Bigg Boss: ಬಿಗ್ಬಾಸ್ಗೆ ಸುದೀಪ್ ಗುಡ್ಬೈ: ಮಂಜು ಪಾವಗಡ ಬೇಸರ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ಅದ್ಧೂರಿಯಾಗಿ ಆರಂಭಗೊಂಡು ಮುಂದುವರೆದಿದೆ. ಬಿಗ್ಬಾಸ್ ಶೋಗೆ ಕಿಚ್ಚ ಸುದೀಪ್ ಗುಡ್ಬೈ ಹೇಳ್ತಾರೆ ಎನ್ನುವ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಈ ಬಗ್ಗೆ ಹಲವಾರು ಜನ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಬಿಗ್ಬಾಸ್ ಸೀಸನ್ 8ರ ವಿಜೇತರಾದ ಮಂಜು ಪಾವಗಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಕಿಚ್ಚಾ ಸುದೀಪ್ ಅವರು ಬಿಗ್ಬಾಸ್ ನಿರೂಪಣೆಗೆ ವಿದಾಯವನ್ನು ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಸುದೀಪ್ ಅವರನ್ನು ವಾರಾಂತ್ಯದಲ್ಲಿ ನೋಡಲು ಆಗುವುದಿಲ್ಲ. ಮುಂಬರುವ ಬಿಗ್ಬಾಸ್ ಶೋಗೆ ಸುದೀಪ್ ನಿರೂಪಣೆ ಮಾಡುವುದಿಲ್ಲ ಎಂದು ಸ್ವತ: ಸುದೀಪ್ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಬರೆಯುವ ಮೂಲಕ ತಿಳಿಸಿದ್ದಾರೆ. ಇದರಿಂದಾಗಿ ಅವರ ಅಭಿಮಾನಿಗಳಿಗೆ ಸಾಕಷ್ಟು ಬೇಸರಗೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಗ್ಬಾಸ್ ಸೀಸನ್ 8ರ ವಿಜೇತರಾದ ಮಂಜು ಪಾವಗಡ, 'ಈ ವಿಷಯ ಕೇಳಿ ನನಗೆ ಶಾಕ್ ಆಗಿದೆ. ಬಿಗ್ಬಾಸ್ ಅಂದರೆ ಸುದೀಪ್ ಸರ್. ಅವರಿಲ್ಲ ಅಂದರೆ ಅದನ್ನ ನಾನು ಕಲ್ಪಿಸಿಕೊಳ್ಳೋಕೆ ಆಗಲ್ಲ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
'ನಾವು ಬಿಗ್ಬಾಸ್ನಲ್ಲಿ ಇದ್ದಾಗ ವೀಕೆಂಡ್ ಬಂದ್ರೆ ನಾವು ಸುದೀಪ್ ಸರ್ ಬರ್ತಾರೆ ಅಂತ ಕಾಯ್ತಾಯಿದ್ವಿ. ನಮ್ಮ ತಪ್ಪುಗಳನ್ನು ಹೇಳ್ತಾರೆ, ನಮ್ಮ ತಪ್ಪುಗಳನ್ನು ತಿದ್ದುತ್ತಾರೆ ಅಂತ ಕಾಯ್ತಾಯಿದ್ವಿ. ಅಷ್ಟೊಂದು ಚಾಕಚಖ್ಯತೆ ಬೇರೆ ಯಾರಲ್ಲೂ ನಾವು ಕಾಣಲು ಸಾಧ್ಯವಿಲ್ಲ. ನನಗೆ ಈ ವಿಷಯ ಗೊತ್ತಾಗಿ ಬೇಜಾರಾಗುತ್ತಿದೆ' ಎಂದು ಮಂಜು ಪಾವಗಡ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
'ಅವರು ನಮ್ಮ ತಪ್ಪುಗಳನ್ನು ತಿದ್ದಿದ್ರೆ ನಮಗೆ ತುಂಬಾ ಚೆನ್ನಾಗಿ ಅರ್ಥ ಆಗ್ತಾಯಿತ್ತು. ಅವರು ಹೇಳುವ ರೀತಿ ತುಂಬಾ ಚೆನ್ನಾಗಿರುತ್ತಿತ್ತು. ಟಾಸ್ಕ್ ಚೆನ್ನಾಗಿ ಮಾಡಿದಾಗ ಪ್ರಶಂಸೆ ಮಾಡ್ತಾಯಿದ್ರು. ಚೆನ್ನಾಗಿ ಮಾಡದೇ ಇದ್ದಾಗ ಹೀಗೆ ಮಾಡಬಾರದಿತ್ತು ಅಂತ ತಿದ್ದುತ್ತಿದ್ದರು. ನನಗೆ ಅವರು ಮುಂದೆ ಬಿಗ್ಬಾಸ್ ನಿರೂಪಣೆ ಮಾಡಲ್ಲ ಅಂತ ಕೇಳಿ ಬೇಸರ ಆಗಿದೆ. ನನಗೆ ಮತುಗಳೇ ಬರ್ತಾಯಿಲ್ಲ. ಏನು ಹೇಳ್ಬೇಕು ಅಂತ ಗೊತ್ತಾಗ್ತಿಲ್ಲ' ಅಂತ ಮಂಜು ನೋವಿನಿಂದ ಮಾತನಾಡಿದ್ದಾರೆ.
ಲಕ್ಷಾಂತರ ಬಿಗ್ಬಾಸ್ ಅಭಿಮಾನಿಗಳಿಗೆ ಬೇಸರ ತಂದ ವಿಷಯ
ಮುಂಬರುವ ಬಿಗ್ಬಾಸ್ ಶೋಗೆ ತಾವು ನಿರೂಪಣೆ ಮಾಡುವುದಿಲ್ಲ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಕಿಚ್ಚ ಸುದೀಪ್ ಅವರು ಬರೆದಿದ್ದಾರೆ. ಹಾಗಾದರೆ ಸುದೀಪ್ ಹೇಳಿದ್ದೇನು? ಲಕ್ಷಾಂತರ ಬಿಗ್ಬಾಸ್ ಅಭಿಮಾನಿಗಳಿಗೆ ಬೇಸರ ತಂದ ವಿಷಯ ಯಾವುದು? ಬಿಗ್ಬಾಸ್ಗೆ ತಾವು ವಿದಾಯ ಹೇಳುವ ಬಗ್ಗೆ ಸುದೀಪ್ ಟ್ವೀಟ್ ಮಾಡಿದ್ದು ಹೀಗೆ...
''ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ನೀವು ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ಈ ಕಾರ್ಯಕ್ರಮಕ್ಕೆ ಮತ್ತು ನನಗೆ ನೀವೆಲ್ಲರೂ ತೋರಿದ ಪ್ರೀತಿಯನ್ನು ಈ ಟಿಆರ್ಪಿಯ ನಂಬರ್ಗಳೇ ಹೇಳುತ್ತಿವೆ. 11 ವರ್ಷಗಳ ಪ್ರಯಾಣ ಇದಾಗಿದೆ. ನಾನು ಮುಂದೆ ಏನು ಮಾಡಬೇಕೆಂಬುದನ್ನು ಹೇಳಲು ಇದು ಸಮಯವಾಗಿದೆ. ಬಿಗ್ಬಾಸ್ನ ನಿರೂಪಕನಾಗಿ ನನ್ನ ಕೊನೆಯ ಸೀಸನ್ ಇದಾಗಿರುತ್ತದೆ. ನನ್ನ ಈ ನಿರ್ಧಾರವನ್ನು ಕಲರ್ಸ್ ಕನ್ನಡ ವಾಹಿನಿ ಮತ್ತು ಇಷ್ಟ ವರ್ಷಗಳಿಂದ ಬಿಗ್ಬಾಸ್ ಅನ್ನು ಫಾಲೋ ಮಾಡುತ್ತಿರುವ ಎಲ್ಲರೂ ಗೌರವಿಸುತ್ತಾರೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಈ ಸೀಸನ್ ಅನ್ನು ಅತ್ಯುತ್ತಮವಾಗಿ ಮಾಡೋಣ ಮತ್ತು ನಾನು ಕೂಡ ಅತ್ಯುತ್ತಮವಾಗಿ ನಿಮ್ಮೆಲ್ಲರನ್ನು ರಂಜಿಸುತ್ತೇನೆ'' ಎಂದು ಸುದೀಪ್ ಹೇಳಿದ್ದಾರೆ.
ಹೀಗಾಗಿ ಸುದೀಪ್ ಮುಂದಿನ ಬಿಗ್ಬಾಸ್ ಸೀಸನ್ 12ಕ್ಕೆ ನಿರೂಪಣೆ ಮಾಡುವುದಿಲ್ಲ ಎನ್ನುವುದು ಸ್ಪಷ್ಟವಾಗಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಿಕ್ಕಾಪಟ್ಟೆ ಬೇಸರಪಟ್ಟುಕೊಂಡಿದ್ದಾರೆ. ನಿಮ್ಮನ್ನು ಹೊರತುಪಡಿಸಿ ಬೇರೆ ಯಾರನ್ನೂ ಆ ಜಾಗದಲ್ಲಿ ನೋಡಲು ನಾವು ಇಷ್ಟಪಡುವುದಿಲ್ಲ ಎಂದಿದ್ದಾರೆ.












Click it and Unblock the Notifications