Darshan Bail: ದರ್ಶನ್ ತೂಗುದೀಪ ಕೃತ್ಯದ ಬಗ್ಗೆ ಶಾಕಿಂಗ್ ಮಾಹಿತಿ ಬಿಚ್ಚಿಟ್ಟ ಎಸ್ಪಿಪಿ ಪ್ರಸನ್ನ ಕುಮಾರ್
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್, ಪವಿತ್ರಾ ಗೌಡ, ಆರ್ ನಾಗರಾಜು, ಎಂ ಲಕ್ಷ್ಮಣ್, ಅನುಕುಮಾರ್, ಜಗದೀಶ್ ಮತ್ತು ಪ್ರದೋಶ್ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ಆದೇಶವನ್ನು ಕಾಯ್ದಿರಿಸಿದೆ. ಮಧ್ಯಂತರ ಜಾಮೀನಿನ ಮೇಲೆ ಹೊರಗಡೆ ಬಂದಿರುವ ದರ್ಶನ್ ಮಧ್ಯಂತರ ಜಾಮೀನು ಅವಧಿ ಮುಂದಿನ ಆದೇಶದವರೆಗೆ ವಿಸ್ತರಣೆಯಾಗಿದೆ.
ಸರ್ಕಾರದ ಪರವಾಗಿ ವಾದ ಮಾಡಿದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನಕುಮಾರ್ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆಘಾತಕಾರಿ ಮಾಹಿತಿಗಳನ್ನು ನ್ಯಾಯಾಲಯದ ಮುಂದೆ ಬಿಚ್ಚಿಟ್ಟರು. ಪ್ರಕರಣದ 4, 6 ಮತ್ತು 7ನೇ ಆರೋಪಿಗಳು ರೇಣುಕಾಸ್ವಾಮಿಯನ್ನು ಅಪಹರಿಸಿದ್ದಲ್ಲದೆ, ಆತನ ಬಳಿ ಇದ್ದ ಉಂಗುರ, ಕರಡಿಕೆ ಮತ್ತು 40 ಸಾವಿರ ರೂಪಾಯಿಗೂ ಹೆಚ್ಚಿನ ಹಣವನ್ನು ಕೂಡ ತೆಗೆದುಕೊಂಡಿದ್ದರು ಎಂದು ವಕೀಲರು ತಿಳಿಸಿದ್ದು, ತನಿಖೆಯ ಸಂದರ್ಭದಲ್ಲಿ ಇದನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

9ನೇ ಆರೋಪಿ ಧನರಾಜ್, 5ನೇ ಆರೋಪಿ ನಂದೀಶ್ ಮತ್ತು 3ನೇ ಆರೋಪಿ ಪವನ್ ರೇಣುಕಾಸ್ವಾಮಿ ಮೇಲೆ ಕಟ್ಟಿಗೆಯಿಂದ ಹಲ್ಲೆ ಮಾಡಿದ್ದಲ್ಲದೆ, ಮೇಲಿನಿಂದ ಎತ್ತಿ ಕುಕ್ಕಿದ್ದರು ಎಂದು ವಕೀಲರು ತಿಳಿಸಿದರು.
ದರ್ಶನ್ಗೆ ಎಲ್ಲವೂ ಗೊತ್ತಿತ್ತು
ಪಟ್ಟಣಗೆರೆ ಶೆಡ್ಗೆ ದರ್ಶನ್, ಪವಿತ್ರಾ ಗೌಡ, ಪ್ರದೋಶ್ ಮತ್ತು ವಿನಯ್ ಕಪ್ಪುಬಣ್ಣದ ಕಾರಿನಲ್ಲಿ ಬಂದಿದ್ದರು. ದರ್ಶನ್ ರೇಣುಕಾಸ್ವಾಮಿ ಎದೆಗೆ ಒದ್ದಿದ್ದಾರೆ. ದರ್ಶನ್ ಹಲ್ಲೆಯ ಬಳಿಕ ರೇಣುಕಾಸ್ವಾಮಿ ಪ್ರಜ್ಞೆ ಕಳೆದುಕೊಂಡಿದ್ದಾರೆ ಎಂದು ಪ್ರಮುಖ ಸಾಕ್ಷಿ ಪುನೀತ್ ಹೇಳಿದ್ದಾನೆ ಎನ್ನುವ ವಿಚಾರವನ್ನು ವಕೀಲರು ಕೋರ್ಟ್ ಗಮನಕ್ಕೆ ತಂದರು.
ರೇಣುಕಾಸ್ವಾಮಿಗೆ ಹಲ್ಲೆ ಮಾಡಿದ್ದರಿಂದ 17 ಎದೆ ಮೂಳೆ ಮುರಿದಿವೆ. 39 ಗಾಯಗಳು ಪತ್ತೆಯಾಗಿವೆ. 2.5 ಸೆಂಟಿಮೀಟರ್ ಆಳದ ಗಾಯವಾಗಿತ್ತು ಎಂದು ಹೇಳಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಇದೆ, ಷೆಡ್ನಲ್ಲಿ ನಿಲ್ಲಿಸಿದ್ದ ವಾಹನಕ್ಕೆ ರೇಣುಕಾಸ್ವಾಮಿಯನ್ನು ಎಳೆದುಕೊಂಡು ಹೋಗಿ ಗುದ್ದಲಾಗಿದೆ ಎಂದರು.
ಪವಿತ್ರಾ ಗೌಡ ಸ್ನೇಹಿತೆ ಸಮತಾ ಎನ್ನುವವರಿಗೆ ವಾಟ್ಸಾಪ್ನಲ್ಲಿ ಕರೆ ಮಾಡಿದ್ದು, ರೇಣುಕಾಸ್ವಾಮಿಯಿಂದ ಕ್ಷಮೆ ಕೇಳಿಸಲು ದರ್ಶನ್ ಅವನನ್ನು ಬೆಂಗಳೂರಿಗೆ ಕರೆಸಿದ್ದಾನೆ ಎಂದು ಹೇಳಿದ್ದಾರೆ. ದರ್ಶನ್ಗೆ ಇದು ಮೊದಲೇ ಗೊತ್ತಿತ್ತು ಎನ್ನುವುದು ಇದರಿಂದ ತಿಳಿಯುತ್ತದೆ ಎಂದರು. ಪವಿತ್ರಾಗೌಡರನ್ನು ಕರೆದುಕೊಂಡು ಹೋಗಲು ದರ್ಶನ್ ಮತ್ತಿರರು ಬಂದಿರುವ ವಿಡಿಯೋ ಪಕ್ಕದಮನೆಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ ಎಂದು ತಿಳಿಸಿದರು.
ಆರೋಪಿಗಳಿಂದ ಜಪ್ತಿ ಮಾಡಿರುವ ಬಟ್ಟೆ, ಶೂ, ಚಪ್ಪಲಿಗಳಲ್ಲಿ ರಕ್ತದ ಕಲೆ ಪತ್ತೆಯಾಗಿದೆ. ಪ್ರಕರಣದ 4, 15, 16 ಮತ್ತು 17ನೇ ಆರೋಪಿಗಳು ಜೂನ್ 10 ರಂದು ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ, 14ನೇ ಆರೋಪಿ ಪ್ರದೋಶ್ ಈ ಆರೋಪಿಗಳನ್ನು ಠಾಣೆಗೆ ಕರೆದುಕೊಂಡು ಬಂದು ಬಿಟ್ಟಿರುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ಹೇಳಿದರು.
ಎರಡೂ ಕಡೆ ವಾದ ಆಲಿಸಿದ ಹೈಕೋರ್ಟ ಏಕಸದಸ್ಯ ಪೀಠ ಆದೇಶವನ್ನು ಕಾದಿರಿಸಿದ್ದು, ಅದುವರೆಗೂ ದರ್ಶನ್ ಮಧ್ಯಂತರ ಜಾಮೀನು ಅವಧಿ ವಿಸ್ತರಣೆಯಾಗಲಿದೆ.












Click it and Unblock the Notifications