'ಪುಷ್ಪ-2' ಬಗ್ಗೆ ನಟ ಸಿದ್ಧಾರ್ಥ್ಗೆ ದ್ವೇಷ ಇದೆಯಾ? ಸಂದರ್ಶನದಲ್ಲಿ ವಿವಾದಾತ್ಮಕ ಹೇಳಿಕೆ
ಟಾಲಿವುಡ್ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಬಗ್ಗೆ ಮತ್ತೊಬ್ಬ ಖ್ಯಾತ ನಟರಾದ ಸಿದ್ಧಾರ್ಥ್ ಆಡಿರುವ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ಸಂದರ್ಶನವೊಂದರಲ್ಲಿ ಸಿದ್ಧಾರ್ಥ್ ಪುಷ್ಪ-2 ಸಿನಿಮಾ ಗುರಿಯಾಗಿಸಿ ಲೇವಡಿ ಮಾಡಿದ್ದಾರೆ ಎಂದು ಚರ್ಚೆ ನಡೆಯುತ್ತಿದೆ.
ಇನ್ನು ಪುಷ್ಪ-2 ಸಿನಿಮಾ ತಂಡವು ಬಿಡುಗಡೆಗೂ ಮುನ್ನ ಬಿಹಾರದ ಪಾಟ್ನಾದಲ್ಲಿ ದೊಡ್ಡ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿತ್ತು. ಇದಕ್ಕೆ ಲಕ್ಷಾಂತರ ಮಂದಿ ಜನ ಸೇರಿದ್ದರು. ಈ ವಿಚಾರವನ್ನು ಸಂದರ್ಶಕರು ನಟ ಸಿದ್ಧಾರ್ಥ್ ಅವರೊಂದಿಗೆ ಉಲ್ಲೇಖಿಸಿದ್ದಾರೆ. ಇದಕ್ಕೆ ನಟ ಸಿದ್ಧಾರ್ಥ್ ಅವರು ಅದರಲ್ಲೇನಿದೆ ಮಹಾ? ಎನ್ನುವಂತೆ ಮಾತನಾಡಿದ್ದಾರೆ ಎನ್ನಲಾಗಿದೆ.

ಬಿಹಾರದ ಪಾಟ್ನಾದಲ್ಲಿ ಪುಷ್ಪ-2 ಗ್ರ್ಯಾಂಡ್ ಟ್ರೈಲರ್ ಲಾಂಚ್ಗಾಗಿ ನೆರೆದಿದ್ದ ದೊಡ್ಡ ಜನಸಮೂಹದ ಕುರಿತು ಸಿದ್ಧಾರ್ಥ್ ತಮ್ಮ ಅಭಿಪ್ರಾಯಗಳನ್ನು ಈ ರೀತಿ ಹಂಚಿಕೊಂಡಿದ್ದಾರೆ. ಭಾರಿ ಜನವನ್ನು ಸೇರಿಸುವುದು ಪ್ರಚಾರದ ಟೆಕ್ನಿಕ್ ಎಂದು ಅವರು ತಳ್ಳಿಹಾಕಿದ್ದಾರೆ. ಭಾರತದಲ್ಲಿರುವ ಹೆಚ್ಚಿನ ಜನಸಂದಣಿಯು ಇಂತಹ ಕಾರ್ಯಕ್ರಮಗಳ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ. ಒಂದು ಜೆಸಿಬಿ ಅಗೆಯುವ ಸ್ಥಳದಲ್ಲೂ ಜನ ಹೆಚ್ಚಾಗಿ ಸೇರುತ್ತಾರೆ ಎಂದು ನಟ ಸಿದ್ದಾರ್ಥ್ ಅವರು ಪುಷ್ಪ ಸಿನಿಮಾದ ಕಾರ್ಯಕ್ರಮವನ್ನು ಹೋಲಿಸಿದ್ದಾರೆ.
ಇನ್ನು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಜನರನ್ನು ಸಹಜವಾಗಿ ಸೆಳೆಯಬಹುದು. ಬಿಹಾರದಲ್ಲಿ ಮತದಾನದ ಪ್ರಮಾಣ ಅಸಾಧಾರಣವಾಗಿಲ್ಲ. ರಾಜಕೀಯ ಪಕ್ಷಗಳು ತಮ್ಮ ಬೃಹತ್ ರ್ಯಾಲಿಗಳ ಆಧಾರದ ಮೇಲೆ ಚುನಾವಣೆಗಳನ್ನು ಗೆಲ್ಲುತ್ತವೆ ಎಂದು ಅವರು ವಾದಿಸಿದ್ದಾರೆ.

ಪುಷ್ಪ ಸಿನಿಮಾದ ಕಾರ್ಯಕ್ರಮ ಕೂಡ ಮಾರ್ಕೆಟಿಂಗ್ನ ತಂತ್ರ. ಭಾರತದಲ್ಲಿ ಜನ ಸೇರುವುದು ದೊಡ್ಡ ಸಮಸ್ಯೆಯಲ್ಲ. ನೀವು ನಮ್ಮ ದೇಶದಲ್ಲಿ ಜೆಸಿಬಿಯನ್ನು ನಿಲ್ಲಿಸಿದರೂ ಅದು ಜನರನ್ನು ಆಕರ್ಷಿಸುತ್ತದೆ. ಹೀಗಿರುವಾಗ ಬಿಹಾರದಲ್ಲಿ ಭಾರೀ ಜನಸಂದಣಿಯನ್ನು ನೋಡುವುದು ದೊಡ್ಡ ವಿಷಯವೇನಲ್ಲ. ನೀವು ಬೃಹತ್ ವೇದಿಕೆಯನ್ನು ನಿರ್ಮಿಸಿದರೆ ಜನ ಏನಿರಬಹುದೆಂದು ಬಂದೇ ಬರುತ್ತಾರೆ ಎಂದು ಸಿದ್ದಾರ್ಥ್ ಹೇಳಿರುವ ವಿಡಿಯೋ ವೈರಲ್ ಆಗಿದೆ.
ಭಾರತದಲ್ಲಿ ಜನರ ದೊಡ್ಡ ಗುಂಪು ಮತ್ತು ಗುಣಮಟ್ಟದ ನಡುವೆ ಯಾವುದೇ ಸಂಬಂಧವೇ ಇಲ್ಲ. ಇದಕ್ಕೆ ಉದಾಹರಣೆಯೆಂದರೆ ಎಲ್ಲ ರಾಜಕೀಯ ಪಕ್ಷಗಳು ಗೆಲ್ಲಬೇಕು. ಏಕೆಂದರೆ ಅವರು ಹೆಚ್ಚಿನ ಜನರನ್ನು ಸೇರಿಸುತ್ತಾರೆ. ಆಗ ಬಿರಿಯಾನಿ ಮತ್ತು ಕ್ವಾರ್ಟರ್ ಪ್ಯಾಕೆಟ್ ಗ್ಯಾಂಗ್ ಎನ್ನುತ್ತಿದ್ದರು. ನೀವು ಚಪ್ಪಾಳೆಗಳ ಸುರಿಮಳೆಗೈದರೆ ನಿಮ್ಮನ್ನು ರಾಜ ಎಂದು ಹೊಗಳುವುದು ಸುಲಭ. ಆ ಚಪ್ಪಾಳೆ ಗಿಟ್ಟಿಸಿಕೊಳ್ಳುವುದು ಬಹಳ ಸುಲಭ ಎಂದೂ ಸಿದ್ಧಾರ್ಥ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇನ್ನು ಪುಷ್ಪ-2 ಸಿನಿಮಾ ಬಿಡುಗಡೆಯ ಸಂದರ್ಭದಲ್ಲೇ ಸಿದ್ಧಾರ್ಥ್ ಅವರ ಮಿಸ್ ಯೂ ಸಿನಿಮಾ ಕೂಡ ರಿಲೀಸ್ ಆಗುತ್ತಿತ್ತು. ಈ ವೇಳೆ ನೀಡಿದ್ದ ಸಂದರ್ಶನದಲ್ಲೂ ಸಿದ್ಧಾರ್ಥ್ ಅವರ ಹೇಳಿಕೆ ಅಲ್ಲು ಅರ್ಜುನ್ ಅವರ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಪುಷ್ಪ ಸಿನಿಮಾದಿಂದ ನಿಮ್ಮ ಸಿನಿಮಾಗೆ ತೊಂದರೆಯಾಗಲ್ವಾ ಎಂದು ಕೇಳಿದ್ದಕ್ಕೆ, ಪುಷ್ಪ ರಿಲೀಸ್ ಆಗುತ್ತಿರುವುದು ನನ್ನ ಸಮಸ್ಯೆ ಅಲ್ಲ. ಆ ಸಿನಿಮಾಗೆ ನಾನು ಏಕೆ ಹೆದರಬೇಕು? ಇನ್ನು ಅವರು ಹೆದರಿಕೊಳ್ಳಬೇಕು. ಅವೆಲ್ಲವೂ ನನ್ನ ಕಂಟ್ರೋಲ್ನಲ್ಲಿಲ್ಲ. ಬಿಗ್ ಬಜೆಟ್ ಸಿನಿಮಾ ಎನ್ನುವ ಕಾರಣಕ್ಕೆ ಒಂದು ಸಿನಿಮಾ ಯಶಸ್ಸು ನಿರ್ಧಾರವಾಗೋದಿಲ್ಲ ಎಂದು ಸಿದ್ದಾರ್ಥ್ ಹೇಳಿದ್ದರು.












Click it and Unblock the Notifications