Actor Vijaya Rangaraju: ವಿಷ್ಣು ಅಭಿಮಾನಿಗಳನ್ನು ಕೆಣಕಿದ್ದ ಖ್ಯಾತ ನಟ ನಿಧನ
ತೆಲುಗು ಚಿತ್ರರಂಗದ ಹಿರಿಯ ನಟ ವಿಜಯ ರಂಗರಾಜು ಅವರು ನಿಧನರಾಗಿದ್ದಾರೆ ಎಂದು ವರದಿಯಾಗಿದೆ. ಶೂಟಿಂಗ್ ವೇಳೆ ಗಂಭೀರ ಗಾಯಗೊಂಡಿದ್ದ ಅವರು ಚೆನ್ನೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಟ ನಿಧನರಾಗಿದ್ದಾರೆ. ತೆಲುಗು ಸಿನಿಮಾಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸುವ ಮೂಲಕ ವಿಜಯ ರಂಗರಾಜು ಖ್ಯಾತಿ ಗಳಿಸಿದ್ದರು.
ಹೈದರಾಬಾದ್ನಲ್ಲಿ ಶೂಟಿಂಗ್ ನಡೆಯುತ್ತಿದ್ದಾಗ ವಿಜಯ ರಂಗರಾಜು ಅವರು ಗಂಭೀರ ಗಾಯಗೊಂಡಿದ್ದರು. ಈ ಹಿನ್ನೆಲೆ ಅವರನ್ನು ಚೆನ್ನೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದು ಚೆನ್ನೈನಲ್ಲೇ ಅವರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ವಿಜಯ ರಂಗರಾಜು ಅವರಿಗೆ ಇಬ್ಬರು ಪುತ್ರಿಯರಿದ್ದಾರೆ. ನಟನ ಆಪ್ತರು ಅವರ ಸಾವಿನ ವಿಚಾರವನ್ನು ಖಚಿತಪಡಿಸಿದ್ದಾರೆ.

ವಿಜಯ ರಂಗರಾಜು ಅವರ ಮೂಲ ಹೆಸರು ರಾಜ್ ಕುಮಾರ್. ಇವರು ಸಿನಿಮಾರಂಗ ಪ್ರವೇಶಿಸುವ ಮುನ್ನ ಚೆನ್ನೈನಲ್ಲೇ ಹಲವು ನಾಟಕಗಳಲ್ಲಿ ಅಭಿನಯಿಸಿ ಗಮನ ಸೆಳೆದಿದ್ದರು. ಇದರಿಂದಲೇ ಅವರು ತೆಲುಗು ಚಿತ್ರರಂಗ ಪ್ರವೇಶಿಸಿದ್ದರು. ತೆಲುಗಿನ ಖ್ಯಾತ ನಟ ಬಾಲಕೃಷ್ಣ ಅವರ ಬೈರವ ದ್ವೀಪಂ ಸಿನಿಮಾದಲ್ಲಿ ರಂಗರಾಜು ಅವರು ವಿಲನ್ ಪಾತ್ರದಲ್ಲಿ ಅಭಿನಯಿಸಿ ಫೇಮಸ್ ಆಗಿದ್ದರು. ಬಳಿಕ ಅವರು ಹಲವು ಸಿನಿಮಾಗಳ ಮೂಲಕ ತೆಲುಗು ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.
ತೆಲುಗು ಮಾತ್ರವಲ್ಲದೆ ಇವರು ಕೆಲ ಮಲಯಾಳಂ ಸಿನಿಮಾಗಳಲ್ಲೂ ವಿಲನ್ ಪಾತ್ರ ಹಾಗೂ ಇನ್ನಿತರ ಪೋಷಕ ಪಾತ್ರಗಳಲ್ಲಿ ನಟಿಸಿದ್ದರು.ಯಜ್ಞಂ ಸಿನಿಮಾದಲ್ಲಿ ಇವರು ಮಾಡಿದ್ದ ವಿಲನ್ ಪಾತ್ರ ಗಮನ ಸೆಳೆದಿತ್ತು. ಆದರೆ ಶೂಟಿಂಗ್ ವೇಳೆ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ.
ನಟ ವಿಷ್ಣುವರ್ಧನ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ವಿಜಯ ರಂಗರಾಜು: ಕಳೆದ ನಾಲ್ಕೈದು ವರ್ಷಗಳ ಹಿಂದೆ ವಿಜಯ ರಂಗರಾಜು ಅವರು ಕನ್ನಡಿಗರು,ಅ ಅದರಲ್ಲೂ ನಟ ವಿಷ್ಣುವರ್ಧನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು ವಿಷ್ಣುವರ್ಧನ್ ಅವರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ವಿಷ್ಣುವರ್ಧನ್ ಅವರನ್ನು ಹುಚ್ಚ ಎಂದು ಕರೆಯುವ ಮೂಲಕ ಕನ್ನಡ ಚಿತ್ರರಂಗದ ಆಕ್ರೋಶಕ್ಕೆ ಗುರಿಯಾಗಿದ್ದರು.

ಈ ಹೇಳಿಕೆ ಬೆನ್ನಲ್ಲೇ ರಂಗರಾಜು ವಿರುದ್ಧ ಕನ್ನಡಿಗರು, ನಟ ವಿಷ್ಣುವರ್ಧನ್ ಅಭಿಮಾನಿಗಳು, ನಟರಾದ ಪುನೀತ್ ರಾಜ್ಕುಮಾರ್, ಸುದೀಪ್, ಯಶ್ ಸೇರಿದಂತೆ ಹಲವರು ಗರಂ ಆಗಿದ್ದರು. ಕನ್ನಡ ಚಿತ್ರರಂಗದ ಮೇರು ನಟರೊಬ್ಬರ ಬಗ್ಗೆ ಈ ರೀತಿ ಕೀಳಾಗಿ ಮಾತನಾಡಿರುವುದು ಸರಿಯಲ್ಲ. ಕೂಡಲೇ ಅವರು ಕ್ಷಮೆಯಾಚಿಸದಿದ್ದರೆ ಪರಿಣಾಮ ನೆಟ್ಟಗಿರಲ್ಲ ಎಂದು ನೇರವಾಗಿ ವಾರ್ನಿಂಗ್ ಕೊಟ್ಟಿದ್ದರು.
ವಿಷ್ಣು ಅಭಿಮಾನಿಗಳು ಕೂಡ ನೇರಾನೇರ ಎಚ್ಚರಿಕೆ ಕೊಡುವ ಮೂಲಕ ನಟನ ಬೆವರಳಿಸಿದ್ದರು. ನಮ್ಮ ಕೈಗೆ ಸಿಕ್ಕರೆ ನಿನ್ನ ಕಥೆ ಮುಗೀತು ಎನ್ನುವಷ್ಟು ತಾರಕಕ್ಕೇರಿತ್ತು. ಕೊನೆಗೆ ಇದರಿಂದ ಹೆದರಿಕೊಂಡಿದ್ದ ನಟ ರಂಗರಾಜು ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮೂಲಕ ಕ್ಷಮೆ ಕೋರಿದ್ದರು. ನನ್ನಿಂದ ತಪ್ಪಾಯಿತು, ನಾನು ವಿಷ್ಣು ಅವರ ಬಗ್ಗೆ ಮಾತನಾಡಿದ್ದು ಸರಿಯಲ್ಲ, ನನ್ನನ್ನು ಕ್ಷಮಿಸಿ ಎಂದು ಈ ವಿವಾದವನ್ನು ತಣ್ಣಗಾಗಿಸಿದ್ದರು.












Click it and Unblock the Notifications