ಮಾಡಲಿ ಎಂದು ಆ ದೇವರು ಆಶೀರ್ವದಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದರು.
ಚಿಕ್ಕಣ್ಣ ಮಾತನಾಡಿ,'ಕಳೆದ ವರ್ಷ ದರ್ಶನ್ ಅವರು ಮದುವೆಗೆ ಬರುವುದಾಗಿ ಹೇಳಿದ್ದರು. ಆದರೆ ಅವರು ಬರಲು ಆಗಿಲ್ಲ. ಹೀಗಾಗಿ ಅವರ ಧರ್ಮಪತ್ನಿ ಬಂದಿದ್ದಾರೆ. ಆಡಂಬರದ ಮದುವೆಗಳ ಮೂಲಕ ದುಂದು ವೆಚ್ಚ ಮಾಡುವುದಕ್ಕಿಂತ ಸರಳ ಮದುವೆ ಮಾಡಿಕೊಳ್ಳುವುದು ಒಳ್ಳೆಯದು. ಮದುವೆ ಮಾಡಿಕೊಳ್ಳುವುದು ಮುಖ್ಯವಲ್ಲ ಜೀವನದಲ್ಲಿ ಸಂಸಾರವನ್ನು ನೆಮ್ಮದಿಯಿಂದ ನಡೆಸಿಕೊಂಡು ಹೋಗುವುದು ಮುಖ್ಯವಾಗಿದೆ. ಇವೆರೆಲ್ಲಾ ಸಂತೋಷವಾಗಿ ಜೀವನ ನಡೆಸಲಿ ಎಂದು ನಾನು ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ' ಎಂದು ಶುಭ ಹಾರೈಸಿದರು.
ನಂತರ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಆಡಂಬರದ ಮದುವೆ, ಆರೋಗ್ಯ ಹಾಗೂ ಶಿಕ್ಷಣದಿಂದಾಗಿ ಜನರು ಹೆಚ್ಚಾಗಿ ಸಾಲದ ಸುಳಿಗೆ ಸಿಲುಕುತ್ತಿದ್ದಾರೆ. ಹಾಗಾಗಿ ಹೆಚ್ಚಾಗಿ ಸರಳ ಮದುವೆಗೆ ಆಧ್ಯತೆ ನೀಡಬೇಕು. ಸರಳ ಮದುವೆ ಆಗುವುದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನೆಯಾಗಲಿದೆ ಎಂದು ಹೇಳಿದರು.












Click it and Unblock the Notifications